ಉಜಿರೆ: ಅಪರೂಪದ ಸಸ್ಯಪ್ರಬೇಧಗಳನ್ನು ಒಳಗೊಂಡ ಉಜಿರೆಯ ಎಸ್.ಡಿ.ಎಂ ಕಾಲೇಜಿನ ‘ಆರ್ಬೋರೇಟಮ್’ ಅನ್ನು ಶನಿವಾರ ಸಂಜೆ ಎಸ್.ಡಿ.ಎಂ. ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ, ಶಿಕ್ಷಣತಜ್ಞ ಡಾ. ಬಿ. ಯಶೋವರ್ಮ ಸ್ಮರಣಾರ್ಥ ‘ಯಶೋವನ’ ಎಂದು ಮರುನಾಮಕರಣ ಮಾಡಿ ಲೋಕಾರ್ಪಣೆಗೊಳಿಸಲಾಯಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅವರು ‘ಯಶೋವನ’ದಲ್ಲಿ ನೂತನವಾಗಿ ನಿರ್ಮಿಸಿದ ‘ಸ್ವರ್ಗದ ಬಾಗಿಲು’ ಮುಖ್ಯದ್ವಾರ ಅನಾವರಣಗೊಳಿಸಿ ಸಸ್ಯೋದ್ಯಾನಕ್ಕೆ ಚಾಲನೆ ನೀಡಿದರು. ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಎಲ್ ಧರ್ಮ ಅವರೊಂದಿಗೆ ‘ಯಶೋವನ ಹಸಿರು ವಲಯ’ ಫಲಕ ಅನಾವರಣಗೊಳಿಸಿದರು. ಡಾ. ಹೇಮಾವತಿ ವಿ. ಹೆಗ್ಗಡೆ ಯಶೋವನಕ್ಕೆ ಸಂಬಂಧಿಸಿದ ಮಾಹಿತಿ ಫಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ ಮೋಹನ್ ಆಳ್ವಾ ಅವರು ಯಶೋವನದ ಹಿಂದಿನ ಚೈತನ್ಯಶಕ್ತಿಯಾಗಿದ್ದ ಡಾ. ಬಿ. ಯಶೋವರ್ಮ ಅವರ ದೂರದರ್ಶಿತ್ವದ ವಿಶೇಷತೆಯನ್ನು ನೆನಪಿಸಿಕೊಂಡರು. ಔಷಧೀಯ ಸಸ್ಯಗಳ ಕುರಿತು ಮುಂದಿನ ಪೀಳಿಗೆಗೆ ವಿಸ್ತೃತ ಜ್ಞಾನ ಲಭ್ಯವಾಗಬೇಕು. ಅಲ್ಲದೇ ಸಸ್ಯಶಾಸ್ತçದ ಸಂಶೋಧನೆಯಲ್ಲಿ ಆಸಕ್ತಿಯುಳ್ಳವರಿಗೆ ನೆರವಾಗಬೇಕು ಎನ್ನುವ ಉದ್ದೇಶದೊಂದಿಗೆ ಎಸ್.ಡಿ.ಎಂ ಆರ್ಬೋರೇಟಂ (ಸಸ್ಯೋದ್ಯಾನ) ಆರಂಭಿಸುವಲ್ಲಿ ಡಾ. ಬಿ. ಯಶೋವರ್ಮ ಅವರ ಪಾತ್ರ ವಿಶೇಷವಾಗಿತ್ತು ಎಂದರು. ಉಜಿರೆಯು ಗ್ರೀನ್ ಸಿಟಿ ಆಗಬೇಕು ಎಂಬ ಅವರ ಸದಾಶಯ ಯಶೋವನದ ಹಿಂದಿದೆ, ಹೀಗಾಗಿಯೇ ಯಶೋವನ ಹಸಿರು ವಲಯವಾಗಿ ಕಂಗೊಳಿಸುತ್ತಿದೆ ಎಂದರು.
