ಶ್ರೀರಾಮ ಕಥಾ ಲೇಖನ ಅಭಿಯಾನ-19: ಸಕಲ ಸದ್ಗುಣಗಳ ಧಾಮಾ ಶ್ರೀರಾಮಾ

Upayuktha
4 minute read
0


-ಪ್ರಿಯಾ ಪ್ರಾಣೇಶ ಹರಿದಾಸ


ಕಲ ಸದ್ಗುಣಗಳ ಧಾಮಾ, ಮಹಾ ಆದರ್ಶ ಪುರುಷನು ಎಂದು ಆದಿ ಕವಿ ವಾಲ್ಮೀಕಿ ಬಣ್ಣಿಸಿದ್ದಾನೆ. ಶ್ರೀರಾಮನು ಭಾರತೀಯರಿಗಲ್ಲದೆ ಸಮಗ್ರ ವಿಶ್ವಕ್ಕೆ ಮಾನವೀಯತೆಯ ಉದಾತ್ತ ಗುಣಗಳ ಪ್ರಭಾವ ಬಿರಬಲ್ಲ ದೇವತಾ ಪುರುಷ.


ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್ |


ಧರ್ಮಜ್ಞಶ್ರ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ ||

ಚಾರಿತ್ರೇಣ ಚ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ |

ವಿದ್ವಾನ್ ಕಃ ಕಃ ಸಮರ್ಥಶ್ಚ

ಕಶ್ಚೈ ಕಪ್ರಿಯದರ್ಶನಃ ||

ಆತ್ಮವಾನ್ ಕೋ ಜಿತಕ್ರೋಧಃ ದ್ಯುತಿಮಾನ್ ಕೋsನಸೂಯಕಃ |

ಕಸ್ಯ ಬಿಭ್ಯತಿ ದೇವಾಶ್ಚ

ಜಾತರೋಷಸ್ಯ ಸಂಯುಗೇ

ಏತದಿಚ್ಛಾಮ್ಯಹಂ ಶ್ರೋತುಂ

ಪರಂ ಕೌತೂಹಲಂ ಹಿ ಮೇ l

ಮಹರ್ಷೇ ತ್ವಂ ಸಮರ್ಥೋಸಿ

ಜ್ಞಾತುಮೇವಂ ವಿಧಂ ನರಮ್।।


ಈ ಮೇಲಿನ ಶ್ಲೋಕಗಳಲ್ಲಿ ಉಕ್ತವಾದ ಹದಿನಾರ ಮುಖ್ಯ ಕಲೆಗಳಿಂದ ಕೂಡಿದ್ದಾನೆ. ಯಾವುದೆಂದರೆ ಮಹಾ ವಿರ್ಯವಂತನು, ಜಿತೇಂದ್ರಿಯನು, ಸರ್ವಜ್ಞನು, ಶತ್ರುನಾಶಕನು, ಗುರುಹಿರಿಯರಿಗೆ ವಿಧೇಯನು, ಧರ್ಮವನ್ನು ತಿಳಿದವನು, ಸಕಲ ಪ್ರಾಣಿ ಮತ್ತು ಪ್ರಜೆಗಳ ಪೋಷಕನು, ವರ್ಣಾಶ್ರಮ ರಕ್ಷಣೆ ಮಾಡುವನು, ವಿಸ್ಮರಣೆ ಇಲ್ಲದವನು, ಶಾಂತ ಚಿತ್ತ ಅಂತಃಕರಣವುಳ್ಳವನು, ಎಲ್ಲರಲೂ ಸಮನಾದ ಪ್ರೀತಿ, ರೀತಿ, ನೀತಿವುಳ್ಳವನನು, ಹೀಗೆ ಸಮುದ್ರದಂತೆ ಗಂಭೀರನು, ಧೀರನು. 


