ಪುತ್ತೂರು: ನಿಜವಾದ ಶಿಕ್ಷಣ ಇಂದಿನ ಸೋಶಿಯಲ್ ಮೀಡಿಯಾದಿಂದ ಲಭಿಸುವುದಿಲ್ಲ, ಅದು ಪುಸ್ತಕದಿಂದ ಹಾಗು ಹಿರಿಯರಿಂದ ಮಾತ್ರ ಸಿಗಲು ಸಾಧ್ಯ. ಮಕ್ಕಳ ವಿಷಯವನ್ನು ಅರಿತು ಪಠ್ಯ ಹಾಗು ಪಠ್ಯೇತರ ವಿಷಯಗಳನ್ನು ತಿಳಿಸುವುದು ಶಿಕ್ಷಕರು ನೀಡುವ ವಿದ್ಯೆಯಿಂದಷ್ಟೆ ಸಾಧ್ಯ. ಜ್ಞಾನವನ್ನು ಸಂಪಾದಿಸಿ ಸಮಾಜಮುಖಿಯಾಗಿ ಬೆಳೆದು ಜೀವನವನ್ನು ಉತ್ತಮವಾಗಿ ನಡೆಸಿ ಸನ್ಮಾರ್ಗದಲ್ಲಿ ನಡೆದು ಚಿಂತನೆಯ ದೀಪವನ್ನು ವಿದ್ಯಾರ್ಥಿಗಳು ಬೆಳಗಿಸಬೇಕು ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಶಶಾಂಕ್ ನೆಲ್ಲಿತ್ತಾಯ ಹೇಳಿದರು.
ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರಲ್ಲೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ಆಶಾಭಾವನೆ ನಮ್ಮಲ್ಲಿರಬೇಕು. ನಾವು ಇನ್ನೊಬ್ಬರಿಗೆ ಪ್ರೇರಣೆಯಾಗುವಂತೆ ಬದುಕಬೇಕು. ನಮ್ಮಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ವಾರ್ಷಿಕೋತ್ಸವ ಎನ್ನುವುದು ಉತ್ತಮ ವೇದಿಕೆಯಾಗಿದೆ. ಪ್ರತಿಯೊಬ್ಬರು ತಮಗೆ ದೊರಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಕಾಶ ಬಳ್ಳಂಬೆಟ್ಟು ಮಾತನಾಡಿ ಶಿಕ್ಷಣದಲ್ಲಿ ಬಡತನದ ಮಾತಿಲ್ಲ. ಅನುಭವದಿಂದ ಮಾತ್ರ ನಿಖರ ಗುರಿಯನ್ನು ತಲುಪಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ದಾರಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಸಾಮಥ್ರ್ಯದ ಮೇಲೆ ಸದಾ ಆತ್ಮವಿಶ್ವಾಸವಿರಬೇಕು. ಜಗತ್ತಿನ ಬದಲಾವಣೆಯಾಗುವ ಕಾಲಘಟ್ಟದಲ್ಲಿ ಇಂದಿನ ಯುವಜನತೆ ದೇಶದ ಏಳಿಗೆಗಾಗಿ ಸಿದ್ಧರಾಗಿರಬೇಕು. ರಾಷ್ಟ್ರವನ್ನು ಮುನ್ನಡೆಸುವ ಶಕ್ತಿ ವಿದ್ಯಾರ್ಥಿಗಳ ಕೈಯಲ್ಲಿ ಇದೆ. ಹೀಗಾಗಿ ದೇಶದ ಪರಂಪರೆಯನ್ನು ಉಳಿಸಬೇಕು. ವಿದ್ಯಾರ್ಥಿಗಳಲ್ಲಿ ಶ್ರದ್ಧೆ , ಸಹನೆ ಸತತ ಪ್ರಯತ್ನವಿದ್ದರೆ ಯಶಸ್ಸಿನ ದಾರಿ ಸಿಗುತ್ತದೆ. ಅದರೊಂದಿಗೆ ಆತ್ಮವಿಶ್ವಾಸ ಹೊಂದಿದ್ದರೆ ನಮ್ಮ ಕಾರ್ಯದಲ್ಲಿ ಜಯಗಳಿಸಬಹುದು. ವಿವೇಕಾನಂದರಂತಹ ಮಹಾನುಭಾವರ ಮಾತುಗಳು ವಿದ್ಯಾರ್ಥಿಗಳಿಗೆ ಸದಾ ಪ್ರೇರಣೆಯಾಗಬೇಕು. ಸಾಧನೆಗಳಿಗೆ ಸಿಕ್ಕಂತಹ ಬಹುಮಾನಗಳು ಭಾರತ ಮಾತೆಗೆ ಸಮರ್ಪಿತವಾದದ್ದು ಎಂದು ದಿಕ್ಸೂಚಿ ಭಾಷಣ ಮಾಡಿದರು.
ಪ್ರಾಂಶುಪಾಲ ಮಹೇಶ ನಿಟಿಲಾಪುರ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಅಂತಾರಾಷ್ಟ್ರೀಯ ಖ್ಯಾತಿಯ ವಿಶೇಷಚೇತನ ಈಜುಪಟು ವಿಶ್ವಾಸ್ ಕೆ. ಎಸ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಶಶಾಂಕ್ ನೆಲ್ಲಿತ್ತಾಯ ಇವರನ್ನು ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ವಿವೇಕ ಸಂಜೀವಿನಿ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.
ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿಶೇಷಚೇತನ ಈಜುಪಟು ವಿಶ್ವಾಸ್ ಕೆ. ಎಸ್ , ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ,ಸಂಚಾಲಕ ಗೋಪಾಲಕೃಷ್ಣ ಭಟ್ ,ಸದಸ್ಯೆ ವತ್ಸಲಾ ರಾಜ್ಞಿ , ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಂಗ್ಲ ವಿಭಾಗದ ಉಪನ್ಯಾಸಕ ಪಿ.ಕೆ ಪರಮೇಶ್ವವರ ಶರ್ಮ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪನ್ಯಾಸಕಿ ದಯಾಮಣಿ ವಂದಿಸಿದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿಧ್ಯ ಮತ್ತು ವನ್ಯ ಸಂರಕ್ಷಣಾ ಜಾಗೃತಿಗಾಗಿ ಕಾಲ್ಪನಿಕ ಪರಿಕಲ್ಪನೆಯ ಯಕ್ಷಗಾನ ವಿವೇಕ ಸಂಜೀವಿನಿ ನಡೆಯಿತು.
ಅಂತಾರಾಷ್ಟ್ರೀಯ ಖ್ಯಾತಿಯ ವಿಶೇಷಚೇತನ ಈಜುಪಟು ವಿಶ್ವಾಸ್ ಕೆ.ಎಸ್ ರವರು ವಿಚಾರಗೋಷ್ಠಿಯನ್ನು ನಡೆಸಿದರು. ತನ್ನ ಜೀವನದ ವಿಚಾರವನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಪ್ರೇರಣದಾಯಕ ಮಾತುಗಳನ್ನಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