ಸಾಂಸ್ಕøತಿಕ ಅನನ್ಯತೆ, ಜೀವನತತ್ತ್ವ, ಸಾಮಾಜಿಕತೆ, ಧರ್ಮ, ತಾತ್ವಿಕ, ಮಹಿಳೆ, ಆಧ್ಯಾತ್ಮ, ಹರಿಭಕ್ತಿ, ರಾಜಕೀಯ ಚಿಂತನೆ. ಹೀಗೆ ಎಲ್ಲವನ್ನು ತನ್ನ ಸಾಹಿತ್ಯದ ವಸ್ತುವಾಗಿಸಿಕೊಂಡಿದ್ದ ಕನಕದಾಸರನ್ನು ನೆನೆಯುವುದರ ಜೊತೆಗೆ ಅವರು ಆಶಿಸಿದ ದಾರಿಯಲ್ಲಿ ನಾವು ಸಾಗಬೇಕು. ಅವರ ಕೀರ್ತನೆಗಳನ್ನು ದಿನ ತಪ್ಪದೆ ಗುಣಗಬೇಕು, ಅನುಸರಿಸಬೇಕು ಅದು ಮಾತ್ರ ಕನಕದಾಸರಿಗೆ ನಾವು ತೋರುವ ಗೌರವ. ಕನಕ ಜಯಂತಿಗೊಂದು ಸಾರ್ಥಕತೆ. ಕನಕದಾಸರ ಸಂದೇಶ, ಆಶಯ ಎಲ್ಲರನ್ನೂ ಮುಟ್ಟಲಿ.
ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಬುದ್ಧ, ಬಸವ, ಜೈನ, ಮೀರಪಂಥ, ನಾಥಪಂಥ, ಕಬೀರ ಪಂಥ, ಚೈತನ್ಯಪಂಥ... ಮುಂತಾದವುಗಳೊಂದಿಗೆ ‘ದಾಸಪಂಥ’ವು ಒಂದು. ಈ ಪಂಥ ನಮ್ಮ ಸಂಸ್ಕøತಿಯಲ್ಲಿ ಅಮೂಲ್ಯ ಸ್ಥಾನ ಹೊಂದಿದೆ. ದಾಸರು ತಮ್ಮ ಕೀರ್ತನೆಗಳನ್ನು ಅನುಭಾವಾತ್ಮಕ ನೆಲೆಯಲ್ಲಿ ರಚಿಸಿದ್ದು ಬದುಕಿನ ಸರಳ ಸತ್ಯವನ್ನು ಸಾರುವ ಅವು ಇಂದಿಗೂ ಪ್ರಸ್ತುತವಾಗಿವೆ, ದಾಸರು ಎಂದಾಕ್ಷಣ ನಮ್ಮ ಸ್ಮøತಿಗೆ ಬರುವುದು ಪುರಂದರದಾಸರು ಮತ್ತು ಕನಕದಾಸರು.
ಲೋಕಹಿತಕಾರಿಯಾಗಿ ಬಾಳಿದ ಕನಕದಾಸರು ಈ ನಾಡು ಕಂಡ ಒಬ್ಬ ಮೌನ ಹೋರಾಟಗಾರ. ಭಾರತೀಯ ಸಾಮಾಜಿಕ-ಸಾಹಿತ್ಯಕ ದೀರ್ಘಪರಂಪರೆಯಲ್ಲಿ ಕನ್ನಡ ಹರಿದಾಸಪಂಥದ ಕನಕದಾಸರಿಗೊಂದು ಅನನ್ಯ ಸ್ಥಾನವಿದೆ. ಅಂದಿಗೆ ಕೀಳೆಂಬ ಕುಲದಲ್ಲಿ ಹುಟ್ಟಿ ತಮ್ಮ ಸ್ವಸಾಮಥ್ರ್ಯ, ಸ್ವಪರಿಶ್ರಮ ಮತ್ತು ಸುಜ್ಞಾನದಿಂದ ಸದೃಢವಾದ ವ್ಯಕ್ತಿತ್ವವನ್ನು ಅರ್ಜಿಸಿಕೊಂಡು, ಹಿಂದುಧರ್ಮದಲ್ಲಿ ತುಂಬಿರುವ ಮೇಲು-ಕೀಳೆಂಬ ಮತ-ಮೌಢ್ಯವನ್ನು ಅಕ್ಷರದ ಮೂಲಕ ಪ್ರಶ್ನಿಸುತ್ತ, ಮೇಲರಿಮೆಯ ಜನರಿಗೆ ಪ್ರತಿಸವಾಲು ಹಾಕಿ, ಪ್ರತಿಭಟನೆಯ ಎಳೆಗಳ ನಡುವೆಯೇ ಅಂದಿನ ಸಮಾಜಕ್ಕೆ ಹೊಸ ಚಿಂತನೆಯನ್ನು ನೀಡಿದ್ದೂ ಒಂದು ಪ್ರಮುಖ ಘಟ್ಟವೆಂದೇ ಹೇಳಬಹುದು. ಕತ್ತಿಹಿಡಿದು ಕಲಿಯಾಗಿ, ಕಂಟ (ಬರೆಯುವ ಲೇಖನ ಸಾಮಗ್ರಿ) ಹಿಡಿದು ಕವಿಯಾಗಿ, ಹರಿಪಾರಮ್ಯಕ್ಕೆ ಶರಣಾಗಿ ಕನ್ನಡ ಸಾರಸ್ವತಲೋಕದಲ್ಲಿ ತಮಗೊಂದು ಉನ್ನತ ಸ್ಥಾನವನ್ನು ಕಂಡುಕೊಂಡಿದ್ದಾರೆ. ಗುರು ವ್ಯಾಸರಾಯರ ಮಾರ್ಗದರ್ಶನದೊಂದಿಗೆ ಪುರಂದರದಾಸರ ಸಜ್ಜನ ಸಹವಾಸದೊಂದಿಗೆ ಹರಿದಾಸರಾಗಿ ತಮ್ಮ ಬದುಕನ್ನು ರೂಢಿಸಿಕೊಂಡ ಕನಕದಾಸರು, ಆಧ್ಯಾತ್ಮಿಕ ಹಂಬಲದೊಂದಿಗೆ ತಳ ಸಮುದಾಯಗಳ ಬೆಂಬಲಕ್ಕೆ ನಿಂತ ಅಪೂರ್ವ ವ್ಯಕ್ತಿತ್ವದ ಸಿದ್ಧಿಸಾಧಕರು.
ಆಲಯದಿಂದ ಬಯಲಿಗೆ
ಕನಕದಾಸರ ಬದುಕಿನಲ್ಲಿ ಸಾಮಾನ್ಯವಾಗಿ ಎರಡು ಹಂತಗಳನ್ನು ಗುರುತಿಸಲಾಗುತ್ತದೆ. ಅವೆಂದರೆ-ಮೊದಲು ನಾಯಕನಾಗಿದ್ದವರು, ಅನಂತರ ದಾಸರದದ್ದು.ಬಹುಶಃ ಈ ಎರಡನ್ನು ಅವರ ಬದುಕಿನ ಬಹಿರಂಗದ ವಿವರಗಳು ಮಾತ್ರ ಎಂದು ಗ್ರಹಿಸುವ ಅಗತ್ಯವಿಲ್ಲವೆಂದು ತೋರುತ್ತದೆ. ಅವರ ಆಂತರಿಕ ವಿಕಾಸದಂತೆಯೇ ಅಭಿವ್ಯಕ್ತಿಯಲ್ಲಿನ ಹೊರಳುದಾರಿಯಾಗಿಯೂ ಇದನ್ನು ಕಾಣಬಹುದು.ಕಟ್ಟಿಕೊಂಡಿದ್ದನ್ನೆಲ್ಲ ಬಿಡಿಸಿಕೊಂಡ ವಿಧಾನವಾಗಿಯೂ ಇದನ್ನು ಕಾಣಬಹುದು. ಕಟ್ಟಿಕೊಂಡಿದ್ದನೆಲ್ಲ ಬಿಡಿಸಿಕೊಂಡ ವಿಧಾನವಾಗಿಯೂ ಇದನ್ನು ಗುರುತಿಸಲು ಸಾಧ್ಯವಿದೆ. ಆದರೆ ಒಂದು ಸಂಗತಿಯೆಂದರೆ ಕನಕರ ಬದುಕಿನಲ್ಲಿ ಏನೇನು ಆಯಿತೋ ಅದಾವುದನ್ನೂ ಅವರು ಪೂರ್ವಯೋಜಿತ ಮಾದರಿಯಲ್ಲಿ ಮಾಡಲಿಲ್ಲವಂತೆ; ಅವರ ನಂಬಿದ ದೇವನು ಅದನ್ನು ಆ ರೀತಿಯಲ್ಲಿ ಮಾಡಿಸಿದನಂತೆ. ಮಾಡುವುದರಿಂದ ಬಿಡಿಸಿಕೊಂಡು ಮಾಡಿಸಿಕೊಳ್ಳುವ ಸಂಗತಿಗೆ ತನ್ನನ್ನು ಒಪ್ಪಿಸಿಕೊಂಡದ್ದು ಕನಕರು ತುಳಿದ ದಾಸನ ದಾರಿಯೂ ಹೌದು.
