-ವಾಣಿ ಭಟ್, ಹಂಡ್ರಮನೆ
ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಕನ್ನಡದಲ್ಲಿ ಕಾವ್ಯ ರಚಿಸಿದವರಲ್ಲಿ “ಪುರೋಹಿತ ತಿರುನಾರಾಯಣ ನರಸಿಂಹಾಚಾರ್(ಪುತಿನ)” ಅವರು ಪ್ರಮುಖರು.
ಮೂಲ ರಾಮಾಯಣವನ್ನು ಆಧಾರವಾಗಿಟ್ಟುಕೊಂಡು “ರಾಮೋದಯ, ಅಹಲ್ಯೆ, ಸೀತಾಪರಿಣಯಂ, ಹರಿಣಾಭಿಸರಣ, ಶಬರಿ ಹಾಗೂ ಶ್ರೀರಾಮಪಟ್ಟಾಭಿಷೇಕ” ಎಂಬ ಗೇಯನಾಟಕಗಳನ್ನು ಅವರು ರಚಿಸಿದ್ದಾರೆ. ಅದರಲ್ಲಿ ಅಹಲ್ಯೆ ಹಾಗೂ ಶ್ರೀರಾಮಪಟ್ಟಾಭಿಷೇಕ ಜನಪ್ರಿಯವಾದವುಗಳು.
ಆದಿಕವಿಯನ್ನು ನೆನೆದು ರಾಮಾಬ್ಧಿಗೆ ಓದುಗರನ್ನು ಸ್ವಾಗತಿಸುವ “ರಾಮೋದಯ” ನಾಟಕದ ಪದ್ಯವಿದು;
ರಾಮ ರಾಮ ಎಂದು ಕವಿತೆಯ
ರೆಂಬೆಯೇರುತ ಕುಕಿಲುವ
ಸವಿಗರೆವ ಸವಿಯಕ್ಕರದ ವಾ-
ಲ್ಮೀಕಿ ಕೋಗಿಲೆಗೆರಗುವ
ಜನಿಸುತಲಿ ವಾಲ್ಮೀಕಿಗಿರಿಯೊಳು
ತೆರಳುತಲಿ ರಾಮಾಬ್ಧಿಗೆ
ಪುಣ್ಯ ರಾಮಾಯಣಮಹಾನದಿ
ಜಗವ ಪಾವನಗೊಳಿಸಲಿ
ಕೌಸಲ್ಯೆಯ ಗರ್ಭದಿ ರಾಮನ ಜನನ, ಅಯೋಧ್ಯೆಯಲ್ಲಿ ಪುತ್ರೋತ್ಸವ! ಆಗ ಕೌಸಲ್ಯೆಯ ಭಾಗ್ಯವನ್ನು ಕೊಂಡಾಡುವ ಪರಿ;
ಏನು ಭಾಗ್ಯ ಏನು ಭಾಗ್ಯ
ಏನುಭಾಗ್ಯವೆ ಕೌಸಲ್ಯೆ
ನಿನ್ನದೇನು ಭಾಗ್ಯವೆ!
ಒಸಗೆಗಳಿಗೆ ನೆಲೆವನೆಯವನ
ಹಸುಳೆಯಾಗಿ ಪಡೆದ ನಿನ್ನದೇನು ಭಾಗ್ಯವೆ! ||
ಹೊತ್ತ ಹರಕೆ ಹಗುರವಾಯ್ತು
ಇತ್ತ ಕೊಡಿಗೆ ಅಕ್ಷಯವಾಯ್ತು
ಅತ್ತಣವನು ಇತ್ತಲಾಗಿ ನಿ
ನ್ನುತ್ತಮಿಕೆಯನೆ ಮೆರೆಸುತಿಹುದದೇನು ಭಾಗ್ಯವೇ!
ರಾಮನ ಗುಣವಿಶೇಷ ವರ್ಣನೆಯೊಂದಿಗೆ ‘ರಾಮೋದಯ’ ಪ್ರಸಂಗ ಮುಗಿಯುತ್ತದೆ.
“ಅಹಲ್ಯೆ” ಪ್ರಸಂಗವು ಮೂಲ ರಾಮಾಯಣಕ್ಕಿಂತ ವಿಭಿನ್ನವಾಗಿ ಪ್ರಸ್ತುತಿಗೊಂಡಿದೆ. ಅಹಲ್ಯೆಗೆ ಮನೋವಿಕಾರ ಉಂಟುಮಾಡಿ ಗೌತಮರ ತಪೋಭಂಗ ಮಾಡುವ ಇಂದ್ರನ ಉದ್ದೇಶ ಚಿತ್ರಿತವಾಗಿದೆ. ಪರಿತ್ಯಕ್ತ ಆಶ್ರಮಕ್ಕೆ ರಾಮನ ಪ್ರವೇಶ ಆಗುವ ಮೂಲಕ ಅಹಲ್ಯೆಯ ಉದ್ಧಾರವಾಗುತ್ತದೆ. ಅಹಲ್ಯಾ ಗೌತಮರ ಪುನರ್ಮಿಲನದೊಂದಿಗೆ ಪ್ರಸಂಗವು ಸಮಾಪ್ತವಾಗುತ್ತದೆ.
