ನಡಿ ನಡಿ ನಮ್ಮ ಮನೆಗೆ ಯಲಗೂರದ ಹನುಮ. ಶ್ರೀ ರಾಮ ತನ್ನ ಸೇವಕ ಹನುಮಂತನಿಗೆ ಜಗವನ್ನು ರಕ್ಷಿಸುವ ಹೊಣೆಯನ್ನು ಕೊಟ್ಟ. 7 ಊರುಗಳನ್ನು ನೀನು ರಕ್ಷಿಸು ಎಂದು ಆಜ್ಞೆಯಿತ್ತ. ಅದೇ ಏಳು ಊರುಗಳೊಡೆಯ ಯಲಗೂರೇಶ ಆದ.
ಯಲಗೂರು ಉತ್ತರ ಕರ್ನಾಟಕದ ಅತೀ ಪ್ರಮುಖ ಯಾತ್ರಾ ಸ್ಥಳ. ಇದು ವಿಜಾಪೂರ ಜಿಲ್ಲೆ ನಿಡಗುಂದಿ ತಾಲೂಕಿನಲ್ಲಿದೆ. ಅತೀ ಎತ್ತರದ ಸಂಜೀವಮೂರ್ತಿ. ಸುಂದರವಾಗಿದೆ. ಅಷ್ಟೇ ಶಕ್ತಿಶಾಲಿ.
ಪ್ರತೀ ವರ್ಷ ಮಾಘ ಮಾಸದ ಹುಣ್ಣಿಮೆಯ ನಂತರ ಬರುವ ಶನಿವಾರವೇ ಯಲಗೂರೇಶ ಕಾರ್ತೀಕೋತ್ಸವ. ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಮೊದಲು ಭಾರತ ಹುಣ್ಣಿಮೆಯ ಆದ ಕೂಡಲೇ ಬರುವ ಶನಿವಾರ ದೊಡ್ಡ ಕಾರ್ತೀಕ ಜರುಗುತ್ತದೆ,, ಅದಾದ 8 ದಿನಗಳಿಗೆ ಬರುವ ಶನಿವಾರಕ್ಕೆ ಮರಿ ಚಿಕ್ಕ ಕಾರ್ತೀಕ (ಮರಿ ಕಾರ್ತೀಕ) ಜರುಗುತ್ತದೆ. ಕರ್ನಾಟಕ ಅಲ್ಲದೇ ಮಹಾರಾಷ್ಟ್ರದ ಜನರೂ ಸೇರುತ್ತಾರೆ.
ಇಲ್ಲಿ ಎಲ್ಲ ವರ್ಗದ ಜನರು ಹನುಮಪ್ಪನ ಭಕ್ತರು.. ದೀಡ್ ನಮಸ್ಕಾರ ಎಂಬುದೊಂದು ವಿಶೇಷ ನಮಸ್ಕಾರ, ನದಿಗೆ ಹೋಗಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ತಾವು ಮನದಲ್ಲಿ ಅಂದುಕೊಂಡಷ್ಟು ನಮಸ್ಕಾರಗಳನ್ನು ಗುಡಿಯ ಆವರಣದಲ್ಲಿ ಹಾಕುತ್ತಾರೆ. ಕೈಯಲ್ಲಿ ಸಣ್ಣ ದಂಟನ್ನು ಹಿಡಿದು, ದೀರ್ಘದಂಡ ನಮಸ್ಕಾರ ಮಾಡುತ್ತ, ದಂಟಿನಿಂದ ಗೆರೆ ಎಳೆದು ಮಾಡುವ ನಮಸ್ಕಾರಕ್ಕೆ ದೀಡ್ ನಮಸ್ಕಾರ ಎನ್ನುತ್ತಾರೆ
ಈ ಯಲಗೂರೇಶ ತುಂಬಾ ಪ್ರಭಾವಶಾಲಿ ದೇವರು. ಈ ದೇವರ ಹಿನ್ನೆಲೆ ಮತ್ತು ಮಹಿಮೆ ತಿಳಿಯೋಣ.
