ಮೊದಲನೆಯ ಕಥೆ: ಸತ್ಕಾರ್ಯ-ದುಷ್ಕಾರ್ಯ ಕುರಿತು ರಾಮ-ರಾವಣ ಸಂಭಾಷಣೆ
ರಾಮ-ರಾವಣರ ಯುದ್ಧದ ಬಳಿಕ ರಾವಣನು ಮೃತ್ಯುಶಯ್ಯೆಯಲ್ಲಿ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿ ಇದ್ದಾಗ ನಡೆದ ಸಂಭಾಷಣೆಯ ಒಂದು ಪ್ರಸಂಗವಿದು.
ರಾವಣನು ರಾಕ್ಷಸನಾಗಿ ಹುಟ್ಟಿದ್ದು ಶಾಪದಿಂದಾಗಿ. ಅವನು ಅನೇಕ ಕೆಟ್ಟ ಕೆಲಸಗಳನ್ನು ಮಾಡಿದ್ದರೂ ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾನೆ. ಆದ್ದರಿಂದ ಮರಣವನ್ನು ಎದುರು ನೋಡುತ್ತಿರುವ ಅವನನ್ನು ಭೇಟಿಯಾಗಿ ರಾಜ್ಯಾಡಳಿತದ ಕೆಲವಾದರೂ ಸೂತ್ರಗಳನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ರಾಮನಿಗೆ ಅನಿಸಿತು. ಆದ್ದರಿಂದ ಅವನು ರಣರಂಗದಲ್ಲಿ ಬಿದ್ದಿದ್ದ ದಶಕಂಠನ ಬಳಿಗೆ ಹೋದನು. ''ಅಯ್ಯಾ ರಾವಣ, ನೀನು ಪರಸ್ತ್ರೀ ವ್ಯಾಮೋಹದಿಂದಾಗಿ ಈ ಸ್ಥಿತಿಗೆ ಬಂದು ತಲುಪಿರಬಹುದು. ಆದರೆ ದೀರ್ಘಕಾಲ ರಾಕ್ಷಸರನ್ನು ಒಂದುಗೂಡಿಸಿ ಸುವರ್ಣ ಲಂಕೆಯನ್ನು ಪ್ರಗತಿಯತ್ತ ಕೊಂಡೊಯ್ದ ಅನುಭವ ನಿನಗಿದೆ. ಆದ್ದರಿಂದ ರಾಜನಾದವನು ಒಳ್ಳೆಯ ಮತ್ತು ಕೆಟ್ಟ ಕೆಲಸ ಮಾಡುವ ಸಂದರ್ಭ ಎದುರಾದರೆ ಏನು ಮಾಡಬೇಕು? ಹೇಗೆ ಅದನ್ನು ನಿಭಾಯಿಸಬೇಕು?'' ಎಂದು ಅವನನ್ನು ಪ್ರಶ್ನಿಸಿದನು.
ಆಗ ರಾವಣನು ''ರಾಮಚಂದ್ರ, ನೀನು ಅವತಾರ ಪುರುಷನು. ಎಲ್ಲವನ್ನೂ ತಿಳಿದವನು. ಪಾಪ ಕಾರ್ಯಗಳನ್ನು ಮಾಡಿ ದುರಂತವನ್ನು ಅನುಭವಿಸುತ್ತಿರುವ ನಾನು ನಿನಗೇನು ಹೇಳಲಿ? ಆದರೂ ನೀನು ಕೇಳಿದ ಕಾರಣ ಹೇಳುತ್ತಿದ್ದೇನೆ. ರಾಜನಾದವನಿಗೆ ಯಾವುದೇ ಒಳ್ಳೆಯ ಕಾರ್ಯ ಮಾಡಬೇಕೆಂಬ ಭಾವನೆ ಬಂದರೆ ಅವನು ಅದನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು. ಕೂಡಲೇ ಮಾಡಿ ಮುಗಿಸಬೇಕು. ಒಂದು ವೇಳೆ ನಾಳೆಗೆಂದು ಮುಂದೂಡಿದರೆ ಸತ್ಕಾರ್ಯವು ಕೈಗೂಡದೆ ಹೋಗಬಹುದು''.