ಮುಂದೆ “ಸೀತಾಪರಿಣಯ” ಪ್ರಸಂಗದ ಆರಂಭ. ಸೀತಾರಾಮರ ವಿವಾಹ ಪ್ರಸಂಗವು ಕಣ್ಣೆದುರೇ ಜರುಗುವಂತೆ ವರ್ಣಿಸಿದ್ದಾರೆ ಪುತಿನ ಅವರು.
ರೂಢಿಗಳ ಕದಡಿ ಹೊಸದಾರಿಯನ್ನು ಸೃಷ್ಟಿಸುವ ಬ್ರಹ್ಮರ್ಷಿ ವಿಶ್ವಾಮಿತ್ರರು ರಘುಕುಲ ಸಂಜಾತರ ಜೊತೆ ಮಿಥಿಲೆಗೆ ಬಂದರು. ಈ ಅನುಪಮರಾದ ಸುರಸುತರು ಯಾರು? ಎಂದು ಜನಕ ಕೇಳಿದಾಗ ಅವರ ಪರಿಚಯ ಹೇಳಿ, "ವೀರ್ಯಪಣ ತೋರಿಸು" ಎಂದು ಜನಕನಿಗೆ ಆಣತಿ ನೀಡುತ್ತಾರೆ. ಸುದ್ದಿ ಯಜ್ಞವಾಟಿಗೂ ತಲುಪುತ್ತದೆ. ಗೆಳತಿಯರೊಡನೆ ಅಲ್ಲಿ ಬಂದ ಸೀತೆಯಾಡುವ ಮಾತು;
ಆ ಕಮಲಾಂಬಕನಾರೇ
ನಾಕದವನೇ ಈ ಲೋಕದವನೇ ಸಖಿ?
ಕಾಕಪಕ್ಷಧರ ಆಕೆವಾಳನೇ?
ಏಕೆಬಂದನಿಲ್ಲಿಗೆ ಪೇಳೆ
ಅರಳು ಕಂಗಳ ಈ ಸುಂದರ, ದೃಷ್ಟಿಯಿಂದಲೇ ಎಲ್ಲವನ್ನೂ ಕೊಳ್ಳುತ್ತಿದ್ದಾನೆ. ದೊಡ್ಡವರನೇಕರು ಎತ್ತಲಾರದ ಬಿಲ್ಲಿನ ಬಳಿ ಇವನೇಕೆ ನಿಂತಿದ್ದಾನೆ? ಎಂದು ಯೋಚಿಸುತ್ತಾಳೆ.
ಈ ಭಾವಗಳನ್ನು ಸೀತೆಯ ಮುಖದಲ್ಲಿ ಕಲ್ಪಿಸಿಕೊಳ್ಳಿ, ಆಕೆ ರಾಮನಲ್ಲಿ ಅನುರಕ್ತಳು. ಆದರೆ ಪಣವನ್ನು ಆತ ಗೆಲ್ಲುತ್ತಾನೋ ಇಲ್ಲವೋ ಎಂಬ ಆತಂಕ. ಪಣವನ್ನು ತಂದೆ ಯಾಕಾದರೂ ಇಟ್ಟನೋ!? ಸುಮ್ಮನೇ ಆತನಿಗೆ ನನ್ನನ್ನು ಧಾರೆಯೆರೆದು ಕೊಟ್ಟರಾಗುತ್ತಿತ್ತು! ಎನ್ನುತ್ತಾಳೆ. ಆಗ ಆಕೆಯ ಗೆಳತಿಯರು ರಾಮನ ಬಗ್ಗೆ ಹೇಳುವ ಮಾತು;
ಇನಕುಲದರಸನ ತನಯರೆನ್ನುತಲಿ
ಜನವುಲಿವುದ ನಾನಾಲಿಸಿದೆ
ಮನೆಯ ಜೋಯಿಸರ ಜನನಿಯಳಲಿಗೆ
ಕನಿಕರಿಸುತ ಉದ್ಧರಿಸಿದನೆಂಬರು
ಈತ ಸೂರ್ಯ(ಇನ) ಕುಲದ ರಾಜಕುವರ. ಮನೆಯ ಜೋಯಿಸರ ಅರ್ಥಾತ್ ಶತಾನಂದರ ತಾಯಿ ಅಹಲ್ಯೆಯ ನೋವನ್ನು ಪರಿಹರಿಸಿದ. ಎಂದು ರಾಮನ ಕರಿತು ತನಗೆ ತಿಳಿದ ವಾರ್ತೆ ಹೇಳುತ್ತಾಳೆ.
