ಈ ವಿಸ್ತಾರವಾದ ಪ್ರಕೃತಿ ತುಂಬಾ ಸುಂದರಮಯ ರಮಣೀಯವಾಗಿದೆ. ನಿಸರ್ಗದಲ್ಲಿರುವ ಪ್ರತಿಯೊಂದು ವಸ್ತುವೂ ಕಲೆಯಾಗಿದೆ. ಅಸಂಖ್ಯಾತ ವರ್ಣ ಆಕಾರಗಳಿಂದ ಕೂಡಿದ ಈ ಸೃಷ್ಟಿ ಸೌಂದರ್ಯದ ಸೊಬಗನ್ನು ಆಸ್ವಾದಿಸುವ ಮನಸ್ಸು, ಆನಂದಿಸುವ ಗುಣವಿದ್ದರೆ ಎಲ್ಲವೂ ಕಲೆಯ ಆಗರ. ಜುಳು ಜುಳು ಹರಿಯುವ ನೀರಿನ ಶಬ್ಧ, ಗಾಳಿಯಿಂದ ಗಿಡ ಮರಗಳು ಅಲುಗಾಡಿದಾಗ ಸೂಸುವ ನಾದ ನಿನಾದ ಸಂಗೀತಮಯ. ಗುಡ್ಡ ಬೆಟ್ಟಗಳ ಮಧ್ಯೆ ನಿಂತು ಕೂಗಿದಾಗ ಮೂಡುವ ಸಪ್ತ ಸ್ವರಗಳು ಮನೋ ಉಲ್ಲಾಸ. ಇವು ನಮ್ಮ ಮನಸ್ಸಿಗೆ ಮುದ ನೀಡುತ್ತವೆ. ಸಂಗೀತ ಮತ್ತು ನಿಸರ್ಗದ ಸಮ್ಮಿಲನವನ್ನು ಅನುಭವಿಸಿದಾಗ ಮೂಡುವ ಭಾವ ವರ್ಣಾನಾತೀತ ಎಂದು ಭಾವುಕಾರಾಗಿ ನುಡಿವ ನಾಡಿನ ಕಲಾ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ, ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಬಾಬುರಾವ್ ನಡೋಣಿ ಬಹುಮುಖ ಪ್ರತಿಭೆಯ ಅಪರೂಪದ ಕಲಾವಿದರು. ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಯೋಗ, ಕೊಳಲು, ರಂಗೋಲಿ ಹೀಗೆ ಹತ್ತಾರು ಕಲೆಗಳಲ್ಲಿ ನಿತ್ಯ ನಿರತರು. ಭಾವಚಿತ್ರ ಕಲಾವಿದರೆಂದೇ ಹೆಸರಾದವರು. ಸ್ಕೆಚ್ ಹಾಕದೇ ಕೆಲವೇ ಸಮಯದಲ್ಲಿ ಭಾವಚಿತ್ರ ಬಿಡಿಸುವ ಕೌಶಲ್ಯ ಹೊಂದಿದವರು. ಭಾರತರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ, ಭಾರತರತ್ನ ಡಾ. ಸಿ.ಎನ್.ಆರ್.ರಾವ್. ಅವರ ಭಾವಚಿತ್ರಗಳನ್ನು ರಚಿಸಿ ಅವರಿಂದಲೇ ಮೆಚ್ಚುಗೆ ಪಡೆದವರು. ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳಿಗೆ ಕಲಾಕೃತಿಗಳನ್ನು ರಚಿಸಿ ಜನಮೆಚ್ಚುಗೆ ಪಡೆದವರು. ಇವರ ಮತ್ತೋರ್ವ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪರವರ ಭಾವಚಿತ್ರ ರಚನೆ ಮನ ಸೆಳೆಯುವಂತದ್ದು.