ಹೀಗೆ ನಾರದರು ವಾಲ್ಮೀಕಿಗೆ ರಾಮನ ಗುಣವನ್ನು ವರ್ಣಿಸಿ, ರಾಮ ನಾಮ ಜಪದ ರುಚಿ ಹಚ್ಚಿಸಿ ಪ್ರೇರಣೆಗೊಂಡು, ವಿಶ್ವಕ್ಕೆ ಸರ್ವರಿಗೂ ಜೀವನ ಮಾರ್ಗದರ್ಶನವಾಗುವಂತೆ ಶ್ರೀ ಮದ್ರಾಮಾಯಣ ರಚಿಸಿದನು.


ದೋಷವಿದೂರ ಸದ್ಗುಣಿಗಳ ಧಾಮ ಶ್ರೀರಾಮ. "ರಮಯತಿ ಇತಿ ರಾಮಃ


ಈ ಆಧುನಿಕ ಜಗತ್ತಿನಲ್ಲಿ ಅತಿಯಾದ ಬುದ್ಧಿವಂತಿಕೆಯ ಜನರಿಂದ ಚರ್ಚಿಸಲ್ಪಡುವ ಮೂರು ಪ್ರಶ್ನೆಗಳು ಯಾವುದೆಂದರೆ-

1) ವಾಲಿಯನ್ನು ಮರೆಯಲ್ಲಿ ನಿಂತು ವಧಿಸಿದ್ದು ಏಕೆ?

2) ಶ್ರೀರಾಮನು ಪರಿಶುದ್ಧಳಾದ ಗರ್ಭವತಿಯಾದ ಸೀತೆಯನ್ನು ತ್ಯಜಿಸಿದ್ದು ಏಕೆ?

3) ಶಂಬೂಕನ ವಧೆಯಲ್ಲಿ ಶ್ರೀರಾಮನಿಗೆ ದೋಷಗಳು ಅಂಟಿಕೊಳ್ಳುವುದಿಲ್ಲವೇ?


ಹೀಗೆ ಈ ಮೂರು ಪ್ರಶ್ನೆಗಳಿಗೆ ನನಗೆ ತಿಳಿದ ಹಾಗೇ ಉತ್ತರಿಸಿರುವೆ.

ಆದರೆ ಮೊದಲು ಮರ್ಯಾದೆ ಪುರುಷೋತ್ತಮನಾದ, ಇಕ್ಷ್ವಾಕು ವಂಶದ ದಶರಥ ಕೌಸಲ್ಯ ನಂದನ ಶ್ರೀರಾಮನ ಬಗ್ಗೆ ತಿಳಿಯೋಣ.


"ರಾಮ" ಎರಡಕ್ಷರದ ಅರ್ಥ ಬಲು ಸೊಗಸು. "ರಮಯತಿ ಇತಿ ರಾಮಃ" ಎಂದರೆ ಅರ್ಥ ರಮಿಸುವನು, ಸಂತೋಷಪಡಿಸುವನು. ರಾಕ್ಷಸರನ್ನು ಮತ್ತು ದುಷ್ಟರನ್ನು ಶಿಕ್ಷಿಸಿ; ಧರ್ಮ ಸಂರಕ್ಷಣೆಗಾಗಿ ಅವತರಿಸಿದವನು (ರಾವಣ, ಸುಬಾಹು, ವಾಲಿ, ಶಂಬೂಕ ಮತ್ತಿತ್ತರು). ಧರ್ಮವನ್ನು ರಕ್ಷಿಸುವನು. ಸಾಧುಸಜ್ಜನರ ಸಂತೋಷ ಪಡಿಸುವನು.


"ಮನನಾತ ತ್ರಾಯತೇ ಇತಿ ಮಂತ್ರಃ" ಎಂಬ ಅರ್ಥ ಎನೆಂದರೆ ತಿಳಿದು, ತಿಳಿಯದೆಯೋ ರಾಮನಾಮದ ಉಚ್ಛಾರದಿಂದ ಜೀವನ ಪಾವನ ವಾಗುವದು ಎಂದರ್ಥ.


