ಕೇರಳಕ್ಕೆ ಕಿರೀಟವಿಟ್ಟಂತೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಚಿ ತಬ್ಬಿಕೊಂಡ ಹಾಗಿರುವ ಗಡಿನಾಡು ಎಂದರೆ ಕಾಸರಗೋಡು. ಬಹುಭಾಷಾ ಭೂಮಿ ಕಾಸರಗೋಡಿನಲ್ಲಿ ಕನ್ನಡ, ತುಳು, ಮಲಯಾಳಂ, ಕೊಂಕಣಿ, ಮರಾಠಿ, ಹವ್ಯಕ, ಕೋಟ, ಶಿವಳ್ಳಿ, ಬ್ಯಾರಿ ಹೀಗೇ ಹಲವು ಭಾಷೆಗಳ ಹಾಗೂ ಸಾಹಿತ್ಯದ ಕಂಪು ಹರಡಿದೆ. ಇದರಿಂದಲೇ ಕಾಸರಗೋಡು ಸಪ್ತಾಭಾಷಾ ಸಂಗಮ ಭೂಮಿ ಎಂದು ಎಲ್ಲೆಡೆ ಪ್ರಸಿದ್ದಿ ಪಡೆದಿದೆ.
ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳು, ಮಂಜೇಶ್ವರ ಗೋವಿಂದ ಪೈಯವರ ‘ಗಿಳಿವಿಂಡು' ಮತ್ತು ಡಾ. ಕೈಯ್ಯಾರ ಕಿಜ್ಞಣ್ಣ ರೈಗಳ ನಿವಾಸ “ಕವಿತಾ ಕುಟೀರ” ಅಮೂಲ್ಯ ಗ್ರಂಥಗಳ ಸಂಗ್ರಹವನ್ನು ಹೊಂದಿದೆ. ಸಮುದ್ರದ ಅಲೆಗಳಿಗೆ ಸದಾ ಮೈಯೊಡ್ಡುವ ಬೇಕಲಕೋಟೆಯಲ್ಲಿ ಬೀಚ್, ಪಾರ್ಕ್, ಉತ್ಖನನದ ಮೂಲಕ ಕಂಡ ಗತವೈಭವದ ಅರಮನೆಯ ಅಡಿಪಾಯ, ಸುತ್ತಲಿನ ಉದ್ಯಾನ ಮತ್ತು ಐತಿಹಾಸಿಕ ಕೋಟೆಯ ಸೌಂದರ್ಯವನ್ನು ಜತೆಯಾಗಿ ಸವಿಯಬಹುದು. ಈ ಜಿಲ್ಲೆಯಲ್ಲಿರುವ ಮಾಯಿಪ್ಪಾಡಿ ಅರಮನೆ, ಚಂದ್ರಗಿರಿ ಕೋಟೆ, ಆರಿಕ್ಕಾಡಿ ಕೋಟೆಗಳಿಗೆ ಐತಿಹಾಸಿಕ ಪ್ರಾಧಾನ್ಯತೆಗಳೂ ಇದೆ.
ಕಾಸರಗೋಡಿನ ಸಮೀಪದ ಕ್ಷೇತ್ರ ಅನಂತಪುರ, ಅಲ್ಲಿನ ಮೊಸಳೆ ಬಬಿಯಾ, ಪಕ್ಕದ ಮೂಜುಂಗಾವು ಪಾರ್ಥಸಾರಥಿ ದೇವಸ್ಥಾನದಲ್ಲಿರುವ ವಿಶಾಲ ಸರೋವರ ಪ್ರವಾಸಿಗರ ಆಕರ್ಷಕ ಚುಂಬಕಗಳು. ವಿನಾಯಕನ ದೇವಾಲಯ ಮಧೂರು, ಬೇಳ ಶೋಕಾಮಾತ ಇಗರ್ಜಿಯಲ್ಲಿರುವ ಗುಹೆ, ಮಂಜೇಶ್ವರ ಜೈನ ಬಸದಿ, ಕಾಜ್ಞಾಂಗಾಡಿನಲ್ಲಿರುವ ಆನಂದ ಆಶ್ರಮ ಮತ್ತು ನಿತ್ಯಾನಂದಾ ಶ್ರಮಗಳು ಕಾಸರಗೋಡಿನ ಪರಿಸರದ ಆಧ್ಯಾತ್ಮಕ ತಾಣಗಳು. ಪೊಸದಿಗುಂಪೆ ಮತ್ತು ರಾನಿಪುರಮ್ ಚಾರಣಕ್ಕೆ ಅನುಕೂಲಕರವಾದ ಉನ್ನತ ಬೆಟ್ಟಗಳು. ನೀಲೇಶ್ವರದ ಸನಿಹದಲ್ಲಿರುವ ಹಿನ್ನೆರ ಸರೋವರ ಮನಸ್ಸಿಗೆ ಮುದ ನೀಡುವ ಜಾಗ...
ತೆಂಗು ಕೃಷಿ ಕುರಿತಾದ ಸಂಶೋಧನಾ ಚಟುವಟಿಕೆಗಳಲ್ಲಿ ನಿರತವಾದ ಕಾಸರಗೋಡಿನ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ತಳಿವೈವಿಧ್ಯ, ಒಳಸುರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಓಣಂ ಹಬ್ಬದ ರಚಿಸಲಾಗುವ ಹೂವಿನ ರಂಗವಲ್ಲಿಗಳು,ಮುಸ್ಲಿಂ ಕಲಾಪ್ರಕಾರಗಳಾದ ಒಪ್ಪನ ಮತ್ತು ದಫ್-ಮುಟ್ ಕಾಸರಗೋಡಿನ ಪಯಣದಲ್ಲಿ ಜನರಿಗೆ ಖಂಡಿತವಾಗಿಯೂ ಮನರಂಜನೆಯನ್ನು ನೀಡಿಯೇ ನೀಡುತ್ತದೆ.
ಇಲ್ಲಿನ ಜನರ ಪ್ರಧಾನ ಆಹಾರ ಕ್ರಮ ಎಂದರೆ ಕುಚ್ಚ್ಚಿಲಕ್ಕಿ ಅನ್ನ ಮತ್ತು ಪರೋಟ ಮತ್ತು ಪುಟ್ಟು. ಕಡಲಿನ ಸನಿಹದಲ್ಲೇ ಸಾಗುವ ಡಬಲ್ ಲೈನ್ ರೈಲು ಮಾರ್ಗ ಮತ್ತು ಸಮಾನಾಂತರವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ ಕಾಸರಗೋಡನ್ನು ಸಂಪರ್ಕಿಸುವ ಸಲೇಕರ್ಯವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ಕಾಸರಗೋಡು ಎಂಬುವುದು ಸಂದರ್ಶಿಸುವ ಪ್ರವಾಸಿಗರಿಗೆ ನೈಸರ್ಗಿಕ, ಸಾಂಸ್ಕೃತಿಕ, ಹಾಗೂ ಸಾಮಾಜಿಕ ಮುಖಗಳು ಶಿಕ್ಷಣದ ಆಸಕ್ತಿಯನ್ನು ಮೂಡಿಸಿ, ಮನರಂಜನೆಯನ್ನು ನೀಡುತ್ತದೆ.
- ಶ್ರೇಯಾ ಮಿಂಚಿನಡ್ಕ
ಪ್ರಥಮ ಪತ್ರಿಕೋದ್ಯಮ
ಎಸ್ ಡಿ ಎಂ ಕಾಲೇಜ್ ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