ಅಯೋಧ್ಯಾ ರಾಮಮಂದಿರಕ್ಕೆ ಅಂಬ್ಯುಲೆನ್ಸ್ ಹಸ್ತಾಂತರ

Upayuktha
0

ಡಾ. ಎಂ ಎಸ್ ರಾಮಯ್ಯ ಫೌಂಡೇಶನ್ ಕೊಡುಗೆ 



ಅಯೋಧ್ಯೆ: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಡಾ ಎಂ ಎಸ್ ರಾಮಯ್ಯ ಫೌಡೇಶನ್ ವತಿಯಿಂದ ಅಯೋಧ್ಯೆ ರಾಮಮಂದಿರಕ್ಕೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮೂಲಕ ಸುಸಜ್ಜಿತ ಅಂಬ್ಯುಲೆನ್ಸ್ ನ್ನು ಶುಕ್ರವಾರ ಅಯೋಧ್ಯೆಯಲ್ಲಿ ಹಸ್ತಾಂತರಿಸಲಾಯಿತು .


ರಾಮಮಂದಿರಕ್ಕೆ ಪ್ರತಿನಿತ್ಯ ಬರುತ್ತಿರುವ ಲಕ್ಷಾಂತರ ಭಕ್ತರ ತುರ್ತು ಆರೋಗ್ಯ ಸೇವೆಗಾಗಿ ಅಂಬ್ಯುಲೆನ್ಸ್ ನ್ನು ಒದಗಿಸುವ ಇಂಗಿತವನ್ನು ಸಂಸ್ಥೆಯ ಪ್ರಮುಖರಾದ ಪಟ್ಟಾಭಿರಾಮ್ ಅವರು ಶ್ರೀಗಳವರಲ್ಲಿ ವ್ಯಕ್ತಪಡಿಸಿದ್ದರು.


ಅದರಂತೆ ಸುಮಾರು 38 ಲಕ್ಷ ರೂ ವೆಚ್ಚದ ಸುಸಜ್ಜಿತವಾದ ನೂತನ ಅಂಬ್ಯುಲೆನ್ಸ್ ನ್ನು ಅಯೋಧ್ಯೆಯಲ್ಲಿ ಶ್ರೀ ಪಟ್ಟಾಭಿರಾಮ್ ಮತ್ತು ಶ್ರೀಮತಿ ಅನಿತಾ ಪಟ್ಟಾಭಿರಾಮ್ ಅವರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಹಸ್ತಾಂತರಿಸಿದರು. ಟ್ರಸ್ಟ್ ಕಾರ್ಯದರ್ಶಿ ಶ್ರೀ ಚಂಪತ್ ರಾಯ್ , ಕೋಶಾಧಿಕಾರಿ ಶ್ರೀ ಸ್ವಾಮಿ ಗೋವಿಂದ ಗಿರಿ ಮಹಾರಾಜ್, ಸದಸ್ಯರಾದ ಶ್ರೀ ಪೇಜಾವರ ಶ್ರೀಗಳು ಅನಿಲ್ ಮಿಶ್ರಾ, ವಿಹಿಂಪ ರಾಷ್ಟ್ರೀಯ ಮುಖಂಡ ಗೋಪಾಲ್ ಜಿ ,ಪೇಜಾವರ ಮಠದ ಅಧಿಕಾರಿಗಳಾದ ಶ್ರೀವತ್ಸ ತಂತ್ರಿ, ಶ್ರೀಗಳ ಆಪ್ತರಾದ ಶ್ರೀನಿವಾಸ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


