- ಎಂ.ಎನ್.ಸುಂದರ ರಾಜ್, ಶಿವಮೊಗ್ಗ
ನಮ್ಮ ದೇಶದ ಪವಿತ್ರ ಗ್ರಂಥಗಳೆಂದು ಕರೆಯಲ್ಪಡುವ ರಾಮಾಯಣ- ಮಹಾಭಾರತ ವಿಶ್ವದ ಎಲ್ಲರ ಗಮನ ಸೆಳೆದಿರುವುದು ಅದರ ಜನಪ್ರಿಯತೆಯಿಂದಾಗಿ. ಅದರಲ್ಲಿಯೂ ರಾಮಾಯಣ ನಮ್ಮ ನಾಡಿನ ಅಸ್ಮಿತೆಯಾಗಿ, ಸಂಸ್ಕೃತಿಯ ಪ್ರತೀಕವಾಗಿ ಇಂದಿಗೂ ಎಲ್ಲರ ನಾಲಗೆಯ ಮೇಲೆ ನಲಿದಾಡುತ್ತಿದೆ ಎಂದರೆ, ಅದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೇನು ಬೇಕು? ರಾಮಭದ್ರನ ಕುರಿತಾದ ಕಥೆಯು ಕಾವ್ಯ, ನಾಟಕ, ಜಾನಪದ, ಯಕ್ಷಗಾನ, ಸಿನಿಮಾ, ಗೀತೆಗಳ ಮೂಲಕ ಎಲ್ಲೆಡೆ ಪ್ರಸರವಾಗುತ್ತಿರುವ ಈ ಸಂದರ್ಭದಲ್ಲಿ ನಾವು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಐತಿಹಾಸ ಕ್ಷಣಕ್ಕೆ ಸಾಕ್ಷಿಯಾಗಿದ್ದೇವಲ್ಲಾ ಅದಕ್ಕಿಂತ ಸೌಭಾಗ್ಯ ಬೇರೇನಿದೆ. ರಾಮಾಯಣ ಕೇವಲ ಪಂಡಿತರ, ವಿದ್ವಾಂಸರ ಸೊತ್ತಲ್ಲ. ಜನಸಾಮಾನ್ಯರ ಮೆಚ್ಚುಗೆಯ ಪವಿತ್ರ ಗ್ರಂಥವೂ ಆಗಿದೆ. ಹೀಗಾಗಿ ಪಂಡಿತರಿಂದ ಪಾಮರನವರೆಗೂ, ಸಾಮಾನ್ಯರಿಂದ ಅಸಮಾನ್ಯರ ವರೆಗೂ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಮೆಚ್ಚುವ, ಆದರಿಸುವ, ಹಾಡುವ, ಹರಸುವ, ಕೇಳುವ, ಕೇಳಿಸುವ ಕೃತಿಯಾಗಿ ಮೆರೆದಿದೆ.
ಭಾರತೀಯರ ಹೃದಯದಲ್ಲಿ ಅಚ್ಚಳಿಯದ ಧಾರ್ಮಿಕ, ಸಾಂಸ್ಕೃತಿಕ ಮುದ್ರೆಯನ್ನು ಒತ್ತಿರುವ ಚಿರಂಜೀವಿ ಕೃತಿರತ್ನ. ಐತಿಹ್ಯವೇ ಕಾವ್ಯವಾಗಿ, ಪುರಾಣವಾಗಿ, ಇತಿಹಾಸವಾಗಿ ಮಾರ್ಪಟ್ಟು ಬಹುತೇಕ ಎಲ್ಲಾ ವಯೋಮಾನದವರನ್ನು ಆಕರ್ಷಿಸಿದ ಕಾವ್ಯ. ಪಿತೃ-ಮಾತೃಭಕ್ತಿ, ಭ್ರಾತೃಪ್ರೇಮ. ಅಧಿಕಾರ ನಿರ್ಮೋಹ, ಸತ್ಯ-ಧರ್ಮ- ಪರಾಯಣತೆ, ಸ್ತ್ರೀ-ಪುರುಷ ಸಂದರ್ಭಗಳಲ್ಲಿ ಶೀಲವಂತಿಕೆ, ನೈತಿಕ ನಿಷ್ಠೆಗೆ ಪ್ರಾಮುಖ್ಯ. ದುಷ್ಟಶಿಕ್ಷೆ- ಶಿಷ್ಟ ರಕ್ಷಣೆ ಕಾರ್ಯಗಳಲ್ಲಿ ತ್ಯಾಗ ಮತ್ತು ಋಜು ನಡೆಗೆ ಆದ್ಯತೆ, ತನ್ನ ಸರಳ ನಡೆ-ನುಡಿಯಿಂದ ನರ ಕೂಡ ನಾರಾಯಣನಾಗಬಲ್ಲ ಎಂಬ ಸಂದೇಶ ಇಲ್ಲಿದೆ.