ಹಿನ್ನೆಲೆ: ಆಲಮಟ್ಟಿಗೆ ಸಮೀಪವಿರುವ ಗೊಂದಳೀ ಕೆರೆ ಅಥವಾ ಗೋವಿಂದನ ಕೆರೆ ಎಂಬ ಸ್ಥಳದಲ್ಲಿ ಮೊದಲಿನಿಂದಲೂ ಒಂದು ಶ್ರೀ ವೆಂಕಟೇಶ್ವರ ದೇವಸ್ಥಾನವಿದೆ. ದಿನ ನಿತ್ಯವೂ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಗೆ ಶ್ರೀ ಯಲಗೂರೇಶ ಕನಸಲ್ಲಿ ಬಂದು ಗೊಂದಳೀಕೆರೆಯಲ್ಲಿ ತಾನಿರುವದಾಗಿ, ಮೂರ್ತಿಯನ್ನು ತಂದು ಈಗ ದೇವಸ್ಥಾನವಿರುವ ಜಾಗದಲ್ಲಿ ಪ್ರತಿಷ್ಟಾಪಿಸಬೇಕೆಂದು ಹೇಳಲು, ಅದನ್ನು ಅಗೆದು ತೆಗೆದು ನೋಡಲು, 3-4 ಛಿದ್ರವಾಯಿತು. ಅಲ್ಲದೇ ಮುಸಲ್ಮಾನರ ಆಕ್ರಮಣದಿಂದಲೂ ಭಿನ್ನವಾಗಿತ್ತು. ಹೇಗೆ ಪ್ರತಿಷ್ಠಾಪಿಸುವ ಚಿಂತೆಯಲ್ಲಿರುವಾಗ ಮಾರುತಿರಾಯ ಕನಸಲ್ಲಿ ಕಂಡು ಎಲ್ಲವನ್ನೂ ಜೋಡಿಸಿ 7 ದಿನಗಳವರೆಗೆ ದೇವಸ್ಥಾನದ ಬಾಗಿಲು ಮುಚ್ಚಿಡಬೇಕೆಂದು ಹೇಳಿದ್ದಾನೆ..ಪೂಜಾರಿ ಹಾಗೇಯೇ ಮಾಡಿದ್ದಾನೆ. ಕುತೂಹಲ ತಡೆಯದೇ 7 ನೇ ದಿನ ಮಧ್ಯಾನ್ಹ ಬಾಗಿಲು ತೆಗೆದಿದ್ದಾನೆ. ಎಲ್ಲವೂ ನೈಪುಣ್ಯದಿಂದ ಜೋಡಿಸಿದಂತೆ ಆಗಿತ್ತು. ಇದನ್ನು ಕಂಡ ಪೂಜಾರಿಗೆ ಆಶ್ಚರ್ಯ. ಅವನು 7 ನೇ ರಾತ್ರಿ ಕಳೆಯಲು ಬಿಡದೇ ಬಾಗಿಲು ತೆಗೆದಿದ್ದಕ್ಕೆ ಕೆಳಭಾಗ ಸ್ವಲ್ಪ ಮುಕ್ಕಾದ ಹಾಗಿದೆ.
ಯಲಗೂರದ ಸುತ್ತಮುತ್ತಲ ಪ್ರದೇಶದಲ್ಲಿ ಶ್ರೀ ರಾಮದೇವರ ವಾಸ್ತವ್ಯವಿತ್ತು ಎಂದು ತಿಳಿದುಬಂದಿದೆ.
ಚಿನ್ನದ ಮೃಗದ ವೇಷಧಾರಿ ಮಾರೀಚನನ್ನು ಶ್ರೀರಾಮ ಬಹಳ ದೂರದವರೆಗೂ ಅಟ್ಟಿಸಿಕೊಂಡು ಬಂದ. ಅವನನ್ನು ಆಲಮಟ್ಟಿಯ ಸಮೀಪದಲ್ಲಿರು ಅರಣ್ಯದಲ್ಲಿ ಕೊಂದ ಎಂದು.ಚಿನ್ನದ ಮೃಗವನ್ನು ಕೊಂದ ಪ್ರದೇಶವೇ ಈಗಿನ ಚಿಮ್ಮಲಗಿ. ಸೀತಾದೇವಿಯನ್ನು ಅಪಹರಿಸಿದ ರಾವಣನನ್ನು ಜಟಾಯು ಅಡ್ಡಗಟ್ಟಿ ತೊಂದರೆ ಕೊಡುತ್ತಾ ಅಟ್ಟಿಸಿಕೊಂಡು ಹೋದನಂತೆ. ಅದನ್ನೇ ಈಗ "ಅಡ್ಡಗಟ್ಟಿ ಹಳ್ಳಿ" ಎಂದು ಕರೆಯುತ್ತಾರೆ.
