ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಘೋಷಣೆ

Upayuktha
0


ಉಜಿರೆ:
ಸುಂದರ, ಪ್ರಶಾಂತ ಪ್ರಾಕೃತಿಕ ಪರಿಸರದಲ್ಲಿ ಕಣ್ಮನ ಸೆಳೆಯುತ್ತಿರುವ ನಾಡಿನ ಖ್ಯಾತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳಕ್ಕೆ ನಿತ್ಯವೂ ಸಾವಿರಾರು ಮಂದಿ ಭಕ್ತಾದಿಗಳು ಶ್ರದ್ಧಾ-ಭಕ್ತಿಯೊಂದಿಗೆ ಬಂದು ಸೇವೆ ಮಾಡುತ್ತಾರೆ  ಪಶ್ಚಿಮಘಟ್ಟ ಪರ್ವತ ಶ್ರೇಣಿಯು ಅನೇಕ ನದಿಗಳ ಉಗಮಸ್ಥಾನವಾಗಿದೆ. ಪರಿಸರ ನಾಶದಿಂದಾಗಿ ಭೂಕಂಪ, ಬರ, ನೆರೆ, ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ.



ಪ್ಲಾಸ್ಟಿಕ್ ಬಳಕೆ ಮತ್ತು ಪ್ಲಾಸ್ಟಿಕ್‍ ತ್ಯಾಜ್ಯ ನಮ್ಮ ಆರೋಗ್ಯ ಮತ್ತು ಪರಿಸರಕ್ಕೆ ಅತ್ಯಂತ ಹಾನಿಕಾರಕವಾಗಿದ್ದು ಇಂತಹ ಪವಿತ್ರ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿ ಧರ್ಮಸ್ಥಳ ರಾಜ್ಯಕ್ಕೆ ಸ್ವಚ್ಛ, ಸುಂದರ ಗ್ರಾಮವಾಗಿ ರಾಜ್ಯಕ್ಕೆ ಮಾದರಿಯಾಗಿ ಬೆಳೆಯಲಿ. ತನ್ಮೂಲಕ ಇಡೀ ರಾಜ್ಯವೇ ಪ್ಲಾಸ್ಟಿಕ್ ಬಳಕೆ ಮುಕ್ತ ರಾಜ್ಯವಾಗಬೇಕು ಎಂದು ಅರಣ್ಯ ಮತ್ತು ಪರಿರಸ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.



ಅವರು ಸೋಮವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮವನ್ನು ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮವಾಗಿ ಘೋಷಣೆ ಮಾಡಿ ಮಾತನಾಡಿದರು. ಪ್ಲಾಸ್ಟಿಕ್ ಮಾರಾಟ ಮತ್ತು ಖರೀದಿ ಮತ್ತು ಬಳಕೆ ಸಂಪೂರ್ಣ ನಿಷೇಧಿಬೇಕು. ಯಾತ್ರಿಕರು ನೇತ್ರಾವತಿ ನದಿಯಲ್ಲಿ ಕೂಡಾ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಬಿಸಾಡುವುದನ್ನು ಅವರು ಖಂಡಿಸಿದರು. ಧರ್ಮಸ್ಥಳದ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಹಾಗೂ ಮಹಿಳಾ ಸಬಳೀಕರಣಕ್ಕೆ ಹೆಗ್ಗಡೆಯವರು ನೀಡಿದ ಸಹಕಾರವನ್ನು ಅವರು ಕೃತಜ್ಞತೆಯೊಂದಿಗೆ ಸ್ಮರಿಸಿದರು.



ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗಾಗಿ ಒಂದು ವಾರದೊಳಗೆ ಎರಡು ಹೊಸ ಯಂತ್ರಗಳನ್ನು ಖರೀದಿಸಿ ತ್ಯಾಜ್ಯ ಸಂಗ್ರಹ ಮಾಡಲಾಗುವುದು. ಪ್ಲಾಸ್ಟಿಕ್‍ತ್ಯಾಜ್ಯವನ್ನು ರಸ್ತೆ ದುರಸ್ತಿಗೆ ಮರುಬಳಕೆ ಮಾಡಲಾಗುವುದು ಎಂದರು.



ವಿದೇಶಗಳಲ್ಲಿ ಎಲ್ಲರೂ ಸ್ವಚ್ಛತೆಗೆ ಆದ್ಯತೆ ಕೊಡುವಂತೆ ನಮ್ಮಲ್ಲಿಯೂ ಸ್ವಚ್ಛತೆ ಬಗ್ಯೆ ಅರಿವು, ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರೂ ವಾರದಲ್ಲಿ ಎರಡು ದಿನ ಶನಿವಾರ-ಭಾನುವಾರ ತಮ್ಮ ಮನೆ ಮತ್ತು ಪರಿಸರ ಸ್ವಚ್ಛತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.



ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‍ಶಿವರಾಂ, ಮಂಗಳೂರುವೃತ್ತ ಸಿ.ಎಫ್.ಒ. ವಿ. ಕರಿಜಳನ್, ಕೆ.ಎಸ್.ಡಿ.ಸಿ. ಕಮಲಾ ಕರಿಕಳನ್, ಡಿ.ಎಫ್.ಒ. ಅಂಥೋನಿ, ಎಸ್. ಮರಿಯಪ್ಪ, ಎ.ಸಿ.ಎಫ್ ಶ್ರೀಧರ್, ಬೆಳ್ತಂಗಡಿ ವಲಯಅರಣ್ಯಾಧಿಕಾರಿ ಮೋಹನ್ ಕುಮಾರ್, ಉಪ್ಪಿನಂಗಡಿ ವಲಯಅರಣ್ಯ ಅಧಿಕಾರಿ, ಜಯಪ್ರಕಾಶ್ ಕೆ.ಕೆ. ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.



ಸುದ್ದಿಗೋಷ್ಠಿ: ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಅರಣ್ಯ ಸಚಿವರು, ಬೆಳ್ತಂಗಡಿ ತಾಲ್ಲೂಕಿನಲ್ಲಿ ಡೀಮ್ಡ್ ಅರಣ್ಯ1 ಮತ್ತು ಡೀಮ್ಡ್ ಅರಣ್ಯ 2 ಎಂಬ ವಿಭಾಗಗಳಿವೆ. ಡೀಮ್ಡ್ ಅರಣ್ಯ 1ನ್ನು ಬಿಡಲು ಸಾಧ್ಯವಿಲ್ಲ. ಡೀಮ್ಡ್ ಅರಣ್ಯ 2 ವಿಭಾಗದಲ್ಲಿ ಮೂರು ಲಕ್ಷದ ಮೂವತ್ತು ಸಾವಿರ ಹೆಕ್ಟೇರ್ ಅರಣ್ಯಪ್ರದೇಶವಿದ್ದು ಇದರಲ್ಲಿ ಜನವಸತಿ, ಶಾಲೆ ಇದ್ದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಕಂದಾಯಇಲಾಖೆ ಮತ್ತು ಅರಣ್ಯಇಲಾಖೆ ಜಂಟಿಸರ್ವೆ ಬಳಿಕ, ಗಡಿ ಗುರುತಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.



ಕಳೆಂಜದಲ್ಲಿ ಅರಣ್ಯ ಪ್ರದೇಶದಲ್ಲಿ  ಕಟ್ಟಿದ ಮನೆ ತೆರವು ಪ್ರಕರಣದ ಬಗ್ಯೆ ತನಿಖಾ ವರದಿ ಬಂದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಕೃಷಿಗೆ ಕಾಡಾನೆಗಳ ಕಾಟದ ಬಗ್ಯೆ ಸಚಿವರ ಗಮನ ಸೆಳೆದಾಗ, ಕೃಷಿ ಹಾನಿಗೆ ಈಗಾಗಲೆ 35 ಕೋಟಿ ರೂ. ಪರಿಹಾರ ನೀಡಲಾಗಿದೆ. ಕಾಡಾನೆಗಳ ಕಾಟ ತಪ್ಪಿಸಲು ಆನೆಕಂದಕ, ಸೋಲಾರ್‍ಬೇಲಿ, ರೇಡಿಯೊ ಕಾಲರ್ ಬಳಕೆ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುವುದು.



ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅರಣ್ಯಕ್ಕೆ ಯಾರೂ ಬೆಂಕಿ ಹಚ್ಚಬಾರದು. ಇದು ಮಹಾಪಾಪದ ಕೆಲಸವಾಗಿದೆ. ಕಾಡ್ಗಿಚ್ಚು ಹಬ್ಬದಂತೆ ಜನರು ಕೂಡಾ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.



ಹೆಗ್ಗಡೆಯವರ ಭೇಟಿ: ಸಚಿವ ಈಶ್ವರ ಖಂಡ್ರೆ, ಪತ್ನಿ ಗೀತಾ ಖಂಡ್ರೆ ಹಾಗೂ ಪತ್ರರಾದ ಸಾಗರ್ ಖಂಡ್ರೆ ಮತ್ತು ಗುರು ಖಂಡ್ರೆ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.  ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿ, ಆಶೀರ್ವಾದ ಪಡೆದರು. ಹೆಗ್ಗಡೆಯವರನ್ನು ಸಚಿವರು ಶ್ರದ್ಧಾ-ಭಕ್ತಿಯಿಂದ ಗೌರವಿಸಿದರು. ತಮ್ಮ ಇಲಾಖೆಯ ಯೋಜನೆಗಳ ಬಗ್ಯೆ ಮಾತುಕತೆ ನಡೆಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top