ಏಕೀ ಪಣವನಿಟ್ಟನೋ ನಾ ಕಾಣೆ
ನಮ್ಮಯ್ಯನೇಕೀ ಪಣವನಿಟ್ಟನೋ
ತಾಪಸರಧಿಪತಿ ಕಾಮಹಂತಕನ
ಚಾಪವಿದನು ಸುಕುಮಾರನೆತ್ತುವನೇ?
ಸುಮ್ಮನೆನ್ನನೀ ವರನಿಗೀಯುತ
ಸುಮ್ಮಾನಗೊಳ್ಳದೆ ಬವಣೆ ಏಕಿದು? ಏಕೀ ಪಣವನಿಟ್ಟನೋ
ಸೀತೆಯ ಮನದ ಉದ್ವೇಗ ಕಂಡ ಗೆಳತಿಯರು ಆಕೆಯನ್ನು ಛೇಡಿಸುತ್ತಾರೆ. ಕೊನೆಗೆ ಸಂತೈಸುತ್ತಾರೆ ಕೂಡ.
ಶ್ರೀರಾಮನು ತನ್ನ ಮಣಿಕಟ್ಟಿನ ಭಾಗಕ್ಕೆ ಬಿಲ್ಲನ್ನು ತಂದು, ಆ ಘನವೆತ್ತ ಬಿಲ್ಲನ್ನು ಎತ್ತಿ ಹೆದೆಯೇರಿಸಲು ಮುಂದಾದೊಡನೆ;
ಚಿಟಿಕಟಿ ಛಟಿಖಡಿಲೆಂದಾ
ರ್ಭಟಿಸುತಲರೆಕೋಲುಳಿಸುತಲುರುಳಿತು ಧರೆಗಾ
ನಿಟಿಲಾಕ್ಷನ ಕೋದಂಡಂ
ತುಟಿಯವುಕದೆ ನಗುತ ನಿಂತ ರಾಮನ ಪಿಡಿಯೊಳ್
ನಿತ್ತವರಾರಾ ಪೆರ್ದನಿ
ಗುತ್ತರಿಸುತ ಭಳಿರೆ ಎಂಬ ಮೂವರ ಲೆಕ್ಕಂ
ಮತ್ತವರಿರವಂಗೆಡುತೆ-
ಚ್ಚತ್ತರಮರಪುಷ್ಪವರ್ಷವಿಪ್ರುಷೆಯಿಂದಂ
ಕರವಂ ಪಿಡಿದಂಗವಪ್ಪಿ
ಶಿರವಾಘ್ರಾಣಿಸಿ ನತಾಂಗಿಯಂ ಜಾನಕಿಯಂ
ಪರಿವಾರಿಸೆ ಕೆಳೆಬಳಗಂ
ಗುರು ರಾಮನ ಬೆನ್ನ ತಟ್ಟಿಯಿನಿವಾತೊರೆದಂ
ಇತ್ತ ಗುರುವರ್ಯ ತನ್ನ ಶಿಷ್ಯನ ಬೆನ್ತಟ್ಟುವ ಮಾತು;
ಭಾಪು ಭಾಪುರೇ ದೊರೆಕುವರ ನೀ-
ನಾಪುಳ್ಳವನೇ ಸೈ ಸೈ ಸೈ
ಭೂಪರಿಗಸದಳವೆನಿಸಿದ ಬಿಲ್ಲನು
ಈಪರಿ ಹುಲ್ಲಿಗು ಹಗುರನರ ಮುರಿದೆಯೋ
"ಗುರುಗಳೇ, ನೀವು ಆಜ್ಞೆ ಮಾಡಿದ್ದಕ್ಕೆ ಬಿಲ್ಲನ್ನೆತ್ತಿದೆನೇ ಹೊರತೂ ಇದಕ್ಕೆ ಮದುವೆಯ ಫಲ ಎಂದು ತಿಳಿಯಲಿಲ್ಲ. ಅಪ್ಪನ ಒಪ್ಪಿಗೆಯಿಲ್ಲದೇ ಮದುವೆಯಾಗುವುದು ತರವೇ? ಎಂದು ಕೇಳುತ್ತಾನೆ. ಅವನ ಪಿತೃಭಕ್ತಿ, ಸಮಯಪ್ರಜ್ಞೆ ಕಂಡು ಗುರುಗಳು ಮೆಚ್ಚುತ್ತಾರೆ. ದಶರಥನಿಗೆ ಸುದ್ದಿ ಮುಟ್ಟಿಸು! ಎಂದು ದೊರೆಗೆ ಆಜ್ಞಾಪಿಸುತ್ತಾರೆ.