ಇಂತಹ ರಾಮನಿಗೆ ಹಲವಾರು ವಿಶೇಷಣಗಳು ಇವೆ. ಶೌರ್ಯ, ಸತ್ಯನಿಷ್ಟ ಭ್ರಾತೃತ್ವ ಪ್ರೇಮ, ಗೃಹಸ್ಥ ಧರ್ಮ, ಶರಣಾಗತ ರಕ್ಷಕ, ಸಮಯ ಪ್ರಜ್ಞೆ, ರಾಜನೀತಿ ಪ್ರಜಾ ಪ್ರೀತಿ, ದೇಶಭಕ್ತಿ ಒಟ್ಟಾರೆ ಹೇಳಬೇಕೆಂದರೆ ಎಣೆಯಿಲ್ಲದ ಅನಂತ ಗುಣಗಳ ಮಹಿಮ.




ಪ್ರಸಂಗ-1: ವಾಲಿಯನ್ನು ಮರೆಯಲ್ಲಿ ನಿಂತು ವಧಿಸಿದ್ದೇಕೆ?

ವಾಲಿಯು ವಾನರ ಅಧಿಪತಿ, ತಾರೆಯ ಪತಿ, ಸುಗ್ರೀವನು ಕಿಷ್ಕಿಂದೆಯ ರಾಜ. ಇಂತಹ ರಾಜ ಮೈತುಂಬ ದುರ್ಗಣಗಳ ತುಂಬಿಕೊಂಡಿದ್ದನು. ರಾವಣನ ಪ್ರಿಯ ಸ್ನೇಹಿತನಾಗಿದ್ದನು. ಸಹೋದರನಾದ ಸುಗ್ರೀವನನ್ನು ರಾಜ್ಯದಿಂದ ಗಡಿಪಾರು ಮಾಡಿ ಅವನ ಪತ್ನಿಯಾದ ರುಮೆಯನ್ನು ಬಲವಂತದಿಂದ ದಾಸಿಯನ್ನಾಗಿ ಮಾಡಿಕೊಂಡಿದ್ದನು. ಇವನು ಅಧರ್ಮಿಯಾಗಿದ್ದನು.


ಶ್ರೀರಾಮನು ದುಷ್ಟನಾದ ವಾಲಿಯನ್ನು ಶಿಕ್ಷಿಸಲು ಸುಗ್ರೀವನಿಗೆ ಎಲ್ಲ ವಾನರ ಸಭೆಯಲ್ಲಿ ಪ್ರಮಾಣ ಮಾಡಿದ್ದನು.


ರಾಮನು ಮರೆಯಲ್ಲಿ ನಿಂತು ವಾಲಿಯನ್ನು ವಧಿಸಿದನು. ಏಕೆಂದರೆ ವಾಲಿಗೆ ಯುದ್ದದಲ್ಲಿ ವಿರೋಧಿಗಿಂತ ಎರಡರಷ್ಟು ಬಲ ಬರುತ್ತಿತ್ತು. ಅವನು ರಾಮನ ಭಕ್ತ. ಒಂದು ವೇಳೆ ರಾಮನು ಎದುರಿಗೆ ಬಂದಿದ್ದರೆ; ವಾಲಿಯೇ ಶರಣಾಗತಿಯಾಗಿ ಬಿಡುತ್ತಿದ್ದನು. ಹಾಗಾಗುವುದು ಬೇಡವೆಂದೇ ವಾಲಿ ಸುಗ್ರೀವ ಯುದ್ಧ ಮಾಡುತ್ತಿರುವಾಗ ಮರೆಯಲ್ಲಿ ನಿಂತು ಬಾಣ ಹೊಡೆದು ವಧೆ ಮಾಡಿದನು.



