ಮಂಗಳೂರು: ರಾಮಕೃಷ್ಣ ಮಿಷನ್, ಮಂಗಳೂರು ಇದರ ಪ್ರೇರಣೆಯಿಂದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್, ಜೆಪ್ಪು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಇದರ ಸಹಯೋಗದಲ್ಲಿ 'ನಮ್ಮ ಊರು- ನಮ್ಮ ಹೆಮ್ಮೆ' ಎಂಬ ವಿಶೇಷ ಕಾರ್ಯಕ್ರಮಕ್ಕೆ ನ.26ರ ಭಾನುವಾರದಂದು ಮಂಗಳಾದೇವಿ ಸುತ್ತಲಿನ ಪ್ರದೇಶದ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸುವ ಮೂಲಕ ಚಾಲನೆ ನೀಡಲಾಯಿತು.
ಬೆಳಿಗ್ಗೆ 7:30ರಿಂದ 9.00 ಗಂಟೆಯವರೆಗೆ ಜಪ್ಪು ಪರಿಸರದ ಸುಮಾರು 800 ಮನೆಗಳಿಗೆ ಕರಪತ್ರ ಹಂಚುವ ಮೂಲಕ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಲಾಯಿತು. ನಂತರ ನಡೆದ 'ಮಾದರಿ ವಾರ್ಡ್ನತ್ತ- ಸಂಘಸಂಸ್ಥೆಗಳ ಚಿತ್ತ' ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನಡೆದು ಬಂದ ದಾರಿ ಹಾಗೂ ತಮ್ಮ ವಾರ್ಡ್ಗಳನ್ನು ಮಾದರಿ ವಾರ್ಡ್ಗಳನ್ನಾಗಿ ಮಾಡಲು ಯೋಜಿಸಿದ ವಿವಿಧ ಚಟುವಟಿಕೆಗಳ ಬಗೆಗೆ ಸಾರ್ವಜನಿಕರಿಗೆ ವಿವರಿಸಲಾಯಿತು.
'ನಮ್ಮ ಊರು- ನಮ್ಮ ಹೆಮ್ಮೆ' ಯೋಜನೆಯಡಿಯಲ್ಲಿ ಮುಂದಿನ 6 ತಿಂಗಳುಗಳ ಕಾಲ ನಗರ ಪಾಲಿಕೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಮಂಗಳಾದೇವಿ, ಹೊಯ್ಗೆ ಬಜಾರ್ ಹಾಗೂ ಬೋಳಾರ ವಾರ್ಡ್ಗಳ ಸುಮಾರು 7000 ಮನೆಗಳನ್ನು ಸಂದರ್ಶಿಸಿ, ಜನರಲ್ಲಿ ಜಾಗೃತಿ ಮೂಡಿಸಿ ಈ ಮೂರು ವಾರ್ಡ್ಗಳನ್ನು ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿ ಮಾದರಿ ವಾರ್ಡ್ಗಳನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನದ್ದಾಗಿರುತ್ತದೆ.
ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ರವರು ಮಾತನಾಡಿ- 'ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನ ವಿಶೇಷ ಯೋಜನೆಗೆ ಈ ಭಾಗದ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸುವಂತೆ ಹಾಗೂ ನಗರ ಬೇರೆ ಬೇರೆ ಭಾಗಗಳಲ್ಲಿನ ಸಂಘಸಂಸ್ಥೆಗಳೂ ಸಹ ತಮ್ಮ ಇತರೆ ಸಾಮಾಜಿಕ ಕಾರ್ಯಗಳ ಜೊತೆ ನಗರದ ಜ್ವಲಂತ ಸಮಸ್ಯೆಗಳನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ಮಾಡುವಂತೆ' ಕರೆ ನೀಡಿದರು.
ಪಾಲಿಕೆಯ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು ರವರಿಗೆ ಸ್ವಚ್ಛತಾ ಜಾಗೃತಿ ಅಭಿಯಾನದ ಪ್ರಾಯೋಗಿಕ ವರದಿಯನ್ನು ಹಸ್ತಾಂತರಿಸಲಾಯಿತು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ್ ಕಾಮತ್ರವರು ʼಸೇವಾ ಟ್ರಸ್ಟ್ನ ಮಾದರಿ ವಾರ್ಡ್ ಯೋಜನೆಗೆ ನಗರ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರುಗಳಾದ ಪ್ರೇಮಾನಂದ ಶೆಟ್ಟಿ, ಶ್ರೀಮತಿ ರೇವತಿ ಶ್ಯಾಮ್ ಸುಂದರ್, ಶ್ರೀಮತಿ ಭಾನುಮತಿ, ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸೀತಾರಾಮ್ ಎ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