ರಿಸಿಯ ಮಾತಿಗು ವರನ ಮಾತಿಗು
ಹರ್ಷಿಸುತ ಮಿಥಿಲಾಧಿಪ
ಪಸದನಗಳೊಟ್ಟೈಸಿ ದೂತರ-
ನಟ್ಟಿದನು ಸಾಕೇತಕೆ
ಒಸಗೆಸುದ್ದಿಯ ಕೇಳಿ ದಶರಥ
ತಾಳ್ಮೆಗೆಟ್ಟಾ ಹರುಷಕೆ
ಅಸವಸದೊಳೈತಂದ ಮಿಥಿಲೆಗೆ
ಸತಿ ಪುತ್ರ ಪರಿವಾರದಿ
ಧನಕನಕದ ಉಡುಗೊರೆಯೊಡನೆ, ಶೀಘ್ರ ವಾಹಕರ ಮೂಲಕ ಸಾಕೇತಕ್ಕೆ ಸಂದೇಶ ಹೋಗುತ್ತದೆ. ಅಯೋಧ್ಯೆಗೆ ಸುದ್ದಿ ಬಂದಾಗ ದಶರಥ ಹರ್ಷದಿಂದ ಅವಸರವಾಗಿ ಪತ್ನಿ ಪುತ್ರ ಸಹಿತನಾಗಿ ಮಿಥಿಲೆಗೆ ಬಂದನು.
ಕರವಿಡಿದನು
ರಘುರಾಮ
ಜನಕರಾಜರ್ಷಿತನುಜೆ ಸೀತೆಯ
ಹರಕಾರ್ಮುಕ ಸಂರಕ್ಷಿತನಿಧಿಯ
ಸಹನೆವತಿರಸೆಯ ಹೃತ್ಪ್ರತಿನಿಧಿಯ
ಸದಾನುರಕ್ತೆಯ ಉದಾರಚರಿತೆಯ
ಶುಭಾಭಿಷಿಂಚಿತ ಶೋಭನಾಂಗಿಯ
ಶ್ರೀರಾಮನು ಬಿಲ್ಲನ್ನು ಮುರಿದ ಅನ್ನುವುದು ವಾಡಿಕೆ. ಇನ್ನೊಂದರ್ಥದಲ್ಲಿ, ಸೀತೆಯನ್ನು ಶ್ರೀರಾಮನ ಹೊರತೂ ಮತ್ತೆ ಯಾರೂ ವರಿಸಕೂಡದು! ಹೀಗಾಗಿ ಇಷ್ಟು ದಿನ ಆ ಬಿಲ್ಲನ್ನು ಎತ್ತುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಹೀಗೆ ಹರನ ಬಿಲ್ಲು ಆಕೆಯನ್ನು ರಕ್ಷಿಸಿತು. ಶ್ರೀರಾಮ ಅಲ್ಲಿಗೆ ಬಂದಾಗ, ತನ್ನ ಕರ್ತವ್ಯ ತೀರಿತೆಂದು ಅದು ಸೀತೆಯನ್ನು ರಾಮನಿಗೊಪ್ಪಿಸಿತು! ಸೀತಾರಾಮರ ವಿವಾಹೋತ್ಸವ ಸೊಗಸಾಗಿ ನಡೆಯಿತು. ಮಂಗಲ ಪದ್ಯದೊಂದಿಗೆ ಸೀತಾಪರಿಣಯ ಪ್ರಸಂಗವು ಮುಗಿವುದು.
ನಂತರ “ಹರಿಣಾಭಿಸರಣ” ಪ್ರಸಂಗವು ಆರಂಭವಾಗುವುದು. ಇಲ್ಲಿ ಹರಿಣದ ಅಂದ ಚಂದಕ್ಕೆ ಸೀತೆ ಮರುಳಾಗುವಳು. ರಾಮನೂ ಅನುಮೋದಿಸುವನು. ಲಕ್ಷ್ಮಣ ಮಾತ್ರ ಇದರಲ್ಲಿ ಮೋಸವಿದೆಯೆಂದು ಅನುಮಾನ ವ್ಯಕ್ತಪಡಿಸುವನು.
