ಧರ್ಮಸ್ಥಳ: ಕನ್ನಡದ ಖ್ಯಾತ ಸಿನಿಮಾಗಳಾದ 'ಮಲಯ ಮಾರುತ' ಮತ್ತು 'ಶ್ರೀಮಂಜುನಾಥ' ಮೂಲಕ ಜನಜನಿತವಾದ ಎರಡು ಭಕ್ತಿಗೀತೆಗಳು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಲಕ್ಷದೀಪೋತ್ಸವ ಪ್ರಯುಕ್ತ ವಸ್ತುಪ್ರದರ್ಶನ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗೆ ವಿಶೇಷ ಮೆರುಗು ನೀಡಿದವು.
ಕಲಾವಿದರಾದ ದೀಪಿಕಾ ಶ್ರೀಕಾಂತ್ ಮತ್ತು ತಂಡ ಈ ಎರಡು ಹಾಡುಗಳೂ ಸೇರಿದಂತೆ ಪ್ರಸ್ತುತಪಡಿಸಿದ ಗಾಯನ ಪ್ರೇಕ್ಷಕರನ್ನು ಭಾವಪರವಶಗೊಳಿಸಿತು. ಇಡೀ ಕಾರ್ಯಕ್ರಮದಲ್ಲಿ ಗಮನಸೆಳೆದದ್ದು 'ಆನಂದ,,,, ಪರಮಾನಂದ' ಗೀತೆ. ಹಂಸಲೇಖ ಅವರ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಸಿನಿಮಾ ಭಕ್ತಿಗೀತೆಯಾಗಿ ಗಮನ ಸೆಳೆದಿರುವ ಈ ಹಾಡು ದೀಪಿಕಾ ಶ್ರೀಕಾಂತ್, ಸುಧಾಕರ್ ಗೌಡ ಅವರ ಧ್ವನಿಯಲ್ಲಿ ಭಕ್ತಿಯ ನಿನಾದ ಹೊಮ್ಮಿಸಿತು.
'ಮಲಯ ಮಾರುತ' ಸಿನಿಮಾದ 'ಶಾರದೇ ದಯತೋರಿದೆ' ಎಂಬ ಭಕ್ತಿಗೀತೆಯನ್ನು ಹಾಡಿ ವಿಕ್ಷಕರಲ್ಲಿ ಭಕ್ತಿಭಾವ ಮೂಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಕೇಂದ್ರಬಿಂದುವಾಗಿ ಸುಗಮ ಸಂಗೀತದ ಸುಧೆಯನ್ನು ಹರಿಸಿ ದೀಪಿಕಾ ಶ್ರೀಕಾಂತ್ ತಂಡವು ಜನಮೆಚ್ಚುಗೆ ಗಳಿಸಿದರು. ಭಕ್ತಿಗೀತೆ, ವಚನ, ಚಿತ್ರಗೀತೆ, ಭಾವಗೀತೆಗಳನ್ನು ಸ್ವರಬದ್ಧವಾಗಿ ಪ್ರಸ್ತುತಪಡಿಸಿದರು. ಸಂಗೀತದ ಹಲವಾರು ಮಜಲುಗಳನ್ನು ಅಚ್ಚುಕಟ್ಟಾಗಿ ಕೇಳುಗರಿಗೆ ಉಣಬಡಿಸಿದರು.
ಗಣಪತಿ ಸ್ತುತಿಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 'ಊಳ್ಳವರು ಶಿವಾಲಯ ಮಾಡುವರು' ವಚನ ಗಾಯನ ಭಕ್ತಿಚಿಂತನೆಯನ್ನು ಹೊಮ್ಮಿಸಿತು. ತತ್ವಪದ, ಮಲೆಯ ಮಾದೇವ, ಶಿವನು ಭಿಕ್ಷಕೆ, ಎನಿ ಮಹಾನಂದವೇ, ದೀಪವು ನಿನ್ನದೇ ಹಾಡುಗಳನ್ನು ಹಾಡಿದರು.
ತಂಡದಲ್ಲಿ ಗುರುರಾಜ್ ಮಂಗಳೂರು ಕೀಬೋರ್ಡ್, ವೀಕ್ಷಿತ್ ಉಡುಪಿ ತಬಲಾ, ಪ್ರಭಾಕರ್ ಕಾಸರಗೋಡು ರಿದಮ್ ಪ್ಯಾಡ್, ಸಂತೋಷ್ ವಿಟ್ಲ ಕೊಳಲು ನುಡಿಸಿದರು.
- ಬಿ,ಎಸ್, ಸಿಂಧೂರ
ದ್ವಿತೀಯ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