"ಒಂದೆರಡು ಉದಾಹರಣೆಗಳನ್ನು ಕೊಟ್ಟರೆ ಈ ವಿಷಯವು ಮನದಟ್ಟಾಗಬಹುದು. ಒಂದು ಸಲ ನಾನು ಯಮಲೋಕಕ್ಕೆ ಹೋದಾಗ ನರಕದಲ್ಲಿರುವ ಪಾಪಿಗಳ ಕುಳಿಗಳನ್ನು ನೋಡಿದೆ. ಅಪರಾಧಿಗಳನ್ನು ಆ ಕುಳಿಗಳಲ್ಲಿ ಕೈಕಾಲು ಬಿಗಿದು ಕುಳ್ಳಿರಿಸಿ ಹೊಡೆಯುತ್ತಿದ್ದರು. ಆಗ ಪಾಪಿಗಳು ಯಾತನೆಯಿಂದ ಗೋಳಾಡುತ್ತಿದ್ದರು. ಇದನ್ನು ನೋಡಿದ ನಾನು ಆ ಕುಳಿಗಳನ್ನು ಮುಚ್ಚಿ ಪಾಪಿಗಳ ನೋವನ್ನು ನಿವಾರಿಸಲು ಬಯಸಿದೆ. ಆದರೆ ಲಂಕೆಗೆ ಹಿಂತಿರುಗಿದ ಮೇಲೆ ಈ ಸತ್ಕಾರ್ಯದ ಯೋಚನೆಯನ್ನು ಮರೆತೇಬಿಟ್ಟೆ.''
''ಮತ್ತೊಮ್ಮೆ ಲಂಕಾ ದ್ವೀಪದ ಸುತ್ತಲಿನ ಸಮುದ್ರದಲ್ಲಿ ಉಪ್ಪು ನೀರು ತುಂಬಿದ್ದು ಯಾವ ಪ್ರಯೋಜನಕ್ಕೂ ಬಾರದಾಗಿದೆ. ವಿಶ್ವದಲ್ಲಿ ಬೆಣ್ಣೆಯ, ಹಾಲಿನ, ತುಪ್ಪದ, ಕಬ್ಬುವಿನ ಸಾಗರಗಳಿವೆ. ಲಂಕಾ ಸಮುದ್ರವನ್ನು ಕೆನೆ ಹಾಲಿನ ಮಧುರ ಸಾಗರವಾಗಿ ಪರಿವರ್ತಿಸಿದರೆ ಜನರಿಗೆ ತುಂಬಾ ಉಪಯೋಗವಾದೀತೆಂದು ಗ್ರಹಿಸಿದೆ. ಆದರೆ ನಾನಾ ರೀತಿಯ ಶಾಸನ ಸಂಬಂಧಿ ಕೆಲಸಗಳ ಒತ್ತಡದಿಂದಾಗಿ ಇದು ಮರೆತೇ ಹೋಯಿತು.''
ಬ್ರಹ್ಮನು ನಾನಾ ರೀತಿಯ ಜೀವಿಗಳನ್ನು ಸೃಷ್ಟಿಸಿದ್ದಾನೆ. ಅವುಗಳಲ್ಲಿ ಮನುಷ್ಯರ ಸಂಖ್ಯೆ ದೊಡ್ಡದು. ಇವರಲ್ಲಿರುವ ತೀವ್ರ ಆಸೆಯೆಂದರೆ ಅಮರ ಲೋಕವನ್ನು ಸೇರುವುದು. ಆದರೆ ಅಲ್ಲಿಗೆ ಹೋಗುವುದು ಕಷ್ಟ. ಆದ್ದರಿಂದ ವಿಶ್ವಕರ್ಮನಿಗೆ ಹೇಳಿ ಮರ್ತ್ಯಲೋಕದಿಂದ ಸ್ವರ್ಗದ ವರೆಗೆ ಆರಾಮವಾಗಿ ಹೋಗಲು ಸೂಕ್ತವಾದ ಏಣಿಯನ್ನು ನಿರ್ಮಿಸಿಕೊಡಬೇಕೆಂದು ಯೋಚಿಸಿದೆ. ಆದರೆ ಇಲ್ಲೂ ಕೂಡ ಮುಂದೂಡುವಿಕೆಯಿಂದಾಗಿ ಈ ಸತ್ಕಾರ್ಯವು ನೆರವೇರಲಿಲ್ಲ. ಆದ್ದರಿಂದ ರಾಜನಾದವನ ಯಾವ ಕಾರ್ಯವನ್ನೂ ಮುಂದೂಡಬಾರದು.
