ಅಪ್ಪ ಎಂಬ ಆಲದ ಮರ

Upayuktha
0




ನಿ
ಜ ..ಅಪ್ಪ ಎಂಬ ವಿಶಾಲ ಆಲದ ಮರದ ಆಸರೆಯಲ್ಲಿ ಬೆಳೆದ ಮಕ್ಕಳಿಗೆ ಬದುಕಿನ ಎಲ್ಲಾ ಜಂಜಡಗಳನ್ನು ನೀಗಿಕೊಳ್ಳುವ ಬೃಹತ್ ಶಕ್ತಿ ಅಪ್ಪ. ನಾನಂತೂ ಅಪ್ಪನ ಮುದ್ದಿನ ಮಗಳು. ಅಪ್ಪನೊಂದಿಗಿನ ಒಡನಾಟದ ನನ್ನ ಬಾಲ್ಯ ಅತ್ಯಂತ ಸುಮಧುರ ನೆನಪುಗಳನ್ನು ಹೊಂದಿದೆ. ಅಪ್ಪ ಅಮ್ಮನ ಜೊತೆ ಬೈಕಿನಲ್ಲಿ ಕುಳಿತು ನನ್ನೂರಿನ ಸುತ್ತಣ ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳ ಭೇಟಿ ಪ್ರತಿ ವಾರದ ಕಡ್ಡಾಯ ದಿನಚರಿಯಾಗಿತ್ತು. ಮೂರು ನಾಲ್ಕು ವಯಸ್ಸಿನಲ್ಲಿದ್ದಾಗಲೇ ಪ್ರಯಾಣವನ್ನು ಅತಿಯಾಗಿ ಎಂಜಾಯ್ ಮಾಡುವ ನನ್ನ ಮಾತಿನಂತೆ ನಮ್ಮಪ್ಪ ತಮ್ಮ ರಾಜದೂತ ಬೈಕಿನಲ್ಲಿ ಎದುರಿಗಿನ ಎತ್ತಿನ ಗಾಡಿಯನ್ನು, ಟ್ರ್ಯಾಕ್ಟರ್ ಗಳನ್ನು,ಬಿಲ್ಡಿಂಗುಗಳನ್ನು ಹಿಂದೆ ಹಾಕಿ ಮುಂದೆ ಗಾಡಿ ಓಡಿಸುತ್ತಿದ್ದರು. ಅಪ್ಪಾಜಿ ಆ ಎತ್ತಿನ ಗಾಡಿ ಹಿಂದೆ ಹಾಕೋಣ, ಅಪ್ಪಾಜಿ ಈ ಬಿಲ್ಡಿಂಗ್ ಹಿಂದಕ್ ಹಾಕೋಣ ಎಂಬ ನನ್ನ ಬಾಲ್ಯ ಸಹಜ ಮಾತುಗಳಿಗೆ ಅಷ್ಟೇ ಪ್ರೀತಿಯಿಂದ ಅಪ್ಪ ಸ್ಪಂದಿಸುತ್ತಿದ್ದರು. 




ಪ್ರತಿದಿನ ರಾತ್ರಿ ಮಲಗುವಾಗ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುತ್ತಾ ನಾವು ಮಕ್ಕಳನ್ನು ಮಲಗಿಸುವುದು ಮತ್ತೊಂದು ಸುಮಧರ ನೆನಪು. ಇದಲ್ಲದೆ ಐತಿಹಾಸಿಕ ವಿಷಯಗಳನ್ನು ಮನಮುಟ್ಟುವಂತೆ ಹೇಳುವಲ್ಲಿ ಅಪ್ಪನದು ಎತ್ತಿದ ಕೈ. ಯಾವುದಾದರೂ ಊರಿಗೆ ಪ್ರಯಾಣ ಬೆಳೆಸಿದರೆ ಆ ಊರಿನಲ್ಲಿ ಸಿಗುವ ಎಲ್ಲಾ ಸ್ಪೆಶಲ್ ತಿಂಡಿಗಳನ್ನು ತಿನ್ನಿಸಿ ನೋಡಿ ಸಂತಸ ಪಡುವುದು ನನ್ನ ಅಪ್ಪನ ಪ್ರೀತಿಯ ಕೆಲಸ. ನನ್ನೂರು ಮತ್ತು ಹುಬ್ಬಳ್ಳಿ ನಡುವೆ ರೈಲು ಪ್ರಯಾಣ ಮಾಡುತ್ತಿದ್ದಾಗ ರೈಲಿನಲ್ಲಿ ಸಿಗುವ ಎಲ್ಲ ತಿಂಡಿ ತಿನಿಸುಗಳನ್ನು ಕೂಡ ತಿನ್ನಿಸುವುದು ಕಡ್ಡಾಯ ಎಂಬಂತಾಗಿತ್ತು.




ಇನ್ನು ಪ್ರತಿ ಶನಿವಾರ ಮತ್ತು ರವಿವಾರದ ಮಧ್ಯಾಹ್ನಗಳಲ್ಲಿ ಮನೆಯ ಹಾಲ್ನಲ್ಲಿ ದಿಂಬನ್ನು ಹಾಕಿಕೊಂಡು ಅಡ್ಡಾಗುವ ಅಪ್ಪನ ಎಡ ಬಲಬದಿಯಲ್ಲಿ ನಾವೆಲ್ಲ ಮಕ್ಕಳು ಮಲಗಿಕೊಂಡರೆ, ಅಮ್ಮನನ್ನು ಒಳಗೊಂಡಂತೆ ನಮಗೆಲ್ಲ ಸುಧಾ,ತರಂಗ,ತುಷಾರ, ಮಯೂರ ಮುಂತಾದ ಪತ್ರಿಕೆಗಳಲ್ಲಿ ಬರುವ ಮಕ್ಕಳ ಕಥೆಗಳನ್ನು ರಸಾಯನಗಳನ್ನು ಹರಟೆಗಳನ್ನು ನವರಸಗಳಲ್ಲಿ ವರ್ಣಿಸುತ್ತಾ ಅಪ್ಪ ಓದುತ್ತಿದ್ದರೆ ಕೇಳಲು ಕರ್ಣಾನಂದ (ನಮಗೆಲ್ಲರಿಗೂ ಓದಲು ಬರುತ್ತಿದ್ದರು ಕೂಡ). 