ಈ ಕಟ್ಟುವಿಕೆ ಮತ್ತು ಬಿಚ್ಚುವಿಕೆಗಳ ಹೆಣಿಗೆಯಲ್ಲೇ ಕನಕರ ಹೆಜ್ಜೆಯ ಗುರುತುಗಳಿವೆ. ಆದರೆ ಕನಕರ ಪಾಲಿಗೆ ಇವೆರಡೂ ಒಂದರೊಡನೆ ಒಂದು ಅತ್ಯಂತ ವ್ಯಾವರ್ತಕವಾದ, ಆತ್ಯಂತಿಕವಾಗಿ ನಿರಪೇಕ್ಷವಾದ ಸಂಗತಿಗಳೇನೂ ಆದಂತೆ ಕಾಣುವುದಿಲ್ಲ. ಆದ್ದರಿಂದಲೇ ಅದನ್ನು ಹೆಣಿಗೆ ಎಂದು ಕರೆದದ್ದು. ಅವೆರಡರ ನಡುವೆ ಗೆರೆ ಕೊರೆಯಲು ಬರುವಂತಿಲ್ಲ. ಆಲಯದಿಂದ ಬಯಲಿಗೆ ಸಾಗುವುದೆಂದರೆ ಆಲಯದೊಳಗೆ ಇರುವ ಬಯಲನ್ನು ಬಯಲಿನೊಳಗೇ ಇರುಯವ ಆಲಯವನ್ನೂ ವಿವೇಚಿಸಿಕೊಳ್ಳುವ ದಾರಿಯೂ ಹೌದು. ಈ ಜಿಜ್ಞಾಸೆಗೆ ಕನಕರು ಮುಖಾಮುಖಿಯಾದುದಕ್ಕೆ ಅವರ ಮಾತಿನಲ್ಲೇ ನಿದರ್ಶನಗಳಿವೆ. ‘ಬಯಲು ಆಲಯದೊಳಗೋ ಆಲಯವು ಬಯಲೊಳಗೋ ಬಯಲು ಆಲಯವೆರಡು ನಿನ್ನೊಳಗೊ ಹರಿಯೇ’ ಎಂಬ ಉಲಿ ಈ ಹಿನ್ನೆಲೆಯಿಂದಲೂ ಬಂದಿರಲು ಸಾಕು, ಈ ಬಯಲು-ಆಲಯಗಳ ರೂಪಕದಲ್ಲೇ ಕನಕರ ಪ್ರತಿಬಿಂಬವಿದೆ.
ವರ್ಣಭೇದ, ವರ್ಗಭೇದಗಳು ಪ್ರಧಾನವಾಗಿದ್ದ 16ನೇ ಶತಮಾನದ ಪೂರ್ವಾರ್ಧ ಕಾಲವದು.ಕುರುಬರ ಕುಲದಲ್ಲಿ ಹುಟ್ಟಿದರೂ ತನ್ನ ಪರಿಶುದ್ಧ ಭಗವದ್ಭಕ್ತಿ ಹಾಗೂ ಪಾಂಡಿತ್ಯಗಳಿಂದ ಭಾಗವತ ದಾಸಕೂಟದ ಒಬ್ಬ ಶ್ರೇಷ್ಠ ಹರಿದಾಸರೆನಿಸಿದರು. ಅವರ ಬದುಕು ಪಡೆದುಕೊಂಡ ತಿರುವುಗಳನ್ನು ನೋಡಿದರೆ ಯಾರಿಗಾದರೂ ರೋಮಾಂಚನವಾಗುತ್ತದೆ. ಕನಕದಾಸರ ಹುಟ್ಟು ಹೆಸರು ‘’ತಿಮ್ಮಪ್ಪ.’’ಬಾಲ್ಯದಲ್ಲೇ ಯುದ್ಧಕಲೆಯಲ್ಲಿ ನಿಪುಣನಾಗಿದ್ದ ತಿಮ್ಮಪ್ಪ ತಂದೆಯ ನಂತರ ಪಾಳೆಯಗಾರನಾಗಿ ತಿಮ್ಮನಾಯಕನಾದ. ತನ್ನ ಪಾಳೆಯಗಾರಿಕೆಯಲ್ಲಿ ತನ್ನೂರಿನ ಭೂಮಿಯಲ್ಲಿ ಅಪಾರ ಸುವರ್ಣನಿಧಿ ದೊರೆತು “ಕನಕನಾಯಕ”ನಾದ. ಮುಂದೊಂದು ದಿನ ಯುದ್ಧ ಭೂಮಿಯಲ್ಲಿ ಹರಿಯ ದರ್ಶನವಾದಂತಾಗಿ ವೈರಾಗ್ಯದೆಡೆಗೆ ಮನಸ್ಸು ಹರಿಯಿತು. ಖಡ್ಗ ಹಿಡಿದ ಕೈ ಏಕನಾದ ತಂಬೂರಿ ಹಿಡಿಯಿತು. ಹೆಗಲಿಗೆ ಕಂಬಳಿ ಹಾಕಿ, ತಂಬೂರಿ ಮೀಟುತ್ತ, ಹರಿಯ ನಾಮಸ್ಮರಣೆ ಮಾಡುತ್ತ ಲೋಕೋದ್ಧಾಕ್ಕಾಗಿ ಲೋಕ ಸಂಚಾರ ಹೊರಟು “ಕನಕದಾಸ”ರಾದರು. ಮಾನವರನ್ನು ಮಾನವತೆಯ ಮಹೋನ್ನತೆಯತ್ತ ಕರೆದುಕೊಂಡು ಹೋಗಲು ಆಹೋರಾತ್ರಿ ಶ್ರಮಿಸಿದರು.
ಕನಕದಾಸರ ಒಂದು ವೈಶಿಷ್ಟ್ಯವೆಂದರೆ ಭಕ್ತಿಯ ಭಾವಪರವಶತೆ. ಅವರು ಭಗವಂತನಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಕಾಗಿನೆಲೆಯಾದಿ ಕೇಶವನಲ್ಲಿ ಅವರು ಹೀಗೆ ನಿವೇಧಿಸಿಕೊಳ್ಳುತ್ತಿದ್ದರು.–“ದೀನನಾನು, ಸಕಲಲೋಕಕ್ಕೂ ದಾನಿನೀನು. ಅಜ್ಞಾನಿ ನಾನು, ಮಹಾಮಹಿಮನು ನಾನು. ಸುಜ್ಞಾನ ಮೂರ್ತಿ ನನ್ನನ್ನು ರಕ್ಷಿಸುವ ಹೊಣೆ ನಿನ್ನದಯ್ಯ” ಅವರು ಮುಂದುವರಿದು ಹೇಳುತ್ತಾರೆ- “ಸಕಲಕ್ಕೂನೀನೇ ಕಾರಣವಿರುವಾಗ ಇಲ್ಲಿ ನನ್ನದೆನ್ನುವುದು ಏನು ಇಲ್ಲ. ನನ್ನ ಸುಖ-ದುಃಖಗಳು ನಿನ್ನ ದೇಣಿಗೆ”. ಕನಕದಾಸರು ನಿಜವಾದ ವೈರಾಗ್ಯ ಮೂರ್ತಿಗಳಾಗಿದ್ದರು. ಅಧ್ಯಾತ್ಮಿಕ ಸೆಲೆಯ ಸೀಮ ಪುರುಷರಾಗಿದ್ದರು. ಅವರ ಭಕ್ತಿಗೆ ಮೆಚ್ಚಿ, ಪರಿಶುದ್ಧ ಕರೆಗೆ ಓಗೊಟ್ಟು ಸಾಕ್ಷಾತ್ ಶ್ರೀಕೃಷ್ಣನೇ ಕನಕನತ್ತ ತಿರುಗಿ ದೇವಾಲಯದ ಗೋಡೆ ಒಡೆದು ದರ್ಶನ ನೀಡಿದ್ದು ಅವರ ನಿರ್ಮಲ ಭಕ್ತಿಗೆ ಸಾಕ್ಷಿ!