ಒಬ್ಬ ರಾಜನು ಅಸತ್ಯ ಅಧರ್ಮಿಯಾಗಿದ್ದರೆ ಅಥವಾ ಕಾರ್ಯಭ್ರಷ್ಟನಾಗಿದ್ದರೆ, ಅಂತಹವನನ್ನು ಕೊಲ್ಲಲು ಯಾವ ಅಪರಾಧವೂ ಇಲ್ಲ.


"ಔರಸೀ ಭಗಿನೀಂ ವಾಸಿ

ಭಾರ್ಯಾಂ  ವಾಪ್ಯನುಜಸ್ಯ ಯಃ/

ಪ್ರಚರೇತ ನರಃ ಕಾಮತ್

ತಸ್ಯ ದಂಡೋ ವಧಃ ಸ್ಮೃತಃ //


ಕಿಷ್ಕಿಂಧಾಕಾಂಡ 18-22 ರಲ್ಲಿ ಹೇಳಿದ್ದಾರೆ."ಯಾವನು ತನ್ನ ಮಗಳ ವಿಷಯದಲ್ಲಾಗಲಿ, ತಂಗಿಯ ವಿಷಯದಲ್ಲಾಗಲೀ, ತಮ್ಮನ ಮಡದಿಯಲ್ಲಾಗಲಿ, ಅಥವಾ ಕಾಮುಕರಿಗೆ ಇಂತಹ ವರ್ತನೆಗಳಲ್ಲಿ ಮರಣದಂಡನೆಯೇ ಶಿಕ್ಷಾರ್ಹ ಎಂದು ಸಾರುತ್ತದೆ". ಇಂತಹ ಅಧರ್ಮಿಗಳ ಜೊತೆ ಯುದ್ಧ ಮಾಡಬೇಕು ಅಂತೇನು ನಿಯಮ ವಿರುವುದಿಲ್ಲ. ಅದಕ್ಕೆ ರಾಮನು ವಾಲಿಗೆ ಹೀಗೆ ಹೇಳುತ್ತಾನೆ. ದೇಶವನ್ನಾಳುವ ನಾನು ಭರತನ ಪ್ರತಿನಿಧಿ. ಆದ್ದರಿಂದ ರಾಜನ ಪ್ರತಿನಿಧಿಯಾಗಿ ಮಾಡಿರುವ ಕರ್ತವ್ಯದಿಂದ ನನಗೆ ಪಾಪದ ಲೇಪವಿಲ್ಲ; ನಿನಗೆ ನಿನ್ನ ಅಧರ್ಮದ ಶಿಕ್ಷೆಯನ್ನು ಅನುಭವಿಸಿ ದರಿಂದ ನೀನು ಪವಿತ್ರಾತ್ಮನಾಗುತ್ತಿಯಾ ಅಂತ ಹೇಳುತ್ತಾನೆ. ಆಗ ವಾಲಿಯು ತನ್ನ ತಪ್ಪಿನ ಅರಿವಾಗುತ್ತದೆ. ಆದ್ದರಿಂದ ಶ್ರೀರಾಮನು ಮಾಡಿದ ವಾಲಿ ವಧೆ ಮಾಡಿದರೂ ನಿಷ್ಕಳಂಕನಾಗಿದ್ದಾನೆ.


ಪ್ರಸಂಗ-2: ರಾಮನು ಸೀತೆಯನ್ನು ಕಾಡಿಗೆ ಬಿಟ್ಟಿದ್ದೇಕೆ?