ಈ ಮಹಾಕಥನ ಹಲವು ತಲೆಮಾರುಗಳಿಂದ ವಿವಿಧ ಜಾನಪದ ಮತ್ತು ಶಿಷ್ಟ ಭಾಷಾರೂಪಗಳಲ್ಲಿ ವೈವಿಧ್ಯಮಯ ಪ್ರಕಾರಗಳಲ್ಲಿ ಮರು ನಿರೂಪಿಸಲ್ಪಟ್ಟಿದೆ. ಜಾನಪದ ಗೀತೆ ಲಾವಣಿ, ನೃತ್ಯ ರೂಪಕ, ಖಂಡ ಕಾವ್ಯ, ದೀರ್ಘ ಕಾವ್ಯ, ಕಥೆ, ಕಾದಂಬರಿ, ನಾಟಕ ಇತ್ಯಾದಿ ರೂಪಗಳನ್ನು ಪಡೆದುಕೊಳ್ಳುವುದರೊಂದಿಗೆ ಮೂಲ ಕತೆಗೆ ಹೊಸ ಹೊಳವುಗಳು ದಕ್ಕಿವೆ.
ವಿದ್ಯಾವಂತರು, ನಿರಕ್ಷರ ಕುಕ್ಷಿಗಳು, ಸ್ತ್ರೀ ಪುರುಷರು ರಾಮಾಯಣ ಕುರಿತು ಹಲವಾರು ಗ್ರಂಥಗಳನ್ನು ರಚಿಸಿ ನಮ್ಮ ವಿಶ್ವದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಎಷ್ಟು ಬಾರಿ ಕೇಳಿದರೂ ಕೇಳಬೇಕೆನ್ನುವ, ಎಷ್ಟು ಬಾರಿ ಓದಿದರೂ ಓದಬೇಕೆನ್ನುವ ಯಾವುದಾದರೂ ಸಾಹಿತ್ಯ ವಿಶ್ವದಲ್ಲಿ, ಇದೆಯೆಂದರೆ ಅದು ರಾಮಾಯಣವೇ ಹೊರತು ಬೇರೆಯಲ್ಲ. ವಾಲ್ಮೀಕಿಯಿಂದ ಹಿಡಿದು ಇಂದಿನ ಆಧುನಿಕ ಕಾಲದವರೆಗೂ ಸಹಸ್ರಾರು ರಾಮಾಯಣಗಳು ನಮ್ಮ ಸಮಾಜದಲ್ಲಿ ಬೆಳೆದು ಬಂದಿದೆ. ಅವೆಲ್ಲವುಗಳ ಮುಖ್ಯ ಉದ್ದೇಶ, ರ್ಯಾದಾ ರಾಮನ ಗುಣಗಾನ ಮಾಡುವುದು ಮತ್ತ್ಯು ಅವನ ತ್ಯಾಗ, ಪಿತೃವಾಕ್ಯ ಪರಿಪಾಲನೆ, ಏಕಪತ್ನೀವ್ರತ, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ, ಭಾತೃಪ್ರೇಮ, ಮಾತೃ ವಾತ್ಸಲ್ಯ, ಪ್ರಜೆಗಳ ಮೇಲಿನ ಪ್ರೀತಿ - ಇವೆಲ್ಲವನ್ನೂ ನಮಗೆ ತಿಳಿಸಿಕೊಟ್ಟು ನಾವೂ ಸಹ ರಾಮನ ಆದರ್ಶವನ್ನು ಪಾಲಿಸಬೇಕು ಎಂಬ ದಿವ್ಯ ಸಂದೇಶವನ್ನು ಸಾರುತ್ತದೆ.
ರಾಮಾಯಣವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಮ್ಮ ನಾಡಿನ ಕವಿಗಳು, ಮಹರ್ಷಿಗಳು, ಕಲಾವಿದರು, ಸಾಹಿತಿಗಳು ಮತ್ತು ಓದುಗರ ಪಾತ್ರ ಹಿರಿದಾಗಿದೆ. ಕಾವ್ಯ ಬರೆಯುವುದರ ಮೂಲಕ, ಹಾಡುವುದರ ಮೂಲಕ, ನಾಟಕವಾಡುವುದರ ಮೂಲಕ ಎಲ್ಲರೂ ತಮ್ಮ ಅಳಿಲ ಸೇವೆ ಸಲ್ಲಿಸಿ, ನಮ್ಮೆಲ್ಲರ ಜೀವನವನ್ನು ಪಾವನಗೊಳಿಸಿದ್ದಾರೆ. ಕೆಲ ವಿದ್ವಾಂಸರು ರಾಮಾಯಣದ ಕಾಲವನ್ನು ಕ್ರಿ.ಪೂ.7ನೇ ಶತಮಾನ ಎಂದು ಬಣ್ಣಿಸಿದ್ದಾರೆ. ರಾಬರ್ಟ್ ಪಿ. ಗೋಲ್ಡ್ಮನ್ ಅವರು ಈ ಮಾತನ್ನು ಪುಷ್ಟೀಕರಿಸಿದ್ದಾರೆ.
ಹಿರಿಯ ವಿದ್ವಾಂಸರಾದ ಡಾ.ಪಿ.ಶಾಂತಾರಾಮ ಪ್ರಭು ಅವರು 'ರಾಮಾಯಣ ಕೈಪಿಡಿ' ಎಂಬ ಹೊತ್ತಿಗೆಯನ್ನು ರಚಿಸಿದ್ದಾರೆ. ಅದರಲ್ಲಿ ವಿಶ್ವದ ನಾನಾ ಭಾಷೆಗಳಲ್ಲಿ ಪ್ರಕಟವಾದ ರಾಮಾಯಣವನ್ನು ಪಟ್ಟಿಮಾಡಿದ್ದಾರೆ. ಅದನ್ನೋದಿದರೆ ಎಂತಹವರಿಗೂ ಅಚ್ಚರಿಯಾಗದಿರದು. ಕುಮಾರವ್ಯಾಸ ಐದು ನೂರು ವರ್ಷಗಳ ಹಿಂದೆಯೇ ಪ್ರಕಟವಾದ ರಾಮಾಯಣಗಳ ಬಗ್ಗೆ ಬರೆದಿರುವುದು ತಮಗೆಲ್ಲಶಾ ತಿಳಿದೇ ಇದೆ.
ತಿಣುಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
– ಎಂಬ ನಾರಣಪ್ಪನ ಮಾತುಗಳು ಅದೆಷ್ಟು ರಾಮಾಯಣಗಳು ವಿವಿಧ ವಿದ್ವಾಂಸರಿಂದ ಪ್ರಕಟವಾದವು ಎಂಬುದನ್ನು ಸೂಚಿಸುತ್ತದೆ, ಅದೂ ಐದುನೂರು ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಅದೆಷ್ಟು ಕೃತಿಗಳು ಬಂದಿರುವುದೋ ತಿಳಿಯದಾಗಿದೆ. ಪ್ರಭುಗಳು ಬಹು ಕಷ್ಟಪಟ್ಟು ಎಷ್ಟು ರಾಮಾಯಣಗಳು ಪ್ರಕಟವಾಗಿವೆ ಎಂಬುದರ ಸುದೀರ್ಘ ಪಟ್ಟಿಯನ್ನೇ ನೀಡಿದ್ದಾರೆ. ಅದರ ಪ್ರಕಾರ 2021 ರವರೆಗೆ ಪ್ರಕಟವಾದ ರಾಮಾಯಣಗಳ ಸಂಖ್ಯೆ 2892. ಇದರಲ್ಲಿ ಭಾರತೀಯ ಭಾಷೆಗಳದ್ದೇ ಸಿಂಹಪಾಲು ಅಂದರೆ, 2017. ವಿಶ್ವದ ಅನೇಕ ಭಾಷೆಗಳಲ್ಲಿಯೂ ಸಹ ರಾಮಾಯಣ ಪ್ರಕಟವಾಗಿದೆ. ಮಲಯ 2, ಪೋಲಿಷ್ 2, ರಷ್ಯನ್ 7, ಸಿಂಹಳೀ 5, ಸ್ಪಾನಿಷ್ 3, ಸ್ವೀಡಿಷ್ 1, ಟರ್ಕಿ 2, ಥಾಯ್ 79, ಉರ್ದು 68, ಉಕ್ರೇನಿಯನ್ 2, ಉಜ್ಬೆಕ್ 1, ನೇಪಾಳೀ 27, ಸಂಸ್ಕೃತ 59, ಜಪಾನೀ 58, ಇಂಗಲಿಷ್ 159, ಜರ್ಮನ್ 58, ಬ್ರೆಜಿಲಿಯನ್ 2, ಬಲ್ಗೇರಿಯನ್ 1, ಬರ್ಮೀಸ್ 3, ಕಾಂಬೋಡಿಯನ್ 22, ಚೀನೀ 3, ಜೆಕೊಸ್ಲಾವ್ 1, ಫ್ರೆಂಚ್ 73, ಇಂಡೋನೇಷಿಯನ್ 71, ಇಟಾಲಿಯನ್ 16, ಲಾವೋಷಿಯನ್ 6, ಲ್ಯಾಟಿನ್ 6, ನಾರ್ವೇಜಿಯನ್ 2, ಫಿಲಿಫೈನ್ಸ್ 52. ಇಷ್ಟೇ ಅಲ್ಲ ರಾಮಾಯಣ ವಿಷಯಗಳನ್ನಿಟ್ಟುಕೊಂಡು ರಚಿಸಿದ ನಾಟಕಗಳು 12, ಕಾವ್ಯಗಳು 59, ಇತರೆ ಕೃತಿಗಳು 48. ಇದರ ಜೊತೆಗೆ ಸಹಸ್ರಾರು ಲೇಖನಗಳು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಅಸಂಖ್ಯಾತ ಪ್ರಬಂಧಗಳೂ ಸಹ ಪ್ರಕಟವಾಗಿವೆ.