ಮಕ್ಕಳೇ ದೇಶದ ಸ್ವತ್ತು. ದೇಶದಲ್ಲಿ ಅನೇಕ ಸಾವಿರಾರು ವಿಶ್ವವಿದ್ಯಾನಿಯಲಗಳಿವೆ. ಪ್ರತೀ ಮಗು ಸಮಾಜಕ್ಕೆ ಅತ್ಯಮೂಲ್ಯ. ಅವರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಸಮಗ್ರ ಸಾಮಾಜಿಕ ಪ್ರಜ್ಞೆ ಇಲ್ಲದ ವಿದ್ಯಾರ್ಥಿಗಳು ದೇಶಕ್ಕೆ ಮಾರಕ. ಯಶೋವನವು ಅಂತಹ ಪ್ರಜ್ಞೆಯ ಭಾಗವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಸಿರೀಕರಣದ ಕನಸಿನ ಸಾಕಾರದ ಹಾದಿಯಲ್ಲಿ ‘ಯಶೋವನ’ ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಿದರು. “ಇಂಡೋನೇಷ್ಯಾ ಪ್ರವಾಸಕ್ಕೆ ಕುಟುಂಬದೊAದಿಗೆ ತೆರಳಿದ್ದಾಗ ಬಾಲಿಯ ಲಿಂಪುಯAಗ್ ದೇವಾಲಯದ ಆವರಣದಲ್ಲಿರುವ ನೋಡಿದ್ದ ವಿಶ್ವ ವಿಖ್ಯಾತ “ಗೇಟ್ ಆಫ್ ಹೆವನ್” ಅಂದರೆ “ಸ್ವರ್ಗದ ದ್ವಾರ”ದ ಮಾದರಿಯ ಗೋಪುರದ ಮಾದರಿಯನ್ನು ಉಜಿರೆಯ ‘ಯಶೋವನ’ದಲ್ಲಿ ಸ್ವರ್ಗದ ಬಾಗಿಲು ಮಾದರಿಯಲ್ಲಿ ಅಳವಡಿಸಿದ್ದೇವೆ. ಸ್ವಾತಂತ್ರಾö್ಯನAತರ ಅಭಿವೃದ್ಧಿ ಹೆಸರಲ್ಲಿ ಕಾಡಿನ ನಾಶವಾಗುತ್ತಿದೆ. ಕಾಡಿನಲ್ಲಿ ಬೆಳೆಸಿದ ಮರಗಳು ನೀಲಗಿರಿ, ಅಕೇಶಿಯಾ, ಸಾಗುವಾನಿ ಹೆಚ್ಚಿನ ಪ್ರಮಾಣದಲ್ಲಿ ಚಿಗುರದ ಕಾರಣ ಪ್ರಾಣಿಗಳೂ ಆಹಾರ ಇಲ್ಲದೇ ಊರಿಗೆ ಬರುತ್ತಿವೆ. ಸಸ್ಯಸಂಕುಲದ ಮಹತ್ವದ ಕುರಿತು ಅರಿವು ಮೂಡಿಸುವ ಹೆಜ್ಜೆಯಾಗಿ ಉಜಿರೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಸಸ್ಯೋದ್ಯಾನ ಬೆಳೆಸಲಾಯಿತು. ಉಜಿರೆಯನ್ನು ಹಸಿರು ನಗರವಾಗಿ ರೂಪಿಸುವಲ್ಲಿ ಡಾ. ಬಿ. ಯಶೋವರ್ಮ ಕೊಡುಗೆ ಅನನ್ಯವಾದದ್ದು. ಯಶೋವನ ಹಸಿರಿನ ಪರವಾದ ನಿಲುವನ್ನು ಮೂಡಿಸಲಿ” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಯಶೋವನದ ಪಾಲನೆ ಪೋಷಣೆ ಮಾಡುತ್ತಿರುವ ಪ್ರದೀಪ್, ಪ್ರಕಾಶ್ ಹಾಗೂ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪಗೌಡ, ಡಾ. ಹೇಮಾವತಿ ವಿ ಹೆಗ್ಗಡೆ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್, ಉಜಿರೆ ‘ನಿನಾದ’ದ ಶ್ರೀಮತಿ ಸೋನಿಯಾ ವರ್ಮಾ, ‘ಸಿರಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ಧನ್ ಮತ್ತು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತದ ಸಿಇಒ ಪೂರನ್ ವರ್ಮಾ ಉಪಸ್ಥಿತರಿದ್ದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರ ಹೆಗ್ಡೆ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಭಟ್ಟ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಏನಿದು ಯಶೋವನ?