ಸೀತೆ
ಅಗೋ, ನೋಡು ಎಂಥ ಹರಿಣ
ಬಾ ಬೇಗ ಬಾ ಬೇಗ ಬೇಗ ಬಾ ರಮಣ
ರಾಮ
ವನ ಮೃಗದಚ್ಚರಿ ಕಂಡುದಿಲ್ಲೀಪರಿ
ಎಂಥ ಮಿಸುನಿ ಜಿಂಕೆ
ಪ್ರಿಯೇ,
ಎಂಥ ಮಿಸುನಿ ಜಿಂಕೆ
ದಿಟತೋರಿಕೆಗಳ ಭ್ರಮಣೆಯ ತರುತಿದೆ
ಈ ಹರಿಣ
ಅಹುದಿದು ಕಾನನಚೇತನದಾಭರಣ
ಹಿರಣ್ಯ ವರ್ಣದ ಜಿಂಕೆಗೆ ಸೀತೆ ಮನಸೋತಿದ್ದಾಳೆ. ಅರಮನೆಗೊಯ್ದು ಮಾತೆಯರಿಗೆ ಅಚ್ಚರಿ ತರೋಣ ಅನ್ನುತ್ತಿದ್ದಾಳೆ. ಎಂದೂ ಏನನ್ನೂ ಕೇಳದ ಸೀತೆ, ಈ ಹರಿಣಕ್ಕೆ ಆಸೆ ಪಟ್ಟಿರೋದರಿಂದ, ಅದನ್ನು ಹಿಡಿದು ತರುತ್ತೇನೆ ಅನ್ನುತ್ತಾನೆ ರಾಮ. ಬೇಟೆಯನ್ನು ಆಕರ್ಷಿಸಲೇ ಆ ಬಣ್ಣ ತೊಟ್ಟಂತಿದೆ, ಮೋಸವಿದೆ ಅಣ್ಣಾ, ಮತ್ತೊಮ್ಮೆ ಚಿಂತಿಸು ಅನ್ನುತ್ತಿದ್ದಾನೆ ಲಕ್ಷ್ಮಣ.
ಕೆಟ್ಟುದದು ಕೆಟ್ಟರೂಪದೊಳೆ ಬರಲು
ಸುಲಭವದ ಪರಿಹರಿಸಲು
ಶಿವದ ಸೋಗಿನೊಳಶಿವ ವಂಚಿಸಬರೆ
ದುಷ್ಕರವದುಪಶಮಿಸಲು
ಮುಂದೆ ರಾಮನು ಅದನ್ನು ಅಟ್ಟಿಸಿಕೊಂಡು ಹೋದ ವರ್ಣನೆಯಿದೆ. ಅದು ಮರೆಯಾಗಿ, ರಾಮನ ಕೂಗು ಕೇಳಲು ಸೀತೆಯು ಆತಂಕಪಡುವಳು. ಸೀತೆ ಲಕ್ಷ್ಮಣನಿಗೆ ಹೀನಾಯವಾಗಿ ಬಯ್ದಾಗ, ಲಕ್ಷ್ಮಣ ರಾಮನಿರುವಲ್ಲಿಗೆ ಹೋಗಲು ಉದ್ಯುಕ್ತನಾಗುತ್ತಾನೆ.
ಪ್ರಾಣಿಪಕ್ಷಿಗಳಲ್ಲಿ ಹಾಗೂ ವನ್ಯದೇವತೆಗಳಲ್ಲಿ ಸೀತೆಯನ್ನು ಕಾಪಾಡುವಂತೆ ಬೇಡುತ್ತಾನೆ. ಸೀತೆಯ ಬಳಿಯೂ ಹೊರ ಬಾರದಂತೆ ನಿವೇದಿಸುತ್ತಾನೆ. ಇಲ್ಲಿ ಲಕ್ಷ್ಮಣರೇಖೆಯ ಪ್ರಸ್ತಾಪವಿಲ್ಲ ಬದಲಾಗಿ ವಾಲ್ಮೀಕಿ ರಾಮಾಯಣವನ್ನೇ ಪುತಿನ ಅವರು ಅನುಸರಿಸಿರುವುದು ಕಾಣುತ್ತದೆ.
ಲಕ್ಷ್ಮಣನೂ ಹೋದ ಮೇಲೆ ಯತಿಯ ವೇಷದಲ್ಲಿ ರಾವಣ ಬರುತ್ತಾನೆ. ರಾವಣನ ದುರುಳತೆಯ ಪ್ರದರ್ಶನವಾಗುತ್ತದೆ. ಜಟಾಯುವಿನ ಉಲ್ಲೇಖವಿದೆ. ಸೀತೆಯ ಕರುಣಾಪೂರಿತ ವಾಕ್ಯಗಳೊಂದಿಗೆ “ಹರಿಣಾಭಿಸರಣ” ಪ್ರಸಂಗ ಮುಕ್ತಾಯವಾಗುತ್ತದೆ.
ಮುಂದಿನದ್ದು “ಶಬರಿ”, ಅತಿಪುಟ್ಟ ಪ್ರಸಂಗ. ಆದಿಯಲ್ಲಿ ರಾಮನು ಸೀತೆಗಾಗಿ ಪರಿತಪಿಸುವ ಪದ್ಯಗಳಿವೆ. ಶಬರಿ ರಾಮನಿಗಾಗಿ ಕಾಯುವ ಪದ್ಯಗಳೂ ಭಾವುಕವಾಗಿವೆ. ಇಲ್ಲಿನ ಶಬರಿ ಪ್ರಚಲಿತ ಕಥೆಯಂತೆ ಎಂಜಲು ಹಣ್ಣನ್ನು ಕೊಡುವುದಿಲ್ಲವಾದರೂ ಆಕೆಯ ನಿರ್ವ್ಯಾಜ್ಯ ಭಕ್ತಿ, ಮಮತೆಗಳು ವ್ಯಕ್ತಗೊಂಡಿವೆ.