ಇವರ ಮಡದಿ ಆಶಾರಾಣಿ ಮೇಡಂ ಅವರನ್ನು ಬಾಬುರಾವ್ ವರಿಸುವ ಮೊದಲು ಮೇಡಂ ಚಿತ್ರಗಾರಿಕೆ ಮಾಡುತ್ತಿದ್ದರು. ಇವರೇ ಮೊದಲಾದ ಚಿತ್ರ ಕಲಾವಿದರು, ಕಲಾ ಪ್ರದರ್ಶನಗಳ ಕುರಿತ್ತಾಗಿ ಆಗಿಂದಾಗೆ ಬರೆದ ಬರಹಗಳನ್ನು ಸೇರಿಸಿ ಪ್ರಕೃತಿ ವಿಕೃತಿ ಕಲಾಕೃತಿ. ಲೋಕ ದೃಷ್ಟಿ ಕಲಾ ಸೃಷ್ಟಿ, ಬಣ್ಣದ ಬದುಕು ಯಾಕೂಬ ಕೃತಿಗಳನ್ನು ಈವರೆಗೆ ಪ್ರಕಟವಾಗಿದೆ. ಲೋಕ ದೃಷ್ಟಿ.. ಕೃತಿಗೆ ನಡೋಣಿ ಯವರದೇ ಮುನ್ನುಡಿ. ಪೋನ್ಗೆ ಸಿಕ್ಕ ಬಾಬುರಾವ್ ಅವರೊಂದಿಗೆ ಮಾತನಾಡುತ್ತಾ ತಮ್ಮ ಕಲೆಗಾರಿಕೆಯ ಹಲವು ಮಾಹಿತಿಗಳನ್ನು ಹಂಚಿಕೊಂಡರು. ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಹಲವಾರು ಕಲಾವಿದರು ಹಲವು ಬಗೆಯಲ್ಲಿ ರೂಪಿಸಿದ್ದಾರೆ. ಕೇರಳ ಲಲಿತ ಕಲಾ ಅಕಾಡೆಮಿ ಏರ್ಪಡಿಸಿದ್ದ ರಾಷ್ಟಿಯ ಕಲಾ ಶಿಬಿರದಲ್ಲಿ 5 ದಿನಗಳಲ್ಲಿ 50 ಭಾವಚಿತ್ರಗಳನ್ನು ರಚಿಸಿ ರಾಷ್ಟಿಯ ದಾಖಲೆ ನಿರ್ಮಿಸಿದ್ದಾರೆ.
ಕೇವಲ ಭಾವಚಿತ್ರ ಅಷ್ಟೇ ಅಲ್ಲಾ ಸೃಜನಶೀಲ ಕಲಾ ರಚನೆಯಲ್ಲೂ ಸಿದ್ಧಹಸ್ತರು. ಇವರ ಕತ್ತಲೆಯಿಂದ ಬೆಳಕಿನೆಡೆಗೆ ಬುದ್ಧ ಸರಣಿಯ ಕಲಾಕೃತಿಗಳು ಸಮಾಜಕ್ಕೆ ಮಾನವೀಯ ಮೌಲ್ಯಗಳ ಸಂದೇಶ ನೀಡುತ್ತವೆ. ನಾದ ನಿನಾದ ಸರಣಿಯ ಕಲಾಕೃತಿಗಳಲ್ಲಿ ಸಂಗೀತ ಮತ್ತು ನಿಸರ್ಗದ ರಮ್ಯ ಸೊಬಗು ವರ್ಣಗಳಲ್ಲಿ ಸಂಯೋಜನೆ ಗೊಂಡಿವೆ. ಇವರು ರಾಜ್ಯ, ರಾಷ್ಟ್ರ ಅಂತರಾಷ್ಟಿಯ ಮಟ್ಟದ 94 ಶಿಬಿರಗಳಲ್ಲಿ ಭಾಗವಹಿಸಿದ ದೇಶ ಸಂಚಾರಿ ಸದ್ಯವೇ ಸೆಂಚುರಿ ಬಾರಿಸಲಿದ್ದಾರೆ. ರಾಜ್ಯ ಸರ್ಕಾರದ ಪ್ರತಿಷ್ಠಿತ ಡಾ. ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ಪುಣೆಯ ಲೋಕಮಾನ್ಯ ತಿಲಕ್ ರಾಷ್ಟಿಯ ಪ್ರಶಸ್ತಿ, ನಾಗಪುರದ ರಾಷ್ಟಿಯ ಪ್ರಶಸ್ತಿ ಒಳಗೊಂಡು ಸುಮಾರು 52 ಪ್ರಶಸ್ತಿಗಳ ಹಾಫ್ ಸೆಂಚುರಿ ರೀಚ್ ಆಗಿದ್ದಾರೆ. ಇವರ 25 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ದೆಹಲಿ, ಕೇರಳ, ಮುಂಬೈ, ಪುಣೆ, ಗೋವ, ಅಂಡಮಾನ್ ನಿಕೋಬಾರ್, ಹೈದ್ರಾಬಾದ್, ಯೂರೋಪ್ಗಳಲ್ಲಿ ಏರ್ಪಟ್ಟಿವೆ.