ಸ್ವರ್ಗಕ್ಕೆ “ನಾನು”ಹೋದರೆ ಹೋದೇನು
ಮಹಾಜ್ಞಾನಿ ವ್ಯಾಸರಾಯರ ಆಶ್ರಮದ ಪಾಠಶಾಲೆ. ಎಲ್ಲ ಶಿಷ್ಯರು ಗುರು ವ್ಯಾಸರಾಯರಿಗಾಗಿ ಕಾಯುತ್ತಿದ್ದಾರೆ. ಅದೋ, ಗುರುಗಳು ಬಂದೇ ಬಿಟ್ಟರು. ಶಿಷ್ಯರೆದ್ದು ವಂದಿಸಿ ಕುಳಿತರು. ವ್ಯಾಸರಾಯರು ಪಾಠದ ಮಧ್ಯ ಶಿಷ್ಯರನ್ನು ಕೇಳಿದರು.–“ನಿಮ್ಮಲ್ಲಿ ಯಾರು ಸ್ವರ್ಗಕ್ಕೆ ಹೋಗಬಲ್ಲಿರಿ?”ಬಹಳಷ್ಟು ಶಿಷ್ಯಂದಿರು ಅಂದುಕೊಂಡರು-‘ಇದೆಂಥ ಪ್ರಶ್ನೆ?”ಅಷ್ಟರಲ್ಲಿ ಶಿಷ್ಯನ್ನೊಬ್ಬ ಎದ್ದುನಿಂತು ಹೇಳಿದ–“ನಾನು”ಹೋದರೆ ಹೋದೇನು. ಅವನ ಮಾತು ಕೇಳಿ ಎಲ್ಲ ಶಿಷ್ಯರು ನಕ್ಕರು. ಆಗ ಗುರುಗಳು ಹೇಳಿದರು- “ಅರ್ಥಮಾಡಿಕೊಳ್ಳದೇ ನಗುವ ನೀವೆಲ್ಲರೂ ಅಜ್ಞಾನಿಗಳು ನಿಮ್ಮಲ್ಲಿ ಇವನ್ನೊಬ್ಬನೇ ಜ್ಞಾನಿ!” ಆ ಅನುಭಾವಿ ಶಿಷ್ಯರೇ ಕನಕದಾಸರು. ಕನಕರ ಹೇಳಿಕೆಯನ್ನು ಇತರ ಶಿಷ್ಯರಿಗೆ ವಿವರಿಸುತ್ತ ವ್ಯಾಸರಾಯರು ಹೇಳುತ್ತಾರೆ.–“ಇಲ್ಲಿ‘ನಾನು’ ಎಂದರೆ ಅಹಂಕಾರ! ಅದು ಹೋದರೆ ಮಾತ್ರ ಮನುಷ್ಯ ಸ್ವರ್ಗಕ್ಕೆ ಹೋಗಬಹುದು”.
ಕನ್ನಡದ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಒಂದು ಮಹತ್ವದ ಘಟ್ಟವಾದರೆ ಹದಿನಾರನೇ ಶತಮಾನ ಇನ್ನೊಂದು ಮಹತ್ವದ ಘಟ್ಟ. ಈ ಹದಿನಾರನೆಯ ಶತಮಾನದಲ್ಲಿ ಹರಿದಾಸ ಸಾಹಿತ್ಯ ಹೆಚ್ಚು ಜನಸಮ್ಮುಖವಾಯಿತು. ಈ ಕಾಲದಲ್ಲಿ ಕನ್ನಡ ತನ್ನ ಬಿಗುವಿನ ಹಾದಿಯನ್ನು ತೊರೆಯಿತು. ಜನಸಾಮಾನ್ಯರ ನಾಲಿಗೆಯಲ್ಲಿ ಅರಳುವ, ಹೊರಳುವ ದೇಶೀ ರೂಪದಲ್ಲಿ ಅವತರಿಸಿತು. ಜನಮಾನಸಕ್ಕೆ ಹತ್ತಿರವಾದ ಭಾಷೆ, ಶೈಲಿ, ದರ್ಶನ, ಯೋಚನೆ, ಅಭಿವ್ಯಕ್ತಿಗಳು ಅರಹುದಹುದುಬಿ ಎನ್ನುವಂತೆ ಅಪೂರ್ವವಾಗಿ ಸಾಹಿತ್ಯದ ಸ್ವರೂಪವನ್ನು ಬದಲಿಸಿತು. ಇದಕ್ಕೆ ಹರಿದಾಸ ಪಂಥ ಎನ್ನುವ ಹೆಸರು ಬಂತು.ಈ ಹರಿದಾಸರು ಸಮಾಜ ಶುದ್ದೀಕರಣದ ಕನಸು ಕಂಡಿದ್ದರು. ಭಾಗವತ ಧರ್ಮ ಮತ್ತು ಮಧ್ವಮತ ತತ್ತ್ವ ಇವರೆಲ್ಲರ ಬದುಕಿನ ಅಡಿಗಲ್ಲಾಗಿತ್ತು. ಕೀರ್ತನೆ ಸಂವಹನ ಮಾಧ್ಯಮವಾಯಿತು.
ಕನಕದಾಸರು ಯಾವುದೊಂದು ಮತದ ಬಂಧನಕ್ಕೂ ಕಟ್ಟುಬಿದ್ದವಲ್ಲ. ರಾಮಾನುಜ ಮತ ದೀಕ್ಷೆ, ಮಧ್ವಗುರುವಿನ ಪ್ರೀತಿ, ಜನಸಾಮಾನ್ಯರ ಬಗ್ಗೆ ಅಪಾರ ಕಳಾಕಳಿ... ಹೀಗೆ ಬಾಳಿದ ಸ್ವತಂತ್ರ ಚೇತನರವರು. ಎಲ್ಲಾ ಮತಧರ್ಮಗಳ ಒಳಿತನ್ನು ಸ್ವೀಕರಿಸಿ ಸ್ವತಂತ್ರ ವ್ಯಕ್ತಿತ್ವದ ತೇಜೋಮಹಿಮರವರು. ತಾನು ಅಂತಿದ್ದುದು ಮಾತ್ರವಲ್ಲ, ಇತರರನ್ನು ಇತರರಂತೆ ಇರಲು ಪ್ರೇರೇಪಿಸಿದವರು. ಸಮಾಜದ ಶೋಷಿತ ಬಡವರ್ಗದವರ ಹಿತವನ್ನು ಬಯಸಿದವರು. ಹಾಗಾಗಿಯೇ ಇವರನ್ನು ಬೇಲೂರು ಕೇಶವದಾಸರು ಜಾತಿ-ಜಾತಿಗಳಲ್ಲಿ ತಿರಸ್ಕøತರಾದವರಿಗೆ ಪುರಸ್ಕಾರ ನೀಡಿದವರು ಕನಕದಾಸರು ಎಂದಿದ್ದಾರೆ. ಸುಲಿಗೆ ಮಾಡುವ ಪ್ರವೃತ್ತಿಯನ್ನು ನಿವಾರಿಸುವಲ್ಲಿ ಕಂಕಣಬದ್ಧರಾಗಿದ್ದರು ಎಂಬುದನ್ನು ಇವರ ರಾಮಧ್ಯಾನ್ಯ ಚರಿತೆ ಹಾಗೂ ಕೆಲ ಕೀರ್ತನೆಗಳು ಸಾರಿ ಹೇಳುತ್ತಿವೆ.
ನಾಡೆಲ್ಲ ಹುಡುಕಿದರೂ ಸಮರಾರಿಲ್ಲ ಕನಕಗೆ
ಮಾನವ ಬದುಕನ್ನು ಸರಳಾತೀಸರಳವಾಗಿ ಕೀರ್ತನೆಗಳ ಮೂಲಕ ಕಟ್ಟಿಕೊಟ್ಟ ದಾಸರ ಮಾತುಗಳ ಹಿಂದಿನ ಅರ್ಥಗಳನ್ನು ಅವು ಇರುವಂತೆಯೇ ಗ್ರಹಿಸುವುದು ಇಂದಿನ ಅಗತ್ಯವಾಗಿದೆ.ನಮ್ಮ ಕಾಲದ ದುರಂತ ಎಂದರೆ; ಕನಕದಾಸರಂತಹ ಮಹನೀಯರು ತಮ್ಮ ಅನುಭವದ ಹಿನ್ನೆಲೆಯಲ್ಲಿ ರಚಿಸಿದ ಬರಹಗಳ ಆಧಾರದಲ್ಲಿ ಸಾಮಾಜವನ್ನು ಸಂಸ್ಕøತಿಯನ್ನು, ಅವುಗಳಲ್ಲಿನ ತಾರತಮ್ಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಬದಲಾಗಿ ಅವುಗಳನ್ನು 18 ಮತ್ತು 19 ನೇಶತಮಾನದಲ್ಲಿ ಯೂರೋಪಿಯನ್ನರು ತಮ್ಮ ಅನುಭವದ ಹಿನ್ನಲೆಯಲ್ಲಿ ಈ ನೆಲದ ಯಾವ ಗ್ರಹಿಕೆಗೂ ಸಂಬಂಧವಿಲ್ಲದಂತೆ ಸೃಷ್ಟಿಸಿದ ಚೌಕಟ್ಟಿನೊಳಗೆ ಗುರುತಿಸಿ ವಿವರಿಸುತ್ತಿದ್ದೇವೆ. ಆ ಮೂಲಕ ನಿಜ ಅರ್ಥದಲ್ಲಿ ಇಂದು ನಾವು ಹೊಸಹತುಶಾಹಿ ನಿರ್ಮಿಸಿದ ಭಾರತದ ಸಮರ್ಥನೆಗೆ ಕನಕಾದಿ ಮಹನೀಯರ ಮಾತುಗಳನ್ನು ಬಳಸುತ್ತಿದ್ದೇವೆ.
