ಮಂಗಳೂರಿನಲ್ಲಿ ಅಕ್ಷಯ ಪಾತ್ರ ಪ್ರತಿಷ್ಠಾನದಿಂದ ಅತ್ಯಾಧುನಿಕ ಅಡುಗೆ ಮನೆಗೆ ಚಾಲನೆ
ಮಂಗಳೂರು: “ಅಕ್ಷಯಪಾತ್ರ ಫೌಂಡೇಶನ್ ವತಿಯಿಂದ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯವನ್ನು ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ 23 ಲಕ್ಷ ಮಂದಿಗೆ ಮಧ್ಯಾಹ್ನದ ಊಟ ತಲುಪುತ್ತಿದ್ದು, ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಅಕ್ಷಯಪಾತ್ರ ನೀಡುವ ಸಾತ್ವಿಕ ಆಹಾರದ ಮೂಲಕ ಮಕ್ಕಳಿಗೆ ಆಧ್ಯಾತ್ಮಿಕ ಸಾಧನೆಯನ್ನು ನೀಡುವ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ತಲೆ ಎತ್ತಿನಿಂತಿರುವ ಈ ಘಟಕ ಯಶಸ್ವಿಯಾಗಿ ನಡೆಯಲಿ. ಇಸ್ಕಾನ್ ಮೂಲಕ ಕೃಷ್ಣನ ಪ್ರಸಾದದ ರವಾನೆ ಇಡೀ ಪ್ರಪಂಚಾದಾದ್ಯಂತ ನಡೆಯಲಿ ಎಂದು ಶುಭಹಾರೈಸುತ್ತೇನೆ” ಎಂದು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.
ಮಕ್ಕಳ ಹಸಿವನ್ನು ಹೋಗಲಾಡಿಸುವ ತನ್ನ ಅಚಲವಾದ ಕಾರ್ಯಕ್ಕೆ ಹೆಸರುವಾಸಿಯಾಗಿರುವ ಅಕ್ಷಯ ಪಾತ್ರ ಫೌಂಡೇಶನ್, ಮಂಗಳೂರಿನಲ್ಲಿ ನಿರ್ಮಿಸಿರುವ ಕೇಂದ್ರೀಕೃತ ಅಡುಗೆ ಮನೆಗೆ ಇಂದು (ಡಿ.3) ಚಾಲನೆ ನೀಡಿ ಪುತ್ತಿಗೆ ಶ್ರೀಗಳು ಆರ್ಶೀವಚನ ನೀಡಿದರು. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ ಮತ್ತು ಅಕ್ಷಯ ಪಾತ್ರ ಫೌಂಡೇಶನ್ನ ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ ಅವರು ಉಪಸ್ಥಿತರಿದ್ದರು. ಐಸ್ಕಾನ್ ಮಂಗಳೂರು ಅಧ್ಯಕ್ಷರಾದ ಗುಣಕರ ರಾಮದಾಸ್, ಕೊಡಚಾದ್ರಿ ಗುರುಕುಲದ ಉಸ್ತುವಾರಿಗಳಾದ ತತ್ವದರ್ಶನ ಸ್ವಾಮಿಜಿ, ಮೆರೆಮಜಲು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಸತೀಶ್ ನಾಯ್ಕ್, ಉಪಾಧ್ಯಕ್ಷರಾದ ರಾಧಾಕೃಷ್ಣ ತಂತ್ರಿ ಸಮಾರಂಭದಲ್ಲಿ ಹಾಜರಿದ್ದರು.
124 ಸರ್ಕಾರಿ ಮತ್ತು 41 ಸರ್ಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ 165 ಕ್ಕೂ ಹೆಚ್ಚು ಶಾಲೆಗಗಳಿಗೆ ಅಗತ್ಯ ಪೌಷ್ಟಿಕಯುತವಾದ 25,000 ಊಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಈ ಅಡುಗೆಕೋಣೆ ರೂಪುಗೊಂಡಿದೆ. ಅಡುಗೆಮನೆಯ ವೈವಿಧ್ಯಮಯ ಮೆನುವು ಸಮತೋಲಿತ ಪೋಷಣೆಯನ್ನು ಖಾತ್ರಿಗೊಳಿಸುತ್ತದೆ. ಸೌರಶಕ್ತಿ ಮತ್ತು ಸ್ವಚ್ಛ LPG ಯೊಂದಿಗೆ ಪರಿಸರಸ್ನೇಹಿ ಅಡುಗೆಮನೆ ಇದಾಗಿದೆ.
