ಮಂಗಳೂರಿನ ಪ್ರಧಾನ ಅಂಚೆ ಕಚೇರಿ ಪರಿಸರದಲ್ಲಿ ರಾಮಕೃಷ್ಣ ಮಿಷನ್ ಆರನೇ ತಿಂಗಳ ಶ್ರಮದಾನ ಸಂಪನ್ನ
ದುರ್ವಾಸನೆ ಬೀರುತ್ತಿದ್ದ ಪರಿಸರದ ಸ್ವಚ್ಛತೆ
ಸ್ವಚ್ಛತೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳು ಭಾಗಿ
ಸ್ವಚ್ಛಗೊಂಡ ಸರ್ವಿಸ್ ಬಸ್ ಸ್ಟಾಂಡ್ ತಡೆ ಗೋಡೆಗಳು
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಆರನೇ ತಿಂಗಳ ಶ್ರಮದಾನ ಕಾರ್ಯಕ್ರಮ ಇಂದು (ಮಾ.10) ಭಾನುವಾರ ಬೆಳಗ್ಗೆ 7.30 ರಿಂದ 10 ಗಂಟೆಯ ತನಕ ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಪರಿಸರದಲ್ಲಿ ಜರುಗಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ಸಾನಿಧ್ಯದಲ್ಲಿ, ರೊಸಾರಿಯೋ ಚರ್ಚ್ನ ಧರ್ಮ ಗುರುಗಳಾದ ಫಾದರ್ ಆಲ್ಫ್ರೆಡ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ವಿಭಾಗದ ಅಧ್ಯಕ್ಷ ಡಾ. ರಂಜನ್ ಹಾಗೂ ಅಂಚೆ ಇಲಾಖೆಯ ಅಧಿಕಾರಿ ಶಂಕರ್ ಕೆ ಜಂಟಿಯಾಗಿ ಹಸಿರು ನಿಶಾನೆ ತೋರಿ, ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ. ಧನೇಶ್ ಕುಮಾರ್, ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಕಮಲಾಕ್ಷ ಪೈ ಮತ್ತು ಸತ್ಯನಾರಾಯಣ ಉಪಸ್ಥಿತರಿದ್ದರು.
ರೊಸಾರಿಯೋ ಚರ್ಚ್ನ ಧರ್ಮ ಗುರುಗಳಾದ ಫಾದರ್ ಆಲ್ಫ್ರೆಡ್ ಮಾತನಾಡಿ, ರಾಮಕೃಷ್ಣ ಮಿಷನ್ ಹಲವಾರು ವರ್ಷಗಳಿದ ಸ್ವಚ್ಛತಾ ಕಾರ್ಯ ನಡೆಸುತ್ತ ಬಂದಿದೆ ಮಂಗಳೂರಿನ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಕೇವಲ ಮಂಗಳೂರಿಗೆ ಸೀಮಿತವಾಗದೆ, ಗ್ರಾಮೀಣ ಭಾಗದಲ್ಲೂ ಈ ಅಭಿಯಾನ ನಡೆಯುತ್ತಿರುವುದು ಸಂತಸದ ತಂದಿದೆ. ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಪ್ರಶಂಸನೀಯ" ಎಂದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ವಿಭಾಗದ ಅಧ್ಯಕ್ಷರಾದ ಡಾ. ರಂಜನ್ ಮಾತನಾಡಿ, “ನಮ್ಮ ಸಂಸ್ಥೆ ಸ್ವಚ್ಛತೆಯಂತಹ ಅತ್ಯುತ್ತಮ ಕಾರ್ಯದಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯೆನಿಸುತ್ತಿದೆ. ಮುಂದಿನ ದಿನಗಳಲ್ಲೂ ರಾಮಕೃಷ್ಣ ಮಿಷನ್ನ ಇಂತಹ ಕಾರ್ಯಗಳಿಗೆ ನಮ್ಮ ಸಹಕಾರ ಇರಲಿದೆ” ಎಂದು ಹೇಳಿದರು.
ಗಣ್ಯರು ಸಾಂಕೇತಿಕವಾಗಿ ರೊಸಾರಿಯೋ ಚರ್ಚೆ ರಸ್ತೆಯನ್ನು ಸ್ವಚ್ಛಗೊಳಿಸಿದರು. ಬಾಲಕೃಷ್ಣ ಭಟ್, ಮೆಹಬೂಬ್, ಡಾ. ತನಿಷ್ಕ್ ನೇತೃತ್ವದಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರಾದ ಪ್ರೊ. ರಾಕೇಶ್ ಕೃಷ್ಣ ಮಾರ್ಗದರ್ಶನದಲ್ಲಿ ಬಿ. ಎಸ್. ಎನ್. ಎಲ್. ಕಚೇರಿ ಹಿಂಭಾಗದ ಆವರಣ ಗೋಡೆಯುದ್ದಕ್ಕೂ ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ಹಿರಿಯ ಸ್ವಯಂಸೇವಕರುಗಳಾದ ಶಿವರಾಂ, ಅನಿರುಧ್ ನಾಯಕ್, ಡಾ. ಕೃಷ್ಣ ಶರಣ್, ಸಿಎ ವಿಷ್ಣು ಶಾಸ್ತ್ರಿ ಮತ್ತಿತರರು ಫುಟ್ಪಾತ್ ಮತ್ತು ಒಳಚರಂಡಿಗಳಲ್ಲಿ ತುಂಬಿದ್ದ ಕಸದ ರಾಶಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಿದರು. ಕೊಡಂಗೆ ಬಾಲಕೃಷ್ಣ ನಾಯಕ್ ನೇತೃತ್ವದಲ್ಲಿ ಯುವ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಅನಧಿಕೃತ ಬ್ಯಾನರ್ ಗಳನ್ನು ತೆರವುಗೊಳಿಸಿದರು.
