ಮಂಗಳೂರು: ಭಾರತದಲ್ಲಿ ಯುವ ಜನತೆ ಹೆಚ್ಚಾಗಿ ಧೂಮಪಾನ ಮತ್ತು ತಂಬಾಕಿನ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇಂತಹ ವ್ಯಸನಿಗಳಲ್ಲೇ ಹೆಚ್ಚಾಗಿ ಬಾಯಿ ಕ್ಯಾನ್ಸರ್ ಉಂಟಾಗುತ್ತಿದೆ. ಬಾಯಿ ಕ್ಯಾನ್ಸರ್ನಿಂದಾಗಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಶ್ರೀನಿವಾಸ ವಿಜ್ಞಾನ ಸಂಸ್ಥೆಯ ದಂತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಚಾಂದಿನಿ ಎಸ್. ವಿಷಾದ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಆಂತರಿಕ ಮೌಲ್ಯಮಾಪನ ಖಾತರಿಕೋಶ, ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ವೇದಿಕೆ ಹಾಗೂ ಸೂಕ್ಷಾಣುಜೀವ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ, "ಬಾಯಿ ಕ್ಯಾನ್ಸರ್ ಹಾಗೂ ಅದರ ತಡೆಗಟ್ಟುವಿಕೆ" ಕುರಿತಾಗಿ ಜಾಗೃತಿ ಮೂಡಿಸಿದರು.
ದೇಶದಲ್ಲಿ ಇತ್ತೀಚಿಗೆ ಶೇ. 30ಕ್ಕಿಂತಲೂ ಹೆಚ್ಚಿನ ಜನರ ಸಾವು ಬಾಯಿ ಕ್ಯಾನ್ಸರ್ನಿಂದ ಉಂಟಾಗುತ್ತಿದೆ. ಶೇ.10ರಷ್ಟು ಮದ್ಯಪಾನ, ಶೇ. 14ರಷ್ಟು ಜನರು ಧೂಮಪಾನದಿಂದಾಗಿ ಹಾಗೂ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ಗೆ ಒಳಗಾಗಿ ಸಾವನ್ನುಪ್ಪುತ್ತಿರುವುದು ದುರಂತ. ಹಾಗಾಗಿ ಯುವ ಜನಾಂಗ ಮದ್ಯ ಸೇವನೆ, ಧೂಮಪಾನ ಹಾಗೂ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದೇ ಸ್ವಚ್ಛ ಜೀವನ ನಡೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಒತ್ತಡದ ಬದುಕಿನ ಇಂದಿನ ದಿನ ಮಾನಸದಲ್ಲಿ ಯುವ ಜನಾಂಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್ ಹಾಗೂ ಎನ್ ಎಸ್ ಎಸ್ ಅಧಿಕಾರಿ ಡಾ. ಸುರೇಶ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