ಇನ್ನು ಏಕ ಪತ್ನೀವೃತಸ್ಥನು. ಸೀತೆಯನ್ನು ರಾವಣನು ಅಪಹರಿಸಿದಾಗ, ರಾವಣನನ್ನು ವಧಿಸಿದ ನಂತರ ಜನ ಅಪವಾದಕ್ಕೆ ಎಡೆಗೊಡಬಾರದೆಂದು ಸದುದ್ದೇಶದಿಂದ ಮಾತ್ರವೇ ರಾಮನು ಆಕೆಯನ್ನು ಅಗ್ನಿ ಪರೀಕ್ಷೆಗೆ ಒಳಗಾದ ಮೇಲೆಯೇ ಸ್ವಿಕರಿಸಿದನು. ಆದರೂ ಜನರ ಮಾತು ಆಡಿಕೊಳ್ಳುವುದು ಶ್ರೀರಾಮನ ಕಿವಿಗೆ ಬಿದ್ದಿತ್ತು. ತುಂಬು ಗರ್ಭಿಣಿಯಾದ ಸೀತೆಯು ಋಷಿಪತ್ನಿಯರಿಗೆ ಮರದ ಬಾಗಿನ ಕೊಡುವ ಬಯಕೆ ವ್ಯಕ್ತ ಪಡಿಸಿದಾಗ; ಪೂರೈಸುವುದಾಗಿ ಒಪ್ಪಿಕೊಂಡನು. ಇದೇ ಸುಸಂದರ್ಭ ಎಂದು ಅರಿತು ಲಕ್ಷ್ಮಣನಿಗೆ ಸೀತೆಯನ್ನು ಕಾಡಿಗೆ ಬಿಟ್ಟು ಬರುವ ಕಾರ್ಯವನ್ನು ವಹಿಸಿದನು.


ಮೇಲ್ನೋಟಕ್ಕೆ ಶ್ರೀರಾಮನು ಅಪರಾಧಿ ಅಂತ ಅನಿಸುತ್ತದೆ. ಆದರೆ ಒಂದು ಗಾದೆ ಮಾತಿದೆ. "ಯಥಾ ರಾಜ ತಥಾ ಪ್ರಜಾ" ಅಂತ ಈ ಕುಬ್ಜ ಮನಸ್ಸಿನ ಜನರ ಮಾತಿಗೂ ಎಡೆ ಮಾಡಿಕೊಡ ರದು ಅಂತ ಈ ಕಾರ್ಯ ಮಾಡಿದನು. ಸೀತೆಯ ಪರಿಶುದ್ಧತೆಯ ಬಗ್ಗೆ ಗೊತ್ತಿದ್ದರು, ಧೃಡ ಪಡಿಸಲು ಈ ಅವಳನ್ನು ಕಾಡಿಗೆ ಬಿಟ್ಟು ಬರುವ ಕಾರ್ಯವನ್ನು ನಿರ್ಣಯ ಕೈಗೊಂಡನು.


ಏಕೆಂದರೆ ದೇಶವನ್ನಾಳುವ ರಾಜ ಅಥವಾ ಉನ್ನತ ಅಧಿಕಾರಿ, ಹೇಗೆ ಇರಬೇಕು ಅನ್ನುವದನ್ನು ಮತ್ತು ಪರಿಶುದ್ಧತೆಯ ಬಗ್ಗೆ ತಿಳಿಸಿ ಅದರಂತೆ ತಾನು ನಡೆದು, ಇನ್ನೊಬ್ಬರಿಗೂ ಆದರ್ಶಪ್ರಿಯನಾದನು ಶ್ರೀರಾಮ.


ಪ್ರಸಂಗ-3: ಶಂಬೂಕ ವಧೆಯಲ್ಲಿ:

ರಾಮರಾಜ್ಯದಲ್ಲಿ ಅಬಾಲಮೃತ್ಯು ಅಥವಾ ಅಕಾಲ ಮರಣವಿದ್ದಿಲ್ಲ. ಆದರೆ ಒಂದು ದಿನ ಬ್ರಾಹ್ಮಣನು ತನ್ನ ಅಪಮೃತ್ಯು ಹೊಂದಿದ ಮಗನನ್ನು ಎತ್ತಿಕೊಂಡು ಬಂದು ಅರಮನೆಯ ಮುಂದೆ ಗೋಳಾಡುತ್ತಾ, ಬದುಕಿಸಿ ಕೊಡಿ ಎಂದು ರೋಧಿಸುತ್ತಿರುತ್ತಾನೆ. ಇಲ್ಲವೇ ...! ನಾನು ಪತ್ನಿ ಸಮೇತ ಪ್ರಾಣ ತ್ಯಾಗ ಮಾಡುವೆ; ಎಂದು ಅಳುತ್ತಾ ಹೇಳುತ್ತಾನೆ.


