ಎಸ್‌ಡಿಎಂ ಉಜಿರೆ: ಸೇವಾ ನಿವೃತ್ತಿ ಹೊಂದಿದ ಡಾ. ರಾಮಚಂದ್ರ ಪುರೋಹಿತರಿಗೆ ಸನ್ಮಾನ

Upayuktha
0

ಭಾರತೀಯ ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ದಾಟಿಸುವ  ಉದ್ದೇಶ: ಡಾ.ಸತೀಶ್ಚಂದ್ರ ಎಸ್ 



ಉಜಿರೆ: ಭಾರತೀಯ ಸಂಸ್ಕೃತಿಯ ಮಹತ್ವವನ್ನು ಹೊಸ ಪೀಳಿಗೆಗೆ ದಾಟಿಸುವ ಮೌಲಿಕ ಉದ್ದೇಶದೊಂದಿಗೆ ಆರಂಭವಾದ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ವಿಭಾಗ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಈ ವಿಭಾಗದ ಅಧ್ಯಾಪಕ ಡಾ.ರಾಮಚಂದ್ರ ಪುರೋಹಿತ ಅವರು ತಮ್ಮ ವಿಶೇಷ ಪರಿಣತಿಯೊಂದಿಗೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಿದ್ದಾರೆ ಎಂದು ಎಸ್ ಡಿ ಎಂ ಸಂಸ್ಥೆಯ  ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಶ್ಲಾಘಿಸಿದರು.



ಎಸ್ ಡಿ ಎಂ ಕಾಲೇಜಿನ ಅಧ್ಯಾಪಕರ ಸಂಘವು ನಿವೃತ್ತಿ ಹೊಂದಿದ ಡಾ.ರಾಮಚಂದ್ರ ಪುರೋಹಿತ ಅವರನ್ನು ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯ ಮೌಲ್ಯಗಳ ನೆಲೆಯಲ್ಲಿ ಶಿಕ್ಷಣ ಒದಗಿಸುವ ಉದ್ದೇಶದಿಂದ ಎಸ್ ಡಿ ಎಂ ಕಾಲೇಜು ಆರಂಭಗೊಂಡಿತ್ತು. ಇದರ ಆಶಯಕ್ಕೆ ಅನುಗುಣವಾಗಿ ಸಂಸ್ಕೃತ ವಿಭಾಗ ಆರಂಭವಾಗಿತ್ತು. ರಾಮಚಂದ್ರ ಪುರೋಹಿತ ಅವರೂ ಸೇರಿದಂತೆ ಈ ವಿಭಾಗದ ಪ್ರಾಧ್ಯಾಪಕರು ವಿಶೇಷ ಸೇವೆ ಸಲ್ಲಿಸಿದ್ದಾರೆ. ವೃತ್ತಿನಿರತರಾದಾಗ ಡಾ.ರಾಮಚಂದ್ರ ಪುರೋಹಿತ್ ರೂಪಿಸಿಕೊಂಡಿದ್ದ ಸ್ವಯಂಶಿಸ್ತು ಪ್ರಶಂಸನೀಯ. ಸ್ವಯಂಶಿಸ್ತು ಮತ್ತು ಬದ್ಧತೆಯನ್ನು ಕಾಯ್ದುಕೊಂಡು ಬಂದವರು ಅವರು ಎಂದು ನೆನಪಿಸಿಕೊಂಡರು.




ವಿಷಯವನ್ನು ಅರ್ಥೈಸಿಕೊಂಡಿರಬೇಕು, ಗೊತ್ತಿರುವುದನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಶ್ರೇಷ್ಠ ಅಧ್ಯಾಪಕರ ಲಕ್ಷಣಗಳು ಎಂದು ಕಾಳಿದಾಸ ಗುರುತಿಸಿದ್ದಾನೆ. ಈ ಗುಣದೊಂದಿಗೆ ಇದ್ದವರು ರಾಮಚಂದ್ರ ಪುರೋಹಿತ, ಅವರು ನಿಷ್ಠುರ. ಆದರೆ, ಅವರದು ಹೃದಯವಂತಿಕೆಯ ಮನಸು.  ಮಂತ್ರಾಲಯ ರಾಯರ ಮಠದ ಕಾರ್ಯಕ್ರಮಗಳಲ್ಲಿ ಅವರು ವಿದ್ವಾಂಸರಾಗಿ ಪಾಲ್ಗೊಂಡಿದ್ದಾರೆ ಎಂದು ಎಸ್. ಡಿ.ಎಂ. ಕಾಲೇಜಿನ ಕಲಾ ನಿಕಾಯದ ಡೀನ್ ಡಾ.ಶ್ರೀಧರ ಭಟ್ ಅನಿಸಿಕೆ ಹಂಚಿಕೊಂಡರು.



"ಇಷ್ಟು ವರ್ಷದ ವೃತ್ತಿಯಲ್ಲಿ ನನ್ನ ದೊಡ್ಡ ಆಸ್ತಿ ವಿದ್ಯಾರ್ಥಿಗಳು. ಶ್ರೇಷ್ಠವಾದ ಧರ್ಮಸ್ಥಳ ಶ್ರೀಕ್ಷೇತ್ರದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆ ನನ್ನೊಳಗೆ. ನಮ್ಮ ನಂಬಿಕೆ, ಜ್ಞಾನ ಮತ್ತು ಶ್ರದ್ಧೆ ನಮ್ಮೊಳಗೆ ಚೈತನ್ಯ ತುಂಬುತ್ತವೆ. ವಿಸ್ತೃತ ಅಧ್ಯಯನದ ಅವಕಾಶ ಈ ಕಾಲೇಜಿನಿಂದ ಸಿಕ್ಕಿದೆ" ಎಂದು ಸನ್ಮಾನ ಸ್ವೀಕರಿಸಿ ಡಾ. ರಾಮಚಂದ್ರ ಪುರೋಹಿತ ಅನಿಸಿಕೆ ಹಂಚಿಕೊಂಡರು.



ಎಸ್ ಡಿ ಎಂ ಕಾಲೇಜಿನ ಪ್ರಾಚಾರ್ಯ ಡಾ. ಕುಮಾರ ಹೆಗ್ಡೆ ಬಿ. ಎ ಹಾಗೂ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಅವರು ಸನ್ಮಾನಿತರಾದ ರಾಮಚಂದ್ರ ಪುರೋಹಿತ  ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು. ಎಸ್.ಡಿ.ಎಂ ಅಧ್ಯಾಪಕರ ಸಂಘದ ಕಾರ್ಯದರ್ಶಿ ಗಣೇಶ್ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕಿ ಅಭಿಜ್ಞಾ ಹಾಗೂ ಭುವನಹಳ್ಳಿ ಭಾನುಪ್ರಕಾಶ್ ಸ್ವರಚಿತ ಕವನ ವಾಚಿಸಿದರು. ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top