ಬೆಂಗಳೂರು: 'ಬೆಂಗಳೂರು ಕಂಬಳ- ನಮ್ಮ ಕಂಬಳ'ಕ್ಕೆ ರಾಜಧಾನಿ ಸಂಪೂರ್ಣ ಸಜ್ಜಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರಾವಳಿ ಕಂಬಳ ಕ್ರೀಡೆಯ ವೈಭವ ಅನಾವರಣಕ್ಕೆ ವೇದಿಕೆ ಸಿದ್ಧವಾಗಿದೆ. 160 ಜೋಡಿ ಕಂಬಳದ ಕೋಣಗಳು ವೈಭವದ ಮೆರವಣಿಗೆಯೊಂದಿಗೆ ಬೆಂಗಳೂರಿಗೆ ತಲುಪಿವೆ.
ಉಪ್ಪಿನಂಗಡಿಯಿಂದ ಶುರುವಾದ ಕೋಣಗಳ ಪಯಣ ಹಾಸನಕ್ಕೆ ತಲುಪಿದ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಂಡು ಬಳಿಕ ಮುಂದುವರಿಯಿತು. ಗುರುವಾರ ರಾತ್ರಿ ಬೆಂಗಳೂರಿನ ಹೆಬ್ಬಾಗಿಲು ನೆಲಮಂಗಲ ತಲುಪಿದ ಬಳಿಕ ಸ್ವಲ್ಪ ಹೊತ್ತು ಕೋಣಗಳನ್ನು ಹೊತ್ತ ಲಾರಿಗಳನ್ನು ಸೂಕ್ತ ಜಾಗದಲ್ಲಿ ನಿಲುಗಡೆಗೊಳಿಸಲಾಯಿತು. ನಂತರ ಸಂಚಾರ ಪೊಲೀಸರು ರಸ್ತೆ ಸಂಚಾರದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿ ಕಂಬಳದ ಕೋಣಗಳನ್ನು ಟ್ರಕ್ಗಳ ಸರಾಗ ಪಯಣಕ್ಕೆ ಅವಕಾಶ ಮಾಡಿಕೊಟ್ಟರು.
ಕರಾವಳಿಯ ಕೋಣಗಳಿಗೆ ಹುರುಳಿ, ಹುಲ್ಲು, ಕುಡಿಯುವ ನೀರು ಇತ್ಯಾದಿಗಳನ್ನೂ ಊರಿನಿಂದಲೇ ಹೊತ್ತು ತರಲಾಗಿದೆ. ಬೆಂಗಳೂರಿನ ವಾತಾವರಣದಲ್ಲಿ ಕೋಣಗಳು ಹೊಂದಿಕೊಳ್ಳಲು ಒಂದು ದಿನ ಮುಂಚಿತವಾಗಿ ಅವುಗಳನ್ನು ತಂದು ಇಳಿಸಲಾಗಿದೆ.
ಹೊಸದಾಗಿ ಸಿದ್ಧಪಡಿಸಿದ ಕಂಬಳದ ಕರೆಯಲ್ಲಿ ಕೋಣಗಳ ಪ್ರಾಯೋಗಿಕ ಓಟವೂ ಸುಸೂತ್ರವಾಗಿ ನೆರವೇರಿದೆ.
ಬೆಂಗಳೂರು ಕಂಬಳದ ವೀಕ್ಷಣೆಗೆ 6ರಿಂದ 7 ಲಕ್ಷ ಜನರು ರಾಜಧಾನಿಗೆ ತಲುಪಿದ್ದಾರೆ.
ಉಪ್ಪಿನಂಗಡಿಯಿಂದ ಕೋಣಗಳ ಪಯಣ ಆರಂಭಕ್ಕೆ ಮುನ್ನ ಗಣಹೋಮ ನೆರವೇರಿಸಿ ಬೆಂಗಳೂರು ಕಂಬಳ ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥಿಸಲಾಯಿತು. ಬಳಿಕ ಕೊಂಬು ಕಹಳೆ ವಾದನದೊಂದಿಗೆ ಕೋಣಗಳನ್ನು ಬೀಳ್ಕೊಡಲಾಯಿತು.
ವಿಟ್ಲ/ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ., ಕಂಬಳ ಕ್ಷೇತ್ರದ ಮುಖಂಡರಾದ ಎನ್. ಉಮೇಶ್ ಶೆಣೈ, ಕೈಪ ಕೇಶವ ಭಂಡಾರಿ, ಚಂದ್ರಹಾಸ ಶೆಟ್ಟಿ, ಅಶ್ರಫ್ ಬಸ್ತಿಕಾರ್, ಕಂಗ್ವೆ ವಿಶ್ವನಾಥ ಶೆಟ್ಟಿ, ತೌಸಿಫ್ ಯು.ಟಿ, ವಿಕ್ರಮ್ ಶೆಟ್ಟಿ, ನಿರಂಜನ್ ರೈ, ಮುರಳೀಧರ ರೈ, ರೂಪೇಶ್ ರೈ ಅಲಿಮಾರ, ಕೃಷ್ಣರಾವ್ ಅರ್ತಿಲ, ಮುಂತಾದವರು ಭಾಗವಹಿಸಿದ್ದರು.
ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋರ್ ಕುಮಾರ್ ರೈ ಅವರ ಹುಟ್ಟೂರಾದ ಕೋಡಿಂಬಾಡಿಯ ಮಠಂತಬೆಟ್ಟುವಿನಲ್ಲಿ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಕೋಣಗಳ ಸುಖಕರ ಪ್ರಯಾಣ ಹಾಗೂ ಕಂಬಳ ಯಶಸ್ವಿಯಾಗುವಂತೆ ವಿಶೇಷ ಪೂಜೆ ನೆರವೇರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