ಅದನ್ನೇ ಪ್ರಗತಿ ಎಂದು ತಿಳಿದ್ದಿದ್ದೇವೆ. ಶಿಕ್ಷಣದ ಹೆಸರಿನಲ್ಲಿ ಅದನ್ನೇ ಕಲಿಸುತ್ತಿದ್ದೇವೆ. ನಮ್ಮ ಈ ಪ್ರವೃತ್ತಿಯಿಂದ ತಮ್ಮ ಅನುಭವದ ಮೂಲಕ ಜಗತ್ತಿಗೆ ಮಾದರಿಯಾಗಬಹುದಾದ ಚಿಂತನೆಗಳನ್ನು ರಚಿಸಿದ ಕನಕರಂತಹ ಅನುಭಾವಿಗಳು ಜಗತ್ತಿನ ಶ್ರೇಷ್ಠ ವಿದ್ವಾಂಸರ ಪಟ್ಟಿಯಲ್ಲಿ ಕಾಣಲಾಗಿಲ್ಲ ಎಂಬುದು ಒಂದು ನೂನ್ಯತೆಯಾದರೆ, ಇನ್ನೊಂದು ಇವತ್ತಿನ ಆರೋಗ್ಯ ಪೂರ್ಣ ಸಮಾಜದ ನಿರೂಪಣೆಗೆ ಬೇಕಾಗಿರುವ ತಿಳಿವನ್ನು ರೂಪಿಸಲು ಕನಕರಂತವರು ಎಷ್ಟು ಮುಖ್ಯರೆಂಬುದನ್ನು ವಿವರಿಸುವ ಮಾದರಿಯ ಕೊರತೆಯನ್ನು ಎದುರಿಸುತ್ತಿದ್ದೇವೆ. ಈ ಎಲ್ಲಾ ವಿಶ್ಲೇಷಣೆಗಳು ನಾವು ಕನಕದಾಸರನ್ನು ನಮ್ಮ ಕಾಲದಲ್ಲಿ ಮರು ಓದು ಏಕೆ ಮಾಡಬೇಕು ಎಂಬ ಅಂಶಗಳತ್ತ ನಮ್ಮ ಗಮನವನ್ನು ಸೆಳೆಯುತ್ತದೆ.
ಈ ನೆಲೆಯಲ್ಲಿ ನಾವು ಮೊದಲು ಮಾಡಬಹುದಾದ ಕೆಲಸ ಈಗಾಗಲೆ ಸಂಸ್ಕøತ ಮತ್ತು ಪಶ್ಚಿಮದ ಚೌಕಟ್ಟುಗಳಲ್ಲಿ ಸಿಕ್ಕಿಕೊಂಡಿರುವ ಕನಕರ ಚಿಂತನೆಗಳನ್ನು ಮುಕ್ತಗೊಳಿಸಿ, ಅವರು ರೂಪಿಸಿದ ಸ್ವತಂತ್ರ್ಯ, ಚಿಂತನ ಧಾರೆಯನ್ನು ಗುರುತಿಸುವ/ಓದುವ ಮಾದರಿಗಳನ್ನು ಕಟ್ಟಿಕೊಳ್ಳುವುದು ಆಗಬೇಕಿದೆ. ಆಗ 16ನೇ ಶತಮಾನದ ಕನಕದಾಸರನ್ನು ಇಂದು ಹೇಗೆ ಓದಬೇಕು ಎಂಬ ಪ್ರಶ್ನೆಗೆ ಉತ್ತರ ಧಕ್ಕಬಹುದು. ಜತೆಗೆ ಮಾರುಕಟ್ಟೆ ಮತ್ತು ಧಾರ್ಮಿಕ ಮೂಲಭೂತವಾದಗಳಿಂದ ಆಳ್ವಪಡುತ್ತಿರುವ 21ನೇ ಶತಮಾನದ ಜನಸಮುದಾಯಕ್ಕೆ ‘ಆತ್ಮ ಯಾವ ಕುಲ, ಜೀವ ಯಾವ ಕುಲ, ತತ್ತವೇಂದ್ರೀಯಗಳ ಕುಲ ಪೇಳಿರಯ್ಯ...’ ಎಂಬ ಕನಕವಾಣಿಯನ್ನು ಸಮರ್ಥವಾಗಿ ಅನ್ವಯಿಸಿ ವಿವರಿಸಲು ಸಾಧ್ಯವಾಗಬಹುದು. ಈ ದಾರಿ ಆಯ್ದುಕೊಳ್ಳುವ ಮೂಲಕ ಕನಕ ಜಯಂತಿಯನ್ನು ಅರ್ಥಪೂರ್ಣಗೊಳಿಸಬಹುದು.
ವೇದಾಂತದ ಮರ್ಮವನ್ನು, ಆಧ್ಯಾತ್ಮದ ಗುಟ್ಟನ್ನು ಇಷ್ಟು ಸರಳವಾಗಿ, ಹೃದ್ಯವಾಗಿ ತಿಳಿಸಿಕೊಟ್ಟ ಕನಕದಾಸರು ಒಬ್ಬ ವೇದಾಂತಿಯಷ್ಟೆ ಅಲ್ಲ. ಅವರು ವಿಜಯನಗರ ಅರಸರ ಕಾಲದಲ್ಲಿ ಪಾಳೆಪಟ್ಟಿನ ಒಬ್ಬ ನಾಯಕರು ಆಗಿದ್ದರು. ಅಧಿಕಾರ, ಅಂತಸ್ತು, ಢಣಾಯಕ ಪದವಿಯ ಸುಖಲೋಲುಪತೆ, ನಗಾರಿ ನೋಬತ್ತಿಬ ಆಕರ್ಷಣೆ ಮುಂತಾದ ವೈಭವಗಳು ಅವರನ್ನು ಕೈಬೀಸಿ ಕರೆದಿದ್ದವು. ಕೆಲಕಾಲ ಅವನ್ನು ಅವರು ಅನುಭವಿಸಿಯೂ ಇದ್ದರು. ಆದರೆ ಅವರು ತುಡಿತವಿದ್ದದ್ದು ಸಮಾಜೋದ್ದಾರಕ್ಕಾಗಿ ಸಮಾಜದಲ್ಲಿ ನೊಂದು ಬೆಂದವರ ಹಿತಕ್ಕಾಗಿ. ಅವರಿಗಾಗಿ ಏನಾದರೂ ಮಾಡಬೇಕು ಅನ್ನುವುದಕ್ಕಾಗಿ, ಅದಕ್ಕಾಗಿ ಅವರು ಅಧಿಕಾರ, ಅಂತಸ್ತು, ವೈಭವಗಳನ್ನು ತೊರೆದು ಏಕನಾದ ಹಿಡಿದು, ಹೆಗಲಿ ಕಂಬಳಿ ಹೊದೆದು, ಅವಧೂತನಂತೆ, ಯೋಗಿಯಂತೆ ಮಾರ್ಪಾಡಾಗಿ ಬಿಟ್ಟರು.