ಆಲಮಟ್ಟಿಯ ಹತ್ತಿರವೇ ಇರುವ ಇನ್ನೊಂದು ಸೀತಾಮನೆ ಅಥವಾ ಇಂದಿನ ಸೀತಿಮನಿ ಎಂಬಲ್ಲಿ ಸೀತಾದೇವಿ ವಾಸವಿದ್ದಳು ಎಂದು. ಇಲ್ಲಿ ಇಂದಿಗೂ ಅರಿಶಿಣ ಹೊಂಡ, ಲವ ಕುಶ ಹೊಂಡ ಎಂಬ ಹೊಂಡಗಳಿವೆ. ಇಲ್ಲಿ ಇಂದು ಶ್ರೀ ವೆಂಕಟೇಶನ ದೇವಸ್ಥಾನವಿದ್ದು ಮಹಾನವಮಿಯಲ್ಲಿ ವಿಶೇಷ ಪೂಜೆ ನಡೆಯುತ್ತವೆ.
ಶ್ರೀರಾಮ ಕೃಷ್ಣಾತೀರದ ಹಸಿರು ವನದ ಪ್ರಶಾಂತ ವಾತಾವರಣದಲ್ಲಿ ಇರಲು ಇಚ್ಛಿಸಿ ವಾಸ್ತವ್ಯ ಮಾಡಿದನಂತೆ.
ಸೀತಾದೇವಿ ತಾವು ತಂಗಿದ್ದ ಪ್ರದೇಶ ಶ್ರೀರಾಮನ ಸನ್ನಿಧಾನವಾಗಬೇಕೆಂದು ಕೇಳಿದಳಂತೆ. ಮಾರುತಿಯು ಪ್ರಭು ಶ್ರೀರಾಮ ನೀವಿರುಲ್ಲೇ ನನಗೊಂದು ಜಾಗ ಕೊಡಿರಿ. ನಿಮ್ಮ ಸೇವೆ ಮಾಡಿಕೊಂಡಿರುವೆ ಎಂದನಂತೆ. ನೀನು 7 ಊರಿನ ಒಡೆಯನಾಗಿ ಕೃಷ್ಣಾತೀರದಲ್ಲಿ ನೆಲೆಸಿ, ಭಕ್ತರ ಬೇಡಿಕೆಗಳನ್ನು ನಿನ್ನ ಮುಖಾಂತರ ಈಡೇರಿಸುವೆ ಎಂದು ಹೇಳಿದನಂತೆ. ಅದರಂತೆ ಯಲಗೂರೇಶ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ ಎಲ್ಲರ ದೈವವಾಗಿದ್ದಾನೆ.
ಮಹಿಮೆ:
ಇದು ಬ್ರಿಟಿಷರ ಕಾಲದ ಮಾತು. ಎಲ್ಲ ಕಡೆಗೂ ಬ್ರಿಟಿಷರ ದಬ್ಬಾಳಿಕೆ, ತೆರಿಗೆ ಕೊಡದ ಬಡವರನ್ನು ಪೀಡಿಸುವುದು ನಡೇದೇ ಇತ್ತು. ಯಲಗೂರದ ದೇವಸ್ಥಾನದಲ್ಲಿ ಒಬ್ಭ ಬಡ ದಾಸಯ್ಯನಿದ್ದ. ಅವನು ಬೆಳಿಗ್ಗೆ ಎದ್ದ ತಕ್ಷಣ ದೇವಸ್ಥಾನದ ಕಸ ಗುಡಿಸುವುದು. ದೇವರ ಭಜನೆ ಮಾಡುವುದಷ್ಟೇ ಅವನ ದಿನಚರಿ. ಬ್ರಿಟಿಷರು ಯಲಗೂರದ ಜನಕ್ಕೂ ತೆರಿಗೆಯ ಬಿಸಿ ಮುಟ್ಟಿಸಿದರು. ಊರಿನ ಜನರೆಲ್ಲ ದಾಸಯ್ಯ ತೆರಿಗೆ ಕೊಟ್ಟರೆ ತಾವು ಕೊಡುವದಾಗಿ ಹೇಳಿದರು. ಬಡ ದಾಸಯ್ಯ ಎಲ್ಲಿಂದ ತೆರಿಗೆ ಕೊಡಬಲ್ಲ.?! ಬ್ರಿಟಿಷರ ಮಾರಣಾಂತಿಕ ಹಲ್ಲೆಗಳಿಗೆ ದಾಸಯ್ಯ ಪ್ರಾಣಬಿಟ್ಟ. ಪೂಜಾರಿಯ ಕನಸಲ್ಲಿ ಬಂದ ಮಾರುತಿ ದಾಸಯ್ಯನ ಪಾರ್ಥಿವ ಶರೀರವನ್ನು 3 ದಿನ ಕಟ್ಟೆಯ ಮೇಲಿಟ್ಟು ಕಾಯಬೇಕೆಂದು ಹೇಳಿದ. 4 ನೇ ದಿವಸ ಬೆಳಗಿನ ಜಾವದಲ್ಲಿಯೇ ದಾಸಯ್ಯ ಎದ್ದು ಎಂದಿನಂತೆ ದೇವರ ನಾಮಸ್ಮರಣೆ ಮಾಡುತ್ತ ಕಸ ಗುಡಿಸುತ್ತಿದ್ದ. ಊರಿನ ಜನ ಆಶ್ಚರ್ಯಭರಿತರಾದರು. ಇದನ್ನು ಕೇಳಿದ ಪೋಲಿಸರು ಯಲಗೂರಪ್ಪ ತಮ್ಮನ್ನು ಬಿಟ್ಟರೇ ಸಾಕೆಂದು ಓಟ ಕಿತ್ತರು.