“ರಾಮ ಬಂದಿದ್ದಾನೆ” ಎಂಬ ಆಕೆಯ ಸಂಭ್ರಮ! ಇಂದು ಏನೂ ಅಣಿಯಿಲ್ಲ, ನೆನ್ನೆಯಷ್ಟು ರುಚಿಯಾದ ಹಣ್ಣಿಲ್ಲ! ‘ಇಷ್ಟು ದಿನ ಕಾದೂ ಕಾದೂ ರಾಮ ಬಂದಾಗ ಅರೆಬರೆ ತಯಾರಿಯಾಯ್ತಲ್ಲ’ ಎಂಬ ಹಳಹಳಿಕೆ, ಎಷ್ಟು ಆದರ ತೋರಿದರೂ ಕಡಿಮೆಯೆಂಬ ಭಾವ ವ್ಯಕ್ತವಾಗಿದೆ. ರಾಮಲಕ್ಷ್ಮಣರು ತಪಸ್ವಿನಿಯಾದ ಶಬರಿಯನ್ನು ಉತ್ತಮಲೋಕಕ್ಕೆ ಬೀಳ್ಕೊಡುವ ಮೂಲಕ ಈ ಕಥಾಭಾಗ ಮುಕ್ತಾಯವಾಗುತ್ತದೆ.
“ಶ್ರೀರಾಮಪಟ್ಟಾಭಿಷೇಕ” ಪ್ರಸಂಗವು ರಾವಣನು ಹತನಾಗಿ, ರಾಮನ ವಿಜಯವನ್ನು ಕೊಂಡಾಡುವ ಮೂಲಕ ಆರಂಭವಾಗುತ್ತದೆ. ನಂತರ ಸೀತೆಯು ರಾಮನ ಸಮಕ್ಷಮ ಬಂದಾಗ, ವಾನರ ಮುಖ್ಯರೆಲ್ಲಾ ಚಕಿತಗೊಳ್ಳುವಂತೆ ರಾಮನು ಸೀತೆಯನ್ನು ನೋಡಲು ನಿರಾಕರಿಸುತ್ತಾನೆ;
ನೋಡಲಾರೆ ನಿನ್ನ ನಾನಿಂದು ಜಾನಕಿ
ಕಣ್ಣ ಬೇನೆಯವ ಹೊನ್ನದೀವಿಗೆಯಂದ
ಕುಲದ ಗೌರವಕಾಗಿ ಛಲದಿಂದಲೈತಂದೆ
ಖಳ ತರಿದು ನಿನ್ನಳಲ ಬಿಡಿಸಿದೆನೌ
ಪೋ ಪೋ ಪೋ ಚೆಲುವೆ ಪೋ ಮನಬಂದೆಡೆ
ನಂಟನೊ ಕೆಳೆಯನೊ ಉಂಟಾದವರೆಡೆ
ಈ ಸಾಲುಗಳನ್ನೋದುವಾಗ ರಾಮನ ಮೇಲೆ ಕೋಪ ಬರುವುದು ಸಹಜ. ಕುಲದ ಗೌರವಕ್ಕಾಗಿ ನಿನ್ನನ್ನು ಅಪಹರಿಸಿದ ರಾವಣನನ್ನು ಕೊಂದೆ. ಆದರೀಗ ಪರಪುರುಷನ ಮನೆಯಲ್ಲಿದ್ದ ನಿನ್ನನ್ನು ಸ್ವೀಕರಿಸಲಾರೆ. ನಿನಗೆ ಮನಬಂದೆಡೆ ಪೋಗು! ಎಂದಾಗ ಎಲ್ಲರಿಗೂ ಆಘಾತವಾಗುತ್ತದೆ. ಪತಿಯಲ್ಲೇ ಪ್ರಾಣವಿರಿಸಿದ ದೀನೆಯ ಬಳಿ ಈ ಮಾತಾಡುವುದು ತರವೇ? ಎಂದು ಪ್ರಶ್ನಿಸುತ್ತಾಳೆ ಸೀತೆ. ಪತಿಯೇ ನಿರಾಕರಿಸಿದ ಮೇಲೆ ನನಗೆಲ್ಲಿ ತಾವು? ಎಂದು ದುಃಖಿಸುತ್ತಾ, ಚಿತೆಯನ್ನು ಸಿದ್ಧಪಡಿಸಲು ಲಕ್ಷ್ಮಣನಿಗೆ ಆಜ್ಞಾಪಿಸುತ್ತಾಳೆ.