ಅಂದು ಎಲ್ಲ ಮನೆಗಳಲ್ಲಿ ಇರುತ್ತಿದ್ದ ನೀರು ಕಾಯಿಸುವ ಬಾಯ್ಲರ್ ಗೆ ಮೆಕ್ಕೆಜೋಳದ ತೆನೆಗಳನ್ನು ಹಾಕುತ್ತಾ ನೀರು ಕಾಯಿಸಲು ನಿಲ್ಲುತ್ತಿದ್ದ ಅಪ್ಪ ಅಲ್ಲಿಯೇ ಇದ್ದ ಒಗೆಯುವ ಕಲ್ಲಿನ ಮೇಲೆ ನನ್ನನ್ನು ಕೂರಿಸಿ ಕಥೆ ಹೇಳುತ್ತಿದ್ದರು. ಅದೊಂದು ರೀತಿಯ ಕ್ವಾಲಿಟಿ ಟೈಮ್ ನಮ್ಮಿಬ್ಬರ ಪಾಲಿಗೆ. ಈ ರೀತಿ ಕಥೆ ಹೇಳುವ ಮೂಲಕ ನಮ್ಮ ಮನಸ್ಸಿನ ಪ್ರಪಂಚವನ್ನು ಅಗಾಧ ವಿಸ್ತಾರಕ್ಕೆ ಕೊಂಡೊಯ್ಯುವ ಮೂಲಕ ವಿಶಾಲ ಪ್ರಪಂಚ ದರ್ಶನ ಮಾಡಿಸಿದ ದಾರ್ಶನಿಕ ನನ್ನಪ್ಪ.


ಆಫೀಸಿನಿಂದ ಬಂದಮೇಲೆ ಮುಖಮಾರ್ಜನ ಮಾಡಿ ನಾವೆಲ್ಲ ಓದುತ್ತಾ ಕುಳಿತೆಡೆ ಬಂದು ಕುಳಿತುಕೊಳ್ಳುವ ನಮ್ಮಪ್ಪ ಕೈಯಲ್ಲಿ ಪುಸ್ತಕ ಒಂದನ್ನು ಸದಾ ಹಿಡಿದಿರುತ್ತಿದ್ದರು. ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದ ಅಪ್ಪ ಪುಸ್ತಕದಲ್ಲಿನ ಸ್ವಾರಸ್ಯಕರ, ಒಳ್ಳೆಯ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಮುಂದೆ ನನ್ನ ವಿವಾಹವಾದ ನಂತರ ನನ್ನ ಪತಿ ಎಷ್ಟೋ ಬಾರಿ ನಿಮ್ಮ ಅಪ್ಪಾಜಿ ನನ್ನ ಇಂಜಿನಿಯರಿಂಗ್ ಪುಸ್ತಕಗಳನ್ನು ಕೂಡ ಬಿಡೋದಿಲ್ಲ ಇಲ್ಲಿಗೆ ಬಂದಾಗ ಅಂತ ತಮಾಷೆ ಮಾಡುವಷ್ಟು ಅಪ್ಪನ ಓದುವ ಹವ್ಯಾಸ ಇತ್ತು.ನಮ್ಮನ್ನು ಅತಿಯಾಗಿ ಪ್ರೀತಿಸುವ ಅಪ್ಪ ನಮಗೆ ಓದಿನ ರುಚಿ ಹಚ್ಚಿಸಿದರು. ವೈವಿಧ್ಯಮಯ ವಾರ ಪತ್ರಿಕೆಗಳನ್ನು, ಮಾಸಪತ್ರಿಕೆಗಳನ್ನು ತರಿಸುತ್ತಿದ್ದ ಅಪ್ಪ ಒಂದೊಮ್ಮೆ ಅಮ್ಮ ಅವುಗಳನ್ನು ಎತ್ತಿಡಲು ಬೇಸರ ಮಾಡಿಕೊಂಡರೆ ಪತ್ರಿಕೆಗಳ ಖರೀದಿಗೆ ಸರ್ಕಾರ ನನಗೆ ಸಂಬಳ ಕೊಡುತ್ತೆ ಅಂತ ಅಮ್ಮನ ಬಾಯಿ ಮುಚ್ಚಿಸುತ್ತಿದ್ದರು. ಬಹುಶಹ ಅಪ್ಪನ ಪುಸ್ತಕ ಓದುವ ಚಟ ನಮಗೂ ಅಂಟಿಕೊಂಡಿದ್ದು ಹೀಗೆಯೇ ಇರಬಹುದು.




ನಮ್ಮೆಲ್ಲಾ ಮಾತುಗಳನ್ನು ಲಕ್ಷ ಕೊಟ್ಟು ಕೇಳಿ ನಮಗೆ ಹೇಳಬೇಕಾದುದನ್ನು ಸಾವಧಾನವಾಗಿ ಹೇಳುತ್ತಿದ್ದ ಅಪ್ಪ ವಿಪರೀತ ಕೋಪಿಷ್ಟರು ಕೂಡ. ಆದರೆ ಆ ಕೋಪವೂ ಕೂಡ ನೀರಿನ ಮೇಲಿನ ಗುಳ್ಳೆಯಂತೆ. ಕ್ಷಣ ಪಿತ್ತ ಕ್ಷಣ ಚಿತ್ತ.. ಮನೆಯ ಕಿರಿ ಮಗಳಾದ ನನ್ನ ಮೇಲೆ ಮಾತ್ರ ಯಾವತ್ತೂ ಕೋಪಗೊಂಡಿದ್ದು ಇಲ್ಲವೇ ಇಲ್ಲ.




ಇನ್ನು ಐತಿಹಾಸಿಕ ವಿಷಯಗಳನ್ನು, ಪ್ರವಾಸಿ ತಾಣಗಳ ಕುರಿತು ರಸವತ್ತಾಗಿ ವರ್ಣಿಸುವಲ್ಲಿ ಅಪ್ಪ ಎತ್ತಿದ ಕೈ. ನನ್ನೂರಿಗೆ ಸುಮಾರು 40 ಕಿಲೋ ಮೀಟರ್ ದೂರವಿರುವ ಹಂಪೆಯಲ್ಲಿ ಉತ್ಖನ ಮಾಡುತ್ತಿದ್ದ ಸಮಯವದು. ಹೊಸ ಕಟ್ಟಡದ, ವಿಗ್ರಹದ, ಪುಷ್ಕರಣಿ ದೊರೆತಿದೆ ಎಂಬ ವಾರ್ತೆ ಪತ್ರಿಕೆಗಳಲ್ಲಿ ಪ್ರಕಟವಾದರೆ ಆ ರವಿವಾರ ನಮ್ಮ ಪಯಣ ಹಂಪಿಯಡೆಗೆ. ಅಪ್ಪ ಅಮ್ಮನ ಮಧ್ಯದಲ್ಲಿ ಬೈಕ್ ನಲ್ಲಿ ಕುಳಿತುಕೊಂಡು ಆ ಸ್ಥಳವನ್ನು ನೋಡಿ ಬಂದಾಗಲೇ ಅಪ್ಪನಿಗೆ ಸಮಾಧಾನ.