"ಭಲೇ ದಶಕಂಠ, ನಿನ್ನ ಮಾತು ಔಚಿತ್ಯಪೂರ್ಣವಾದುದು. ಈಗ ದುಷ್ಕಾರ್ಯಗಳ ಕುರಿತು ನಿನ್ನ ಅಭಿಪ್ರಾಯ ತಿಳಿಸು. ಯಾವುದಾದರೂ ಕೆಟ್ಟ ಕಾರ್ಯದ ಯೋಚನೆ ಬಂದರೆ ರಾಜನಾದವನು ಏನು ಮಾಡಬೇಕು?''
ಆಗ ದಶಕಂಠನು ಕೊಟ್ಟ ಉತ್ತರ ಹೀಗಿತ್ತು: "ಯಾವುದೇ ಸಂದರ್ಭದಲ್ಲಿ ಕೆಟ್ಟ ಕೆಲಸ ಮಾಡಬೇಕೆಂಬ ಬಯಕೆ ಮನಸ್ಸಿನಲ್ಲಿ ಮೂಡಿದರೆ ಅದನ್ನು ಕ್ಷಿಪ್ರವಾಗಿ ಮಾಡಿ ಮುಗಿಸದೆ ಮುಂದೂಡುತ್ತಾ ಹೋಗಬೇಕು. ಈ ಮಧ್ಯೆ ಮನಸ್ಸು ಬದಲಾಗಬಹುದು. ದುಷ್ಕಾರ್ಯವು ಆಗದೆ ಹೋಗಬಹುದು. ಈ ಕುರಿತಾಗಿಯೂ ಒಂದೆರಡು ನಿದರ್ಶನ ಕೊಡುತ್ತೇನೆ. ನನ್ನ ತಂಗಿ ಶೂರ್ಪನಖಿಯು ಕಿವಿ-ಮೂಗುಗಳನ್ನು ಕಳೆದುಕೊಂಡು ಲಂಕೆಗೆ ಬಂದು ದೂರು ಹೇಳಿದಾಗ ನಿನ್ನ ಮೇಲೆ ಸೇಡು ತೀರಿಸಲು ಸೀತೆಯನ್ನು ಮೋಸದಿಂದ ಅಪಹರಿಸುವ ಯೋಚನೆ ಮೂಡಿತು. ನಾನು ಹಿಂದೆಮುಂದೆ ಯೋಚನೆಯನ್ನೇ ಮಾಡಲಿಲ್ಲ. ಮಾವನಾದ ಮಾರೀಚನನು ಆಡಿದ ವಿವೇಕದ ನುಡಿಗಳಿಗೂ ಕಿವಿಗೊಡಲಿಲ್ಲ. ಸೀತಾಪಹರಣ ನಡೆದೇ ಹೋಯಿತು. ರಾಜ್ಯದ ಪತನ ಅನಿವಾರ್ಯವಾಯಿತು."
"ಅದೇ ರೀತಿ ವೇದವತಿ ಹಾಗೂ ರಂಭೆಯ ಮೇಲೆ ಆಕ್ರಮಣ ಮಾಡುವಾಗಲೂ ನಾನು ಕೊಂಚವೂ ವಿವೇಚನೆ ಮಾಡಲಿಲ್ಲ. ಹೀಗಾಗಿ ನನಗೆ ಅವರಿಂದ ಶಾಪ ಬಂತು. ಆದ್ದರಿಂದ ದುಷ್ಕಾರ್ಯಗಳ ಆಲೋಚನೆ ಹುಟ್ಟಿದರೆ ಅದನ್ನು ಸಾಧ್ಯವಾದಷ್ಟೂ ಮುಂದೂಡುವುದು ರಾಜನಿಗೆ ಒಳ್ಳೆಯದು''- ಹೀಗೆಂದು ರಾವಣನು ಹೇಳಿದನು.
ಎರಡನೆಯ ಕಥೆ: ರಾಕ್ಷಸ ನಾಶದ ಬಗ್ಗೆ ಲಕ್ಷ್ಮಣ ನೀಡಿದ ವಿವರಣೆ
ಅಯೋಧ್ಯೆಯಲ್ಲಿ ರಾಮನು ಸಿಂಹಾಸನವೇರಿದ ಮೇಲೆ ಕೆಲವು ಋಷಿಗಳು ರಾಕ್ಷಸ ನಾಶದ ಬಗ್ಗೆ ತಿಳಿದುಕೊಳ್ಳಲು ಬಯಸಿದರು. ಆಗ ರಾಮನು "ನಾನು ರಾವಣ ಕುಂಭಕರ್ಣರನ್ನು ಸಂಹರಿಸಿದೆ. ಲಕ್ಷ್ಮಣನು ಅತಿಕಾಯ ಮತ್ತು ಇಂದ್ರಜಿತುಗಳನ್ನು ನಾಶ ಮಾಡಿದ'' ಎಂದ.