ಹಿರಿಯ ಸ್ವಯಂಸೇವಕರುಗಳಾದ ವಿಠ್ಠಲದಾಸ್ ಪ್ರಭು, ಉದಯ್ ಕೆ. ಪಿ., ತಾರಾನಾಥ ಆಳ್ವ, ಯೋಗೀಶ್ ಕಾಯರ್ತಡ್ಕ ಉಮಾನಾಥ್ ಕೋಟೆಕಾರ್, ಬಬಿತಾ ಶೆಟ್ಟಿ, ವಸಂತಿ ನಾಯಕ್, ಸುನಂದಾ ಶಿವರಾಂ ನೇತೃತ್ವದಲ್ಲಿ ಅಂಚೆ ಇಲಾಖೆಯ ಉದ್ಯೋಗಿಗಳಾದ ಚಂದ್ರಶೇಖರ ಶೆಟ್ಟಿ, ನಿಶಾನ್, ರಾಜ್ ಕುಮಾರ್, ಜೂಹಿ ಕುಮಾರಿ, ಕೆ ಗಾಯತ್ರಿ, ರೂಪಾ, ವೆಂಕಟೇಶ್ವರನ್, ಸಂಗೀತಾ, ಸೌಮ್ಯ, ವೆಂಕಟೇಶ್, ಜಯಲಕ್ಷ್ಮಿ, ಹೇಮಚಂದ್ರ, ಹರೀಶ್, ದೀಪಾ, ಚೇತನ್, ಜಯಂತಿ, ಎಸ್. ಡಿ. ಎಮ್. ಸ್ನಾತಕೋತ್ತರ ಪದವಿ ವಿಭಾಗದ ಉಪನ್ಯಾಸಕರಾದ ಪ್ರೊ. ರಮ್ಯ ಶೆಟ್ಟಿ ಹಾಗೂ ಡಾ. ಪ್ರಮೀಳಾ ಶೆಟ್ಟಿ ನೇತೃತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಪೋಸ್ಟ್ ಆಫೀಸ್ ಹಾಗೂ ಕಮಿಷನರ್ ಕಚೇರಿ ಹಿಂಭಾಗದ ಆವರಣ ಗೋಡೆಯುದ್ದಕ್ಕೂ ಕಸದ ವಿಲೇವಾರಿ ನಡೆಸಿದರು.
ಸ್ವಚ್ಛಗೊಂಡ ಸರ್ವಿಸ್ ಬಸ್ ಸ್ಟಾಂಡ್ ತಡೆ ಗೋಡೆಗಳು:
ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಒಂದು ಬದಿಯ ತಡೆಗೋಡೆ ತ್ಯಾಜ್ಯ ಕೊಂಪೆಯಾಗಿದ್ದ ಪ್ರದೇಶದ ಚಿತ್ರಣವೇ ಬದಲಾಗಿದೆ. ರಾಮಕೃಷ್ಣ ಮಿಷನ್ ವತಿಯಿಂದ ಫೆಬ್ರವರಿ ತಿಂಗಳ ಸ್ವಚ್ಛ ಮಂಗಳೂರು ಶ್ರಮದಾನದಲ್ಲಿ ಕಸದ ರಾಶಿಯನ್ನು ತೆರವುಗೊಳಿಸಲಾಗಿದ್ದು, ಈ ಭಾಗಕ್ಕೆ ನವೀನತೆಯ ಸ್ಪರ್ಶ ಸಿಕ್ಕಿದೆ. ಬಸ್ ನಿಲ್ದಾಣದ ಬಲ ಬದಿಯಲ್ಲಿ ರಾಶಿ ಬಿದ್ದಿದ್ದ ಕಸವನ್ನೆಲ್ಲ ತೆರವುಗೊಳಿಸಿ ಇದೀಗ ಉಪಯೋಗಕ್ಕೆ ಯೋಗ್ಯವಾಗುವಂತೆ ಮಾಡಲಾಗಿದೆ. ಗೋಡೆಗೆ ಬಣ್ಣ ಬಳಿಯಲಾಗಿದ್ದು, ವಿದ್ಯಾರ್ಥಿಗಳ ಕಲಾ ಕುಂಚದಿಂದ ಬಗೆಬಗೆಯ ಕಲಾಕೃತಿಗಳು ಅರಳಿವೆ. ಅವ್ಯವಸ್ಥೆಯಿಂದ ಕೂಡಿದ್ದ ಪ್ರದೇಶ ಇದೀಗ ಸಾರ್ವಜನಿಕರನ್ನು ತನ್ನತ್ತ ಆಕರ್ಷಿಸುವ ರೀತಿಯಲ್ಲಿ ಕಂಗೊಳಿಸುತ್ತಿದೆ. ಮತ್ತೊಂದೆಡೆ ಮೂತ್ರ ವಿಸರ್ಜನೆ ಮಾಡದಂತೆಯೂ ಅಲ್ಲಲ್ಲಿ ಗೋಡೆ ಬರಹಗಳನ್ನು ಬರೆಯಲಾಗಿದೆ. ಎಂಆರ್ ಪಿಎಲ್ ಸಂಸ್ಥೆಯವರು, ಬಸ್ ಮಾಲಕರು - ಸಿಬಂದಿ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