ಸಿದ್ದಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳ 'ಅಚ್ಚಕನ್ನಡ ರಾಮಾಯಣ'; ಬಿ ನಂಜುಂಡಯ್ಯ ಅವರ 'ಅದ್ಭುತ ರಾಮಾಯಣ'; ಸುಬ್ಬಾಶಾಸ್ತ್ರಿ ಅವರ 'ಉತ್ತರ ಸೀತಾ ಚರಿತೆ'; ಮಹದೇವ ಶಾಸ್ತ್ರಿಗಳ 'ಕರ್ನಾಟಕ ರಘುವಂಶ ಕಾವ್ಯ'; ಪಿ.ಆರ್. ಕರಿಬಸವಶಾಸ್ತ್ರಿ ಅವರ 'ಕರ್ನಾಟಕ ರಾಮಾಯಣ ಸಂಗ್ರಹ'; ಮುಳಿಯ ತಿಮ್ಮಪ್ಪಯ್ಯನವರ 'ನವನೀತ ರಾಮಾಯಣ'; ಕೆ ರಾಮಸ್ವಾಮಿ ಅಯ್ಯಂಗಾರ್ ಅವರ 'ರಂಗನಾಥ ರಾಮಾಯಣ ಬಾಲಕಾಂಡ'; ಮಾಸ್ತಿ ಅವರ 'ಶ್ರೀ ರಾಮ ಪಟ್ಟಾಭಿಷೇಕ'; ಡಿ ವಿ ಗುಂಡಪ್ಪನವರ 'ಶ್ರೀ ರಾಮನ ಪರೀಕ್ಷಣಂ'; ಗಮಕಿ ಆರ್.ಶಂಕರನಾರಾಯಣ ಅವರ 'ಶ್ರೀ ಸೀತಾ ದರ್ಶನಂ' ಆರ್ ಕೆ ಶಾಮೈಯ್ಯ ಪಂಡಿತರ 'ಅದ್ಭುತ ರಾಮಾಯಣ'; ಕುವೆಂಪು ಅವರ ಮಹಾಕಾವ್ಯ 'ಶ್ರೀ ರಾಮಾಯಣ ದರ್ಶನಂ'; ವೀರಪ್ಪ ಮೊಯ್ಲಿ ಅವರ 'ಶ್ರೀ ರಾಮಾಯಣ ಮಹಾನ್ವೇಷಣಂ'; ಲತಾ ರಾಜಶೇಖರ್ ಅವರ 'ಶ್ರೀರಾಮ ಮಹಾದರ್ಶನ'; ಗಜಾನನ ಈಶ್ವರ ಹೆಗಡೆಯವರ 'ರಸ ರಾಮಾಯಣ'; ಸೋಸಲೆ ಅಯ್ಯಾಶಾಸ್ತ್ರಿಗಳ 'ಶೇಷ ರಾಮಾಯಣ' ಮುಂತಾದವು ಪ್ರಸಿದ್ಧಿ ಹೊಂದಿವೆ.