'ಇಂದ್ರಜಿತು ಅಸಾಮಾನ್ಯ ಹೋರಾಟಗಾರ. ವರಬಲ ಮತ್ತು ಮಾಯಾ ವಿದ್ಯೆಗಳಿಂದಾಗಿ ಅದ್ಭುತ ರಾಕ್ಷಸನಾಗಿದ್ದ. ಅವನನ್ನು ಲಕ್ಷ್ಮಣನು ಸಂಹರಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ" ಎಂದು ಅಗಸ್ತ್ಯರು ಹೇಳಿದರು. 'ಇಂದ್ರಜಿತು ಎಷ್ಟು ಪರಾಕ್ರಮಿ ಹಾಗೂ ಬಲಿಷ್ಠನೆಂದರೆ ಅವನನ್ನು ಸೋಲಿಸುವಾತ ಹದಿನಾಲ್ಕು ವರ್ಷಗಳ ಕಾಲ ಉಪವಾಸ ಜಾಗರಣೆ ಮಾಡಿರಬೇಕು. ಜತೆಗೆ ಪೂರ್ತಿಯಾಗಿ ಬ್ರಹ್ಮಚರ್ಯ ಪಾಲಿಸಬೇಕು'' ಎಂದು ಅವರು ನುಡಿದರು.
ಕೂಡಲೇ ರಾಮನು ಲಕ್ಷ್ಮಣನನ್ನು ಕರೆದು ''ತಮ್ಮ, ನನಗೆ ತಿಳಿದ ಪ್ರಕಾರ ನೀನು ನನ್ನ ಹಾಗೆ ಹಣ್ಣುಗಳನ್ನು ಸೇವಿಸಿದೆ. ಬೇರೊಂದು ಗುಡಿಸಲಲ್ಲಿ ವಿಶ್ರಾಂತಿ ತೆಗೆದುಕೊಂಡೆ. ಉಪವಾಸ ಜಾಗರಣೆ ಮಾಡಿದ್ದು ನಿಜವೇ?'' ಎಂದು ಪ್ರಶ್ನಿಸಿದ.
ಲಕ್ಷ್ಮಣ ಕೊಟ್ಟ ಉತ್ತರ ಹೀಗಿತ್ತು- "ಅಣ್ಣಾ, ವನವಾಸದ ಅವಧಿಯಲ್ಲಿ ನಾನು ಪ್ರತೀ ದಿನ ಸ್ವಾದಿಷ್ಟವಾದ ಹಣ್ಣುಗಳನ್ನು ನಿನಗೆ ಕೊಡುತ್ತಿದ್ದೆ. ಆಗ ನೀನು ಅವನ್ನು ಮೂರು ಪಾಲು ಮಾಡಿ ಒಂದು ಪಾಲು ನನಗೆ ಕೊಡುತ್ತಿದ್ದೆ. ಆದರೆ ನಾನು ಅವುಗಳನ್ನು ತಿನ್ನದೆ ಉಪವಾಸ ಮಾಡಿದೆ. ರಾತ್ರಿಯ ಹೊತ್ತು ನೀವಿಬ್ಬರೂ ಮಲಗಿದ ಮೇಲೆ ನಾನು ಪಕ್ಕದ ಗುಡಿಸಲಲ್ಲಿ ಕುಳಿತುಕೊಳ್ಳುತ್ತಿದ್ದೆ. 14 ವರ್ಷಗಳ ಕಾಲ ನಿದ್ದೆಯನ್ನೇ ಮಾಡಲಿಲ್ಲ''.
