ಮಂಗಳೂರು/ ವಿಟ್ಲ: ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕೊರತಿಕಟ್ಟೆ-ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ ಫೆಬ್ರುವರಿ 22ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅತ್ಯಂತ ಪುರಾತನವಾಗಿ ಆರಾಧಿಸಿಕೊಂಡು ಬಂದ ಭಂಡಾರದ ಮನೆ ಮತ್ತು ದೈವಗಳ ಗುಡಿಮಾಡಗಳು ಪ್ರಶ್ನಚಿಂತನೆಯಲ್ಲಿ ಕಂಡುಬಂದ ಪ್ರಕಾರ ಜೀರ್ಣೋದ್ಧಾರಗೊಂಡಿದ್ದು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ವ್ಯಾಘ್ರಚಾಮುಂಡಿ, ಉಳ್ಳಾಕ್ಲು ಕೊರತಿದೈವ ಮತ್ತು ಗುಳಿಗ ದೈವ ಹಾಗೂ ನಾಗಸನ್ನಿದಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ದೈವಸ್ಥಾನ ಸಮಿತಿ ಗೌರವಾಧ್ಯಕ್ಷ ಈಶ್ವರ ಪ್ರಸನ್ನ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೇವತಾಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ತಂಬಿಲ ಸೇವೆ, ನಾಗಬನದಲ್ಲಿ ತಂಬಿಲ ಸೇವೆ, ಮಂಗಳಾರತಿ, ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಹೊರೆಕಾಣಿಕೆ ಸಮರ್ಪಣೆ ಮತ್ತು ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಮಾಡತ್ತಾರು ಕ್ಷೇತ್ರದಲ್ಲಿ ನಡೆಯಲಿದೆ.
ಸಂಜೆ ಅತ್ತೆಜಾಲು ಭಂಡಾರದ ಮನೆಯಿಂದ ಮಾಡತ್ತಾರು ದೈವಸ್ಥಾನಕ್ಕೆ ಬಂಡಾರ ಬಂದು, ಕ್ಷೇತ್ರದಲ್ಲಿ ಭಂಡಾರ ಏರಿ ತಂಬಿಲ ಸೇವೆ ಬಳಿಕ 7.30ಕ್ಕೆ ಎಣ್ಣೆಬೂಳ್ಯ, ರಾತ್ರಿ ಪ್ರಸಾದ ಭೋಜನ ಇರುತ್ತದೆ ಎಂದು ವಿವರಿಸಿದ್ದಾರೆ. ಶ್ರೀವ್ಯಾಘ್ರಚಾಮುಂಡಿ ದೈವಕ್ಕೆ ಇಷ್ಟಾರ್ಥ ಸಿದ್ಧಿಗಾಗಿ ಚಿನ್ನ ಅಥವಾ ಬೆಳ್ಳಿ ಹೂ ಸಮರ್ಪಣೆಗೆ ವಿಶೇಷ ಅವಕಾಶ ಇರುತ್ತದೆ. ಇದೇ ಸಂದರ್ಭದಲ್ಲಿ ದೈವಸ್ಥಾನದ ಬಸವನಿಗೆ ಗೋಗ್ರಾಸಕ್ಕೂ ಅವಕಾಶವಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