ಹೊತ್ತಿಸು ಚಿತೆಯನು
ನಿನ್ನತ್ತಿಗೆ ಬೇಯಲಿ ಈ ಕ್ಷಣ
ಮೃತ್ಯುವಿಗಲ್ಲದೆ ಮತ್ತಾರಿಗಹುದಯ್ಯ
ಕುತ್ತನಿದ ಕಳೆದೆನ್ನುತ್ತರಿಸುವಳವು
ರಾಮನ ಒಪ್ಪಿಗೆಯಂತೆ ಅನುಜ ಚಿತೆ ಸಿದ್ಧಪಡಿಸುತ್ತಾನೆ. ಸೀತೆ ಅಗ್ನಿಪ್ರವೇಶ ಮಾಡುತ್ತಾಳೆ. ಈಗ ದುಃಖಿಸುವ ಸರದಿ ರಾಮನದು. ಆಗ ಸೀತೆಯನ್ನು ಎತ್ತಿಕೊಂಡು ಬರುವ ಅಗ್ನಿಯು ‘ಈಗಾಗಲೇ ನೊಂದಿರುವವಳನ್ನು ಮತ್ತೆ ನೋಯಿಸುತ್ತೀಯಾ?’ ಎಂಬರ್ಥದಲ್ಲಿ;
“ಹೇ ಮಂದಮತಿಯೇ, ಬೆಂದವಳನ್ನೇ ಮತ್ತೆ ಬೇಯಲಿತ್ತಯಲ್ಲ!?” ಎಂದು ರಾಮನನ್ನು ಗದರಿ, ಸೀತೆಯನ್ನು ಪರಿಗ್ರಹಿಸಲು ಹೇಳುತ್ತಾನೆ. ಅಗ್ನಿಗೆ ಧನ್ಯವಾದ ಅರ್ಪಿಸಿದ ರಾಮ, ಸೀತೆಯಲ್ಲಿ ಕ್ಷಮೆ ಕೋರುತ್ತಾನೆ. ಜನನಾಯಕನಾದ ನನ್ನ ಹೊಣೆಗಾರಿಕೆ ಹೀಗೆ ಮಾತಾಡಿಸಿತು. ನಾನೂ ನೀನೂ ಬೇರೆಯಲ್ಲ ಎಂಬ ಅಧಿಕಾರದಲ್ಲಿ ಹೀಗೆ ಮಾಡಿದೆನೆನ್ನುತ್ತಾನೆ.
ಚೆನ್ನೆ, ನೀನೆನ್ನ, ಮನ್ನಿಸೌ
ಅನ್ಯನೆಂದೆಣಿಸದೇ
ಮನದಂತರಾಳದಿ
ಎಣಿಸಿದ್ದೆನೌ ಪ್ರಿಯೆ
ಸದಮಲೆಯೆಂದೆ
ಹೃದಯೇಶ್ವರೀ
ಜನನಾಯಕನೆಂಬ
ಹೊಣೆ ಹಿರಿದೌ, ದೇವಿ,
ಅಪವಾದ ಭೀತಿ
ತಪಿಸಿತೆಮ್ಮನೀ ರೀತಿ
ಆಗ ಸೀತೆ ಹೇಳುವ ಮಾತು ಅವಳ ಪ್ರೌಢತೆಗೆ ಸಾಕ್ಷಿ. ನಿನ್ನವಳಲ್ಲವೇ ನಾನು? ‘ಮನ್ನಿಸು’ ಅನ್ನುವ ಮಾತೇಕೆ? ಗುಣವಂತನಾದ ಲಕ್ಷ್ಮಣನಿಗೆ ಹೀನಾಯವಾಡಿದ ಪಾಪ ನನ್ನನ್ನು ಅತೀವ ದುಃಖಕ್ಕೆ ತಳ್ಳಿತು. ನಾನೇ ಕ್ಷಮೆ ಬೇಡಬೇಕೇ ಹೊರತೂ ನೀನಲ್ಲ! ಎನ್ನುತ್ತಾಳೆ.
ಪ್ರೀತಿಯ ಕೆಡಿಸುವ
ಪಾತಕ ಶಂಕೆಯ
ವೀತಿಹೋತ್ರ ಕೃಪೆಯೊ-
ಳೀ ತೆರ ಹರಿಸಿದ
ಚೆನ್ನ ಏನಿದೆ ಮನ್ನಿಸೆ
ನಿನ್ನವಳಲ್ಲವೆ?