1999 ರಲ್ಲಿ ಡಾ. ಬಿ. ಯಶೋವರ್ಮ ಅವರ ಮುತುವರ್ಜಿಯಿಂದ ಆರಂಭವಾದ ಅಪರೂಪದ ಸಸ್ಯಸೌರಭಗಳನ್ನು ರಕ್ಷಿಸುವ ಸಸ್ಯೋಧ್ಯಾನವೇ ಈ ಯಶೋವನ. ಪಶ್ಚಿಮಘಟ್ಟಗಳ ಅಪರೂಪದ ಸಸ್ಯ ಸಂಕುಲಗಳನ್ನು ಸಂರಕ್ಷಿಸುವ ಮತ್ತು ಅವುಗಳ ತಳಿಗಳನ್ನು ದಾಖಲಿಸುವ ಸಲುವಾಗಿ ಉಜಿರೆಯ ಸಿದ್ಧವನ ಸಮೀಪದಲ್ಲಿ ಎಂಟು ಎಕರೆ ಜಾಗದಲ್ಲಿ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಆರ್ಬೋರೇಟಂ (ಸಸ್ಯೋದ್ಯಾನ) ಹೆಸರಿನಲ್ಲಿ ಈ ಸಂರಕ್ಷಣಾ ವನವನ್ನು ಸ್ಥಾಪಿಸಿತ್ತು. ನಂತರದ ದಿನಗಳಲ್ಲಿ ಡಾ. ಬಿ. ಯಶೋವರ್ಮ ಅವರ ನಿರಂತರ ಆರೈಕೆಯಲ್ಲಿ ಅಪರೂಪದ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಸಸ್ಯೋದ್ಯಾನವಾಗಿ ರೂಪುಗೊಂಡಿತ್ತು.
ಪ್ರಸ್ತುತ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಿAದ ನಿರ್ವಹಿಸಲ್ಪಡುತ್ತಿರುವ ಈ ಯಶೋವನ ಹಲವು ಔಷಧೀಯ, ತೋಟಗಾರಿಕಾ ಹಾಗೂ ಪಶ್ಚಿಮ ಘಟ್ಟಗಳ ಸಸ್ಯ ಸಂಕುಲಗಳ ಅಪಾರ ಭಂಡಾರವನ್ನೇ ಹೊಂದಿದೆ. 2020 ರಲ್ಲಿ ನಡೆಸಿದ ಗಣತಿಯ ಪ್ರಕಾರ ಪ್ರಸ್ತುತ ಇಲ್ಲಿ 1116 ಮರಗಳಿದ್ದು ಉಜಿರೆಯ ಹಸಿರು ಭಂಡಾರವಾಗಿ ಕಂಗೊಳಿಸುತ್ತಿದೆ. ಉಜಿರೆ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಪರಿಸರ ಪರ ಕಾಳಜಿಗೆ ಉದಾಹರಣೆಯಾಗಿ ನಿಂತಿದೆ.
ಏನಿದರ ವಿಶೇಷತೆ?
