ಒಂದು ಬಹು ವಿಶಾಲವಾದ ಸಾಮ್ರಾಜ್ಯ, ಅದಕ್ಕೆ ಬಲಾಢ್ಯವಾದ ರಾಜನಿದ್ದ ಆತ ಒಂದು ದಿನ ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಮೂರ್ಖರು ಇರಬಹುದೇ ಎಂದು ಕುಳಿತುಕೊಂಡು ಆಲೋಚಿಸಿದ ಅದಕ್ಕಾಗಿ ತನ್ನ ರಾಜ್ಯದಲ್ಲಿರುವ ಮೂರ್ಖರಿಗಾಗಿ ಒಂದು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ. ಆ ತಕ್ಷಣಕ್ಕೆ ಮಂತ್ರಿಗಳನ್ನ ಕರೆದು ನಮ್ಮ ರಾಜ್ಯದಲ್ಲಿರುವ ಮೂರ್ಖರ ಪಟ್ಟಿಯನ್ನ ಮಾಡು ಅವರನೆಲ್ಲರನ್ನ ಸನ್ಮಾನಿಸೋಣ ಎಂದು ಹೇಳಿದ.
ಆಗ ಮಂತ್ರಿ ಇಡೀ ರಾಜ್ಯದ ತುಂಬಾ ಡಂಗೂರವನ್ನ ಸಾರಿದ ಮೂರ್ಖರಿಗೆ ಸನ್ಮಾನ ಕಾರ್ಯಕ್ರಮ ಇದೆ ತಮ್ಮ ಹೆಸರನ್ನು ನೋಂದಾಯಿಸಿ ಎಂದ ಆದರೆ ಒಬ್ಬನು ಸಹ ತಾನು ಮೂರ್ಖನೆಂದು ಮುಂದೆ ಬರಲಿಲ್ಲ, ಯಾವ ವ್ಯಕ್ತಿಯು ತನ್ನನ್ನು ತಾನು ಮೂರ್ಖನೆಂದು ಒಪ್ಪಿಕೊಳ್ಳುವುದಿಲ್ಲ. ಪ್ರತಿಯೊಬ್ಬನು ತನ್ನನ್ನು ತಾನು ಬುದ್ಧಿವಂತನೇ ಎಂದು ಭಾವಿಸಿಕೊಂಡಿರುತ್ತಾನೆ. ಹಾಗಿರುವಾಗ ತನ್ನನ್ನು ತಾವು ಮೂರ್ಖನೆಂದು ಹೇಳಿಕೊಂಡು ಮುಂದೆ ಬರಲು ಹೇಗೆ ಸಾಧ್ಯ. ಯಾವೊಬ್ಬ ವ್ಯಕ್ತಿಯು ಬರದೇ ಇರುವುದನ್ನ ಮಂತ್ರಿ ರಾಜರ ಬಳಿಗೆ ಹೋಗಿ ಹೇಳಿದ.
ಆಗ ರಾಜ ಕೋಪಗೊಂಡು ಕಾರ್ಯಕ್ರಮವನ್ನ ನಿಗದಿಪಡಿಸಿದೆ ಅತಿಥಿಗಳಿಗೆ ಆಮಂತ್ರಣವನ್ನ ಕೊಟ್ಟಿದೆ ಆ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾದ ಮೂರ್ಖರೇ ಬರಲಿಲ್ಲವೆಂದರೆ ಹೇಗದು' ಹೇಗಾದರೂ ಮಾಡಿ ನೀನು ರಾಜ್ಯದಲ್ಲಿರುವ ಒಬ್ಬ ಮೂರ್ಖನನ್ನಾದರೂ ಕರೆ ತರಲೇಬೇಕು ಇಲ್ಲವಾದರೆ ನಿನಗೆ ಗಲ್ಲುಶಿಕ್ಷೆ ನೀಡಬೇಕಾಗುತ್ತದೆ ಎಂದು ಮಂತ್ರಿಗೆ ಹೇಳಿದ. ಇದರಿಂದ ಮಂತ್ರಿ ಭಯಭೀತನಾಗಿ ತನ್ನ ಪ್ರಾಣವನ್ನ ಉಳಿಸಿಕೊಳ್ಳುವುದಕ್ಕಾಗಿ ರಾಜ್ಯದ ತುಂಬಾ ತಾನೇ ಅಲಿದಾಡತೊಡಗಿದ.
