ಸಪ್ತ ಶಿಖರಗಳ ನಡುವೆ ವಾಸವಾಗಿ ಕಲಿಯುಗದ ವೈಕುಂಠ ಕ್ಷೇತ್ರ ತಿರುಮಲದಲ್ಲಿ ನೆಲೆಯಾಗಿರುವ ಶ್ರೀ ವಿಷ್ಣುವಿನ ಅವತಾರ ಸ್ವರೂಪಿಯೇ ತಿರುಪತಿ ತಿಮ್ಮಪ್ಪ. ಇಂತಹ ಶ್ರೀಮಂತ ಪುಣ್ಯಕ್ಷೇತ್ರದಲ್ಲಿ ಕೂದಲನ್ನು ಹರಕೆಯಾಗಿ ನೀಡುವುದು ರೂಢಿಯಿಂದ ಬಂದಿರುವ ಪದ್ಧತಿ. ಯಾರಾದ್ರೂ ತಲೆಯನ್ನು ಬೋಳಿಸಿಕೊಂಡಿರುವುದನ್ನು ಕಂಡರೆ 'ಯಾವಾಗ ತಿರುಪತಿಗೆ ಹೋಗಿ ಬಂದ್ರಿ?' ಎಂದು ಕೇಳಿಯೇ ಬಿಡುತ್ತೇವೆ. ಅಷ್ಟರಮಟ್ಟಿಗೆ ಮುಡಿ ಕೊಡುವ ಹರಕೆಯನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ.
ಜೀವನದಲ್ಲಿ ಯಾವುದಾದರೂ ದೊಡ್ಡ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಪರಿಹಾರವಾದರೆ ತಿರುಪತಿಗೆ ಹೋಗಿ ಮುಡಿ ಕೊಡುವ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹಾಗಾದ್ರೆ, ಈ ಕೂದಲು ತೆಗೆಸುವ ಹರಕೆಯ ಹಿಂದಿರುವ ನಂಬಿಕೆಯೇನು? ಹೌದು, ತಿರುಪತಿ ಅತ್ಯಂತ ಜನಪ್ರಿಯ ಧಾರ್ಮಿಕ ಪುಣ್ಯಕ್ಷೇತ್ರ. ವರ್ಷದ ಯಾವುದೇ ದಿನಗಳಲ್ಲಿ ಇಲ್ಲಿಗೆ ಹೋದರೆ ಲಕ್ಷಾಂತರ ಜನರ ನಡುವೆ ಬಾಲಾಜಿಯನ್ನು ಕಣ್ತುಂಬಿಕೊಳ್ಳುವುದೇ ಭಕ್ತರಿಗೆ ದೊರೆತ ಪರಮ ಪುಣ್ಯ. ವೆಂಕಟೇಶನಿಗೆ ಮುಡಿಯನ್ನು ಅರ್ಪಿಸಿದರೆ ಮಾನವ ಜನ್ಮ ಪಾವನವೆಂಬ ನಂಬಿಕೆ ಭಕ್ತ ಸಮೂಹದ್ದು.
ಈ ಕೇಶದಾನದ ಹಿಂದಿರುವ ಕಥೆಯೆOದರೆ, ವೆಂಕಟೇಶ್ವರ ಸ್ವಾಮಿಯು ಶ್ರೀ ಲಕ್ಷ್ಮಿಯೊಂದಿಗೆ ವಿವಾಹವಾಗಲು ಕುಬೇರನಿಂದ ಸಾಲವನ್ನು ಪಡೆಯುತ್ತಾನೆ. ಆದರೆ ಸ್ವಾಮಿಗೆ ಆ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ದೇವನು 'ಕಲಿಯುಗದಲ್ಲಿ ನನ್ನ ಭಕ್ತರು ಚಿನ್ನ, ಬೆಳ್ಳಿಯೊಂದಿಗೆ ಕೂದಲನ್ನು ಹರಕೆಯ ರೂಪದಲ್ಲಿ ದಾನವಾಗಿ ನನಗೆ ಅರ್ಪಿಸುತ್ತಾರೆ' ಎಂದು ಭರವಸೆಯನ್ನು ನೀಡುತ್ತಾನೆ. ಹಾಗಾಗಿ ಕೇಶದಾನ ಮಾಡುವುದರಿಂದ ಕುಬೇರನ ಸಾಲವನ್ನು ತೀರಿಸಲು ಸ್ವಾಮಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿದಂತಾಗುತ್ತದೆ ಎಂಬ ನಂಬಿಕೆ.
