ವಿಜ್ಞಾನ ಕಲಿಕೆಯಲ್ಲಿ ಕನ್ನಡದ ಬಳಕೆ ಹೆಚ್ಚಲಿ : ಪ್ರೊ.ಬಿ.ಕೆ ಸರೋಜಿನಿ
ಮುಡಿಪು: ಕನ್ನಡದಲ್ಲಿರುವ ಶಾಲಾ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಪರಿಭಾಷೆಗಳನ್ನು ನೀಡುವಾಗ ಇಂಗ್ಲಿಷ್ ಮತ್ತು ಸಂಸ್ಕೃತ ಪದಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದ್ದು ಸರಳ ಕನ್ನಡ ಪದಗಳನ್ನು ಅಳವಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಬಿ.ಕೆ ಸರೋಜಿನಿ ಹೇಳಿದರು.
ಅವರು ಶುಕ್ರವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಹರೇಕಳ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ 'ಕನ್ನಡ ಸಂಭ್ರಮ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಕ್ಕಳ ಸಾಹಿತ್ಯ ಎಳೆಯ ಮಕ್ಜಳಲ್ಲಿ ಭಾಷಾಭಿಮಾನವನ್ನೂ, ಕಲ್ಪನಾಶಕ್ತಿಯನ್ನೂ, ಮೌಲ್ಯಗಳನ್ನು ಬಿತ್ತುತ್ತವೆ. ಸರಕಾರ ಮತ್ತು ಸಂಘಸಂಸ್ಥೆಗಳು ಮಕ್ಕಳ ಸಾಹಿತ್ಯ ರಚನೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಮಾತನಾಡಿ ನಾವು ತುಳು, ಬ್ಯಾರಿ, ಕೊಂಕಣಿ ಯಾವ ಭಾಷೆಯನ್ನಾಡುವುದಾದರೂ ಕರ್ನಾಟಕದಲ್ಲಿರುವವರು ಕನ್ನಡಿಗರು ಎಂಬ ಭಾವನೆಯಿಂದ ಇರಬೇಕು. ಕನ್ನಡ ನನಗೆ ಎಲ್ಲವನ್ನೂ ನೀಡಿ ಬೆಳೆಸಿದೆ. ನನಗೆ ದೊರಕಿದ ಎಲ್ಲ ಗೌರವಗಳಿಗೂ ಕನ್ನಡ ನಾಡು ತೋರಿದ ಪ್ರೀತಿಯೇ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಳ್ಳಾಲ ತಾಲೂಕು ಕಸಾಪದ ಅಧ್ಯಕ್ಷರಾದ ಡಾ ಧನಂಜಯ ಕುಂಬ್ಳೆ ಮಾತನಾಡಿ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪಠ್ಯಕಲಿಕೆಯ ಜೊತೆಗೆ ಸಮಾಜ ಸೇವೆ, ಮಾನವೀಯ ಗುಣಗಳನ್ನು ಹೊಂದಬೇಕು. ಕಿತ್ತಳೆ ಹಣ್ಣು ಮಾರಿ ಬಂದ ದುಡ್ಡನ್ನು ಶಾಲೆ ಕಟ್ಟಲು ವಿನಿಯೋಗಿಸಿದ ಹಾಜಬ್ಬರ ಸೇವಾ ಮನೋಭಾವ ನಮಗೆ ಆದರ್ಶ ಎಂದರು.
ಹರೇಕಳ ಗ್ರಾಮ ಪಂಚಾಯತಿನ ಅಧ್ಯಕ್ಷರಾಗಿರುವ ಶ್ರೀಮತಿ ಗುಲಾಬಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಹರೇಕಳ ಗ್ರಾಮಪಂಚಾಯತಿನ ಉಪಾಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ತಾಲೂಕು ಪಂಚಾಯತು ಸದಸ್ಯ ಮುಸ್ತಫಾ ಹರೇಕಳ, ಶಾಲಾ ಮುಖ್ಯೋಪಾಧ್ಯಾಯ ಲಕ್ಷಣ ಕೆ ವಿ ಪುದುವಾಳ್ ಉಪಸ್ಥಿತರಿದ್ದರು.
ಉಳ್ಳಾಲ ತಾಲೂಕು ಕಸಾಪದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪದ ಫಜೀರು ಗ್ರಾಮಸಂಚಾಲಕಿ ರೇಷ್ಮಾ ನಿರ್ಮಲ್ ಭಟ್ ಸ್ವಾಗತಿಸಿದರು. ನಿರ್ಮಲ್ ಭಟ್ ಧನ್ಯವಾದ ಸಮರ್ಪಣೆ ಮಾಡಿದರು. ಶಾಲಾ ಅಧ್ಯಾಪಕಿ ಅಕ್ಷತಾ ಎಲ್ ನಾಯಕ ನಿರೂಪಿಸಿದರು. ಕಸಾಪ ಉಳ್ಳಾಲ ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಗ್ರಾಮ ಸಂಚಾಲಕರಾದ ಕುಸುಮ ಪ್ರಶಾಂತ ಉಡುಪ, ಅಶ್ವಿನಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕೊನೆಯಲ್ಲಿ ಮಂಗಳೂರಿನ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನೃತ್ಯ ಲಹರಿ ನಾಟ್ಯಾಲಯ (ರಿ) ಫಜೀರು ಇದರ ನಿರ್ದೇಶಕಿಯಾಗಿರುವ ವಿದುಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದಿಂದ ಕನ್ನಡಗೀತೆಗಳ ನೃತ್ಯಾನುಸಂಧಾನ ಕನ್ನಡ ವೈಭವ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