ರಾಮಾಯಣ ಗದ್ಯ ಕೃತಿಗಳಲ್ಲಿ ಮೊದಲನೆಯದು ಚಾಮರಾಜ ಒಡೆಯರ 'ಚಾಮರಾಜೇಂದ್ರ ವಿಲಾಸ' ಎಂಬ ಕನ್ನಡ ರಾಮಾಯಣ, ಮುದ್ದಣನ 'ಶ್ರೀರಾಮಶ್ವಮೇಧ ಮತ್ತು ಅದ್ಭುತ ರಾಮಾಯಣ'; ಸಿ.ಎನ್. ಶ್ರೀನಿವಾಸ್ ಅಯ್ಯಂಗಾರ್ ಅವರ 'ಕನ್ನಡ ವಾಲ್ಮೀಕಿ ರಾಮಾಯಣ'; ಎಸ್ ರಂಗನಾಥಶರ್ಮ ಅವರ 'ಸಂಪೂರ್ಣ ರಾಮಾಯಣ'; ಕೃ ನಾರಾಯಣರಾಯರ 'ವಚನ ರಾಮಾಯಣ'; ರಸಿಕ ಪುತ್ತಿಗೆಯವರ 'ರಾಮಾಯಣ'; ಗಳಗನಾಥರ 'ಆನಂದ ರಾಮಾಯಣ'; ದೇವಶಿಖಾಮಣಿ ಅಳಸಿಂಗಾಚಾರ್ಯರ 'ಸಮಗ್ರ ರಾಮಾಯಣ' ಗಮನಿಸತಕ್ಕವು.
ಮೋಟಗಾನಹಳ್ಳಿ ಸುಬ್ರಮಣ್ಯ ಶಾಸ್ತ್ರಿ, ಎನ್ ರಂಗನಾಥ ಶರ್ಮ, ದೊಡ್ಡಬೆಲೆ ನಾರಾಯಣ ಶಾಸ್ತ್ರಿ ಇವರು ಮೂಲ ಸಂಸ್ಕೃತದಿಂದ ಅನುವಾದಿಸಿದ್ದಾರೆ. 25 ಕ್ಕಿಂತ ಹೆಚ್ಚು ಅನುವಾದಗಳಿವೆ.
ರಾಮಾಯಣಕ್ಕೆ ಸಂಬಂಧಿಸಿದ ನಾಟಕಗಳಲ್ಲಿ 19ನೇ ಶತಮಾನದಲ್ಲಿ ಬಸವಪ್ಪ ಶಾಸ್ತ್ರಿಗಳ 'ಉತ್ತರ ರಾಮಚರಿತಂ' ನಾಟಕವೇ ಮೊದಲನೆಯದು. ನಂ. ಶ್ರೀಕಂಠ ಶಾಸ್ತ್ರಿ ಅವರ 'ಅಭಿಜ್ಞಾನ ಪ್ರಧಾನ' ನಾಟಕ; ಬೆಳ್ಳಾವಿ ನರಸಿಂಹ ಶಾಸ್ತ್ರಿಗಳ 'ಅಭಿಜ್ಞಾನ ಶುಭೋದಯ'; ಎಸ್ ವಿ ಪರಮೇಶ್ವರ ಭಟ್ಟರ 'ಅಭಿಷೇಕ'; ಶ್ರೀರಂಗರ 'ಅಶ್ವಮೇಧ'; ಪು.ತಿ.ನ ಅವರ 'ಅಹಲ್ಯೆ'; ಕೃಷ್ಣ ಶರ್ಮ ಅವರ 'ಉತ್ತರ ರಾಮಚರಿತ'; ಮೈಸೂರು ಸೀತಾರಾಮ ಶಾಸ್ತ್ರಿಗಳ 'ಕರ್ನಾಟಕ ಪ್ರತಿಮಾ ನಾಟಕಂ'; ಸೋಸಲೇ ಅಯ್ಯಾಶಾಸ್ತ್ರಿಗಳ 'ಕರ್ನಾಟಕ ರಾಮಾಯಣ' ನಾಟಕ; ತಿರುಮಲೆ ರಾಜಮ್ಮನವರ 'ತಪಸ್ವಿನಿ'; ಡಿವಿಜಿ ಅವರ 'ಪರಶುರಾಮ'; ಪಿ. ವಿ. ಶಂಕರೇಗೌಡರ 'ಪಾದುಕಾ ಕಿರೀಟ'; ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳ 'ಭಕ್ತೆ ಶಬರಿ'; ತಿರುಮಲಾಂಬ ಅವರ 'ಭಾರ್ಗವ ಗರ್ವಭಂಗ'; ಎಲ್ ಬಸವರಾಜು ಅವರ 'ಭಾಸ ರಾಮಾಯಣ'; ಎಲ್ ಗುಂಡಪ್ಪನವರ 'ರಾಮಾಯಣ ನಾಟಕಂ'; ಕೆ ಶಿವರಾಮ ಕಾರಂತರ 'ಲವಕುಶ ಗೀತ ನಾಟಕಗಳು'; ಕುವೆಂಪು ಅವರ 'ಶೂದ್ರ ತಪಸ್ವಿ', 'ವಾಲ್ಮೀಕಿಯ ಭಾಗ್ಯ'; ಸಮೇತನಹಳ್ಳಿ ರಾಮರಾಯರ 'ಶುಭ್ರ ಶೀಲ ಅಹಲ್ಯೆ'; ಕಡೆಂಗೋಡ್ಲು ಶಂಕರಭಟ್ಟರ 'ಸೀತಾಪಹರಣ'; ಬಿ. ಪುಟ್ಟಸ್ವಾಮಿಯವರ 'ಸಂಪೂರ್ಣ ರಾಮಾಯಣ' ಮುಂತಾದವು ಪ್ರಮುಖ ನಾಟಕ ಕೃತಿಗಳು.