ದಾಸಶಿರೋಮಣಿ ಎನ್ನಿಸಿಕೊಂಡರು. ಅಪ್ರತಿಮ ವಾಗ್ಗೇಯಕಾರರೆನಿಸಿಕೊಂಡರು. ಕವಿಶ್ರೇಷ್ಠರಾಗಿ ಮೆರೆದರು. ಪ್ರಾಂತದರ್ಶಿ ಎನಿಸಿಕೊಂಡರು. ಮಹಾಮಾನವತಾವಾದಿಯಾಗಿ ನಾಡಿನ ಹಳ್ಳಿಯ ಒಂದೊಂದು ಗುಡಿಸಲಿನಲ್ಲೂ ಪ್ರೀತಿಯ ದೀಪ ಹಚ್ಚಿದರು. ದೀನದಲಿತರಿಗೆ ಸ್ಪಂದಿಸಿದರು. ಮಾನವೀಯತೆ, ಅಂತಃಕರಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಮನುಷ್ಯನನ್ನು ದೈವತ್ವಕ್ಕೆ ಎತ್ತುವ ಅಮೃತ ಚೇತನವಾದರು. ಕನ್ನಡ ನಾಡಿನಲ್ಲಿ ದಾಸ ಸಾಹಿತ್ಯಕ್ಕೆ ಅದರದ್ದೇ ಆದ ಒಂದು ವಿಶಿಷ್ಟ ಪರಂಪರೆ ಇದೆ. ಆಧ್ಯಾತ್ಮವನ್ನು ಸಮಾಜಮುಖಿಯಾಗಿಸಿದ್ದು, ತನ್ಮೂಲಕ ಜನಸಾಮಾನ್ಯರಲ್ಲಿ ಪರಿವರ್ತನೆ, ಪಾವಿತ್ರ್ಯ, ಪ್ರಮಾಣಿಕತೆ ತಂದುಕೊಟ್ಟಿದ್ದು, ಎಲ್ಲದಕ್ಕಿಂತ ಮುಖ್ಯವಾಗಿ ಆಧ್ಯಾತ್ಮವನ್ನು ಪಂಡಿತರ ಕೋಟೆಯಿಂದ, ಮಡಿವಂತರ ಸೆರೆಯಿಂದ ಬಿಡಿಸಿ, ಜನಸಾಮಾನ್ಯರಿಗೂ ತಲುಪಿಸಿದ್ದು ಅವರ ಹೆಗ್ಗಳಿಕೆ. ಕನಕದಾಸರಂತೂ ಗ್ರಾಮೀಣ ಭಾಗದ ಕನ್ನಡ ಜನರ ಆಡುಮಾತಿಗೆ ನಾಲಗೆಯಾಗಿ ಕೆಲಸ ಮಾಡಿದರು. ಪರಿಪಕ್ವ ಜೀವನಾನುಭವ, ವಿವೇಕ, ಸಮಚಿತ್ತ, ಜಾನಪದ ಸಿದ್ಧಿ, ಭಾಷೆಯ ಮೇಲಿನ ಹಿಡಿತ ಮೊದಲಾದವುಗಳಿಂದ ದಾಸ ಸಾಹಿತ್ಯಕ್ಕಷ್ಟೇ ಅಲ್ಲ. ಇಡೀ ಕನ್ನಡ ಸಾಹಿತ್ಯ ಲೋಕಕ್ಕೇ ಒಂದು ಹೊಸ ಆಯಾಮವನ್ನು ತಂದು ಕೊಟ್ಟರು.
ಸರಳ ಮಾರ್ಗ
ಸಂತರಾದ ಕನಕರು ತೋರಿದ ಮಾರ್ಗ ಅಸಾಧಾರಣವಲ್ಲ. ಎಲ್ಲರೂ ಅನುಸರಿಸಬಹುದಾದ ಸರಳ ಮಾರ್ಗ ಅದು.ಆದರೆ ನಾವು ಅದನ್ನು ಮರೆತಿದ್ದೇವೆ. ಈ ಭೂಮಿಗೆ ನಾವೆಲ್ಲ ಎಲ್ಲಿಂದಲೋ ಬಂದ ಅತಿಥಿಗಳು.ಎಷ್ಟು ಕಾಲ ಇರುತ್ತೇವೋ ಯಾರಿಗೂ ತಿಳಿದಿಲ್ಲ. ಅನ್ಯರ ಮನೆಗೆ ಹೋದಾಗ ನಾವೆಷ್ಟು ಎಚ್ಚರದಲ್ಲಿ ಇರುತ್ತೇವೋ ಅಷ್ಟೇ ಎಚ್ಚರದಲ್ಲಿ ಇಲ್ಲೂ ಇರಬೇಕಾದುದು ನಮ್ಮ ಕರ್ತವ್ಯ.ಏಕೆಂದರೆ ಇಲ್ಲಿರುವುದು ಯಾವುದೂ ನಮಗೆ ಯಾರಿಗೂ ಸೇರಿದ್ದಲ್ಲ. ಹೊಟ್ಟೆ ಬಟ್ಟೆಗಳ ಕನಿಷ್ಠ ಅಗತ್ಯ ಪೂರೈಕೆಯೊಂದಿಗೆ ಕಲೆ, ಸಾಹಿತ್ಯ, ಸಂಗೀತಗಳ ಆರಾಧನೆ ಮಾಡುವುದಷ್ಟೇ ನಮ್ಮ ಕೆಲಸ. ಅದರಿಂದ ಸಕಲ ಜೀವಜಗತ್ತಿಗೂ ಕ್ಷೇಮ ಎಂಬುದನ್ನು ತೋರಿಸಿದ್ದಾರೆ ಕನಕರು.
ಭಗವಂತ, ದೇವರು ಎಂದಾಕ್ಷಣ ಅವನನ್ನು ಕಾಣಲು ವೇದ, ಶಾಸ್ತ್ರಗಳ ಅಧ್ಯಯನ, ದ್ವಿಜತ್ವ ಇತ್ಯಾದಿಗಳ ಕಟ್ಟುಪಾಡುಗಳನ್ನು ತೋರಿಸಲಾಗುತ್ತದೆ.ಆದರೆ, ಅವನನ್ನು ಕಾಣಲು ಅದೆಲ್ಲದರ ಅಗತ್ಯವಿಲ್ಲ ಯಾರು ಬೇಕಾದರೂ ಸಾಧನೆಯ ಮೂಲಕ ಸಾಧಿಸಬಹುದು ಎಂದು ಮಧ್ಯಯುಗದಲ್ಲಿ ಬಾಳಿ ಬದುಕಿದ ಕನಕದಾಸರು ತಮ್ಮ ಬದುಕಿನ ಮೂಲಕ ತೋರಿಸಿ ಕೊಟ್ಟರು.ಭಗವಂತನನ್ನು ಕಾಣಲು ನಿರ್ದಿಷ್ಟ ಜಾತಿ, ಮತ, ಕುಲಗಳ ಅಗತ್ಯವಿಲ್ಲ. ಸಮಾಜದ ಕೆಳ ಜಾತಿಯೊಂದರಲ್ಲಿ ಹುಟ್ಟಿ, ತನ್ನ ಸ್ವಂತದ ಸಾಧನೆಯಿಂದ ತಿಳುವಳಿಕೆಯ ಅತ್ಯುನ್ನತ ಹಂತವನ್ನು ಮುಟ್ಟಿದವರು ಕನಕದಾಸರು. ಹಾಗೆ ಸಾಧನೆಯನ್ನು ಮಾಡುವಾಗ ಹೆಜ್ಜೆ ಹೆಜ್ಜೆಗೂ ಸಮಾಜದ ವಿರೋಧವನ್ನು ಎದುರಿಸಿದರು. ಅದನ್ನೆಲ್ಲ ಮೆಟ್ಟಿ ನಿಂತು ದಾರ್ಶನಿಕರಾದದ್ದು ಸಣ್ಣ ಮಾತಲ್ಲ.
ಕುಲ ಕುಲವೆನ್ನದಿರಿ
ಹಿಂದಿನ ಎಲ್ಲರಂತೆ ಕನಕದಾಸರು ಬದುಕ್ಕಿದ್ದ ಕಾಲ, ಹುಟ್ಟಿದ ನಿರ್ದಿಷ್ಟ ಜಾತಿ ಯಾವುದರಲ್ಲೂ ಖಚಿತತೆ ಇಲ್ಲ, ಎಲ್ಲದರಲ್ಲೂ ಗೊಂದಲವಿದೆ.ಕುರುಬರು, ಬೇಡರು, ಆದಿ ಬಣಜಿಗರು ಹೀಗೆ ವಿವಿಧ ಜಾತಿಗಳನ್ನು ಅವರಿಗೆ ಅಂಟಿಸಲಾಗಿದೆ. ಅವರ ಸುತ್ತ ಇನ್ನೂ ಅನೇಕ ದಂತ ಕಥೆಗಳು ಹುಟ್ಟಿಕೊಂಡಿವೆ. ಅದರಿಂದಾಗಿ ಅವರ ಕುರಿತು ಇದಮಿತ್ಥಂ ಎಂದು ಹೇಳುವುದು ಇನನಷ್ಟು ಜಟಿಲವಾಗಿದೆ. ಇವೆಲ್ಲವುಗಳ ಮಧ್ಯೆ ಅವರು ರಚಿಸಿದ ಕೃತಿಗಳು ನಮ್ಮ ಕಾಲದವರೆಗೆ ಉಳಿದುಕೊಂಡು ಬಂದದ್ದು ನಮ್ಮ ಭಾಗ್ಯ ಕನ್ನಡ ಸಾರಸತ್ವ ಲೋಕಕ್ಕೆ ಕೀರ್ತನೆಗಳನ್ನಲ್ಲದೆ ಸಾಂಗತ್ಯದಲ್ಲಿ ‘ಮೋಹನ ತರಂಗಿಣಿ’, ಭಾಮಿನಿ ಷಟ್ಪದಿಯಲ್ಲಿ ‘ನಳ ಚರಿತ್ರೆ’, ‘ರಾಮಾಧ್ಯಾನ ಚರಿತ್ರೆ’, ‘ಹರಿಭಕ್ತಿಸಾರ’ ಎಂಬ ಕಾವ್ಯಗಳನ್ನು ರಚಿಸಿದ್ದಾರೆ. ‘ನೃಸಿಂಹಸ್ತವ’ ಎಂಬ ಇನ್ನೊಂದು ಕಾವ್ಯವನ್ನು ಸಾಂಗತ್ಯದಲ್ಲಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆಯಾದರೂ ಆದಿನ್ನೂ ದೊರೆತಿಲ್ಲ. ಇವುಗಳನ್ನೆಲ್ಲ ನೋಡಿದಾಗ ಮತ್ತು ಅದರಿಂದಾಗಿ ವಾಸ್ತವದಲ್ಲಿ ಅವರು ಏರಿದ ಮಟ್ಟವನ್ನು ಗಮನಿಸಿದಾಗ ಉಳಿದೆಲ್ಲ, ಅವರ ಜಾತಿ ಮತ ಕುಲಗಳು, ದಂತ ಕಥೆಗಳು ಗೌಣವಾಗುತ್ತವೆ. ಜಾತಿಯನ್ನು ಮೀರಿ ಬೆಳೆದ ವ್ಯಕ್ತಿತ್ವ ಎಂಬುದು ಮನದಟ್ಟಾಗುತ್ತದೆ.
