ಮಂಗಳೂರು: ಕಾಸರಗೋಡು ಜಿಲ್ಲಾಧಿಕಾರಿ ಕೆ.ಎ ಇನ್ಬಶೇಖರ್ ತುಳು ಹಾಗೂ ಕನ್ನಡದಲ್ಲಿ ನೀಡಿದ ಸಂದೇಶವಿದು.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆಯ ಭಾಗವಾಗಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಾ.2ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಮತದಾರರ ಜಾಗೃತಿ ಸಂಬಂಧಿತ ಗ್ರಾಮ ಸಭೆಗಳು ನಡೆಯಲಿವೆ. ಈ ಸಭೆಗಳಲ್ಲಿ ಜನತೆ ಸಕ್ರಿಯವಾಗಿ ಭಾಗವಹಿಸಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿಕೊಂಡಿದ್ದಾರೆ.
ಕೇರಳದ ಭಾಗವಾಗಿ ಹೋಗಿರುವ ಕಾಸರಗೋಡಿನಲ್ಲಿ ದಿನೇ ದಿನೇ ಕನ್ನಡ ಕ್ಷೀಣಿಸುತ್ತಿದೆ. ಕನ್ನಡದ ಹತ್ತಿಕ್ಕುವಿಕೆ ದೊಡ್ಡ ಪ್ರಮಾಣದಲ್ಲಿ ನಡೆದಾಗೆಲ್ಲ ಇಲ್ಲಿನ ಕನ್ನಡ ಸಂಘಟನೆಗಳು ಕೂಡ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿ ಪ್ರತಿಭಟನೆ ನಡೆಸಿದಾಗ ಕೇರಳ ಸರಕಾರ ಒಂದು ಹೆಜ್ಜೆ ಹಿಂದಿರಿಸಿ ಭಾಷಾ ಅಲ್ಪ ಸಂಖ್ಯಾತರ ಹಿತ ಕಾಪಾಡಲು ಬದ್ಧ ಎಂಬ ಸಿದ್ಧ ಸಂದೇಶವನ್ನು ನೀಡುತ್ತ ಕಣ್ಣೊರೆಸುವ ತಂತ್ರ ಅನುಸರಿಸುತ್ತಿರುವುದು ಕೂಡ ಸುಳ್ಳಲ್ಲ.
ವೈರಲ್ ಆದ ಈ ವೀಡಿಯೋ ನೋಡಿ:
ಏನೇ ಇರಲಿ, ಮೂಲತಃ ಯಾವುದೋ ರಾಜ್ಯದ ಒಬ್ಬ ಐಎಎಸ್ ಅಧಿಕಾರಿ ಕೇರಳದಲ್ಲಿ, ಅದೂ ಸಹ ನಮ್ಮ ಕಾಸರಗೋಡಿನಲ್ಲಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡು ರಾಜ್ಯ ಭಾಷೆಯಾದ ಮಲೆಯಾಳಂ ಮಾತ್ರವಲ್ಲದೆ, ಸ್ಥಳೀಯ ಭಾಷೆಗಳಾದ ಕನ್ನಡ ಮತ್ತು ತುಳುವಿನಲ್ಲೂ ಜನತೆಗೆ ಸಂದೇಶ ನೀಡಿರುವುದು ಸ್ವಾಗತಾರ್ಹ.
ಕಾಸರಗೋಡು ಜಿಲ್ಲಾಧಿಕಾರಿ ಇನ್ಬಶೇಖರ್ ಅವರೇ ನಿಮಗೆ ವಂದನೆಗಳು, ಈರೆಗ್ ಸೊಲ್ಮೆಲು.