ಚೊಕ್ಕಾಡಿ ಎಂ. ಸೀತಾರಾಮಯ್ಯ ದೇರಾಜೆ ಶ್ರೀರಾಮಚಂದ್ರನ ಸದ್ಗುಣಗಳಿಗೆ ಮನಸೋತು ಆತನೇ ತಮ್ಮ ಇಷ್ಟ ದೇವತೆ ಎಂದು, ಸರ್ವಸ್ವ ಎಂದು ಬಗೆದು 'ಶ್ರೀ ರಾಮಚರಿತಾಮೃತಂ' ಕೃತಿಯನ್ನು ಕೆಲವೊಂದು ಪರಿವರ್ತನೆಗಳೊಂದಿಗೆ 1949ರಲ್ಲಿ ಬರೆದರು. ಊರ್ಮಿಳೆ ಸೀತೆಯೊಂದಿಗೆ ವನವಾಸಕ್ಕೆ ತೆರಳಿದ ಬಗ್ಗೆ, ವಾಲಿವಧೆ ಮಾಡಿದ ಬಗ್ಗೆ ಸಮರ್ಥನೆ, ಮಂಡೋದರಿ ಪಾತ್ರದ ಉದಾತ್ತತೆ, ಅಶ್ವಮೇಧಯಾಗ ಪ್ರಸಂಗ, ಮಹಾಪ್ರಸ್ಥಾನ ಈ ಘಟನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.
ಡಾ. ಪಿ.ವಿ. ವರ್ತಕರ ಅವರ ವಾಸ್ತವ ರಾಮಾಯಣ (ಅನು : ಹೇಮಂತ್ ರಾಜ್) ದಲ್ಲಿ ವೈಜ್ಞಾನಿಕ ದೃಷ್ಟಿಕೋನ ಸಮರ್ಥವಾಗಿ ಬಂದಿದೆ. ರಾಮಾಯಣದ ಸ್ಥಳ, ಕಾಲ ಜನಜೀವನ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗಳನ್ನು ವಿಶ್ಲೇಷಿಸಿ ಈ ಕೃತಿ ಕವಿಕಲ್ಪನೆಯಲ್ಲಿ ಅದು ಐತಿಹಾಸಿಕ ಸತ್ಯ ಎಂದಿದ್ದಾರೆ.
ಕೆ.ಎಸ್. ನಾರಾಯಣಾಚಾರ್ಯರು 'ಶ್ರೀ ರಾಮಾಯಣ ಪಾತ್ರ ಪ್ರಪಂಚ'; ಶ್ರೀ ರಾಮಾಯಣ ಸಾಹಸ್ರೀ (5 ಭಾಗ); 'ಶ್ರೀ ರಾಮಕಥಾವತಾರ'; 'ಶ್ರೀ ರಾಮಾಯಣ ಮಹಾಪ್ರಸಂಗಗಳು'; 'ಶ್ರೀರಾಮಕಥಾ ಸುಧಾ ಬಾಲಕಾಂಡ'; 'ಶ್ರೀ ಮದ್ರಾರಾಮಾಯಣದ ಮಹಾ ವಾಕ್ಯಗಳು'; 'ಮೂಲ ಸಂಕ್ಷೇಪ ರಾಮಾಯಣ' ಮತ್ತು ರಾಮಾಯಣದ ಉತ್ತರಕಾಂಡವನ್ನು ಆಧರಿಸಿ 'ಶ್ರೀ ರಾಮಾವತಾರ ಸಂಪೂರ್ಣವಾದಾಗ' ಕೃತಿಗಳನ್ನು ರಚಿಸಿದ್ದಾರೆ.