ಮೌಢ್ಯಾಚಾರಣೆಗೆ ವಿರೋಧ
ಸಮಾಜವನ್ನು ಅವರು ತೀರ ಹತ್ತಿರದಿಂದ ಕಂಡಿದ್ದರಿಂದ ಸಮಾಜದಲ್ಲಿರುವ ಜಾತಿಯತೆ, ಮೇಲು-ಕೀಳು, ಬಡವ-ಬಲ್ಲಿದರೆಂಬ ಭೇದಭಾವ ಹಾಗೂ ಅನೇಕ ಮೌಢ್ಯಾಚರಣೆಗಳನ್ನು ವಿರೋಧಿಸುತ್ತಾರೆ. ಹಿಂದೆ ದಣ್ಣಾಯಕರಾಗಿದ್ದ ಅವರು ಮುಂದೆ ಹರಿದಾಸರಾದರೂ ಸಂದರ್ಭ ಬಂದಾಗ ಅವರ ಧೈರ್ಯ, ಸಾಹಸ ಪ್ರವೃತ್ತಿಯ ಹೃದಯ ಎಂತಹ ಸಂದರ್ಭಗಳು ಎದುರಾದರೂ ಅವುಗಳನ್ನು ಖಂಡಿಸಿ, ಅರ್ಭಟಿಸುತ್ತ ಮೇಲೆದ್ದ ಅವರ ಸಾಹಿತ್ಯದ ಸಾಲುಗಳು ಸಾರ್ವತ್ರಿಕ ಸತ್ಯವಾಗಿವೆ.
ಒಡೆದ ಮಡಿಕೆ ತಂದು ಹಿಡಿದು ನಾಮವ ಮಾಡಿ|
ಕೊಡುವೆ ನೀ ಕಾಸಿಗೆ ಒಂದೊಂದನು |
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ|
ಒಡವೆಯ ಗಳಿಸುವ ಕಡುಲೋಭಿ ಸೆಟ್ಟಿ
ಎಂದು ಹಾಡುತ್ತಾ ತಿರುಪತಿ ತಿಮ್ಮಪ್ಪನನ್ನು ನಿಂದಾಸ್ತುತಿಯ ಮೂಲಕ ಸ್ಮರಿಸುತ್ತಾರೆ.ಇನ್ನೊಂದು ಕೀರ್ತನೆಯಲ್ಲಿ ‘ಆರು ಬದುಕಿದರಯ್ಯ ಹರಿ ನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ’ ಎಂದು ಭಗವಂತನನ್ನು ಕೂಡ ಪ್ರಶ್ನಿಸುತ್ತಾರೆ.ಭಗವಂತನನ್ನೇ ಪ್ರಶ್ನಿಸಿದ ಕನಕದಾಸರು ಸಮಾಜದದಲ್ಲಿರುವ ಅಂಕು-ಡೊಂಕು, ಮೌಢ್ಯ, ಮತಾಚರಣೆಗಳನ್ನು ಕಂಡು ಸಹಿಸಲಾರದೆ ನೇರವಾಗಿ ಖಂಡಿಸುತ್ತಾರೆ.
ಮಂತ್ರಾಕ್ಷತೆಯನ್ನು ಕೈಗೆ ಕೊಟ್ಟು| ಮೋಕ್ಷವನ್ನು
ಹಾರೈಸುವಿರಿ| ಮಂತ್ರವೆಲ್ಲೊ ಅಕ್ಷತೆಯೆಲ್ಲೋ|
ಮೋಕ್ಷವೆಲ್ಲೋ ಮತ್ರ್ಯವೆಲ್ಲೋ| ಹೇಳುವವನು
ಅವಿವೇಕಿ| ಕೇಳುವವನು ಅಜ್ಞಾನಿ||
ಎನ್ನುತ್ತಾರೆ. ಪ್ರಸ್ತುತ ಸಂದರ್ಭದಲ್ಲಿ ಪ್ರತಿಭಟಿಸುತ್ತಿರುವ ಮೌಢ್ಯವನ್ನು ಹಾಗೂ ಮೌಢ್ಯ ಬಿತ್ತುವವರನ್ನು ಹದಿನಾರನೇ ಶತಮಾನದಲ್ಲಿಯೇ ಕನಕದಾಸರು ವಿರೋಧಿಸುತ್ತಾರೆ. ಆ ಮೂಲಕ ಸಮಾಜವನ್ನು ಪರಿವರ್ತನೆ ಮಾಡಲು ತಮ್ಮ ಸಾಹಿತ್ಯವೆಂಬ ಕ್ರಾಂತಿ ಖಡ್ಗವನ್ನು ಬೀಸುತ್ತಾರೆ.
ಸತ್ಯನೊಬ್ಬಮಗ ಶಾಂತನೊಬ್ಬ ಮಗದು-
ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನು|
ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ|
ಹೆತ್ತರೇನು ಇನ್ನು ಹೆರದಿದ್ದರೇನಯ್ಯ?
ಅಪುತ್ರಸ್ಯ ಗತಿರ್ನಾಸ್ತಿ (ಪುತ್ರನಿಲ್ಲದೆ ಗತಿಯಿಲ್ಲ) ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಕನಕದಾಸರು ಮಾರ್ಮಿಕವಾಗಿ ವಿರೋಧಿಸುವವರಲ್ಲದೆ ಸ್ತ್ರೀಪರವಾದ ನಿಲುವನ್ನು ವ್ಯಕ್ತಪಡಿಸುತ್ತಾರೆ.
ಕನಕವೃಷ್ಠಿ
ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾಸರಲ್ಲಿ ಒಬ್ಬರು.ಜೀವನಾಭವದ ಅಮೃತ, ಲೋಕಾನುಭವದ ಸತ್ಯವನ್ನು ಕಾವ್ಯದ ಮೂಲಕ ಜನಸಾಮಾನ್ಯರಿಗೆ ಉಣಬಡಿಸಿ ಧನ್ಯತೆ ಮೂಡಿಸಿದವರು, ಪಂಡಿತ್ತೋತಮರಲ್ಲಿ ಸಖೇದಾಶ್ವರ್ಯ ತಂದವರು. ‘ಕುಲಕುಲವೆಂದು ಹೊಡೆದಾಡದಿರಿ, ಈ ಕುಲದ ನೆಲದ ಮಹಿಮೆ ಏನಾದರೂ ಬಲ್ಲೀರಾ ಬಲ್ಲೀರಾ’ ಅಂತ ಜಾತಿವಾದಿಗಳನ್ನು ಜರಿದು ಜಾತ್ಯಾತೀತ ಭಾವ ಸ್ಫುರಿಸುವಂತೆ ಮಾಡಿದವರು. ಕನಕದಾಸರು ಕನ್ನಡ ಭಾಷೆಯನ್ನು ಬಳಸಿದ ಪರಿ ಅನನ್ಯ.
