ಎಲ್ಲವೂ ಇದ್ದುವು: ಅರಮನೆಯಂಥಾ ಮಹಲು, ಅರಿತು ನಡೆವ ಮನೆಯೊಡತಿ, ಮಾತು ಪಾಲಿಸುವ ಮಕ್ಕಳು, ನಾಡು ತುಂಬಾ ಅಭಿಮಾನಿಗಳ ಬಳಗ, ಊರು ತುಂಬಾ ಸ್ನೇಹ ತಂಡ, ಕೈ ತುಂಬಾ ಕಾಸು, ಎಕರೆಗಟ್ಟಲೆ ಜಮೀನು, ಕೈಗೊಬ್ಬ ಕಾಲಿಗೊಬ್ಬ ಆಳು ಕಾಳುಗಳು... ಆದರೆ ಒಂದೇ ಒಂದು ಕೊರತೆ. ಅದು ಆರೋಗ್ಯದ್ದು. ಕಿಡ್ನಿ ವೈಫಲ್ಯದ ಕಾಯಿಲೆ ಈ ಉಕ್ಕಿನ ಮನುಷ್ಯನನ್ನು ಹೇಗೆ ಕಾಡಿತೆಂದರೆ, ಅದರ ಕಪಿ ಮುಷ್ಟಿಗೆ ಸಿಲುಕಿದ ವಜ್ರಮುನಿಯಂಥಾ ವಜ್ರಮುನಿಯೇ ಅಲ್ಲಾಡಿ ಹೋದರು. ಕೊನೆಗೆ ಅದೇ ಕಾಯಿಲೆಗೆ ಶರಣಾಗಿ ಬದುಕಿಗೆ ಗುಡ್ ಬೈ ಹೇಳಿಬಿಟ್ಟರು.
ಇಂಥಾ ವಜ್ರದಂಥಾ ಗಟ್ಟಿ ಮನುಷ್ಯ ಸಾವಿನ ದಾರಿ ಹಿಡಿಯುವ ಮೊದಲೊಮ್ಮೆ ನಾನು ಅವರನ್ನು ಸಂದರ್ಶಿಸಿ ಬಂದೆ. ನೆನಪಿಡಿ: ಇದುವೇ ವಜ್ರಮುನಿಯವರ ಕಟ್ಟ ಕಡೆಯ ಸಂದರ್ಶನ! ಇದು ಅವರ ಕೊನೆಯ ಸಂದರ್ಶನವೆಂದು ನನಗೆ ಗೊತ್ತಿರಲಿಲ್ಲ, ಸ್ವತಃ ವಜ್ರಮುನಿಯವರಿಗೂ ಗೊತ್ತಿರಲಿಲ್ಲ! ಕಿಡ್ನಿ ವೈಫಲ್ಯಕ್ಕೊಳಗಾದ ಈ ಕಲಾವಿದ ಏನಿಲ್ಲವೆಂದರೂ 1800ರಷ್ಟು ಸಾರಿ ಡಯಾಲಿಸಿಸ್ ಮಾಡಿಸಿ ಕೊಂಡಿದ್ದರು. ಚಿಕಿತ್ಸೆಗಾಗಿ ಆ ಕಾಲದಲ್ಲೇ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಟ್ರಾನ್ಸ್ಪ್ಲಾಂಟ್ ಮಾಡಿಸಿದ ಕಿಡ್ನಿಯೂ ವಿಫಲವಾದಾಗ ಕಂಡ ಕನಸು ಛಿದ್ರ ವಿಛಿದ್ರವಾಗಿತ್ತು.
ಇಂಥಾ ಕಂಚಿನ ಕಂಠದ 'ಪ್ರಚಂಡ ರಾವಣ'ನ ಗೌರವಾರ್ಥವಾಗಿ ಬೆಂಗಳೂರಿನಲ್ಲೊಂದು ಕಂಚಿನ ಪ್ರತಿಮೆ ಸಿದ್ದವಾಗಿದೆ. ಸಾಮಾನ್ಯವಾಗಿ ನಾಯಕ ನಟರಾದವರ ಪ್ರತಿಮೆಗಳನ್ನು ನಾಡಿನಾದ್ಯಂತ ನಾವು ನೋಡಬಹುದು. ಆದರೆ ಒಬ್ಬ ಖಳನಾಯಕನ ಪ್ರತಿಮೆ ಸ್ಥಾಪನೆ ಇದೇ ಪ್ರಪ್ರಥಮ! ಹೌದು ಈ ಪ್ರತಿಮೆಯ ಸ್ಥಾಪನೆ ನಾಗಬಾವಿಯ ಸರ್ಕಲ್ ನಲ್ಲಿ ಆಗಲಿದೆ. ಈ ತಿಂಗಳ 25ರ ಶನಿವಾರದಂದು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ವಜ್ರಮುನಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ವಜ್ರಮುನಿಯವರ ಪುತ್ರ ಜಗದೀಶ್ ಹೇಳಿದ್ದಾರೆ. ಅಂದು ಪ್ರತಿಮೆಯ ಅನಾವರಣದ ಜತೆ ಅದ್ದೂರಿಯಾದೊಂದು ಸ್ಮರಣೀಯ ಕಾರ್ಯಕ್ರಮವೂ ನಡೆಯಲಿದೆ.
- ಗಣೇಶ್ ಕಾಸರಗೋಡು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