ಅಕ್ಷಯ ಪಾತ್ರ ಫೌಂಡೇಶನ್ನ ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ ಅವರು ಮಾತನಾಡಿ, "ಮಂಗಳೂರಿನಲ್ಲಿ ನಮ್ಮ ಅತ್ಯಾಧುನಿಕ ಅಡುಗೆಮನೆಯ ಪ್ರಾರಂಭವು ಅಕ್ಷಯ ಪಾತ್ರ ಫೌಂಡೇಶನ್ನ ಪ್ರಗತಿಯನ್ನು ಸೂಚಿಸುತ್ತದೆ. ಮಕ್ಕಳ ಕಲ್ಯಾಣ ಮತ್ತು ಸಮುದಾಯದ ಅಭಿವೃದ್ಧಿಯಲ್ಲಿ ನಮ್ಮ ಬದ್ಧತೆ ಪ್ರತಿಬಿಂಬವಾಗಿದೆ. ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಶಿಕ್ಷಣ ಸಚಿವಾಲಯ, ಸರ್ಕಾರದಿಂದ ನಿರಂತರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಈ ಅಭಿಯಾನಕ್ಕೆ ಬೆಂಬಲವಾಗಿ ನಿಂತಿದ್ದ ದಿವಂಗತ ಶ್ರೀ ಡಾ. ವಿ ರವಿಚಂದ್ರನ್ ಅವರ ಸೇವಾಮನೋಭಾವವನ್ನು ಮರೆಯಲು ಸಾಧ್ಯವಿಲ್ಲ. ಮಕ್ಕಳ ಹಸಿವು ನೀಗಿಸುವ ನಮ್ಮ ಈ ಕಾರ್ಯಕ್ಕ ಬೆನ್ನುಲುಬಾಗಿ ನಿಂತ ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ.ಲಿ. ಲಿಮಿಟೆಡ್ನ ವಿಜಯ್ ಮತ್ತು ಶಾಮ ಕೇಡಿಯಾ ಅವರಿಗೆ ಈ ಸಮಯದಲ್ಲಿ ಧನ್ಯವಾದಗಳನ್ನು ಅರ್ಪಿಸಲೇಬೇಕು" ಎಂದರು.
ಅಕ್ಷಯ ಪಾತ್ರ ಫೌಂಡೇಶನ್ನ ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ್ ಮಾತನಾಡಿ, ನಮ್ಮ ಮಂಗಳೂರು ಅಡುಗೆ ಮನೆ ಪಾಕಶಾಸ್ತ್ರದ ಆವಿಷ್ಕಾರದ ಕೇಂದ್ರವಾಗಿ ಬದಲಾಗುತ್ತಿರುವುದನ್ನು ನೋಡಲು ಸಂತಸವಾಗುತ್ತದೆ. ಈ ಅಡುಗೆಮನೆಯಿಂದ ತಯಾರಾಗಿ ಹೊರಬರುವ ಪ್ರತಿಯೊಂದು ಊಟವೂ ಹಸಿವು-ಮುಕ್ತ ಭವಿಷ್ಯದ ನಮ್ಮ ಕನಸನ್ನು ನನಸಾಗಿಸುವತ್ತ ಒಂದು ಹೆಜ್ಜೆಯಾಗಿದೆ, ಅಸಂಖ್ಯಾತ ಮಕ್ಕಳಿಗೆ ಭರವಸೆ ಮತ್ತು ಪೋಷಣೆಯ ಬೆಳಕನ್ನು ನೀಡುತ್ತದೆ” ಎಂದರು.
ಬೆಂಗಳೂರು, ಮಂಗಳೂರು, ಮತ್ತು ಬಳ್ಳಾರಿ ಇಸ್ಕಾನ್ ಅಧ್ಯಕ್ಷರಾದ ಗುಣಕರ ರಾಮ ದಾಸ ಮಾತನಾಡಿ, "ಪರಿವರ್ತನಾ ಯಾತ್ರೆಯನ್ನು ಪ್ರಾರಂಭಿಸುತ್ತಿರುವ ಅಕ್ಷಯ ಪಾತ್ರ ಪ್ರತಿಷ್ಠಾನವು ಕರ್ನಾಟಕದ ಮಂಗಳೂರಿನಲ್ಲಿ ಅತ್ಯಾಧುನಿಕ ಅಡುಗೆಮನೆಯನ್ನು ಹೆಮ್ಮೆಯಿಂದ ಉದ್ಘಾಟಿಸುತ್ತಿದೆ. ಇದು ಶಾಲಾ ಮಕ್ಕಳ ಹಸಿವು ಹೋಗಲಾಡಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಪ್ರತಿದಿನ 15,000 ಪೌಷ್ಠಿಕಾಂಶದ ಊಟವನ್ನು ಉತ್ಪಾದಿಸುವ ಸಾಮರ್ಥ್ಯದ ಈ ಸೌಲಭ್ಯವು ದಕ್ಷಿಣ ಕನ್ನಡ, ಮಂಗಳೂರಿನಲ್ಲಿ ಅತಿದೊಡ್ಡ ಸಿಎಸ್ಆರ್ ಕಾರ್ಯಕ್ರಮವಾಗಿದೆ” ಎಂದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