ಇನ್ನು ಅಣ್ಣಂದಿರಿಗೆ ತುಸು ಶಿಸ್ತಿನ ಸಿಪಾಯಿಯಂತೆ ತೋರುತ್ತಿದ್ದ ಅಪ್ಪ ನನಗೆ ಮಾತ್ರ ವಾತ್ಸಲ್ಯದ ಮಹಾ ವಾರಿಧಿ. ನನ್ನ ಅಣ್ಣಂದಿರನ್ನು ತಮ್ಮ ಎರಡು ಕಣ್ಣುಗಳು ಎಂದು ಬಣ್ಣಿಸುತ್ತಿದ್ದ ಅಪ್ಪನ ಹೃದಯ ನಾನು ಎಂಬುದು ಎಲ್ಲರೂ ಬಲ್ಲ ವಿಷಯ. ಅಂತೆಯೇ ಎಂದೂ ನನ್ನ ಅಣ್ಣಂದಿರು ನನ್ನೊಂದಿಗೆ ಜಗಳವಾಡದಂತೆ ತಡೆದದ್ದು ನಾನವರ ಹೃದಯ ಎಂಬ ಅವರ ಮಾತು.




 ಇನ್ನು ನಮ್ಮ ಮನೆಯಲ್ಲಿ ನಾವು ಅದೆಷ್ಟೇ ಮುನಿಸಿಕೊಂಡು ಮೂಲೆಯಲ್ಲಿ ಕುಳಿತಿದ್ದರೂ ಊಟದ ಸಮಯಕ್ಕೆ ಎಲ್ಲರೂ ಕಡ್ಡಾಯವಾಗಿ ಹಾಜರಿರಲೇಬೇಕು. ಅಕಸ್ಮಾತ್ ಯಾರಾದ್ರೂ ಶಟಗೊಂಡು (ಹೆಚ್ಚಾಗಿ ನಾನೇ) ಕುಳಿತಿದ್ದರೆ ನನ್ನಪ್ಪ ವನ್ ಟು..... ತ್ರೀ ಎಂದು ರಾಗವಾಗಿ ಹೇಳುತ್ತಲೇ ನಾವು ಮಕ್ಕಳು ಅವರ ಮುಂದೆ ಹಾಜರಾಗುತ್ತಿದ್ದೆವು. ನಮ್ಮ ಮನೆಯಲ್ಲಿ ಅದೊಂದು ಅಲಿಖಿತ ನಿಯಮವಾಗಿತ್ತು. ಇದನ್ನು ಪದೇಪದೇ ನೋಡಿದ ಅಣ್ಣನ ಸ್ನೇಹಿತನೊಬ್ಬ ನನ್ನ ಅಣ್ಣನಿಗೆ ನಾಳೆ ನಿನ್ನ ಮದುವೆ ಮಾಡೋವಾಗ ಪುರೋಹಿತರು ಮಂತ್ರ ಹೇಳಿದ ಕೂಡಲೇ ನೀನು ತಾಳಿ ಕಟ್ಟತೀಯೋ ಇಲ್ಲವೋ ಗೊತ್ತಿಲ್ಲ ಆದರೆ  ನಿಮ್ಮ ಅಪ್ಪಾಜಿ ವನ್ ಟು ತ್ರಿ ಹೇಳಿದ್ಮೇಲೆ ಗ್ಯಾರಂಟಿ ತಾಳಿ ಕಟ್ಟುತ್ತಿಯಾ ಎಂದು ತಮಾಷೆ ಮಾಡುತ್ತಿದ್ದನು.




ನಮ್ಮ ಮನೆಯ ಕಂಪೌಂಡಿನಲ್ಲಿ ಸಾಕಷ್ಟು ವಿವಿಧ ಬಗೆಯ ಸಸಿಗಳನ್ನು ನಮ್ಮ ಅಪ್ಪನೊಂದಿಗೆ ಸೇರಿ ನೆಡುತ್ತಿದ್ದ ನಮಗೆ ಹಸಿರೇ ಉಸಿರು ಎಂಬ ಪಾಠ ಕಲಿಸಿದ್ದು ಅಪ್ಪ. ಜೂನ್ ತಿಂಗಳಲ್ಲಿ ಸಸಿಗಳನ್ನು ನೆಟ್ಟರೆ ಮತ್ತು ಮೊದಲಿಂದಲೇ ನೀರನ್ನು ಮಿತವಾಗಿ ಹಾಕುವ ಮೂಲಕ ಅವುಗಳನ್ನು ಪಾಲಿಸಿದರೆ ಸಸ್ಯಗಳು ದೃಢವಾಗಿ ನಿಲ್ಲಲು ಸಾಧ್ಯ ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದರು ಅಪ್ಪ. ಗಿಡ ಮರಗಳ ಕುರಿತ ಪ್ರಾಥಮಿಕ ಜ್ಞಾನವನ್ನು ನಾವು ಪಡೆದದ್ದು ಅಪ್ಪನಿಂದಲೇ. ನಮ್ಮ ತೋಟಗಳಿಗೆ, ಹೊಲಗಳಿಗೆ ಹೋದಾಗ ಅಲ್ಲಿರುವ ಪ್ರತಿಯೊಂದು ಬೆಳೆಯ ಕುರಿತು ತಿಳುವಳಿಕೆ ನೀಡುತ್ತಿದ್ದರು ಅಪ್ಪ. ಪ್ರಕೃತಿಯ ಒಡನಾಟ ಅಪ್ಪ ನಮಗೆ ಕಲಿಸಿದ ಬಹುಮುಖ್ಯ ಪಾಠವಾಗಿತ್ತು.




ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಎಂಬುದನ್ನು ಪಾಲಿಸುತ್ತಿದ್ದ ಅಪ್ಪ ಸುಮಾರು 35 ವರ್ಷಗಳ ಹಿಂದೆಯೇ ಹತ್ತು ವರ್ಷದ ನಾನು ಅಪ್ಪನ ಬಟ್ಟೆಗಳನ್ನು ಇಸ್ತ್ರಿ ಮಾಡಿದರೆ ಪ್ರತಿ ಶರಟಿಗೆ ಪ್ಯಾಂಟಿಗೆ ಪ್ರತ್ಯೇಕವಾಗಿ ಒಂದೊಂದಕ್ಕೆ 50 ಪೈಸೆಯಂತೆ, ಅಮ್ಮನ ಸೀರೆಗೆ ಎರಡುವರೆ ರೂನಂತೆ ಹಣವನ್ನು ನನ್ನ ಉಳಿತಾಯದ ಗೋಲಕಕ್ಕೆ ಹಾಕುತ್ತಿದ್ದರು. ಇದು ನನಗೆ ಸ್ವಾವಲಂಬನೆಯ ಪಾಠ ಕಲಿಸಿತು. ನನ್ನ ಪುಸ್ತಕಗಳನ್ನು, ಬಟ್ಟೆಗಳನ್ನು ಮತ್ತಿತರ ವಸ್ತುಗಳನ್ನು ಓರಣವಾಗಿ ಇಟ್ಟುಕೊಳ್ಳಲು ಕಲಿಸಿದ್ದು ನನ್ನಪ್ಪ.




ಸಾಧಾರಣವಾಗಿ ಎಲ್ಲರ ಕುಟುಂಬದಲ್ಲಿ ಅಮ್ಮನನ್ನು ತಮಾಷೆಯಾಗಿ ಹೀಗಳೆಯುವುದನ್ನು ಕಾಣುತ್ತೇವೆ. ಆದರೆ ನನ್ನ ತಂದೆ ಯಾವತ್ತೂ ನನ್ನ ತಾಯಿಯನ್ನು ಬಿಟ್ಟುಕೊಡಲಿಲ್ಲ... ಅನೇಕ ಬಾರಿ ಪುಟ್ಟ ಮಕ್ಕಳಿಗೆ ತಿಳಿಸಿ ಹೇಳುವಂತೆ ಅಮ್ಮನಿಗೂ ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತಾ ಒಳ್ಳೆಯ ಸ್ನೇಹಿತರಂತೆ ಒಡನಾಡುತ್ತಿದ್ದರು. ತಾವು ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನದಿದ್ದರೂ ಅಮ್ಮನನ್ನು ಪ್ರತಿದಿನ ವಾಕಿಂಗ್ ಗೆ ಕರೆದುಕೊಂಡು ಹೋಗಿ ಅವರಿಗೆ ಬೇಕಾದುದನ್ನು ಕೊಡಿಸಿಕೊಂಡು ಬರುತ್ತಿದ್ದರು. ಎಷ್ಟೋ ಬಾರಿ ಇದನ್ನು ನೋಡಿ ನನ್ನ ಅತ್ತಿಗೆ ಅತ್ತೆ ಮತ್ತು ಮಾವಾರನ್ನು ಈ ರೀತಿ ನೋಡೋದಕ್ಕೆ ಖುಷಿಯಾಗುತ್ತೆ ಜೊತೆಗೆ ಹೊಟ್ಟೆಕಿಚ್ಚು ಆಗುತ್ತೆ ಎಂದು ಹೇಳುತ್ತಿದ್ದಳು. ಇನ್ನೊಬ್ಬ ಅತ್ತಿಗೆಯೂ ಕೂಡ ಅಪ್ಪನಂತಹ ಮಾವ ಎಂದು ಅವರು ತೀರಿಹೋಗಿ ಇಷ್ಟು ವರ್ಷಗಳಾದರೂ ನೆನೆಸುತ್ತಾಳೆ. ಮಾವರು ಹೊರಗಿಂದ ಬಂದ್ರಾ ಏನಾದ್ರೂ ತಿನಿಸು ಕಾಯಂ ಕೈಯಾಗ್ ಹಿಡ್ಕೊಂಡು ಬರ್ತಿದ್ರು ನೀವೇನು ತರೋದಿಲ್ಲ ಅಂತ ಗಂಡನನ್ನು ದೂರುತ್ತಾರೆ. ಅಷ್ಟರಮಟ್ಟಿಗೆ ಅಪ್ಪ ಸದಾ ಕುಟುಂಬ ವತ್ಸಲರಾಗಿದ್ದರು.




ಊಟದ ವಿಷಯಕ್ಕೆ ಬಂದರೆ ತರಕಾರಿ ಬೇಳೆ ಕಾಳು, ಮೊಳಕೆಯೊಡೆದ ಕಾಳುಗಳು ಸೊಪ್ಪುಗಳ ಮಹತ್ವವನ್ನು ನಮಗೆ ವಿವರಿಸಿ ಹೇಳುವುದಲ್ಲದೆ ರೈತನ ದುಡಿಮೆಯ ಫಲ ನಾವು ಉಣ್ಣುತ್ತಿರುವ ಆಹಾರ ಎಂಬುದನ್ನು ಕೃಷಿ ವಿಜ್ಞಾನ ಪದವೀಧರರಾದ ನನ್ನಪ್ಪ ಹೇಳುತ್ತಾ ತಟ್ಟೆಯಲ್ಲಿರುವ ಎಲ್ಲವನ್ನು ಕಡ್ಡಾಯವಾಗಿ ಊಟ ಮಾಡಲು ಪ್ರೀತಿಯಿಂದ  ಒತ್ತಾಯಿಸಿದರೆ ನಿರಾಕರಿಸಲು ಸಾಧ್ಯವಿಲ್ಲದೆ ಅವರ ಮೆಚ್ಚುಗೆ ಗಳಿಸಲು ತಟ್ಟೆ ಖಾಲಿ ಮಾಡುತ್ತಿದ್ದೆವು ನಾವು. ಇಂದಿಗೂ ತರಕಾರಿ ಹಣ್ಣುಗಳು ಸೊಪ್ಪುಗಳ ಕಡ್ಡಾಯ ಬಳಕೆ ಮಾಡುವ ನನ್ನನ್ನು ನನ್ನ ಪತಿ ಮತ್ತು ಮಕ್ಕಳು ಆಡಿಕೊಳ್ಳುವುದು ಅಗ್ರಿಕಲ್ಚರ್ ಡೈರೆಕ್ಟರ ಮಗಳಲ್ಲವೇ ಎಂದು? ನಾನು ಕೂಡ ಆ ಕಾಂಪ್ಲಿಮೆಂಟನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ.