1949ರಲ್ಲಿ ಕುವೆಂಪುರವರು ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ' ಪ್ರಕಟವಾಯಿತು. ಜ್ಞಾನಪೀಠ ಪ್ರಶಸ್ತಿ ಲಭಿಸಿತು. ವೀ.ಸಿ. ಅವರು 1976ರಲ್ಲಿ ಕುವೆಂಪು ಶ್ರೀ ರಾಮಾಯಣ ಕೃತಿಯನ್ನು ಆಂಗ್ಲ ಮತ್ತು ಕನ್ನಡದಲ್ಲಿ ಬರೆದರು. 1954ರಲ್ಲಿ ಕುವೆಂಪು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಸಮಗ್ರ ಗದ್ಯಾನುವಾದವನ್ನು ದೇಜಗೌ ಅವರು ಪ್ರಕಟಿಸಿದರು. ಶ್ರೀ ಎಂ. ವೀರಪ್ಪ ಮೊಯ್ಲಿಯವರು ಐದು ಸೋಪಾನಗಳ 'ಶ್ರೀ ರಾಮಾಯಣ ಮಹಾನ್ವೇಷಣಂ' ಕಾವ್ಯ ರಚಿಸಿದ್ದಾರೆ. ರಾಮಾಯಣವು ಪಳೆಯುಳಿಕೆ ಆಗಬಾರದು. ಅದನ್ನು ಓದಿದ ಪ್ರತಿಯೊಬ್ಬರಿಗೂ ಅದು ತನ್ನ ಜೀವನಕ್ಕೆ ಸಂಬಂಧಿಸಿದೆ ಎಂಬ ಆಶಯವನ್ನು ಹೊರಗೆಡಹಬೇಕು ಎಂಬ ಸದಾಶಯದಿಂದ ಈ ಕೃತಿ ರಚಿಸಿದ್ದಾರೆ.
ವಿದ್ವಾನ್ ಎಲ್ ರಂಗನಾಥ ಶರ್ಮ ಅವರು ವಾಲ್ಮೀಕಿ ರಾಮಾಯಣವನ್ನು 8 ಸಂಪುಟಗಳಲ್ಲಿ ಅನುವಾದಿಸಿದ್ದಾರೆ. ಡಿ.ವಿ. ಗುಂಡಪ್ಪನವರು ಮುನ್ನುಡಿ ಬರೆದಿದ್ದಾರೆ. ಡಿ.ವಿ. ಗುಂಡಪ್ಪನವರು 1958ರಲ್ಲಿ ತಮಿಳಿನಲ್ಲಿ ರಾಮಾಯಣ ರಚಿಸಿದರು. ಪ್ರೊ. ಸಂಪತ್ ಗಿರಿರಾಯರು ಕನ್ನಡದಲ್ಲಿ ಅನುವಾದಿಸಿದರು. ಡಿವಿಜಿ ಅವರು 'ಶ್ರೀರಾಮ ಪರೀಕ್ಷಣಂ' ಪ್ರೌಢ ಗ್ರಂಥ ರಚಿಸಿದರು.
ಆಧ್ಯಾತ್ಮ ರಾಮಾಯಣ ಪರಂಪರೆಯಲ್ಲಿ ಶಂಕರನಾರಾಯಣನ 'ಆಧ್ಯಾತ್ಮ ರಾಮಾಯಣ'; ನರಸಿಂಹನ 'ಆಧ್ಯಾತ್ಮ ರಾಮಾಯಣ'; ಮಹಾತ್ಮ ನಿಜಗುಣನ 'ಅದ್ವೈತ ರಾಮಾಯಣ'; ಸಹದೇವಪುರದ ತಿಮ್ಮಾಮಾತ್ಯನ 'ಆನಂದ ರಾಮಾಯಣ'; ಬಬ್ಬೂರು ರಂಗನ 'ಪರಶುರಾಮ ರಾಮಾಯಣ' ರಚನೆಯಾಗಿವೆ..
ಮುಮ್ಮಡಿ ಕೃಷ್ಣರಾಜರು (1794-1868) ಶ್ರೀರಾಮಕಥಾ ಕಲ್ಪವೃಕ್ಷ, ದಶರಥನಂದನ ಚರಿತೆ, ಕೃತಿಗಳನ್ನು ಪೌರಾಣಿಕ ಶೈಲಿಯಲ್ಲಿ ರಚಿಸಿದ್ದಾರೆ. ಅಜ್ಞಾತ ಕರ್ತೃ 'ವಶಿಷ್ಟ ರಾಮಾಯಣ' ರಚಿಸಿದ್ದಾನೆ.