ರಾಮನಿಗೆ ವಿಷಯ ಗೊತ್ತಾಗಿ, ತನ್ನ ಋಷಿಗಳಿಗೆ, ಈ ಅಕಾಲಮೃತ್ಯುವಿನ ಕಾರಣ ಕೇಳುತ್ತಾನೆ. ಪೂರ್ವಜನ್ಮದಲ್ಲಿ ಶೂದ್ರನಾಗಿ ದುರ್ಭಾವನೆ ಹೊಂದಿ, ಅದನ್ನು ಈಡೇರಿಸಿಕೊಳ್ಳಲು ಶೈವಲ ಪರ್ವತದಲ್ಲಿ ಕೊಳದ ದಡದಲ್ಲಿ ತಲೆ ಕೆಳಗೆ ನೇತಾಡಿ ತಪೋನಿರತನಾಗಿ ವರ ಪಡೆಯುತ್ತಾನೆ. ಇವನು ಲೋಕ ಕಲ್ಯಾಣಾರ್ಥವಾಗಿ ತಪಸ್ಸು ಮಾಡಲಿಲ್ಲ, ಸ್ವಂತ ಸ್ವಾರ್ಥ ಮತ್ತು ಸ್ವರ್ಗ ಪ್ರಾಪ್ತಿಗಾಗಿ ವರ ಪಡೆದಿದ್ದನು. ಆದರೆ ಅವನ ಚಾರಿತ್ರ್ಯಿಕ ಶುದ್ಧನಾಗಿರಲಿಲ್ಲ. ಹೀಗಾಗಿ ತಪಸ್ಸು ವ್ಯಭಿಚಾರದಿಂದ ಕೂಡಿತ್ತು.


ಇದನ್ನರಿತು ರಾಮನು ಶಂಬೂಕನ ಶಿರಚ್ಛೇಧ ಮಾಡಿದನು. ಅಪಮೃತ್ಯು ಹೊಂದಿದ ಬಾಲಕನಿಗೆ ಪ್ರಾಣ ಬಂದಿತು. ಇದರಿಂದ ಪ್ರಜೆಗಳು ಮತ್ತು ದೇವತೆಗಳು ಸಂತೋಷ ಗೊಂಡರು.


ಇದನ್ನು ಅವಲೋಕಿಸಿದಾಗ ಶಂಬೂಕನ ವಧೆಯು ಯಾವ ಜಾತಿದ್ವೇಷದಿಂದ ಕೂಡಿದ್ದಲ್ಲ. ಶ್ರೀರಾಮನಿಗೆ ಸರ್ವ ಜನ, ಪ್ರಾಣಿ ಎಲ್ಲರೂ ಸಮರು. ಎಲ್ಲರ ಹಿತವೇ ಅವನ ಧ್ಯೇಯ. ಆದರೆ ಶಂಬೂಕನು ಅನೀತಿವಂತನಾಗಿದ್ದರಿಂದ ಅವನನ್ನು ವಧೆ ಮಾಡಬೇಕಾಯಿತು.


ಹಾಗೇ ವಾಲ್ಮೀಕಿ ಮೊದಲು ಬೇಟೆಗಾರನಾಗಿದ್ದನು. ಆದರೆ ತನ್ನ ನಡತೆಯ ಬದಲಾವಣೆ ಮಾಡಿಕೊಂಡು ಮಹಾತಪಸ್ವಿಯಾಗಿ ಮಹಾಕವಿ ಎನಿಸಿದನು.