ಪಶ್ಚಿಮ ಘಟ್ಟದಲ್ಲಿ ಲಭ್ಯವಿರುವ ಅಮೂಲ್ಯ ಸಸ್ಯ ಸಂಕುಲಗಳ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪರಿಸರದ ಕುರಿತು ಅರಿವು ಮೂಡಿಸಲು ಸಹಕಾರಿಯಾಗಬೇಕೆಂಬ ಕಾರಣಕ್ಕಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿದ್ದ ಡಾ. ಬಿ. ಯಶೋವರ್ಮ ಅವರ ಕನಸಿನಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಸಸ್ಯೋಧ್ಯಾನ ಜನ್ಮ ತಳೆದಿತ್ತು. ಇಂದು ಸುಮಾರು 500 ಕ್ಕೂ ಹೆಚ್ಚಿನ ಜಾತಿಯ ಸಸ್ಯ ಪ್ರಭೇದಗಳು ಇಲ್ಲಿ ಬೆಳೆದು ನಿಂತಿವೆ. ನೈಸರ್ಗಿಕ ಆವಾಸಸ್ಥಾನದ ಹೊರಗೆ ( ಎಕ್ಸ್ ಸಿಟು ಕನ್ಸರ್ವೇಷನ್) ನಡೆಯುವ ಸಸ್ಯ ಜಾತಿಗಳ ಸಂರಕ್ಷಣೆಗೆ ಉದಾಹರಣೆ ಈ ಸಸ್ಯೋದ್ಯಾನ. ಇದಕ್ಕೆ ಹೊಂದಿಕೊAಡಿರುವ ಸುಮಾರು ಎರಡು ಎಕರೆಗಳಷ್ಟು ವಿಶಾಲವಾದ ನೈಸರ್ಗಿಕ ಅರಣ್ಯ ತನ್ನ ಮೂಲ ವ್ಯವಸ್ಥೆಗೆ ಧಕ್ಕೆ ಬರದ ರೀತಿಯಲ್ಲಿ ಸ್ಥಾಪಿತವಾಗಿದೆ.
ಸಂರಕ್ಷಣೆಯ ಜೊತೆ ಜ್ಞಾನಾರ್ಜನೆ:
ಈ ಸಸ್ಯೋದ್ಯಾನದಲ್ಲಿ ನಿರಂತರವಾದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು ಹಲವಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಭಾಗವಾಗಿ ಇಲ್ಲಿನ ಸಸ್ಯಸೌರಭಗಳನ್ನು ಅಧ್ಯಯನ ಮಾಡುವ ಸಲುವಾಗಿ ಭೇಟಿ ನೀಡುತ್ತಾರೆ. ಜೀವಂತ ಮಾದರಿಗಳ ಮೂಲಕ ಪರಿಸರದ ಸೂಕ್ಷ್ಮತೆಯನ್ನು ಅರಿಯುತ್ತಾರೆ. ಗ್ರೀನ್ ಹೌಸ್, ವಿವಿಧ ವರ್ಗೀಕರಣದಲ್ಲಿ ಬೆಳೆಸಿರುವ ಮರ-ಗಿಡಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.