ಹೀಗಿದೆ ಯಲಗೂರೇಶನ ಮಹಿಮೆ.
ಇನ್ನೂ ಒಂದು ವಿಶೇಷ ವಿಚಾರ ಇಲ್ಲಿದೆ. ಯಲಗೂರೇಶನನ್ನು ಮಾತನಾಡುವ ದೇವರು ಎಂತಲೂ ಕರೆಯುತ್ತಾರೆ. ಭಕ್ತರು ಅವನ ಸನ್ನಿಧಿಯಲ್ಲಿ ಕುಳಿತು ಭಕ್ತಿಯಿಂದ ತಮ್ಮ ಪ್ರಶ್ನೆ ಮನದಲ್ಲಿ ಹೇಳಿಕೊಳ್ಳುತ್ತಾರೆ, ಅದಕ್ಕೆ ಅವನು ಪತ್ರಿ ಅಥವಾ ಹೂವನ್ನು ಉದುರಿಸಿ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾನೆ. ಬಲಕ್ಕೆ ಹೂ, ಪತ್ರಿ ಉದುರಿಸಿದರೆ, ಕೆಲಸ ಶೀಘ್ರದಲ್ಲಿ ಅಗುವುದು ಎಂತಲೂ,ಎಡಕ್ಕೆ ಹೂವು ಪತ್ರಿ ಉದುರಿಸಿದರೆ ಕೆಲಸ ಆಗದು ಎಂತಲೂ, ನಿಧಾನವಾಗಿ ಹೂವು ಬಿದ್ದರೆ ಆಗುವ ಕಾರ್ಯ ವಿಳಂಬ ಎಂತಲೂ ಅರ್ಥವಿದೆ.
ಸೇವೆಗಳು: ಇಲ್ಲಿ ಬೆಳಿಗ್ಗೆ ನಡೆಯುವ ಹಳ್ಳಿಯ ಜನರ ವಾದ್ಯ ಸೇವೆ ವಿಶಿಷ್ಟ.ಹಾಗೂ ತುಂಬಾ ಸುಂದರ. ಬೆಳಿಗ್ಗೆ ಕಾಕಡಾರತಿ, ಪಲ್ಲಕ್ಕಿ ಸೇವೆ, ತದನಂತರ ಪಂಚಾಮೃತಸೇವೆ, ಮಹಾಪೂಜಾ, ಸುಂದರ ಅಲಂಕಾರ. ಆ ದಿನ ಬಂಗಾರದ ಕವಚದಿಂದ ಮತ್ತು ವಿವಿಧ ಬಣ್ಣದ ಪೇಟದ ಅಲಂಕಾರ ಮಾಡುತ್ತಾರೆ.
ವಿಶೇಷ ಕಾರ್ಯಕ್ರಮಗಳು: ವಿವಿಧ ಕಲಾವಿದರಿಂದ ಸಂಗೀತ ಸೇವೆ, ನೃತ್ಯ ಸೇವೆ, ಕೀರ್ತನೆಗಳು ನಡೆಯುತ್ತವೆ. ಇಲ್ಲಿ ಬಂದು ಯಾರು ತಮ್ಮ ಸಂಗೀತಸೇವೆ, ನೃತ್ಯ ಸೇವೆ ಮಾಡಿದ್ದಾರೋ ಅವರು ಕಲೆಯಲ್ಲಿ ಉನ್ನತಿ ಕಂಡಿದ್ದಾರೆ.
ಮರುದಿನ ರಥೋತ್ಸವ, ಓಕುಳಿ ಕಾರ್ಯಕ್ರಮದಿಂದ ಭವ್ಯ ಕಾರ್ತಿಕೋತ್ಸವ ಸಂಪನ್ನಗೊಳ್ಳುತ್ತದೆ.
ಜೈ ಹನುಮಾನ
-ರೇಖಾ ಮುತಾಲಿಕ್, ಬಾಗಲಕೋಟ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