ಶ್ರೇಷ್ಠ ಸೇವೆ: ನನ್ನ ಭಕ್ತರ ಯೋಗಕ್ಷೇಮ ನೋಡಿಕೊಳ್ಳುವುದೂ ನನಗೆ ಸಲ್ಲುವ ಉತ್ತಮ ಸೇವೆಯೇ ಆಗಿದೆ ಎಂದು ಸ್ವಯಂ ಭಗವಂತನೇ ಹೇಳಿದ್ದಾನೆ. ಹಾಗಿರುವಾಗ ರಾಮಮಂದಿರಕ್ಕೆ ಆಗಮಿಸುವ ಭಕ್ತರ ತುರ್ತು ಪ್ರಯೋಜನಕ್ಕಾಗಿ  ಅಗತ್ಯವಿದ್ದ ಅಂಬ್ಯುಲೆನ್ಸ್ ನ್ನು ನೀಡುವ ಮೂಲಕ ಎಂ ಎಸ್ ರಾಮಯ್ಯ ಸಂಸ್ಥೆಯವರು ರಾಮನಿಗೆ ಶ್ರೇಷ್ಠ ಸೇವೆ ಸಲ್ಲಿಸಿದ್ದಾರೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬಣ್ಣಿಸಿದ್ದಾರೆ. 


ಈ ಮನೆತನದ ಪ್ರತಿಯೊಬ್ಬ ಪುರುಷರ ಹೆಸರುಗಳಲ್ಲಿ  ರಾಮನಿದ್ದಾನೆ...!!! 

ಶ್ರೇಷ್ಠ ಶಿಕ್ಷಣ ತಜ್ಞರೂ, ಉದ್ಯಮಿಗಳೂ, ಧರ್ಮಬೀರುಗಳೂ ಆಗಿದ್ದ  ದಿವಂಗತ ಎಂ ಎಸ್ ರಾಮಯ್ಯನವರು ಉದಾತ್ತ ಜೀವನ ನಡೆಸಿದವರು. ಬಾನೆತ್ತರಕ್ಕೆ ತಾವು ಬೆಳೆದಾಗಲೂ ತಮ್ಮ ಮನೆ ಮಂದಿಗೆ ಉನ್ನತ ಸಂಸ್ಕಾರ ನೀಡಲು ಮರೆತವರಲ್ಲ. ಅದೇ ಉತ್ತಮ ಸಂಸ್ಕಾರ ಮತ್ತು ಆದರ್ಶಗಳನ್ನು ಅವರ ಮನೆಮಂದಿ ಆಚರಿಸಿಕೊಂಡು ಬಂದಿರುವುದು ಅಭಿನಂದನೀಯ. ಇವತ್ತು ರಾಜ್ಯದ ಶ್ರೀಮಂತ ಮನೆತನಗಳಲ್ಲಿ ಒಂದಾಗಿರುವ ಈ ಕುಟುಂಬದಲ್ಲಿ ಸುಮಾರು 150 ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಬಹಳ ಅಚ್ಚರಿಯ ಸಂಗತಿ ಎಂದರೆ ಈ ಪೈಕಿ ಪ್ರತಿಯೊಬ್ಬ ಪುರುಷ ಸದಸ್ಯರ ಹೆಸರಿನಲ್ಲಿ ರಾಮನಿದ್ದಾನೆ. ಪಟ್ಟಾಭಿರಾಮ‌ ಜಗದಾಭಿರಾಮ ಆತ್ಮಾಭಿರಾಮ ಶ್ರೀರಾಮ‌ ಕೋದಂಡರಾಮ ಸೀತಾರಾಮ ಹೀಗೆ  ರಾಮನ ಹೆಸರುಗಳನ್ನೇ ಮನೆ ಮಂದಿಗೆ ನಾಮಕರಣ ಮಾಡುವ ಮೂಲಕ ಈ ಕುಟುಂಬ ಶ್ರೀರಾಮನನ್ನೇ ಉಸಿರಾಗಿಸಿಕೊಂಡಿರುವುದು ಉನ್ನತವಾದ ಮಾದರಿಯಾಗಿದೆ. ಇದೂ ಕೂಡಾ ಶ್ರೀರಾಮನ ದೊಡ್ಡ ಸೇವೆಯಾಗಿದೆ. ಇಂತಹ ಧೀಮಂತ ಸಂಸ್ಕಾರ ಸದಾಚಾರಗಳೇ ಈ ಕುಟುಂಬದ ಎಲ್ಲ ಯಶಸ್ಸಿಗೂ ಮೂಲವಾಗಿದೆ ಎಂದು ಶ್ರೀಗಳು ಪ್ರಶಂಸಿಸಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top