ಕನಕದಾಸರು ಅಧ್ಯಾತ್ಮ ಸಾಧನೆಯಲ್ಲಿ ಆತ್ಮಸಾಕ್ಷಾತ್ಕಾರ ಕಂಡ ಅಗ್ರಪಂಕ್ತಿಯ ಕೀರ್ತನಕಾರರು. ಭೇದರಹಿತ ತತ್ವೋಪಾಸಕರಾಗಿ ಕಾವ್ಯಮಾರ್ಗದ ಕಡೆಗೆ ಸಾಗಿದ ಮಾನವೀಯತೆಯ ಮಹಾಪುರುಷರು ಅವರು. ಚಿನ್ನ ಮಣ್ಣಿನಲ್ಲಿ, ಮುತ್ತು ಚಿಪ್ಪಿನಲ್ಲಿ, ತಾವರೆ ಕೆಸರಿನಲ್ಲಿ, ಕಸ್ತೂರಿ ಮೃಗದ ನಾಭಿಯಲ್ಲಿ ಹುಟ್ಟುತ್ತದೆ ಎಂದ ಮೇಲೆ ಜನ್ಮಸ್ಥಾನದ ಗಣನೆ ಏಕೆ? ಹರಿವ ನೀರಂಗೆ ಉರಿವ ಸೂರ್ಯಂಗೆ ಬೀಸುವ ತಂಗಾಳಿಗೆ, ಸರ್ವಸಾಕ್ಷಿ ಅಗ್ನಿಗೆ ಜಾತಿಯಿಲ್ಲ ಎಂದ ಮೇಲೆ ನಡುವೆ ಎತ್ತಣ ಜಾತಿ? ಅನ್ನುತ್ತಲೇ ಸಮಾನತೆಯ ಬೆಳಕಿಗಾಗಿ ಹಗಲಿರುಳು ಹಂಬಲಿಸಿದ ಮಹಾಮೂರ್ತಿ ಅವರು.ಕಾವ್ಯಾಂತರಾರ್ಥದ ಶ್ರೀಮಂತಿಕೆಯನ್ನು ಕೀರ್ತನರಚನೆಯಲ್ಲಿ ಶೃಂಗಾರಗೊಳಿಸಿದ ಅವರ ಅಸೀಮ ಶಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಲದು. ಅವರದು ಕನಕ ಕನ್ನಡ “ವರವ ಕೊಡು ಎನಗೆ ವಾಗ್ದೇವಿ” ಅನ್ನುವ ಪ್ರಾರ್ಥನಾ ಸ್ತುತಿಯ ಕೊನೆಯಲ್ಲಿ “ಅವಿರಳಪುರಿ ಕಾಗಿನೆಲೆಯಾದಿ ಕೇಶವನ ಅಸುತನಿಗೆ ಸನ್ನುತ ರಾಣಿವಾಸ” ಎಂದು ವರ್ಣಿಸುವಾಗ ಶ್ರೀಹರಿಯ ಸುತ ಬ್ರಹ್ಮ ಅವನ ರಾಣಿ ಶಾರದೆ ಎಂಬ ಅರ್ಥದರಿವಾದಾಗ ಆಗುವ ಕಾವ್ಯಾನಂದ ಹೇಳತೀರದು. ಹಾಗೆಯೇ ಅವರ ಇನ್ನೊಂದು ಪ್ರಾರ್ಥನೆಯಲ್ಲಿ “ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ” ಎಂದು ಪ್ರಶ್ನಿಸುತ್ತಲೇ ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ್ಯ ಗಣನಾಥನೆ ಎಂದು ಉತ್ತರಿಸುತ್ತಾರೆ. ಪರಶಿವನ ಸುತನಾದ ಹೆಮ್ಮೆಯ ಗಣಪ ಎಂಬ ಭಾವಾರ್ಥ ಹೊಳೆದೊಡನೆ ಆಗುವ ಸಂತೋಷ ಅಷ್ಟಿಷ್ಟಲ್ಲ.
“ದಾಸಗೊಲಿದು ತೇರನೇರಿ ತೇಜಿಪಿಡಿದು ನಡೆಸಿದಾತ ಈತನೀಗ ವಾಸುದೇವ” ಅನ್ನುತ್ತಾ ಭಗವಂತನ ಅನಂತ ಶಕ್ತಿಯನ್ನು ಶ್ರೀಮಠದಲ್ಲಿದ್ದ ಶ್ರೇಣಿಕರಿಗೆ ಪರಿಚಯಿಸುತ್ತಾರೆ. ಕನಕದಾಸರ ಅಮೃತ ಲೇಖನಿಯಿಂದ ಮೂಡಿಬಂದ, ಬಂದಿರುವ ಈ ದೇವರನಾಮದಲ್ಲಿ ತನ್ನ ಆರಾಧ್ಯ ದೈವ ಆದಿಕೇಶವನ ವಿವಿಧ ಶಕ್ತಿಗಳು ಗೋಚರಿಸುತ್ತವೆ. “ಈ ನಿರ್ದಿಷ್ಟ ಭಾವವನ್ನು ನಾಲ್ಕು ಪ್ರಸಂಗಗಳಿಂದ ವಿಷದೀಕರಿಸಿದ ಸಂತೃಪ್ತ ಭಾವ ಅವರದಾಗಿದೆ.
“ಊರಿಗೆ ಬಂದರೆ ದಾಸಯ್ಯ
ಕೋಲು ಕೊಳಲು ಕೈಲಿ ದಾಸಯ್ಯ
ನೀ ಕಲ್ಲಿಗೆ ವರವಿತ್ತ ದಾಸಯ್ಯ,
ಮಲ್ಲನ ಮರ್ಧೀಸಿ ಮಾವನ
ಮುಡುಹಿದ ನೀಲಮೇಘಶ್ಯಾಮ ದಾಸಯ್ಯ” ಅನ್ನುವ ತಮ್ಮ ಅಪೂರ್ವ ದೇಸಿತನದಿಂದಲೇ ಭಗವಂತನ ಕಲ್ಯಾಣ ಗುಣಗಳನ್ನು, ಅವನ ಲೀಲಾ ವಿನೋದಗಳನ್ನು ಹಾಡುತ್ತಾ “ನಮ್ಮ ಆದಿಕೇಶವ ದಾಸಯ್ಯ” ಎಂದು ಕೀರ್ತನೆಯನ್ನು ಮುಗಿಸಿ, ಪರಮಾತ್ಮನ ಹೊಗಳಿಗೆ ಎಂದೆಂದಿಗೂ ಬತ್ತದಂತೆ ಎಚ್ಚರಿಸಿದ್ದಾರೆ.ಇನ್ನೊಂದು ಕೃತಿಯಲ್ಲಿ ತಿರುಪತಿಯ ವೆಂಕಟರಮಣನನ್ನು ಪರಿಹಾಸ್ಯ ಮಾಡುತ್ತಾ ತಿರುಪತಿಯಲ್ಲೆಲ್ಲಾ ಸಂಚರಿಸುತ್ತಲೇ “ಬಂದೆವಯ್ಯಾ ಗೋವಿಂದ ಶೆಟ್ಟಿ ನಿನ್ನ ಕಲ್ಯಾಣೋತ್ಸವವನ್ನು ನೋಡಲು ಬಂದೆ” ಅನ್ನುತ್ತಲೇ “ಹೊಡೆದ ಮಡಕೆಯನೆಲ್ಲಾ ಅರೆದು ನಾಮವ ಮಾಡಿ ಕೊಡುವೆ ನೀ ಕಾಸಿಗೆ ಒಂದೊಂದನು ಒಡಲು ತುಂಬಿ ಮಿಕ್ಕ ಅನ್ನ ಮಾರಿ ಒಡವೆಯ ಗಳಿಸುವೆ ಲೋಭಿ ಶೆಟ್ಟಿ” ಎಂದು ವಿಡಂಬಿಸುತ್ತಲೇ ಆದಿಕೇಶವನ ಅಂತಃಶಕ್ತಿಯ ಅಂತರಂಗ ದರ್ಶನ ಮಾಡಿಸುತ್ತಾ ರೂಪಕ ಚಕ್ರವರ್ತಿಯಾಗುತ್ತಾರೆ.