''ಹಾಗಾದರೆ ನಿನ್ನ ಪಾಲಿಗೆ ಬಂದ ಹಣ್ಣುಗಳನ್ನು ಏನು ಮಾಡಿದೆ?''. 'ಅವನ್ನೆಲ್ಲ ಎಲೆಗಳ ಮೂಡೆ ಮಾಡಿ ಅದರಲ್ಲಿ ಇರಿಸಿದೆ". ಮೂಡೆಯನ್ನು ತರಿಸಿ ನೋಡಿದಾಗ ಒಟ್ಟು ಏಳು ದಿವಸಗಳ ಪಾಲು ಅದರಲ್ಲಿ ಇರಲಿಲ್ಲ. ಲಕ್ಷ್ಮಣ ಇದಕ್ಕೆ ಕೊಟ್ಟ ವಿವರಣೆ ಹೀಗಿತ್ತು. 'ತಂದೆಯ ನಿಧನ ವಾರ್ತೆ ಕೇಳಿದ ದಿವಸ ನಾವು ಮೂವರೂ ಉಪವಾಸ ಇದ್ದೆವು. ಸೀತತ್ತಿಗೆಯನ್ನು ರಾವಣನು ಕದ್ದ ದಿವಸ ದುಃಖದಲ್ಲಿ ಏನೂ ಬೇಡವೆನಿಸಿತು. ಇಂದ್ರಜಿತು ನಮ್ಮನ್ನು ಬಂಧಿಸಿದ ದಿವಸ ಮತ್ತು ಮಹಿರಾವಣನು ನಮ್ಮನ್ನು ಪಾತಾಳಕ್ಕೆ ಒಯ್ದ ದಿನ ಹಣ್ಣು ಸಂಗ್ರಹಿಸಲಿಲ್ಲ. ರಾವಣನು ನನ್ನನ್ನು ಗಾಯಗೊಳಿಸಿದ ದಿವಸ, ಮಾಯಾ ಸೀತೆಯ ವಧೆಯಾದ ದಿವಸ ಹಾಗೂ ರಾವಣ ಸಂಹಾರದ ದಿನ ಊಟವೇ ಮರೆತು ಹೋಯಿತು''.
ಮಾತು ಮುಂದುವರಿಸಿದ ಲಕ್ಷ್ಮಣ, "ಅಣ್ಣಾ, ನಿಜಕ್ಕೂ ನಾನು ಹದಿನಾಲ್ಕು ವರ್ಷಗಳ ಕಾಲ ಏನನ್ನೂ ತಿನ್ನಲಿಲ್ಲ. ಹಿಂದೆ ನಾವು ವಿಶ್ವಾಮಿತ್ರರ ಜತೆಗೆ ಹೋದಾಗ ನಿರಾಹಾರದ ರೂಢಿಯಾಗಿತ್ತು. ವನವಾಸದ ವೇಳೆ ಅದು ಪ್ರಯೋಜನಕ್ಕೆ ಬಂತು. ಉಪವಾಸ ಮತ್ತು ಜಾಗರಣೆಗಳ ಕಾರಣದಿಂದ ನನಗೆ ಇಂದ್ರಜಿತುವನ್ನು ಕೊಲ್ಲುವ ಶಕ್ತಿ ಬಂತು'' ಎಂದು ತನ್ನ ಅಪಾರ ಶಕ್ತಿ ಸಂಚಯನದ ರಹಸ್ಯವನ್ನು ಹೊರಗೆಡಹಿದ.
- ಪ್ರೊ. ವಿ.ಬಿ ಅರ್ತಿಕಜೆ, ಪುತ್ತೂರು
ಲೇಖಕರ ಸಂಕ್ಷಿಪ್ತ ಪರಿಚಯ:
ಪ್ರೊ | ವಿ.ಬಿ ಅರ್ತಿಕಜೆ, ನಿವೃತ್ತ ಪ್ರಾಧ್ಯಾಪಕರು, ಹಿರಿಯ ಪತ್ರಕರ್ತರು ಮತ್ತು ಲೇಖಕರು. ಕಥೆಗಳು, ಜೀವನಚರಿತ್ರೆ, ಹಾಸ್ಯ, ಚಿಂತನೆ ಮತ್ತು ವೈಚಾರಿಕ ಲೇಖನಗಳನ್ನು ಒಳಗೊಂಡ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ದೀರ್ಘಕಾಲ ಪುತ್ತೂರಿನ ಕರ್ನಾಟಕ ಸಂಘ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಪತ್ರಿಕಾ ತರಬೇತಿ ನೀಡಿದ್ದಾರೆ. ಹವ್ಯಕ ಭಾಷೆಯ ವೃದ್ಧಿಗೆ ಶ್ರಮಿಸಿದ್ದು ಹತ್ತಾರು ಹವ್ಯಕ ಲೇಖಕರನ್ನು ಸಿದ್ಧಗೊಳಿಸಿದ್ದಾರೆ.
ವಿಳಾಸ: ವಿ.ಬಿ.ಅರ್ತಿಕಜೆ, ಶ್ರೀನಿಲಯ, ಶಿವಪೇಟೆ, ಪುತ್ತೂರು-574201.
ಸಂಪರ್ಕ: 93419 14254
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