ಇನ್ನೊಂದು ಪುರಾಣ ನಂಬಿಕೆ ಎಂದರೆ, ಒಮ್ಮೆ ವೆಂಕಟೇಶ್ವರನು ನೀಲಾದ್ರಿ ಬೆಟ್ಟದ ಮೇಲೆ ಮಲಗಿದ್ದಾಗ ನೀಲಾದ್ರಿದೇವಿಯು ವೆಂಕಟೇಶ್ವರನನ್ನು ಭೇಟಿಯಾಗಲೆಂದು ಆಗಮಿಸುತ್ತಾಳೆ. ಆ ಸಂದರ್ಭದಲ್ಲಿ ಭಗವಂತನ ತಲೆಯಲ್ಲಿರುವ ಗಾಯದ ಕಲೆಯನ್ನು ಕಂಡು, ಅವಳು ತನ್ನ ಕೂದಲನ್ನು ಎಳೆದು ಭಗವಂತನ ತಲೆಯ ಮೇಲೆ ಲೇಪಿಸಿ ಅವನ ಸೌಂದರ್ಯವನ್ನು ಪೂರ್ಣಗೊಳಿಸುತ್ತಾಳೆ. ನಂತರ ತನ್ನ ತಲೆಯ ಮೇಲೆ ಕೂದಲು ಹಾಗೂ ನೀಲಾದ್ರಿಯ ತಲೆಯ ಮೇಲೆ ಗಾಯವನ್ನು ಕಂಡ ಭಗವಂತ ಅವಳ ಕೂದಲನ್ನು ಹಿಂದುರಿಗಿಸಲು ಬಂದಾಗ ನೀಲಾದ್ರಿ ನಿರಾಕರಿಸಿ ,ನಿಮ್ಮ ಭಕ್ತರು ವೈಕುಂಠದಲ್ಲಿ ಕೇಶದಾನ ಮಾಡುವುದರಿಂದ ಅವರ ಪಾಪವೆಲ್ಲ ನಾಶವಾಗಿ ಮುಕ್ತಿ ಸಿಗುವಂತಾಗಲಿ ಎಂದು ವರವನ್ನು ನೀಡುತ್ತಾಳೆ.
ಪ್ರಸ್ತುತ ತಿರುಪತಿ ದೇವಾಲಯದಲ್ಲಿ ಭಕ್ತರ ಕೂದಲು ಕ್ಷೌರ ಮಾಡಲು ಸುಮಾರು 600 ಜನರನ್ನು ನೇಮಿಸಲಾಗಿದೆ. ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ಸುಮಾರು 20 ಸಾವಿರ ಜನರು ತಮ್ಮ ಕೂದಲನ್ನು ದಾನ ಮಾಡುತ್ತಿದ್ದಾರೆ. ಪ್ರತಿ ವರ್ಷ 500 ರಿಂದ 600 ಟನ್ ಕೂದಲನ್ನು ಜಗತ್ತಿನಾದ್ಯಂತದಿಂದ ಬರುವ ಭಕ್ತರು ದಾನ ಮಾಡುತ್ತಾರೆ. ಕಾಣಿಕೆಯಾಗಿ ಬಂದ ಕೂದಲನ್ನು ಅಂತರಾಷ್ಟ್ರೀಯ ಮಾರುಕಟ್ಟೆಯ ಮೂಲಕ ಯುರೋಪ್, ಅಮೆರಿಕ, ಚೀನಾ, ಆಫ್ರಿಕಾ ಮತ್ತು ಇತರೆ ರಾಷ್ಟ್ರಗಳಿಗೆ ಹೇರ್ ವಿಗ್ ತಯಾರಿಕೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಇದರಿಂದಾಗಿಯೇ ದೇವಾಲಯವು ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದೆ.
- ಶೈನಿತಾ ಆರ್.ಎಸ್
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