ಕವಿ ಶರೀರ ನಶ್ವರ, ಆದರೆ ಕವಿ ಅಮರ, ಇದಕ್ಕೆ ಕನಕದಾಸರೇ ಸಾಕ್ಷಿ.ಮೋಹನ ತರಂಗಿಣಿ, ರಾಮಧ್ಯಾನ ಚರಿತ್ರೆ, ನಳಚರಿತ್ರೆ, ಹರಿಭಕ್ತಿಸಾರ ಲೋಕಕ್ಕೆ ಸಮರ್ಪಿಸಿದ ಮಹಿಮಾತೀತರು. ಕನಕದಾಸರು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ಈ ಕಾವ್ಯ ಶಿಖರಗಳು ಎಂದೆಂದಿಗೂ ಅಜರಾಮರ. “ಗಿಳಿಯ ಮರಿಯನ್ನು ತಂದು ಪಂಜರದೊಳಗೆ ಪೋಷಿಸಿ ಕಲಿಸಿ ಮೃದು ನುಡಿಗಳನು ಲಾಲಿಸಿ ಕೇಳುವ ಪರಿಣಿತರಂತೆ” ಅನ್ನುವ ಹರಿಭಕ್ತಿಸಾರದ ಅವರ ವಿನೀತ ಭಾವ. “ಮರುಗಲಿನ್ನೇಕರಸ ಬಿಡು ವಿಧಿ ಬರೆದ ಬರಹವ ತಪ್ಪಿಸಲು ಹರಿಹರ ವಿರಂಚಾದ್ಯರಿಗೆ ಸಾಧ್ಯವೇ” ಅನ್ನುತ್ತಾ ಗಂಡನನ್ನು ಸಂತೈಸುವ ನಳ ಚರಿತ್ರೆಯ ದಮಯಂತಿಯ ಮಾತುಗಳು ಅನುದಿನ ಅನುಭವಿಸಿರುವ ಸಂಕಟಗಳಿಗೊಂದು ಧೈರ್ಯದ ದಾರಿದೀಪವಾಗಿ ಇಂದಿಗೂ ಕಾವ್ಯದಲ್ಲಿ ರಾರಾಜಿಸುತ್ತಿರುವ ಈ ಸಾಲುಗನ್ನು ಮರೆಯಲು ಸಾಧ್ಯವೇ? “ಸತ್ಯಹೀನನು ಬಡವರನು ಕಣ್ಣೆತ್ತಿ ನೋಡೆನು ಧನಾಡ್ಯರನು ಬೆಂಬತ್ತಿ ನಡೆಯುವದಪೇಕ್ಷೆ ನಿನ್ನದು ಹೆತ್ತ ಬಾಣಂತಿಯರಿಗೆ ರೋಗಿಗೆ ಪತ್ಯ ನೀನಹೆ ಹೆಣದ ಬಾಯಿಗೆ ತುತ್ತು ನೀನು ನಿನ್ನ ನಿರರ್ಥಕ” ಎಂದು ರಾಗಿ ಮತ್ತು ಬತ್ತದ ನಡುವೆ ಜಗಳ ತಾರಕಕ್ಕೇರಿ ಬಡವ ಬಲ್ಲಿದ, ಮೇಲು-ಕೀಳು ಈ ತಾರತಮ್ಯದ ಪರಿಹಾರ ಹೇಗೆ ಎಂಬುದು ಕನಕದಾಸರ “ಶ್ರೀರಾಮಧ್ಯಾನ ಚರಿತ್ರೆ”ಯಲ್ಲಿ ನಿರೂಪಿತವಾಗಿದೆ. ಧಾನ್ಯಗಳನ್ನು ಕಾವ್ಯದ ಪ್ರತಿಮೆಗಳನ್ನಾಗಿ ಮಾಡಿರುವ ಕನಕದಾಸರ ಪ್ರೌಢಿಮೆ ಅನನ್ಯವಾದುದು. ಸಾಹಿತ್ಯಲೋಕದಲ್ಲಿ ಇದೊಂದು ಅಪೂರ್ವ ಪ್ರಸಂಗ ಎನ್ನಬಹುದಾಗಿದೆ.
ಮೋಹನ ತರಂಗಿಣಿ ಕನಕದಾಸರು ಶ್ರೀ ಕೃಷ್ಣನಿಗೆ ಎತ್ತಿದ ಆರತಿಯಂತೆ ಕಾಣುತ್ತಿದೆ. ಶೃಂಗಾರ, ಭಕ್ತಿ, ಪ್ರೇಮಗಳು ಪರಸ್ಪರ ಏಕವಾಗಿ ನಡೆಯುತ್ತಿರುವಂತೆ ಭೌತಿಕ ಹಾಗೂ ಲೌಕಿಕಗಳು ಒಂದನ್ನೊಂದು ಕೈಹಿಡಿದುಕೊಂಡಿವೆ ಅನ್ನುವುದು ಈ ಕಾವ್ಯಾನುಸಂಧಾನದ ಮುಖೇನ ಕಂಡುಬರುತ್ತಿವೆ.
ಕೃಷ್ಣ ರುಕ್ಮಿಣಿಯರು, ಕಂದರ್ಪ ರತಿ, ಅನಿರುದ್ಧ ಉಷೆ ಈ ಪ್ರೇಮಕಥನಗಳು ಕಾವ್ಯವಾಗಿ ಅರಳಿರುವ ಪರಿ ಅದ್ಭುತ.ಇದು ಕನಕದಾಸರ ತಾರುಣ್ಯದಲ್ಲಿ ಸೃಷ್ಟಿಯಾಗಿರಬಹುದಾದ ಕವಿಯ ಹೆಂಡತಿ ಜೀವಂತವಾಗಿದ್ದಾಗ ರಚನೆಯಾಗಿಬಹುದೆಂದು ಊಹಿಸಬಹುದಾಗಿದೆ. ಹೀಗಿದ್ದರೂ ಯಾರೂ ಅನುಭವಿಸಲಾಗದ ನಿಂದೆ, ಅಪಮಾನ, ಕುಹಕಗಳನ್ನು ಕನಕದಾಸರು ಅನುಭವಿಸಬೇಕಾಗಿ ಬಂದದ್ದು ವಿಪರ್ಯಾಸವೇ ಸರಿ. ಕೋಣಮಂತ್ರದಿಂದ ಪ್ರಾರಂಭವಾದ ಅವರ ಸತ್ವಪರೀಕ್ಷೆ, ಬಾಳೆಹಣ್ಣಿನ ಪ್ರಸಂಗ, ಗುರುಗಳ ಮುಷ್ಟಿಯಲ್ಲಿ ಮಂತ್ರಾಕ್ಷತೆಯನ್ನು ಗುರುತಿಸಿದ್ದು, ಶುಕನ ಸರ್ಪಗಳ ರೂಪದಲ್ಲಿಯೇ ಭಗವಂತ ಗೋಚರಿಸುತ್ತಾನೆ ಎಂದು ಸಾಕ್ಷೀಕರಿಸಿದ್ದು ಕೊನೆಗೆ ಉಡುಪಿಯ ಕೃಷ್ಣ ದಾಸರಿರುವ ಕಡೆಗೆ ಮುಖ ಮಾಡಿದ್ದು, ಭಕ್ತಿ ಪರವಶತೆಯಿಂದ “ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ” ಎಂದು ಮನತುಂಬಿ ಮಾರ್ಮಿಕವಾಗಿ ಹಾಡಿದ್ದು ನಿತ್ಯಸತ್ಯವೇ ಆಗಿದೆ.
ಬೀಜವೃಕ್ಷದೊಳಾಯ್ತು, ವೃಕ್ಷಬೀಜವಾರಿಂದಾಯ್ತು, ಈ ಬೀಜವೃಕ್ಷ ನ್ಯಾಯವ ಭೇದಿಸುವರಾರಿನ್ನು ಅನ್ನುವ ತರ್ಕವನ್ನು ತತ್ತ್ವಮುಖಿಗಳಿಗೆ ಒಡ್ಡುತ್ತಲೇ “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ದೇಹ ನಿನ್ನೊಳಗೋ, ಬಯಲು ಆಲಯ, ಬುದ್ದಿ ಸಕ್ಕರೆಯ ಸವಿ, ಜಿಹ್ವೆ, ಮನಸ್ಸು ಕುಸುಮದಲ್ಲಿನ ಗಂಧ ಇವೆಲ್ಲವೂ ಭಗವಂತನಿಂದಾದ ದೈವಕ್ಕೆ ಮಾತ್ರ ಎಂಬುದನ್ನು ಕನಕದಾಸರು ಕೀರ್ತನೆಯಲ್ಲಿ ಪ್ರತಿಪಾದಿಸಿರುವ ರೀತಿ ಅಸದೃಶ್ಯವಾದುದು. ಡೊಂಕುಬಾಲದ ನಾಯಕರೇ ನೀವೇನು ಊಟವ ಮಾಡಿದಿರಿ” ಎಂದು ಕೇಳುತ್ತಲೇ ಕನಕ ಕುಟ್ಟೊ ಜಾಗಕ್ಕೆ ಇಣುಕು ಹಾಕುವುದು, ಹುಗ್ಗಿ ಮಾಡುವ ಕಡೆಗೇ ಹೋಗಿ ತಗ್ಗಿ ಬಗ್ಗಿ ನೋಡುತ್ತಾ ಒನಕೆಯಲ್ಲಿ ಸೌಟಿನಲ್ಲಿ ಹೊಡೆಸಿಕೊಂಡು ನರಳುವ ಪರಿಯನ್ನು ಮಾನವನ ಶ್ವಾನ ಸ್ವಭಾವವನ್ನು ದಾಸರು ಯಥಾವತ್ತಾಗಿ ಚಿತ್ರಿಸುತ್ತಲೇ ಅಂದಿನ ವಿಡಂಬನೆಗೊಳಪಡಿಸುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