ದೇವಸ್ಥಾನದ ಒಳಭಾಗದಲ್ಲಿ ರಂಗ ಪೂಜೆಯು ಸೇರಿದಂತೆ ಸಕಲ ಶಾಸ್ತ್ರಗಳೊಂದಿಗೆ ಪೂಜೆ ನಡೆಸಿ, ಸಂಪ್ರದಾಯದಂತೆ ಜಾಗಟೆ, ಶಂಖ, ನಾದ ಸ್ವರ, ಡೋಲು , ಸಂಗೀತ ಮೂಲಕ ಹೂಗಳು ಮತ್ತು ಆಭರಣಗಳಿಂದ ಅಲಂಕೃತವಾಗಿದ್ದ ಪಲ್ಲಕ್ಕಿಯಲ್ಲಿ ದೇವರನ್ನು ಕುಳ್ಳಿರಿಸಿ ಹದಿನಾರು ಸುತ್ತು ಪ್ರದಕ್ಷಿಣೆ ಹಾಕಲಾಯಿತು.
ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಶಾಲಿ ಅತಿಥಿ ಗೃಹದ ಮುಂಭಾಗದಲ್ಲಿರುವ ಕಂಚಿ ಮಾರುಕಟ್ಟೆಗೆ ಬೆಳ್ಳಿ ನಂದಿಯ ಮೇಲೆ ವಿರಾಜಮಾನನಾದ ಶ್ರೀ ಮಂಜುನಾಥ ಸ್ವಾಮಿಯ ಲಾಲಕ್ಕಿಯನ್ನು ಬರ ಮಾಡಿಕೊಳ್ಳಲಾಯಿತು. ದೇವಳದ ನಂದಿ, ಪಂಜು, ವಿವಿಧ ವಾದ್ಯಗಳ ಸಂಗೀತ ಮೆರವಣಿಗೆಯ ಮೂಲಕ ಕಂಚಿ ಮಾರುಕಟ್ಟೆ ತಲುಪಿದ ಶ್ರೀ ಮಂಜುನಾಥ ಸ್ವಾಮಿಯನ್ನು ಕಟ್ಟೆಯ ಮೇಲೆ ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಮಂತ್ರಪಠಣ, ಭಜನೆ, ಶಂಖ-ಜಾಗಟೆಗಳ ನಾದಗಳು ಅಲ್ಲಿ ನೆರೆದಿರುವ ಭಕ್ತ ಸಮೂಹದೊಳಗೆ ಭಕ್ತಿ ಭಾವ ಮೂಡಿಸಿತು. ಉತ್ಸವದ ಸಂದರ್ಭದಲ್ಲಿ ಭಕ್ತರು ಭಕ್ತಿಯಿಂದ ದೀಪಗಳನ್ನು ಬೆಳಗಿದರು. ಹಾಗೂ ಸಹಸ್ರಾರು ಸಂಖ್ಯೆಯಲ್ಲಿದ್ದ ಭಕ್ತರು ದೇವರ ದರ್ಶನದಿಂದ ಧನ್ಯರಾದರು.
ಕಂಚಿ ಮಾರುಕಟ್ಟೆ ಉತ್ಸವದ ನಂತರ ದೇವರನ್ನು ದೇವಸ್ಥಾನದ ಬಳಿ ಕರೆತಂದು ಬೆಳ್ಳಿ ರಥದಲ್ಲಿ ಕೂರಿಸಿ, ಮಂಗಳಾರತಿ ಮಾಡಲಾಯಿತು. ನಂತರ ಭಕ್ತರು ಬೆಳ್ಳಿ ರಥವನ್ನು ಭಕ್ತಿ ಪೂರ್ಣವಾಗಿ ಎಳೆದರು. ದೇವಸ್ಥಾನಕ್ಕೆ ಒಂದು ಸುತ್ತಿನ ರಥ ಪ್ರದಕ್ಷಿಣೆಯ ನಂತರ ಶ್ರೀ ಮಂಜುನಾಥ ಸ್ವಾಮಿಯು ದೇವಳದ ಒಳಕ್ಕೆ ಪ್ರವೇಶಿಸುವ ಮೂಲಕ ಉತ್ಸವವು ಸಂಪನ್ನಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