ಹೀಗಾಗಿ ರಾಮನ ಚರಿತ್ರೆ ಜೀವನಕ್ಕೊಂದು ಪಾಠವಿದ್ದಂತೆ. ಭ್ರಾತೃ ಪ್ರೇಮ ಎಲ್ಲ ತಮ್ಮಂದಿರ ಮೇಲು ಸಮವಾಗಿತ್ತು. ಭರತನಿಗೆ ರಾಜ್ಯಭಾರ ವಹಿಸಿ ಕಾಡಿಗೆ ತೆರಳಿದನು. ಕಾಡಿನಲ್ಲಿಯು ಯಜ್ಞ ರಕ್ಷಣೆ, ಧರ್ಮರಕ್ಷಣೆ ಮಾಡುತ್ತಾ ನಡೆದನು.


ಯಾವುದೇ ರಾಜ್ಯ ಸುಖಸಮೃದ್ಧಿ ಆಗಬೇಕಾದರೆ ನಿಷ್ಕಳಂಕವಾದ ರಾಜನೀತಿ ಇರಬೇಕು. ಸಮಾನ ಏಳಿಗೆಯ ಮನೋಭಾವ ಜಾಗೃತವಾಗಿದ್ದರೆ, ಅಗ ದೇಶದಲ್ಲಿ ಮಾತ್ರ ಸಮಾನತೆ, ಸನ್ನಡತೆ, ದ್ವೇಷ ರಹಿತ ಜನರು, ಪರಸ್ಪರ ಪ್ರೇಮಭಾವ, ಎಲ್ಲವೂ ಇರುತ್ತದೆ.


ಇವೆಲ್ಲವೂ ರಾಮರಾಜ್ಯದಲ್ಲಿ ಕಾಣುತ್ತಿತ್ತು. ಪ್ರಜೆಗಳ ಸಹಿತ ಮೃಗ ಪಕ್ಷಿಗಳು, ಜಲಚರಗಳು ಹೀಗೆ ಪ್ರತಿಯೊಂದು, ಪ್ರತಿಯೊಬ್ಬರು ಸುಖ ಸಮೃದ್ದಿಯಿಂದ ಇದ್ದರು. ಕಾಡಿಗೆ ಹೋದರೂ ರಾಜ್ಯದ ಹಿತ ಚಿಂತನೆಯಿತ್ತು.



ಪ್ರಿಯಾ ಪ್ರಾಣೇಶ ಹರಿದಾಸ

"ಶ್ರೀಹರಿ ನಿವಾಸ"

ಎಲ್ ಐ ಜಿ  265,

ಶಿವ ಮಂದಿರ ಮತ್ತು ಕನ್ನಡ ಮೀಡಿಯಂ ಎಕ್ಸಲೆಂಟ್ ಶಾಲೆ ಹತ್ತಿರ

ಆದರ್ಶ ನಗರ, ವಿಜಯಪುರ 586103

ಮೊ: 80504 36752


ಲೇಖಕರ ಸಂಕ್ಷಿಪ್ತ ಪರಿಚಯ:

ಎಂ. ಕಾಂ ಪದವಿಧರೆ, ಶ್ರೀ ಮಹಿಪತಿ ದಾಸರ ಮನೆತನಕ್ಕೆ ಸೊಸೆಯಾಗಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಹರಿದಾಸ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವ ಗೃಹಿಣಿ, ಕವಿಯತ್ರಿ, ಲೇಖಕಿ ಕವನ,ಕಥೆ, ಲೇಖನ, ದೇವರನಾಮ, ಪೇಪರ್‌ ಮತ್ತು ಬ್ಲಾಗ್‌ಳಲ್ಲಿ ಪ್ರಕಟವಾಗುತ್ತಿರುತ್ತವೆ. ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top