ಈ ಸಸ್ಯೋದ್ಯಾನದಲ್ಲಿರುವ ತೆರೆದ ವೇದಿಕೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯ ಭಾಗವಾಗಿ, ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ನಿರಂತರವಾಗಿ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಪರಿಸರಕ್ಕೆ ಕೊಡುಗೆ:
ಪ್ರಸ್ತುತ ಯಶೋವನದಲ್ಲಿರುವ ಸಾವಿರಕ್ಕೂ ಅಧಿಕ ಮರಗಳಿಂದ ಪರಿಸರಕ್ಕೆ ಬಹು ದೊಡ್ಡ ಕೊಡುಗ ಸಿಕ್ಕಿದೆ. ಇಲ್ಲಿರುವ ಮರಗಳ ‘ಕಾರ್ಬನ್ ಸೀಕ್ವೇಷ್ಟ್ರೇಷನ್’ ( ಇಂಗಾಲದ ಶೇಖರಣಾ ಪ್ರಮಾಣ) ಪ್ರಮಾಣ ಸುಮಾರು 8518 ಕಿಲೋಗಳಷ್ಟಿದೆ. ಅಷ್ಟೇ ಅಲ್ಲದೇ ವಿವಿಧ ಹಣ್ಣುಗಳು, ಗೆಡ್ಡೆ-ಗೆಣಸುಗಳು ಸೇರಿದಂತೆ ವನ್ಯ ಜೀವಿಗಳಿಗೆ ಬೇಕಾದ ಆಹಾರದ ತಾಣವಾಗಿಯೂ ಈ ಯಶೋವನ ಬಳಕೆಯಾಗುತ್ತಿದೆ. ಅಲ್ಲದೇ ಅತ್ಯಧಿಕ ಆಮ್ಲಜನಕ ಉತ್ಪತ್ತಿಗೆ ಪಾಲನ್ನು ನೀಡುತ್ತಾ, ತನ್ನ ಹಸಿರ ಸಿರಿಯ ಮೂಲಕ ಉಜಿರೆ ಗ್ರಾಮದ ಸೌಂದರ್ಯ ಹೆಚ್ಚಲೂ ಕಾರಣವಾಗಿದೆ. ಪರಿಸರ ಸಂರಕ್ಷಣೆಗೆ ನೀಡಿದ ಈ ಕಿರು ಕಾಣಿಕೆಯ ಮುಖಾಂತರವೇ ‘ ಜೈವಿಕ ವೈವಿಧ್ಯ ಸಂರಕ್ಷಣಾ ಕೇಂದ್ರ’ ವೆಂದು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ.
ಗಿಡಗಳ ವರ್ಗೀಕರಣ ಹೇಗೆ?
ಇಲ್ಲಿ ಲಭ್ಯವಿರುವ ಸಸ್ಯಗಳನ್ನು ಬೆಂಥಾಮ್ ಮತ್ತು ಹೂಕರ್ ವರ್ಗೀಕರಣ ವ್ಯವಸ್ಥೆಯ ಪ್ರಕಾರ ನೆಡಲಾಗಿದೆ. ಪಾಲಿಪೆಟಲೇ, ಗ್ಯಾಮೋಪೆಟಲೇ ಹಾಗೂ ಅಪೆಟಲೇ, ಅನಾವೃತ ಬೀಜ ಸಸ್ಯ ಹಾಗೂ ಏಕ ದಳ ಸಸ್ಯಗಳು ಎಂಬ ಗುಂಪುಗಳಲ್ಲಿ ವಿಂಗಡಿಸಿ ನೆಟ್ಟು ಬೆಳೆಸಲಾಗುತ್ತಿದೆ. ಕೇವಲ ವೈಜ್ಞಾನಿಕ ವರ್ಗೀಕರಣಕ್ಕಷ್ಟೇ ಸೀಮಿತವಾಗದೇ ಭಾರತೀಯ ಜ್ಯೋತಿಷ್ಯ ಶಾಸ್ತ್ರ, ಜೈನ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗಳು,ಸಾಹಿತ್ಯ ಹಾಗೂ ಸಸ್ಯಗಳ ಮೂಲ ಗುಣಗಳ ಆಧಾರದ ಮೇಲೆ ಕೂಡ ವಿವಿಧ ವನಗಳನ್ನು ಇಲ್ಲಿ ರಚಿಸಲಾಗಿದೆ.
