ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್ - ಶ್ರೀಸಂಸ್ಥಾನಗೋಕರ್ಣ - ಶ್ರೀರಾಮಚಂದ್ರಾಪುರಮಠ
ಧರ್ಮತ್ತಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲ ಸಭೆಯು ಫೆ.25ರಂದು ಧರ್ಮತ್ತಡ್ಕದ ಗುಂಪೆ ವಲಯ ಕಛೇರಿಯಲ್ಲಿ ಜರಗಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆ ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಗುಂಪೆ ವಲಯಾಧ್ಯಕ್ಷರ ಸ್ವಾಗತದ ನಂತರ ಭಗವದ್ಗೀತೆ ಪಾರಾಯಣ ಹಾಗೂ ಭಜನೆ ನಡೆಯಿತು.
ಗಣೇಶ ಪಂಚರತ್ನ ಸ್ತೋತ್ರದೊಂದಿಗೆ ಆರಂಭವಾದ ಮಂಡಲ ಸಭೆಯ ಅಧ್ಯಕ್ಷತೆಯನ್ನು ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾಡಾವು ವಹಿಸಿದರು. ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿಯನ್ನು ವಾಚಿಸಿದರು.
ಸಭೆಗೆ ಅಭ್ಯಾಗತರಾಗಿ ಆಗಮಿಸಿದ ಹೊಸನಗರ ಮಹಾನಂದಿ ಗೋಲೋಕದ ಸಂಚಾಲಕರಾದ ಕೆ.ಪಿ. ಎಡಪ್ಪಾಡಿ ಅವರು ಮಹಾನಂದಿ ಗೋಲೋಕದ ಮಾಹಿತಿಗಳನ್ನು ನೀಡಿ ಕೃಷ್ಣಾರ್ಪಣಂ, ವಿಷ್ಣು ಪದಮ್, ವಿಷ್ಣು ಸಹಸ್ರನಾಮ ಲೇಖನ ಯಜ್ಞ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ನೀಡಿದರು.
ವಿವಿಧ ವಲಯಗಳ ಪ್ರಧಾನರು ವಲಯದ ವರದಿಗಳನ್ನು ನೀಡಿದರು.
ವೇಣುಗೋಪಾಲ ಕೆದ್ಲ ಭಾವರಾಮಾಯಣ ಚಂದಾದಾರನ್ನು ಹೆಚ್ಚಿಸಬೇಕಾದ ಅಗತ್ಯತೆಯನ್ನು ತಿಳಿಸಿ ಮಾಣಿಮಠದಲ್ಲಿ ಜರಗಿದ ವಾರ್ಷಿಕೋತ್ಸವ ಕಾರ್ಯಕ್ರಮಗಳ ಲೆಕ್ಕಪತ್ರ ಮಂಡಿಸಿದರು. ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಮನೆ ಹಣದ ಮಹತ್ವ ಹಾಗೂ ಸಂಘಟನೆಯ ಮಹತ್ವವನ್ನು ತಿಳಿಸಿ ಶ್ರೀ ಗುರುಗಳ ಯೋಜನೆಗಳಿಗೆ ಎಲ್ಲಾ ವಲಯದವರು ಕೈಜೋಡಿಸಿ ಸಹಕರಿಸಬೇಕೆಂದು ತಿಳಿಸಿದರು. ಮಂಡಲ ಪ್ರಧಾನರು ವಿಭಾಗಾವಾರು ವರದಿಗಳನ್ನು ಸಲ್ಲಿಸಿದರು. ಅಧ್ಯಕ್ಷರು ಮಹಾಮಂಡಲ ಸುತ್ತೋಲೆಯ ವಿವರಗಳನ್ನು ನೀಡಿದರು.
ಮಾರ್ಚ್ 16 ರಂದು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ಗುರಿಕಾರರ ಮಾರ್ಗದರ್ಶನ ಸಮಾವೇಶಕ್ಕೆ ಎಲ್ಲಾ ವಲಯಗಳ ಗುರಿಕಾರರು ಹಾಗೂ ಪದಾಧಿಕಾರಿಗಳು ಭಾಗವಹಿಸಬೇಕೆಂದು ಮಂಡಲ ಗುರಿಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಆಹ್ವಾನ ನೀಡಿದರು. ಈಶಕುಮಾರ್ ಉಬರಡ್ಕ ಅವರು ಸ್ವರ್ಣ ಪಾದುಕೆಯ ಮಹತ್ವವನ್ನು ತಿಳಿಸಿ ವಿವಿಧ ವಲಯಗಳಲ್ಲಿ ಸ್ವರ್ಣ ಪಾದುಕಾ ಸಂಚಾರದ ಬಗ್ಗೆ ಮಾಹಿತಿಗಳನ್ನು ನೀಡಿದರು.
ಮಹಾಮಂಡಲದಲ್ಲಿ ಜರಗಿದ ವಿದ್ಯಾರ್ಥಿ- ಯುವ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಗುಂಪೆ ವಲಯದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಹಿರಿಯರಾದ ಬಾಯಾಡಿ ವೆಂಕಟ್ರಮಣ ಭಟ್ ಹಾಗೂ ಗೃಹಿಣಿಯಾಗಿದ್ದುಕೊಂಡು ಶೈಕ್ಷಣಿಕ ಸಂಸ್ಥೆಯ ಪ್ರಬಂಧಕರಾಗಿ ಅದರ ಅಭಿವೃದ್ಧಿಗೆ ಕೊಡುಗೆ ನೀಡಿದ ಶಾರದಾ ಅಮ್ಮ ನೇರೋಳು ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಮಾತೃತ್ವಮ್ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದ ಮಾಸದ ಮಾತೆ ಪ್ರಸನ್ನಾ ವಿ. ಚೆಕ್ಕೆಮನೆಯವರಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಶ್ರೀಗುರುಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು ವಲಯಗಳಿಂದಲೇ ತಳಮಟ್ಟದ ಸಹಕಾರ ಅಗತ್ಯವಿದೆ. ಇದನ್ನರಿತು ಮಂಡಲದ ಎಲ್ಲಾ ವಲಯಗಳು ಸಹಕರಿಸಬೇಕೆಂದು ಕೃಷ್ಣಮೂರ್ತಿ ಮಾಡಾವು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕರೆ ನೀಡಿದರು.
ವೇದಮೂರ್ತಿ ಪಂಜರಿಕೆ ಗಣಪತಿ ಭಟ್ಟರ ನೇತೃತ್ವದಲ್ಲಿ ಗಣಪತಿ ಹೋಮ, ಶಿವಪೂಜೆ, ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು. ರಾಮ ತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಸಂಪನ್ನವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