ಮೇಲ್ಕಂಡ ರಾಮಾಯಣ ಗ್ರಂಥಗಳು 2021ರ ವರೆಗಿನ ಅಂಕಿ ಅಂಶಗಳು. ನಂತರದ ದಿನಗಳಲ್ಲಿ ಮತ್ತೆಷ್ಟು ರಾಮಾಯಣಗಳು ಸೃಷ್ಟಿಯಾಗಿವೆಯೋ ಗೊತ್ತಿಲ್ಲ. ವಿಶೇಷವೆಂದರೆ, ರಾಮಾಯಣದ ಕಥೆ ಹಿಂದಿಯಲ್ಲಿ ಪ್ರತಿನಿತ್ಯ ಧಾರವಾಹಿಯಾಗಿ ಪ್ರಸಾರವಾಗಿ ಕೋಟ್ಯಾಂತರ ಜನ ಅದನ್ನು ವೀಕ್ಷಣೆ ಮಾಡಿರುತ್ತಾರೆ. ಇಂದಿಗೂ ಹಲವಾರು ವಿವಿಧ ಭಾಷೆಯ ಧಾರವಾಹಿಗಳು ದೂರದರ್ಶನದಲ್ಲಿ ರಾಮಾಯಣದ ಕಥೆಯನ್ನು ಪ್ರಸಾರ ಮಾಡಿವೆ ಮತ್ತು ಮಾಡುತ್ತಿವೆ.
ವಿದೇಶಗಳಲ್ಲಿಯೂ ಸಹ ರಾಮಾಯಣ ಅತ್ಯಂತ ಪ್ರಸಿದ್ಧಿ ಪಡೆದ ಗ್ರಂಥವಾಗಿದೆ. ಇಂಡೋನೇಷ್ಯಾದಲ್ಲಿ ಇಂದಿಗೂ ರಾಮಾಯಣದ ಕಥೆಗಳನ್ನಾಧರಿಸಿದ ನಾಟಕಗಳು, ನೃತ್ಯ ಹೆಚ್ಚು ಜನಪ್ರಿಯ. ಒಮದು ಮುಸಿಮ ರಾಷ್ಟ್ರದಲ್ಲಿ ಇದು ಹೇಗೆ ಸಾಧ್ಯ ಎಂದು ಯಾವುದಾದರೂ ಇಂಡೋನೇಷ್ಯನ್ ಅನ್ನು ಕೇಳಿ. ಅವನು ಹೇಳುವ ಉತ್ತರ ದಿಗ್ಭ್ರಮೆ ಮೂಡಿಸುತ್ತದೆ. ಆತ ಹೇಳುವುದಿಷ್ಟೆ. ''ಇಸ್ಲಾಂ ನಮ್ಮ ಧರ್ಮ, ರಾಮಾಯಣ ನಮ್ಮ ಸಂಸ್ಕೃತಿ''.
- ಎಂ.ಎನ್.ಸುಂದರ ರಾಜ್
ಅಧ್ಯಕ್ಷರು, ಕರ್ನಾಟಕ ಸಂಘ, ಶಿವಮೊಗ್ಗ
ಲೇಖಕರ ಸಂಕ್ಷಿಪ್ತ ಪರಿಚಯ:
ಎಂ.ಎನ್.ಸುಂದರ ರಾಜ್ ಅವರು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಅಧ್ಯಕ್ಷರು ಸಾಹಿತಿಗಳು ಮತ್ತು ಅಂಕಣಕಾರರು. ನಿವೃತ್ತ ಉಪನ್ಯಾಸಕರಾದ ಶ್ರೀಯುತರು ಇದುವರೆಗೆ 25 ಕೃತಿಗಳನ್ನು ಹೊರತಂದಿದ್ದಾರೆ. ಕನ್ನಡ ಪ್ರಭ ಪತ್ರಿಕೆಯಲ್ಲಿ 5 ವರ್ಷ, ಹೈದರಾಬಾದಿನ ಈನಾಡು ಪತ್ರಿಕೆಯಲ್ಲಿ ಹತ್ತು ವರ್ಷ, ಸದ್ಗುರೂಸ್ ಬ್ಲೆಸಿಂಗ್ಸ್ ಪತ್ರಿಕೆಗೆ ಐದು ವರ್ಷ ಲೇಖನಗಳನ್ನು ಬರೆದಿದ್ದಾರೆ. ದೂರದರ್ಶನ ಚಂದನದಲ್ಲಿ ಸತತ ಆರು ವರ್ಷಗಳ ಕಾಲ ಇವರ, ''ಹೆಜ್ಜೆ ಗುರುತು'' ಕಾರ್ಯಕ್ರಮ ಪ್ರಸಾರವಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