ಆಕರ್ಷಣೆ:
ಪವಿತ್ರ ವನ: ಭಾರತೀಯ ಜ್ಯೋತಿಷ್ಯ ಶಾಸ್ತ್ರವು ಸಸ್ಯಗಳೊಂದಿಗೂ ತಳುಕು ಹಾಕಿಕೊಂದಿರುವ ಕಾರಣ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ನವಗ್ರಹ ವನ, ದ್ವಾದಶ ರಾಶಿ ವನ, ನಕ್ಷತ್ರ ವನಗಳನ್ನು ಅವುಗಳಿಗೆ ಸಂಬAಧಿಸಿದ ಸಸ್ಯಗಳೊಂದಿಗೆ ಸಮೀಕರಿಸಿ ಉಪ ವನಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಅಂಬಿಕಾ ವನ, ಸತ್ಯ ನಾರಾಯಣ ಪೂಜಾ ವನ, ಗಣೇಶ ವನ, ಶಿವ ಪಂಚಾಯತ ವನ, ವಿಷ್ಣುವನ ಹಾಗೂ ಶನಿವನಗಳನ್ನು ಕೂಡ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ನಿರ್ಮಿಸಲಾಗಿದೆ.
ತೀರ್ಥಂಕರ ವನ: ಜೈನ ಧಾರ್ಮಿಕ ನಂಬಿಕೆಗಳ ಪ್ರಕಾರ ಜೈನಧರ್ಮದ 24 ತೀರ್ಥಂಕರರು ಮೋಕ್ಷವನ್ನು ಪಡೆದ ಮರಗಳನ್ನು ಇಲ್ಲಿ ಒಂದೇ ಸ್ಥಳದಲ್ಲಿ ನೆಟ್ಟು ಪೋಷಿಸಲಾಗುತ್ತಿದೆ.
ಅಶೋಕ ವನ: ಸುಮಾರು 50 ಕ್ಕೂ ಅಧಿಕ ಸೀತಾ ಅಶೋಕ ವೃಕ್ಷಗಳನ್ನು ಇಲ್ಲಿ ಕಾಣಬಹುದಾಗಿದ್ದು ಆರ್ಬೋರೇಟಮ್ ಗೆ ಭೇಟಿ ನೀಡುವ ಜನರ ನೆಚ್ಚಿನ ವಿಶ್ರಾಂತಿಯ ಸ್ಥಳವಾಗಿದೆ.
ಪಂಪವನ ಹಾಗೂ ಕುವೆಂಪು ವನಗಳು: ಕನ್ನಡದ ಆದಿಕವಿ ಪಂಪ ಹಾಗೂ ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಸಸ್ಯ ಜಾತಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಆರ್ಬೋರೇಟಮ್ ನ ಹೃದಯ ಭಾಗದಲ್ಲಾಗಿದೆ.
ಇವಿಷ್ಟೇ ಅಲ್ಲದೆ ಹಲವು ತೋಟಗಾರಿಕಾ ಸಸ್ಯಗಳನ್ನೊಳಗೊಂಡ ತೋಟಗಾರಿಕೆ ಸಸ್ಯಗಳ ವನ, ವಿವಿಧ ಔಷಧೀಯ ಸಸ್ಯಗಳನ್ನೊಳಗೊಂಡ ಮನೆ ಮದ್ದು ಗಿಡಗಳ ವನ, ದೇಶಿ ಮತ್ತು ವಿದೇಶಿ ಹಣ್ಣಿನ ಗಿಡಗಳ ವನ, ಆಮ್ಲಕಿ, ಹರೀತಕಿ ಹಾಗೂ ಬಿಭೀತಕಿ ವೃಕ್ಷಗಳನ್ನೊಳಗೊಂಡ ತ್ರಿಫಲ ವನ, ಸಪ್ತ ಪರ್ಣಿ ವೃಕ್ಷದ ಸಾಲು ಮರಗಳನ್ನೊಳಗೊಂಡ ಸಪ್ತಪರ್ಣಿ ಮಾರ್ಗಗಳು ಇಲ್ಲಿವೆ. ಅಲ್ಲದೆ ಮಕ್ಕಳು ಆಟವಾಡಲು ವ್ಯವಸ್ಥೆ, ಗಿಡಗಳನ್ನು ಬೆಳೆಸಲು ಹಸಿರು ಮನೆ, ತೆರೆದ ವೇದಿಕೆ, ವಿಶ್ರಾಂತಿಗಾಗಿ ಕಲ್ಲು ಬೆಂಚುಗಳು, ತೂಗುವ ಉದ್ಯಾನ, 850 ಮೀಟರ್ ಗಳಷ್ಟು ಉದ್ದದ ಪಾದಚಾರಿ ಮಾರ್ಗ ಮತ್ತು ಮಾರ್ಗದುದ್ದಕ್ಕೂ ಪರಿಸರ ಪ್ರೀತಿ ಮೂಡಿಸುವ ಮಾಹಿತಿ ಫಲಕಗಳನ್ನು ಇಲ್ಲಿ ಕಾಣಬಹುದು.