ಭರತ ಶ್ರೀರಾಮನಿಗಾಗಿ ಕಾಯುವ ಮಾತುಗಳೂ ಅಷ್ಟೇ ಭಾವಪೂರ್ಣವಾಗಿವೆ. ಈರೇಳು(ಹದಿನಾಲ್ಕು) ವರ್ಷ ಕಳೆಯಿತು, ಅಣ್ಣ ಇಂದು ಬರಬೇಕಿತ್ತು. ಯಾಕಿನ್ನೂ ಬಂದಿಲ್ಲ!.
“ಎಳೆಯ ಕರು ಬಲ್ಲೆತ್ತು ಹೊರುವುದನೊಂಟಿಯೊಳು ಹೊರಬಲ್ಲುದೇ” ಈ ಭಾರವ ಇನ್ನು ಹೊರಲಾರೆ, ಅಣ್ಣನಿಗೊಪ್ಪಿಸಿ ನಿರಾಳವಾಗುವೆ ಎನ್ನುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಹನುಮ ಬಂದು;
ಮಂಕ ನೀನೇಕಾ-
ತಂಕದೊಳು ನಿಂತೆ
ಲಂಕೆಯ ದೊರೆಯ ಕೊಂದು
ತೆಂಕಣತ್ತಣಿಂ ಬಂದ
ಲೆಕ್ಕವಿಲ್ಲದ ಕಪಿ
ರಕ್ಕಸರ ಬಳಗದೊಡನೆ
ತಕ್ಕ ಸಮಯದೊಳು
ತಕ್ಕೈಸೆ ಬಂದ ನಿನ್ನ
ಭರದಿಂದ ಶ್ರೀರಾಮನ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತದೆ. “ಪೋ ಶತ್ರುಘ್ನ, ಊರ ಸಿಂಗರಿಸು, ಕೇರಿ ಕೇರಿಯೊಳು ಸುದ್ದಿಯ ಹರಡುತ” ಎಂದು ಆಜ್ಞಾಪಿಸುತ್ತಾನೆ. ರಾಮಲಕ್ಷ್ಮಣ ಸೀತೆಯರನ್ನು ಸಂಭ್ರಮಾದರದಿಂದ ಸ್ವಾಗತಿಸಿ, ಊರೊಳಗೆ ಕರೆ ತರುತ್ತಾರೆ. ಸಂಭ್ರಮದ ರಾಜ್ಯಾಭಿಷೇಕವಾಗುತ್ತದೆ. ಎಲ್ಲವೂ ಮಂಗಳವಾಗುತ್ತದೆ. ಆ ಮೂಲಕ ಪುತಿನ ವಿರಚಿತ ರಾಮಾಯಣ ಗೇಯನಾಟಕವು ಸಂಪನ್ನವಾಗುತ್ತದೆ.
ಜರುಗಲಿ ನವಭಾರತದೊಳ್
ನರಕುಲಮಣಿ ರಾಮನುತ್ಸವಂ ಮನೆಮನೆಯೊಳ್
ಪರಿದೋಡಲಿ ಕಾರ್ಪಣ್ಯಂ
ನೆರೆಯಲಿ ಹರ್ಷಂ ಸುತುಷ್ಟಿ ನಿರ್ಭಯ ಸೌಖ್ಯಂ
********
ಲೇಖಕರ ಸಂಕ್ಷಿಪ್ತ ಪರಿಚಯ:
ಎಂ.ಕಾಂ ಪದವೀಧರೆ. ಕೆ ಹೆಚ್ ಡಿ ಸಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನ ವಿಷ್ಣುದಯಾ ಅಂಡ್ ಕೋ (ಚಾರ್ಟರ್ಡ್ ಅಕೌಂಟಂಟ್ ಫರ್ಮ್)ನಲ್ಲಿ ಅಸಿಸ್ಟಂಟ್ ಕಂಪ್ಲಯನ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ.
ಪ್ರಸ್ತುತ ಗೃಹಿಣಿಯಾಗಿ ಮನೆಯ ನಿರ್ವಹಣೆ ಹಾಗೂ ಮಗುವಿನ ಪಾಲನೆಯಲ್ಲಿ ಸಾರ್ಥಕತೆ ಕಾಣುತ್ತ,. ಹಾಡುವುದು, ಪುಸ್ತಕ ಓದುವುದು ಹಾಗೂ ಬರವಣಿಗೆ ಇವರ ಮೆಚ್ಚಿನ ಹವ್ಯಾಸ. ಹಲವು ಸಣ್ಣಕಥೆ ಹಾಗೂ ಲೇಖನಗಳು ಕನ್ನಡದ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವಕಾಶ ದೊರೆತಾಗ ಜಾಲತಾಣದ ವಿವಿಧ ಸಾಹಿತ್ಯ ವೇದಿಕೆಗಳ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಬಿಡುವಿನ ಸಮಯದಲ್ಲಿ ಕಥೆಗಳ ರಚನೆ ಹಾಗೂ ಲೇಖನಗಳ ಭಾಷಾಂತರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