40 ಸಮೂಹ ಕಲಾ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ಏರ್ಪಡಿಸಿ ಅಪಾರ ಮನ್ನಣೆ ಪಡೆದ ಇವರ ಕಲಾಕೃತಿಗಳು ಅನೇಕ ಕಲಾಪ್ರೇಮಿಗಳ ಗೋಡೆಗಳನ್ನು ಅಲಂಕರಿಸಿವೆ. ರಾಷ್ಟ ಹಾಗೂ ನಾಡಿನ ಕಲಾ ಕಾಲೇಜುಗಳಲ್ಲಿ ನೂರಾರು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಪ್ಪಳ್ಳಿಯಲ್ಲಿ ಏರ್ಪಡಿಸಿದ್ದ ಪಠ್ಯ ಪುಸ್ತಕ ಕ್ರಮ ಶಿಬಿರದಲ್ಲಿ, ಅಲ್ಲಮ ಪ್ರಭು ಲಲಿತ ಕಲಾ ಮಹಾ ವಿದ್ಯಾಲಯ ಮೈಸೂರು, ಕಾವಾ ಹಾಗೂ ಶ್ರೀ ಕಲಾನಿಕೇತನ ಮೈಸೂರು, ಚಿತ್ರಕಲಾ ಪರಿಷತ್ ಬೆಂಗಳೂರು. ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯ ಇಳಕಲ್, ಗ್ಲೋಬಲ್ ಆರ್ಟ್ ಫೌಂಡೇಶನ್ ಹುಮ್ನಾಬಾದ್ ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ದಿನಾಂಕ 1-6-1963ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದ ಇವರು 1986ರಲ್ಲಿ ಜಿ.ಡಿ.ಫೈನ್ ಆರ್ಟ್ ಕುವೆಂಪು ಯೂನಿವರ್ಸಿಟಿ ಕಾಲೇಜ್ ಆಫ್ ಫೈನ್ ಅರ್ಟ್, ದಾವಣಗೆರೆ ಇಲ್ಲಿ ಮಾಸ್ಟರ್ ಆಫ್ ವಿಜುವಲ್ ಆರ್ಟ್ ಪದವೀಧರರು. ರಾಯಬಾಗದ ವಿವೇಕಾನಂದ ಕಾಲೇಜ್ ಆಫ್ ಫೈನ್ ಆರ್ಟ್ ಹಿರಿಯ ಉಪನ್ಯಾಸಕರು. ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯರು. ಇವರ ಕಲಾ ಪ್ರತಿಭೆ ಗುರುತಿಸಿ 2021ನೇ ಸಾಲಿನ ಚಿತ್ರ ಕಲಾಶಿಲ್ಪಿ ಡಿ.ವ್ಹಿ. ಹಾಲಭಾವಿ ಟ್ರಸ್ಟ್ ಕುಂಚ ಕಲಾಶ್ರೀ ರಾಷ್ಟಿಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇವರು ಕನ್ನಡ ದೃಶ್ಯ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ 2023-24ನೇ ಸಾಲಿನ ದೃಶ್ಯ ಬೆಳೆಕು ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಿ ಇದೇ ಭಾನುವಾರ (ತಾ.3-3-2024) ಕಲಬುರಗಿಯ ರಂಗಾಯಣದಲ್ಲಿ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ 10ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
- ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