ನಿರ್ವಹಣೆ:
ಈ ಸಸ್ಯೋದ್ಯಾನದಲ್ಲಿ ಕಾಲ ಕಾಲಕ್ಕೆ ನಾಶವಾದ ಸಸ್ಯಗಳ ಪುನರ್ ಸೇರ್ಪಡೆ (ನೆಡುವುದು) ಹಾಗೂ ಸಂಬಂಧಿಸಿದ ಗುಂಪಿಗೆ ಸೇರಿದ ಹೊಸ ಸಸ್ಯಗಳ ಸೇರ್ಪಡೆ ಕಾರ್ಯ ನಿರಂತರವಾಗಿ ನಡೆಯುತ್ತದೆ. ಸಸ್ಯಗಳ ಪೋಷಣೆಗೆ ಸಾವಯವ ಗೊಬ್ಬರವನ್ನು ಹಾಗೂ ವಿದ್ಯಾರ್ಥಿ ನಿಲಯಗಳ ಸಂಸ್ಕರಿತ ನೀರನ್ನು ಬಳಸಲಾಗುತ್ತಿದೆ. ಈ ಕಾರ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಸಸ್ಯ ಶಾಸ್ತ್ರ ವಿಭಾಗ, ಕಾಲೇಜಿನ ತೋಟಗಾರಿಕೆ ವಿಭಾಗಗಳು ಶ್ರದ್ಧೆಯಿಂದ ಕೈ ಜೋಡಿಸಿವೆ.
ಪರಿಸರ ಪ್ರೇಮಿ ಹಾಗೂ ಶಿಕ್ಷಣ ತಜ್ಞರಾಗಿದ್ದ ಡಾ. ಬಿ. ಯಶೋವರ್ಮರವರ ದೂರದೃಷ್ಟಿತ್ವಕ್ಕೆ ಹಿಡಿದ ಕೈಗನ್ನಡಿಯಂತೆ ಈ ಸಸ್ಯೋದ್ಯಾನ ಪಶ್ಚಿಮ ಘಟ್ಟಗಳ ವಿಶಿಷ್ಟ ಹಾಗೂ ಅನನ್ಯವಾದ ಸಸ್ಯ ಸಂತತಿಗಳನ್ನ ಸದ್ದಿಲ್ಲದೆ ಸಂರಕ್ಷಿಸುತ್ತಿದೆ. ಬದುಕಿನುದ್ದಕ್ಕೂ ಆದರ್ಶಪ್ರಾಯವಾಗಿ ಮೆರೆದ ಡಾ. ಬಿ. ಯಶೋವರ್ಮರ ಕನಸಿನ ಕೂಸಾದ ಈ ಸಸ್ಯೋದ್ಯಾನಕ್ಕೆ ಇಂದು ಅವರದೇ ನೆನಪಿನಲ್ಲಿ ‘ಯಶೋವನ” ಎಂಬ ಮರುನಾಮಕರಣ ಮಾಡುವ ಮೂಲಕ ಪರಿಸರ ಕಾಳಜಿಯ ಧ್ಯೋತಕವಾಗಿದ್ದ ಡಾ. ಬಿ. ಯಶೋವರ್ಮರ ಹೆಸರನ್ನು ಚಿರಸ್ಥಾಯಿಯಾಗಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