ಋಷ್ಯಶೃಂಗೇಶ್ವರನ ಪ್ರಸಾದ ಅಯೋಧ್ಯೆಗೆ
ಉಡುಪಿ: ಜ.22ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಶೃಂಗೇರಿ ಸಮೀಪದ ನರಸಿಂಹ ಪರ್ವತದಲ್ಲಿರುವ ಕಿಗ್ಗ ಋಷ್ಯಶೃಂಗೇಶ್ವರ ಕ್ಷೇತ್ರದ ಅರ್ಚಕರು ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಸಾದವನ್ನು ಉಡುಪಿಯ ಪೇಜಾವರ ಮಠದಲ್ಲಿ ಇಂದು (ಸೋಮವಾರ) ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಅರ್ಪಿಸಿದರು. ಈ ಪ್ರಸಾದವನ್ನು ಶ್ರೀಗಳು ಅಯೋಧ್ಯೆಗೆ ಒಯ್ದು ಶ್ರೀರಾಮನ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ಶ್ರೀರಾಮನ ಮುಂದಿರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಋಷ್ಯಶೃಂಗ ಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಕಿಗ್ಗ ಋಷ್ಯಶೃಂಗೇಶ್ವರ ದೇವಸ್ಥಾನ ಕನ್ನಡ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ಕ್ಷೇತ್ರದ ಅರ್ಚಕರು ಅರ್ಪಿಸಿದ ಪ್ರಸಾದವನ್ನು ಸ್ವೀಕರಿಸಿದ ನಂತರ ಋಷ್ಯಶೃಂಗೇಶ್ವರ ಕ್ಷೇತ್ರದ ಹಿರಿಮೆಯ ಬಗ್ಗೆ ಪೇಜಾವರ ಶ್ರೀಗಳು ಮಾಹಿತಿ ನೀಡಿದರು.
ದಶರಥ ಮಹಾರಾಜನು ಅಮಾತ್ಯ ಸುಮಂತ್ರನ ಸೂಚನೆಯಂತೆ ಸತ್ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಿ ವಿಭಾಂಡಕ ಮಹರ್ಷಿಗಳ ಪುತ್ರರಾದ ಋಷ್ಯಶೃಂಗ ಮಹರ್ಷಿಗಳನ್ನು ಕರೆಸಿ ಅವರ ನೇತೃತ್ವದಲ್ಲಿ ಪುತ್ರಕಾಮೇಷ್ಟಿ ಯಾಗವನ್ನು ನೆರವೇರಿಸುತ್ತಾನೆ. ಅದರ ಫಲವಾಗಿ ರಾಮ ಭರತಲಕ್ಷ್ಮಣ ಶತ್ರುಘ್ನರು ಜನಿಸುತ್ತಾರೆ. ಆದ್ದರಿಂದ ಈ ನೆಲದಲ್ಲಿ ರಾಮಾವತಾರವಾಗಲು ಋಷ್ಯಶೃಂಗ ಋಷಿಗಳೂ ಒಂದು ಭೂಮಿಕೆ ನಿರ್ವಹಿಸಿದ್ದಾರೆ. ಮಳೆ ಮಹರ್ಷಿಗಳೆಂದೇ ಪ್ರಸಿದ್ಧರಾದವರು, ತಮ್ಮ ತಪಸ್ಸಿನ ಸಿದ್ಧಿಯಿಂದ ಮಳೆ ತರಿಸುವ ಅಸಾಮಾನ್ಯ ಸಾಮರ್ಥ್ಯ ಇದ್ದ ಮಹಾಮುನಿಗಳು ಋಷ್ಯಶೃಂಗರು. ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಕಿಗ್ಗ ಋಷ್ಯಶೃಂಗೇಶ್ವರನ ಪ್ರಸಾದವನ್ನು ಶ್ರೀರಾಮನ ಪ್ರತಿಷ್ಠಾ ವಿಧಿಗಳು ಸಾಂಗವಾಗಿ ನೆರವೇರುವಂತೆ ಮತ್ತು ಲೋಕ ಕಲ್ಯಾಣವಾಗುವಂತೆ ಪ್ರಾರ್ಥಿಸಿ ಅಲ್ಲಿನ ಅರ್ಚಕರು ತಮಗೆ ತಲುಪಿಸಿದ್ದು ಅದನ್ನು ಅಯೋಧ್ಯೆ ರಾಮನಿಗೆ ತಲುಪಿಸುವುದಾಗಿ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