ಮನೆಯ ಮುಂದೆ ಗಂಟೆ ಬಾರಿಸುತ್ತಾ ಬರುತ್ತಿದ್ದ ಕಾಟನ್ ಕ್ಯಾಂಡಿ, ಐಸ್ ಕ್ರೀಮ್ ಗಳನ್ನು ನಾನು ಕೇಳುವ ಮುನ್ನ ಕೊಡಿಸಲು ದುಡ್ಡು ಹಿಡಿದು ಬರುತ್ತಿದ್ದ ಅಪ್ಪನ ಪ್ರೀತಿಯ ವ್ಯಕ್ತ ರೂಪವಾಗಿತ್ತು. ಚಿಕ್ಕಂದಿನಿಂದಲೂ ಪ್ರೀತಿಯ ಜೊತೆ ಜೊತೆಗೆ ಸಮಯದ ಮಹತ್ವ, ಶಿಸ್ತು, ಪುಸ್ತಕಗಳನ್ನ ನೀಟಾಗಿ ಇಟ್ಟುಕೊಳ್ಳುವುದರಿಂದ ಹಿಡಿದು ಪ್ರತಿಯೊಂದು ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಮಾಡಲು ಸಹಾಯಕಾರಿಯಾದದ್ದು ನನ್ನಪ್ಪನ ನಡವಳಿಕೆ.



ಪ್ರತಿದಿನ ಆಫೀಸಿಗೆ ಹೋಗುವಾಗ ನನ್ನನ್ನು ಶಾಲೆಗೆ ಬಿಟ್ಟು ಹೋಗುವ ಅಪ್ಪ ಕೆಲ ಮಧ್ಯಾಹ್ನಗಳಲ್ಲಿ ಊಟದ ಬಿಡುವಿನ ಸಮಯಕ್ಕೆ ಸರಿಯಾಗಿ ಶಾಲೆಯ ಮುಂಭಾಗದ ರಸ್ತೆಗೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಮತ್ತೆ ಊಟ ಮಾಡಿ ಮರಳಿ ಹೋಗುವಾಗ ಕಡ್ಡಾಯವಾಗಿ ಅಂದಿನ ದುಬಾರಿ  ಮೆಲೋಡಿ ಚಾಕ್ಲೇಟ್ ಕೊಡಿಸುತ್ತಿದ್ದರು. ನಾನು ಶಾಲಾ ದಿನಗಳಲ್ಲಿ ಓರ್ವ ಕ್ರೀಡಾಪಟುವಾಗಿ ಬೆಳೆಯಲು ಕೂಡ ಅಪ್ಪ ನೀಡಿದ ಪ್ರೋತ್ಸಾಹವೇ ಕಾರಣ. ಓದಿಗೆ ಕೊಡುವಷ್ಟೇ ಮಹತ್ವವನ್ನು ಆಟೋಟಗಳಿಗೆ ವಿವಿಧ ಸ್ಪರ್ಧೆಗಳಿಗೆ ಕೊಡುತ್ತಿದ್ದ ಅಪ್ಪ ಎಲ್ಲದರಲ್ಲೂ ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದರು. ನನ್ನ ಬರಹದ ವೇಗವನ್ನು ಹೆಚ್ಚಿಸಲು ನನ್ನೊಂದಿಗೆ ತಾವು ಕೂಡ ಬರವಣಿಗೆಗೆ ಕಾಂಪಿಟೇಶನ್ ಮಾಡುತ್ತಿದ್ದರು ನನ್ನಪ್ಪ.... ಆದರೆ ನನ್ನ ಬರಹದ ವೇಗ ಹೆಚ್ಚಿಸಲು ಮಾತ್ರ ಅವರು ನಿರೀಕ್ಷಿಸಿದ ಮಟ್ಟಕ್ಕೆ ಸಾಧ್ಯವಾಗಲೇ ಇಲ್ಲ. ಆದರೆ ಬರಹಗಾರ್ತಿಯಾಗಲು ಸಾಧ್ಯವಾಯಿತು.




 ನಾನು ಕಾಲೇಜಿಗೆ ಬಂದಾಗಲೂ ಕೂಡ ಅಪ್ಪ ನಾನು ಓದಲು ಕುಳಿತುಕೊಳ್ಳುತ್ತಿದ್ದ ಮಂಚದ ಪಕ್ಕದಲ್ಲಿಯೇ ಇದ್ದ ಮತ್ತೊಂದು ಮಂಚದ ಮೇಲೆ ಕುಳಿತು ಗಂಭೀರವಾಗಿ ಪುಸ್ತಕ ಓದುತ್ತಾ ನನಗೆ ಜೊತೆ ಕೊಡುತ್ತಿದ್ದರು. ಸತ್ಯ, ನ್ಯಾಯ, ನಿಷ್ಠೆ, ಕರ್ತವ್ಯಪರತೆ ಪ್ರಾಮಾಣಿಕತೆ ಪ್ರೀತಿ ವಿಶ್ವಾಸ ಮುಂತಾದ ಮೌಲಿಕ ವಿಷಯಗಳನ್ನು ಕಥೆಗಳ ಮೂಲಕ ಹೇಳುತ್ತಾ ನಮ್ಮಲ್ಲಿ ಉತ್ತಮ ವಿಚಾರಗಳನ್ನು ತುಂಬುತ್ತಿದ್ದರು ಅಪ್ಪ.



ನೋಡಲು ಗಂಭೀರ ಸ್ವಭಾವದವರು ಎಂದೆನಿಸಿದರು ನನ್ನಪ್ಪ ತಮಾಷೆ ಮಾಡುವುದರಲ್ಲಿ ಎತ್ತಿದ ಕೈ... ಬೆಂಗಳೂರು ಮೇಲ್ ಚಿತ್ರವನ್ನು ನೋಡಿ ಆ ಚಿತ್ರದಲ್ಲಿನ ನರಸಿಂಹರಾಜು ಅವರ ಪಾತ್ರದ ರೀತಿಯಲ್ಲಿ ನಾನು ಮತ್ತು ನನ್ನಪ್ಪ ಕೆಲವೊಮ್ಮೆ ತಮಾಷೆಯಾಗಿ ಮಾತನಾಡುತ್ತಿದ್ದು ಉಂಟು. ಯಾವುದಾದರೂ ಪೆಕ್ಯುಲಿಯರ್ ಎಂಬಂತಹ ಚಲನಚಿತ್ರದ ಪಾತ್ರಗಳನ್ನು ರಿವೀಲ್ ಮಾಡುವುದು ನಮಗೆ ಇಷ್ಟದ ಕೆಲಸ. ಡಾಕ್ಟರ್ ರಾಜಕುಮಾರ್ ಮತ್ತು ಸುಧಾರಾಣಿ ಅಭಿನಯದ 'ನಿನ್ನಂತ ಅಪ್ಪ ಇಲ್ಲ' ಎಂಬ ಹಾಡು ರೇಡಿಯೋದಲ್ಲಿ ಕೇಳಿ ಬಂದರಂತೂ ನನ್ನ ಪಕ್ಕಕ್ಕೆ ಬಂದು ಕೂಡುತ್ತಿದ್ದ ಅಪ್ಪ ಮತ್ತು ನಾನು ಕೈ ತಾಳ ಹಾಕುತ್ತಾ ಆ ಹಾಡನ್ನು ಆಸ್ವಾದಿಸುತ್ತಿದ್ದೆವು. ಹಳೆಯ ಹಿಂದಿ ಚಲನಚಿತ್ರಗಳು ಮತ್ತು ಗೀತೆಗಳನ್ನು ನೋಡುತ್ತಾ ತಮ್ಮ ಕಾಲೇಜ್ ದಿನಗಳ ಕುರಿತು ನನ್ನಪ್ಪ ಹೇಳಿಕೊಳ್ಳುತ್ತಿದ್ದರು ಅಪ್ಪನ ನೆನಪಿನ ಖಜಾನೆಯಲ್ಲಿ ಅನೇಕ ವಿಷಯಗಳು ಭದ್ರವಾಗಿ ನೆಲೆಯೂರಿದ್ದವು.




 ಅವರ ಬಾಲ್ಯದ ದಿನಗಳು ತುಂಬು ಕುಟುಂಬ ಅಣ್ಣ ತಮ್ಮಂದಿರ ನಡುವಿನ ಬಾಂಧವ್ಯ ಅಕ್ಕತಂಗಿಯರೊಂದಿಗೆ ಒಡನಾಡುತ್ತಿದ್ದ ರೀತಿ ಎಲ್ಲವೂ ನಮಗೆ ಆದರ್ಶಪ್ರಾಯವಾಗಿತ್ತು. ತಮ್ಮ ಕಚೇರಿ ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಅಪ್ಪ ಅಲ್ಲಿ ಇರುವ ತನ್ನ ಸೋದರ ಸಂಬಂಧಿಗಳನ್ನು ಭೇಟಿಯಾಗದೆ ಬರುತ್ತಿರಲಿಲ್ಲ. ಅಂತೆಯೇ ಎಲ್ಲರ ನೆಚ್ಚಿನ ಸೋದರನಾಗಿದ್ದರು ಅಪ್ಪ. ಪ್ರಾಮಾಣಿಕತೆಯನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಅಪ್ಪ ಎಂದೂ ತಮ್ಮ ಕರ್ತವ್ಯಗಳಿಂದ ವಿಮುಖರಾಗಿರಲಿಲ್ಲ. ತನ್ನ ಒಡಹುಟ್ಟಿದವರ ಮಕ್ಕಳಿಗೆಲ್ಲ ಪ್ರೀತಿಯ ಚಿಕ್ಕಪ್ಪ ದೊಡ್ಡಪ್ಪ ಸೋದರ ಮಾವ ಆಗಿದ್ದ ಅಪ್ಪ ಊಟಕ್ಕೆ ಕುಳಿತರೆ ಅವರ ತಾಯಿ ಅಂದರೆ ನನ್ನಜ್ಜಿ... ನನ್ನಪ್ಪನಿಗೆ ಊಟಕ್ಕೆ ತಟ್ಟೆಯ ಬದಲು ಪರಾತ ಇಡ್ರಿ ಎಂದು ಹೇಳುತ್ತಿದ್ದರಂತೆ. ನನ್ನಪ್ಪನ ಒಡಹುಟ್ಟಿದವರ ಸುಮಾರು ಏಳೆಂಟು ಜನ ಮಕ್ಕಳು ನನ್ನಪ್ಪನ ತಟ್ಟೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು ಅದಕ್ಕೆ ತಟ್ಟೆ ಸಾಲುವುದಿಲ್ಲ ಎಂದು ಪರಾತ ಇಡಲು ಹೇಳುತ್ತಿದ್ದರು.



ನಮ್ಮ ಮನೆಯ ಸುತ್ತಮುತ್ತ ಇರುತ್ತಿದ್ದ ಎಲ್ಲ ಮಕ್ಕಳ ಪಾಲಿಗೆ ನೆಚ್ಚಿನ ಅಂಕಲ್ ಮಾಮ ಅಜ್ಜ ಎಂದು ಕರೆಸಿಕೊಂಡಿದ್ದರು ನನ್ನ ಅಪ್ಪ. ಎಲ್ಲರ ಮಕ್ಕಳನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದ ಅಪ್ಪನ ಬಳಿ ಮಕ್ಕಳ ದಂಡೆ ಇರುತ್ತಿತ್ತು. ಸ್ನೇಹಕ್ಕೆ ಅತ್ಯಂತ ಮಹತ್ವ ಕೊಡುತ್ತಿದ್ದ ನನ್ನ ತಂದೆ ಹಲವಾರು ಆತ್ಮೀಯ ಸ್ನೇಹಿತರನ್ನು ಹೊಂದಿದ್ದರು. ಅದರಲ್ಲಿ ನನ್ನ ಮಾವನು ಕೂಡ ಒಬ್ಬರು (ನನ್ನ ಪತಿಯ ತಂದೆ). ಅಕ್ಕನಂತಿರುವ ಅತ್ಯಂತ ಆತ್ಮೀಯ ಸ್ನೇಹಿತೆಯೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ನಾನು ಮಾತನಾಡದೆ ಹೋದಾಗ ಸುಮಾರು ಒಂದು ಗಂಟೆಗಳ ಕಾಲ ನನಗೆ ಸ್ನೇಹದ ಮಹತ್ವವನ್ನು ಬೋಧಿಸಿ ಪರವೂರಿನಲ್ಲಿದ್ದ ಆಕೆ ನನ್ನೂರಿನ ಸಮಾರಂಭಕ್ಕೆ ಬಂದ ಸಮಯದಲ್ಲಿ ಸ್ನೇಹದ ಮಹತ್ವ ಕುರಿತು ಹೇಳುತ್ತಾ ನಡೆದುಕೊಂಡೆ ಆಕೆ ಸಮಾರಂಭಕ್ಕೆ ಬಂದ ಮನೆಗೆ ತೆರಳಿ ನಮ್ಮಿಬ್ಬರನ್ನು ಒಂದುಗೂಡಿಸಿ ಇಂದಿನವರೆಗೂ ಆ ಸ್ನೇಹ ಹಚ್ಚ ಹಸಿರಾಗಿರಲು ಕಾರಣವಾದವರು ನನ್ನಪ್ಪ. 




ಆಕೆಯ ತಂದೆಯಾಗಲಿ ನನ್ನ ತಂದೆಯಾಗಲಿ ನಮ್ಮಿಬ್ಬರನ್ನು ಎಂದೂ ಬೇರೆ ಎಂದು ಭಾವಿಸದೆ ಬೆಳೆಸಿದರು. ಈಗಲೂ ಕೂಡ ನಾವಿಬ್ಬರು ಎರಡು ದೇಹ ಒಂದು ಆತ್ಮ ಎಂಬಂತೆ ಇದ್ದೇವೆ.ಇಂದಿಗೂ ಕೂಡ ನನ್ನನ್ನು ಪ್ರೀತಿಸುವ ಅರ್ಥಮಾಡಿಕೊಳ್ಳುವ ಹಲವಾರು ಸ್ನೇಹಿತರ ಬಳಗ ನನ್ನೊಂದಿಗೆ ಇರಲು ಕಾರಣ ನನ್ನಪ್ಪ ಸ್ನೇಹಿತರಿಗೆ ನೀಡುತ್ತಿದ್ದ ಮಹತ್ವ. ಮುಂದೆ ಹೈಸ್ಕೂಲು ಕಾಲೇಜುಗಳಿಗೆ ಬಂದಾಗ ನನ್ನ ಸ್ನೇಹಿತರೆಲ್ಲ ನನ್ನ ತಂದೆಯೊಂದಿಗೆ ಆತ್ಮೀಯವಾಗಿ ಹರಟೆ ಹೊಡೆದು ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಅದು ನನ್ನಪ್ಪ ಬದುಕಿರುವವರೆಗೂ ನಡೆದು ಬಂದಿತ್ತು. ದಿ ಅಮೇಜಿಂಗ್ ರಿಸಲ್ಟ್ಸ್ ಆಫ್ ಪಾಸಿಟಿವ್ ಥಿಂಕಿಂಗ್ ಎಂಬ ಪುಸ್ತಕದಿಂದ ಪ್ರಭಾವಿತರಾಗಿದ್ದ ಅಪ್ಪ ಕಡು ಧನಾತ್ಮಕವಾದಿಯಾಗಿದ್ದರು. ಪ್ರತಿ ಅಂಧಕಾರದ ಕಾರ್ಮೋಡದ ಹಿಂದೆಯೂ ಒಂದು ಬೆಳ್ಳಿಯ ಕಿರಣ ಇರುತ್ತದೆ ಎಂದು ಹೇಳುತ್ತಿದ್ದ ಅವರು ಪ್ರತಿಯೊಂದು ತೊಂದರೆಯನ್ನು ಸವಾಲಾಗಿ ಸ್ವೀಕರಿಸುವ ಛಾತಿಯನ್ನು ನಮ್ಮಲ್ಲಿ ಬೆಳೆಸಿದ್ದರು. ಒಂದೊಮ್ಮೆ ನನ್ನ ಪತಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿದ್ದಾಗ ಬೆಂಗಳೂರಿನ ಒಂದು ತುದಿಯಿಂದ ಮತ್ತೊಂದು ತುದಿಯ ಆಸ್ಪತ್ರೆಗೆ ಪ್ರತಿದಿನ ಬಸ್ಸಿನಲ್ಲಿ ಪಯಣಿಸಿ ಬಂದು ನನಗೆ ಧೈರ್ಯ ತುಂಬುತ್ತಿದ್ದರು ನನ್ನ ಅಪ್ಪ. ಅಪಾರ ಆಶಾವಾದಿ ಅಪ್ಪ  ಅಷ್ಟೇ ಹೆಂಗರುಳಿನವರು ಕೂಡ.




ಅಪ್ಪನ ಸ್ವಯಂಶಿಸ್ತು, ಪ್ರಾಮಾಣಿಕತೆಯ ಜೊತೆ ಜೊತೆಗೆ ಅವರು ಕಲಿಸಿದ ಮಿತವ್ಯಯದ ಪಾಠ ಇಂದಿಗೂ ನಮ್ಮನ್ನು ಕೈಹಿಡಿದು ನಡೆಸುತ್ತಿದೆ. ಯಾವಾಗಲೂ ಅವಶ್ಯಕ ಮತ್ತು ಅನವಶ್ಯಕ ಎಂದು ವಿಭಾಗಿಸಿ ಖರ್ಚುಗಳನ್ನು ಮಾಡಲು ಕಲಿಸಿದ್ದು ಅವರೇ. ಚಿಕ್ಕವರಿದ್ದಾಗ ನಾವು ಮೂರು ಜನ ಮಕ್ಕಳು ಒಂದೊಂದು ತಿಂಗಳು ಮನೆಯ ಖರ್ಚು ವೆಚ್ಚಗಳ ಲೆಕ್ಕವನ್ನು ಇಡುವ ಅಕೌಂಟೆಂಟ್ ಕೆಲಸ ಕೂಡ ಮಾಡಿದ್ದಿದೆ. ಇದರಿಂದ ಮನೆಯ ಆದಾಯ ಮತ್ತು ಖರ್ಚುಗಳ ಕುರಿತಾದ ಸಂಪೂರ್ಣ ಮಾಹಿತಿ ನಮಗಿರುತ್ತಿತ್ತು. ಅದೆಷ್ಟೇ ಆರ್ಥಿಕ ಅನುಕೂಲತೆ ನಮಗಿದ್ದರೂ  ಚಿಕ್ಕಂದಿನಲ್ಲಿ ನಾವು ಕಲಿತ ಮಿತವ್ಯಯದ ಪಾಠ ಅನವಶ್ಯಕ ಖರ್ಚುಗಳಿಗೆ ದಾರಿ ಮಾಡಿಕೊಡಲಿಲ್ಲ. ಮಕ್ಕಳ ಮುಂದೆ ಮನೆಯ ತೊಂದರೆಗಳನ್ನು ಮಾತನಾಡಬಾರದು ಎಂಬ ಇಂದಿನ ಸೋ ಕಾಲ್ಡ್ ಸುಪೀರಿಯರ್ ಥಾಟ್ಸ್ ಅಪ್ಪ ನಲ್ಲಿ ಇರಲಿಲ್ಲ. ಮಕ್ಕಳಿಗೆ ಮನೆಯ ಎಲ್ಲಾ ಆಗುಹೋಗುಗಳ ಅರಿವು ಇರಬೇಕು ಎಂದೇ ಅವರು ಭಾವಿಸಿದ್ದರು ಮತ್ತು ಅಂತೆಯೇ ನಮ್ಮನ್ನು ಬೆಳೆಸಿದ್ದರು.




ಹೊಸ ಹೊಸ ವಿಷಯಗಳನ್ನು ಕಲಿಯುವಲ್ಲಿ ನನ್ನ ಅಪ್ಪನ ಉತ್ಸಾಹ ಮೇರೆ ಮೀರಿದ್ದು. ಯೋಗ,ಧ್ಯಾನ, ಪ್ರಾಣಾಯಾಮ ವಾಕಿಂಗ್ ಎಂದು ಸದಾ ಚಟುವಟಿಕೆಯಿಂದ ಇರುತ್ತಿದ್ದ ಅಪ್ಪ ತಮ್ಮ ಕೆಲಸ ಕಾರ್ಯಗಳನ್ನು ಕೂಡ ಅಷ್ಟೇ ಶ್ರದ್ಧೆಯಿಂದ ಮಾಡಿಕೊಳ್ಳುತ್ತಿದ್ದರು. ಅವರನ್ನು ಭೇಟಿ ಮಾಡಲು ಬರುತ್ತಿದ್ದ ಹಳ್ಳಿಯ ರೈತರನ್ನು ಕೂಡ ಅಷ್ಟೇ ಗೌರವದಿಂದ ಕಾಣುತ್ತಿದ್ದರು. ತನ್ನ ವಿರೋಧಿಗಳನ್ನು ಕೂಡ ಪ್ರೀತಿಸಬೇಕು ಎಂದು ಕಲಿಸಿಕೊಟ್ಟದ್ದು ನನ್ನ ಅಪ್ಪ.




ನನ್ನನ್ನು ವೈದ್ಯಳನ್ನಾಗಿಸಬೇಕೆಂಬ ಮಹತ್ತರ ಆಸೆಯನ್ನು ಹೊಂದಿದ್ದರೂ ಕೂಡ ಎಂದೂ ತಮ್ಮ ಆಶಯವನ್ನು ನನ್ನ ಮೇಲೆ ಹೇರಲಿಲ್ಲ. ಬದಲಾಗಿ ಕುವೆಂಪು ಅವರ ವಿಶ್ವಮಾನವ ತತ್ವದಂತೆ ಒಳ್ಳೆಯ ಮಾನವೀಯ ಮತ್ತು ನಾಗರಿಕ ಪ್ರಜ್ಞೆಯನ್ನು ನಮ್ಮಲ್ಲಿ ಬೆಳೆಸಿದರು. ಮುಂದೆ ನಮ್ಮ ಮದುವೆಯಾಗಿ ತಾವು ಮೊಮ್ಮಕ್ಕಳನ್ನು ಕಂಡ ಮೇಲು ಕೂಡ ಅಷ್ಟೇ ಪ್ರೀತಿ, ಅಕ್ಕರೆ ವಿಶ್ವಾಸದಿಂದ ಮೊಮ್ಮಕ್ಕಳನ್ನು ಬೆಳೆಸಿದರು ನನ್ನಪ್ಪ. ಯಾವತ್ತಾದರೂ ನಾನು ತಮಾಷೆಗೆ ನನ್ನ ಮಗಳನ್ನು ಅಪ್ಪನ ಮಗಳು ಅಂತ ಮೂದಲಿಸಿದಾಗ ನನ್ನ ಪಕ್ಕ ಬಂದು ಕುಳಿತು ಅಪ್ಪ ಹೇಳುತ್ತಿದ್ದುದು ಒಂದೇ ಮಾತು. "ನೀನ್ ಯಾರ್ ಮಗಳಮ್ಮ " ಅಂತ. ಖಂಡಿತ ನಿಜ ನಾನು ಕೂಡ ನನ್ನ ಅಪ್ಪನ ಮಗಳೇ.




ಅಪ್ಪ ಎಂಬ ಆಲದ ಮರದ ತಂಪು ನೆರಳಿನ ಅಡಿಯಲ್ಲಿ ಬೆಳೆದ ನಮಗೆ ನೂರಾರು ಸಾವಿರಾರು ನೆನಪುಗಳು ಒಂದರ ಹಿಂದೊಂದರಂತೆ ನುಗ್ಗಿ ಬರುತ್ತವೆ.....ಅಪ್ಪ ಎಂದರೆ ಹಲವಾರು ನೆನಪುಗಳ ಚಿರ ಪ್ರೀತಿಯ ಸವಿ ನೆನಪುಗಳು ಕಣ್ಣನ್ನು ಆರ್ದ್ರಗೊಳಿಸಿದರೂ ಮನ ಮತ್ತೆ ಮತ್ತೆ ಗುನುಗುತ್ತದೆ.....




ನಿನ್ನಂತ ಅಪ್ಪ ಇಲ್ಲ.. ಒಂದೊಂದು ಮಾತು ಬೆಲ್ಲ

ನೀನೆ ನನ್ನ ಜೀವ ನೀನೆ ನನ್ನ ಪ್ರಾಣ 

ಯಾವ ದೇವ ತಂದ ವರವೋ ಇಂದು

 ನಾನು ಅರಿಯೆನು



- ವೀಣಾ ಹೇಮಂತ್ ಗೌಡ ಪಾಟೀಲ್ ,

ಮುಂಡರಗಿ ಗದಗ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top