ರಾಜ್ಯದ ಎಲ್ಲಾ ಹಳ್ಳಿಗಳನ್ನು ಸುತ್ತಿದ ಆದರೂ ಯಾವೊಬ್ಬ ಮೂರ್ಖನು ಅವನಿಗೆ ಸಿಗಲಿಲ್ಲ ಇನ್ನೇನು ತನ್ನ ಕಥೆ ಮುಗಿಯಿತೆಂದು ಅರಣ್ಯದ ಮದ್ಯ ಹಾದು ರಾಜ್ಯಕ್ಕೆ ಬರುವಾಗ ಅಲ್ಲೊಂದು ಮಹರ್ಷಿಯ ಆಶ್ರಮ ಅವರ ಬಳಿ ಹೋಗಿ ದಣಿವಾರಿಸಿಕೊಂಡು ರಾಜ್ಯಕ್ಕೆ ಹೋದರಾಯಿತೆಂದು ಆಶ್ರಮದ ಬಳಿ ಹೋದ ಋಷಿಗಳು ಮಂತ್ರಿಗೆ ನೀರು ಕೊಟ್ಟರು ಮಂತ್ರಿಗಳೇ ಏನೋ ಬಹಳ ಭಯದಲ್ಲಿ ಇರುವಂತೆ ಕಾಣುತ್ತಿದೆ, ಎಂದು ಋಷಿಗಳು ಕೇಳಿದಾಗ ಮಂತ್ರಿ ಹೇಳಿದ ಗುರುಗಳೇ ರಾಜ್ಯದಲ್ಲಿ ಯಾರಾದರೂ ಮೂರ್ಖರು ಇದ್ದರೆ ಕರೆದುಕೊಂಡು ಬಾ ಎಂದು ಮಹಾರಾಜ ಹೇಳಿದ್ದಾನೆ.
ಆದರೆ ಒಬ್ಬೇ ಒಬ್ಬ ಮೂರ್ಖ ಸಿಗುತ್ತಿಲ್ಲ ಎಂದಾಗ ಋಷಿಗಳು ರಾಜ್ಯದಲ್ಲಿ ಒಬ್ಬನು ಮೂರ್ತ ಇಲ್ಲ ಎಂದರೆ ಅದಕ್ಕೆ ಸಂತೋಷಪಡುವುದಲ್ಲವೇ! ಅದಕ್ಕೆ ಇಷ್ಟು ದುಃಖ ಪಡುವುದು ಎಂದು ಕೇಳಿದರು, ಆಗ ಮಂತ್ರಿ ಹೇಳಿದ ಇಲ್ಲ ಋಷಿಗಳೇ ಒಬ್ಬನು ಮೂರ್ಖನನ್ನ ಕರೆದುಕೊಂಡು ಬರದೇ ಹೋದರೆ ನನ್ನನ್ನ ಕೊಲ್ಲುತ್ತೇನೆ ಎಂದು ನಮ್ಮ ರಾಜ ಹೇಳಿದ್ದಾನೆ ಅದಕ್ಕಾಗಿ ಅವನ ಕೈಯಲ್ಲಿ ಸಾಯುವ ಸಮಯ ಬಂದಿದೆ ಅದರಿಂದ ಭಯಭೀತನಾಗಿರುವುದು ಎಂದ.
ಆಗ ಋಷಿಗಳು ಹೇಳಿದರು ಅಷ್ಟೇನಾ ನಿನಗೊಬ್ಬ ಮೂರ್ಕಬೆಕು ಹೌದಲ್ಲವೇ ನಾನೇ ಬರುತ್ತೇನೆ ನಡೆ ಹೋಗೋಣ ಎಂದು ಋಷಿಗಳು ಹೇಳಿದರು, ಆಗ ಮಂತ್ರಿ ಹೇಳಿದ ನೀವು ಮಹರ್ಷಿಗಳು ನೀವು ಜ್ಞಾನಿಗಳು ನೀವು ಹೇಗೆ ಮೂರ್ಖರಾಗುತ್ತೀರಿ ಎಂದಾಗ ಋಷಿಗಳು ಹೇಳಿದರು ಸನ್ಯಾಸಿಗಳೇ , ಸಂತೆರೆ ಮೂರ್ಖರಾಗಿರುವುದು ಅವರಿಗಿಂತ ಮೂರ್ಖರು ಮತ್ಯಾರಿದ್ದಾರೆ ಈ ಜಗತ್ತಿನಲ್ಲಿ ಬುದ್ಧಿವಂತನಾದವನು ತಾನು ತನ್ನ ಪರಿವಾರ ತನ್ನ ಗಳಿಕೆ ಎಂದು ಅದರಲ್ಲಿ ಮಗ್ನನಾಗಿರುತ್ತಾನೆ. ಆದರೆ ಮೂರ್ಖರು ಆಗಿರುವ ನಮ್ಮಂತವರೇ ಜ್ಞಾನ, ತಪಸ್ಸು, ಜನಕಲ್ಯಾಣ ಎಂದು ಮೂರ್ಖರಾಗಿರುತ್ತೇವೆ ಅದಕ್ಕಾಗಿ ನನ್ನನ್ನು ಕರೆದುಕೊಂಡು ಹೋಗು ಎಂದು ಋಷಿಗಳು ಹೇಳಿದಾಗ ಮಂತ್ರಿ ಆಲೋಚಿಸಿದ ನನ್ನ ಪ್ರಾಣ ಉಳಿದರೆ ಸಾಕು ತಾವಾಗಿ ನಾನು ಮೂರ್ಖನೆಂದು ಬರುತ್ತಿರುವಾಗ ಈ ಅವಕಾಶವನ್ನೇಕೆ ನಾನು ಕಳೆದುಕೊಳ್ಳಲಿ ಎಂದು ಆ ಋಷಿಗಳನ್ನು ಕರೆದುಕೊಂಡು ಅರಮನೆಯ ಕಡೆಗೆ ಹೊರಟ.
ರಾಜರ ಬಳಿ ಕರೆದುಕೊಂಡು ಬಂದು ರಾಜರೇ ಇವರೇ ಮೂರ್ಖರು ಕರೆದುಕೊಂಡು ಬಂದಿದ್ದೇನೆ ನೋಡಿ ಸನ್ಮಾನ ಮಾಡಿ ಎಂದ. ಆಗ ರಾಜ ತಕ್ಷಣಕ್ಕೆ ಇವರನ್ನು ಮೂರ್ಖರೆಂದು ಒಪ್ಪಿಕೊಳ್ಳದೆ ಇವರನ್ನು ಪರೀಕ್ಷಿಸಲು ನಿರ್ಧರಿಸಿದ ಒಂದು ಬುಟ್ಟಿ ಒಳಗೆ ಮುತ್ತು ರತ್ನ ಚಿನ್ನ ವಜ್ರ ವೈಡೂರ್ಯಗಳನ್ನ ಇಟ್ಟು ಆ ಋಷಿಗಳ ಕೈಯಲ್ಲಿ ಕೊಟ್ಟ ಇದನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದ ಆಗ ಋಷಿಗಳು ಅದನ್ನ ತೆಗೆದುಕೊಂಡು ಹೋಗುವಾಗ ರಾಜ ಇವರಿಗೆ ಗೊತ್ತಿಲ್ಲದ ಹಾಗೆ ಒಬ್ಬ ಗುಪ್ತಚರರನ್ನ ನೇಮಿಸಿ, ಈ ವಜ್ರ ವೈಡೂರ್ಯಗಳನ್ನ ಋಷಿಗಳು ಎಲ್ಲಿ ಒಯ್ಯುತ್ತಾರೆ ನೋಡು ಎಂದು ಕಳಿಸಿದ ಅರಮನೆಯಿಂದ ಹೊತ್ತು ಕೊಂಡ ಬಂದ ಬುಟ್ಟಿಯನ್ನು ಋಷಿಗಳು ಆ ಅರಮನೆಯ ಆವರಣದಲ್ಲಿರುವ ತಿಪ್ಪೆ ಗುಂಡಿಗೆ ಎಸೆದರು ಇದನ್ನ ಆ ಗುಪ್ತಚರನ್ನು ಬಂದು ರಾಜರಿಗೆ ಹೇಳಿದ ಆಗ ರಾಜ ಕರೆದು ಇವರು ಸರಿಯಾದ ಮೂರ್ಖರು ಇವರು ಬುದ್ಧಿವಂತರಾದರೆ ಅದನ್ನ ತಮ್ಮ ಆಶ್ರಮಕ್ಕೆ ಒಯ್ಯುತ್ತಿದ್ದರು ಬೆಲೆ ಬಾಳುವ ವಜ್ರಗಳನ್ನ ತಿಪ್ಪಿಗೆ ಎಸಿದಿದ್ದಾರೆ ಎಂದರೆ ಇವರೇ ಮೂರ್ಖರು ಸನ್ಮಾನಕ್ಕೆ ಯೋಗ್ಯರು ಎಂದು ಅವರಿಗೆ ಸನ್ಮಾನ ಮಾಡಿ ಶಾಲು ಹಾರವನ್ನ ಹಾಕಿ ಪ್ರಶಸ್ತಿ ಪ್ರಮಾಣವನ್ನು ಕೊಟ್ಟ.
ಇದಾದ ಕೆಲವು ವರ್ಷಗಳ ನಂತರ ರಾಜನ ಆರೋಗ್ಯ ಹದಗೆಟ್ಟಿತು ರಾಜ್ಯ ವೈದ್ಯರೆಲ್ಲರೂ ಇನ್ನು ರಾಜ ಬಹಳ ದಿನ ಬದುಕುವುದಿಲ್ಲ ಎಂದು ಹೇಳಿಬಿಟ್ಟರು. ಈ ಸುದ್ದಿ ಇಡಿ ಸಾಮ್ರಾಜ್ಯದ ತುಂಬೆಲ್ಲ ಹರಡಿತು ಅದು ಆ ಮಹರ್ಷಿಗಳಿಗೂ ತಿಳಿಯಿತು ತಕ್ಷಣಕ್ಕೆ ಅಂದು ರಾಜ್ಯ ಮಾಡಿದ ಸನ್ಮಾನದ ಪ್ರಶಸ್ತಿ ಫಲಕ ಶಾಲು ಹಾರವನ್ನು ಹಿಡಿದುಕೊಂಡು ಅರಮನೆಗೆ ಬಂದು ದ್ವಾರಪಾಲಕರ ಅನುಮತಿಯನ್ನ ಪಡೆದು ರಾಜನಿರುವ ಕೋಣೆಗೆ ಹೋಗಿ ಮಲಗಿರುವ ರಾಜನನ್ನ ಎಚ್ಚರಿಸಿ ಅಂದು ಅವನು ಮಾಡಿದ ಸನ್ಮಾನವನ್ನ ಮಾಡಿ ಆ ರಾಜನಿಗೆ ಪ್ರಶಸ್ತಿ ಫಲಕವನ್ನು ಕೊಟ್ಟರು.
ಆಗ ರಾಜ ಕೇಳಿದ ಋಷಿಗಳೇ ಇದೇನು ಮಾಡುತ್ತಿರುವಿರಿ ಹಿಂದೆ ನಾನು ಮಾಡಿದ ಸನ್ಮಾನ ಮತ್ತು ನಾನು ಕೊಟ್ಟ ಪ್ರಶಸ್ತಿ ಫಲಕವನ್ನ ನನಗೆ ಏಕೆ ಹಿಂತಿರುಗಿಸುತ್ತಿದ್ದೀರಿ ಎಂದು ಕೇಳಿದಾಗ ಋಷಿಗಳು ಹೇಳಿದರು ನೀನು ನನಗೆ ಯಾವ ಕಾರಣಕ್ಕೆ ಮೂರ್ಖನೆಂದು ಸನ್ಮಾನ ಮಾಡಿರುವೇ ಎಂದಾಗ, ರಾಜ ಹೇಳಿದ ನಿಮಗೆ ಒಂದು ಬುಟ್ಟಿಯಲ್ಲಿ ಮುತ್ತು ರತ್ನ ಚಿನ್ನ ಕೊಟ್ಟಾಗ ನೀವು ಅದನ್ನ ನಿಮ್ಮ ಆಶ್ರಮಕ್ಕೆ ತೆಗೆದುಕೊಂಡು ಹೋಗದೆ ಅರಮನೆಯ ತಿಪ್ಪೆ ಗುಂಡಿಯಲ್ಲಿ ಎಸೆದಿರಿ ಆ ಸಂಪತ್ತು ಇಲ್ಲೇ ಬಿಟ್ಟು ಹೋದ ಕಾರಣಕ್ಕಾಗಿ ನೀವು ಮೂರ್ಖರೆಂದು ನಾವು ಭಾವಿಸಿ ನಿಮಗೆ ಸನ್ಮಾನ ಮಾಡಿದೆವು ಎಂದಾಗ, ಋಷಿಗಳು ಹೇಳಿದರು ರಾಜರೇ ನೀವುಗಳು ದೊಡ್ಡ ಸಾಮ್ರಾಜ್ಯವನ್ನು ಗಳಿಸಿರುವಿರಿ ಅದನ್ನು ಅನೇಕ ಮುತ್ತು ರತ್ನ ಚಿನ್ನ ವಜ್ರ ವೈಡೂರ್ಯಗಳಿಂದ ತುಂಬಿಸಿರುವಿರಿ ಆದರೆ ನಾಳೆ ನೀವು ಹೊರಟು ನಿಂತಿರುವಿರಿ ನೀವು ಹೋಗುವಾಗಲೂ ಆ ಯಾವ ಚಿನ್ನ ವಜ್ರ ವೈಡೂರ್ಯಗಳನ್ನ ಒಯ್ಯದೆ ಹೊರಟ್ಟಿರುವಿರಿ ನಾನು ಅಂದು ಬಿಟ್ಟು ಹೋದೆ ನೀನು ಇಂದು ಬಿಟ್ಟು ಹೋಗುತ್ತಿರುವಿರಿ ಅದಕ್ಕಾಗಿ ಇವತ್ತು ನೀವು ಈ ಪ್ರಶಸ್ತಿಯನ್ನು ಸ್ವೀಕರಿಸಲು ಯೋಗ್ಯರು ಎಂದು ಆ ಋಷಿಗಳು ಹೇಳಿ ಪ್ರಶಸ್ತಿಯನ್ನು ಕೊಟ್ಟರು. ಆ ಋಷಿಗಳು ಹೇಳಿದ ಮಾತು ಎಷ್ಟು ಸತ್ಯವಲ್ಲವೇ? ಸಂಪತ್ತಿನ ಗಳಿಕೆ ಹಿಂದೆ ಬಿದ್ದು ನಮ್ಮ ಆನಂದವನ್ನ ನಾವೇ ಕಳೆದುಕೊಳ್ಳುತ್ತಿದ್ದೇವೆ, ನಾವುಗಳೆಲ್ಲರೂ ಆ ರಾಜನ ಸಾಲಿಗೆ ಸೇರಿದ ಮೂರ್ಖರೇ.
- ಶ್ರೀ ರಾಮಕೃಷ್ಣದೇವರು. ಮರೆಗುದ್ದಿ
ಶ್ರೀ ಷಣ್ಮುಖಾರೂಡ ಮಠ. ವಿಜಯಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