ರಂಗ ಪ್ರವೇಶಕ್ಕೆ ಅಣಿಯಾದ ದಿಯಾ ಉದಯ್

Upayuktha
0

  • ಮಲೆನಾಡಿನ ಪ್ರತಿಭೆಗೆ ಭವ್ಯ ವೇದಿಕೆಯಾದ ರಾಜಧಾನಿ
  • ಗುರು ಸುಪರ್ಣಾ ವೆಂಕಟೇಶರ ಹೆಮ್ಮೆಯ ಶಿಷ್ಯೆ
  • ಚೌಡಯ್ಯ ಸ್ಮಾರಕ ಭವನದಲ್ಲಿ ಡಿ. 2ರಂದು ರಂಗಾರೋಹಣ




ವಿಶೇಷ ಲೇಖನ: ಕೌಸಲ್ಯಾ ರಾಮ


ಬೆಂಗಳೂರಿನ ಉದ್ಯಮಿ ಜಿ.ಜಿ. ಉದಯ್ ಮತ್ತು ಧನಲಕ್ಷ್ಮೀ ಉದಯ್ ಅವರ ಸುಪುತ್ರಿ, ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಕಲಾಶಾಲೆಯ ಹಿರಿಯ ನೃತ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ಅವರ ಹೆಮ್ಮೆಯ ಶಿಷ್ಯೆ ದಿಯಾ ಉದಯ್ ಭರತನಾಟ್ಯ ರಂಗಪ್ರವೇಶಕ್ಕೆ ಈಗ ಅಣಿಯಾಗಿದ್ದಾರೆ.



ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಬಿಎ (ಬಿಜಿನೆಸ್ ಅನಾಲಿಟಿಕ್ಸ್) ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ದಿಯಾ, ನೃತ್ಯವನ್ನು ಒಂದು ತಪಸ್ಸನ್ನಾಗಿ ಸ್ವೀಕರಿಸಿ, ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಕ್ರಮಿಸುತ್ತಿರುವುದು, ಸತತ ಸಾಧನೆಯಿಂದ ಮುನ್ನುಗ್ಗುತ್ತ, ಬದುಕಿನ ಸುವರ್ಣ ಪುಟಗಳಿಗೆ ವರ್ಣರಂಜಿತ ಅಧ್ಯಾಯಗಳನ್ನು ಸೇರ್ಪಡೆ ಮಾಡುತ್ತಿರುವುದು ಮಹತ್ವದ ಸಂಗತಿ.


ರಾಜಧಾನಿಯ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನ ಈಕೆಗೆ ರಂಗಾರೋಹಣಕ್ಕೆ ವೇದಿಕೆಯಾಗಲಿದೆ. ಡಿ. 2ರ ಸಂಜೆ 5ಕ್ಕೆ ದಿಯಾ ಉದಯ್ ನೃತ್ಯ ಸಮಾರಾಧನೆಗೆ ಮಲ್ಲೇಶ್ವರ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಯೋಗಾಚಾರ್ಯ ಕಲಾ ಸಿಂಚನಂ ಯೋಗಸ್ಥಳ ಏನ್ಷಿಯಂಟ್ ಆರ್ಟ್ಸ ಟ್ರಸ್ಟ್ ಮುಖ್ಯಸ್ಥೆ ಯಾಮಿನಿ ಮುತ್ತಣ್ಣ ಮತ್ತು ನೃತ್ಯಗುರು ಡಾ. ಸುಪರ್ಣಾ ಅವರು ಸಾಕ್ಷಿಯಾಗಲಿದ್ದಾರೆ. ತಂದೆ ಉದಯ್ ಮತ್ತು ತಾಯಿ ಧನಲಕ್ಷ್ಮೀ ಉಪಸ್ಥಿತರಿರಲಿದ್ದಾರೆ.



ಹಿಮ್ಮೇಳದ ಸಾಥ್:

ದಿಯಾ ಉದಯ್ ರಂಗಪ್ರವೇಶಕ್ಕೆ ಕಲಾ ರಂಗದ ವಿದ್ವನ್ಮಣಿಗಳು ಹಿಮ್ಮೇಳದಲ್ಲಿ ಸಾಥ್ ನೀಡಲಿದ್ದಾರೆ. ಗುರು ಮತ್ತು ಹಿರಿಯ ನೃತ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ನಟುವಾಂಗ, ವಿದ್ವಾನ್ ಬಾಲಸುಬ್ರಹ್ಮಣ್ಯ (ಗಾಯನ), ವಿದ್ವಾನ್ ಜಿ. ಗುರುಮೂರ್ತಿ (ಮೃದಂಗ), ವಿದ್ವಾನ್ ಪ್ರಾದೇಶ ಆಚಾರ್ (ಪಿಟೀಲು)ಮತ್ತು  ಪ್ರಸನ್ನ ಕುಮಾರ (ರಿದಂ ಪ್ಯಾಡ್)ನಲ್ಲಿ ಸಹಕರಿಸಿ ನೃತ್ಯಾರಾಧನೆಗೆ ಮೆರಗು ನೀಡುತ್ತಿರುವುದು ಬಹು ವಿಶೇಷ.



ನರ್ತನ ಪ್ರತಿಭೆ:

 ಶೃಂಗೇರಿ ಸಮೀಪದ ಕಿಗ್ಗಾ ಮೂಲದ ಉದಯ್ ಮತ್ತು ಧನಲಕ್ಷ್ಮೀ ಅವರ ಪ್ರಥಮ ಪುತ್ರಿ ದಿಯಾ ನರ್ತನಕ್ಕಾಗಿಯೇ ಜನ್ಮ ತಾಳಿದ ಪ್ರತಿಭೆ. ಇದು ಅತಿಯಶಯೋಕ್ತಿ ಮಾತೇನೂ ಅಲ್ಲ. ದಿಯಾಳ ನೃತ್ಯದ ಓಘವನ್ನು ಗಮನಿಸಿದ ಯಾರಾದರೂ ಇದನ್ನು ಸಮ್ಮತಿಸಲೇ ಬೇಕು. ಆ ಮಟ್ಟಿಗಿನ ಕಲಾವಂತಿಕೆ ಈಕೆಯಲ್ಲಿ ಅಂತರ್ಗತವಾಗಿರುವುದು, ಪವಿತ್ರ ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ಅದು ಅನಾವರಣಗೊಳ್ಳಲು ದೈವ ಕೃಪೆ ಈಕೆಗೆ ಒದಗಿಬಂದಿರುವುದು ಪೂರ್ವ ಜನ್ಮದ ಸುಕೃತವೇ ಆಗಿದೆ.


ತನ್ನ ಮೂರನೇ ವಯಸ್ಸಿನಿಂದಲೇ ಸಂಗೀತ ಮತ್ತು ನೃತ್ಯಕ್ಕಾಗಿ ಒಲವು ತೋರಿದ ದಿಯಾಗೆ ಆಕೆಯ ತಂದೆ ಉದಯ್ ಅವರೇ ಪ್ರಥಮ ಪ್ರೇರಣೆ. ತಾಯಿ ಧನಲಕ್ಷ್ಮಿಯೇ ಬಹು ದೊಡ್ಡ ಪ್ರೋತ್ಸಾಹವಾದರು. ಸುಸಂಸ್ಕೃತ ಮತ್ತು ಕಲಾ ಅಭಿರುಚಿಯ ಕುಟುಂಬದಲ್ಲಿ ಜನಿಸುವ ಮಕ್ಕಳಿಗೆ ಹೆತ್ತವರೇ ಬಹು ಪ್ರದಾನ ಪ್ರೋತ್ಸಾಹಕರಾದರೆ ದಿಯಾಳಂಥ ಪ್ರತಿಭೆಗಳು ಕಲಾ ಲೋಕಕ್ಕೆ ಹೆಮ್ಮೆಯ ಕೊಡುಗೆಗಳಾಗುತ್ತವೆ ಎಂಬುದಕ್ಕೆ ಈ ಕುಟುಂಬ ಒಂದು ಮಾದರಿಯೇ ಆಗಿದೆ.


ಮಗಳ ನೃತ್ಯದ ಹೆಜ್ಜೆಗಳನ್ನು ಎಳವೆಯಲ್ಲೇ ಗುರುತಿಸಿದ ಆಕೆಯ ತಂದೆ ಉದಯ್ ಅವರು, ಫ್ಯಾನ್ಸಿ ಡ್ರಸ್ ಹಾಕಿ ವೇದಿಕೆ ಪ್ರವೇಶ ಮಾಡಿಸಿದರು. ಹತ್ತಾರು ಕಡೆ ದಿಯಾಳನ್ನು ಕರೆದೊಯ್ದು, ಜಾನಪದ ಗೀತೆ, ಭಕ್ತಿ ಸಂಗೀತಕ್ಕೆ ನರ್ತನ ಮಾಡುವ ಬಾಲೆಯನ್ನು ಬೆಂಬಲಿಸಿದರು. ತಾವೇ ಸಮಯ ಮಾಡಿಕೊಂಡು ಹಲವು ಸಭೆ, ಸಮಾರಂಭ, ಉತ್ಸವ ಮತ್ತು ಸಮ್ಮೇಳನಗಳಲ್ಲಿ ದಿಯಾಗೆ ಡಾನ್ಸ್ ಮಾಡಲು ಬೆನ್ನೆಲುಬಾಗಿ ನಿಂತರು. ಬಹುಮಾನ ಬಂದಾಗ ಮೊದಲು ತಾವೇ ಸಂಭ್ರಮಿಸಿ, ದಿಯಾಗೆ ಇನ್ನಷ್ಟು ಉತ್ತೇಜನ ನೀಡಿದರು. ಶಾಲಾ ಶಿಕ್ಷಣದೊಂದಿಗೆ ದಿಯಾಗೆ ಶಾಸ್ತ್ರೀಯ ಭರತನಾಟ್ಯ ಕಲಿಸಬೇಕು ಎಂಬ ಉತ್ಕಟ ಹಂಬಲ ಅವರಲ್ಲಿ ಮೂಡಿತು.


ನೃತ್ಯ ಗುರು ಡಾ. ಸುಪರ್ಣಾ ವೆಂಕಟೇಶ್ ಅವರ ಮಡಿಲಿಗೆ 3 ವರ್ಷದ ಬಾಲಕಿ ದಿಯಾಳನ್ನು ನರ್ತನ ಅಭ್ಯಾಸಕ್ಕೆ ಸಮರ್ಪಣೆ ಮಾಡಿಬಿಟ್ಟರು. ಸಮರ್ಥ ಗುರುವೆಂದೇ ಖ್ಯಾತರಾಗಿರುವ ಸುಪರ್ಣಾ ಅವರು ಬಾಲ ಪ್ರತಿಭೆಯ ಕಲಾಸಕ್ತಿ ಗುರುತಿಸಿ, ವಿದ್ಯೆಯನ್ನು ಧಾರೆ ಎರೆಯಲು ಸಂಕಲ್ಪ ತೊಟ್ಟರು. ಗುರು-ಶಿಷ್ಯರ ಪವಿತ್ರ ಬಾಂಧವ್ಯ ಹಿಮಾಲಯದ ಎತ್ತರಕ್ಕೆ ಬೆಳೆಯಿತು. ದಿಯಾಳ ಶ್ರದ್ಧೆ, ಆಸಕ್ತಿ, ಉತ್ಸಾಹ ಮತ್ತು ಕಲಿತದ್ದನ್ನು ಸಮರ್ಥವಾಗಿ ಗುರುವಿಗೆ ಒಪ್ಪಿಸುವ ಬದ್ಧತೆಗಳೇ ಆಕೆಯನ್ನು ಒಬ್ಬ ಯುವ ಕಲಾವಿದೆಯನ್ನಾಗಿ ರೂಪಿಸಿದವು.



ಹಿಂದಿರುಗಿ ನೋಡಲೇ ಇಲ್ಲ.....

ಜ್ಯೂನಿಯರ್, ಸೀನಿಯರ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಉತ್ತೀರ್ಣಳಾದ ದಿಯಾಗೆ ಹಲವು ವೇದಿಕೆಗಳು ಮುಕ್ತವಾದವು. ಪ್ರತಿ ಹಂತದಲ್ಲೂ ತನ್ನನ್ನು ಹೆತ್ತವರು ಮತ್ತು ಪಾಠ ಕಲಿಸಿದ ಗುರುಗಳನ್ನು ಧನ್ಯತೆಯಿಂದ ಸ್ಮರಿಸಿಕೊಂಡೇ ನೃತ್ಯ ಆರಂಭಿಸುವ ದಿಯಾ ಕಲಾ ರಂಗದಲ್ಲಿ ಹಿಂದಿರುಗಿ ನೋಡಲೇ ಇಲ್ಲ.


ದಾಸರು ಹೇಳುವಂತೆ ಸಂಪೂರ್ಣವಾಗಿ ‘ಗುರುವಿನ ಗುಲಾಮ’ ರಾಗಿ ನೃತ್ಯದ ಹೆಜ್ಜೆಗಳನ್ನು ಕರಗತ ಮಾಡಿಕೊಂಡ ದಿಯಾಗೆ ಶಾಲೆಯುಲ್ಲಿ ಪ್ರತಿಭಾ ಕಾರಂಜಿ, ಅಂತರ ಶಾಲೆ, ಕಾಲೇಜು ನೃತ್ಯ ಸ್ಪರ್ಧೆ,  ವಾರ್ಷಿಕೋತ್ಸವ  ಸೇರಿದಂತೆ ಹತ್ತಾರು ವೇದಿಕೆಗಳಲ್ಲಿ ಸೈ ಎನಿಸಿಕೊಂಡು ಚಪ್ಪಾಳೆ, ಪ್ರಶಸ್ತಿ, ಬಹುಮಾನ, ಟ್ರೋಫಿಗಳು ಗರಿ ಮೂಡಿಸಿದವು. ಕರುನಾಡಿನ ವೇದಿಕೆ ಮಾತ್ರವಲ್ಲ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರದ ಪ್ರತಿಷ್ಠಿತ ಸಂಘ- ಸಂಸ್ಥೆಗಳಲ್ಲೂ ನೃತ್ಯ ಪ್ರಸ್ತುತಿ ಮಾಡುವ ಅವಕಾಶ ಒದಗಿಬಂದಿತು. ಯೋಗ ಮತ್ತು ಕಲಾ ಪ್ರಸ್ತುತಿ ಯೋಗ್ಯತೆಗಳು ಒಂದೆಡೆ ಮಿಲನಗೊಳ್ಳುವದು ಬಹು ಅಪರೂಪ. ಅಂಥ  ಅನುರೂಪ ಮತ್ತು ಅವಕಾಶ ದಿಯಾ ಪಾಲಿಗೆ ದೊರಕಿದ್ದು ಮಹತ್ವದ ಸಂಗತಿಯೇ ಸರಿ.


ಸಾಲು ಸಾಲು ಪ್ರಶಸ್ತಿ- ಪುರಸ್ಕಾರ:

ಭರತನಾಟ್ಯ ಎಂಬುದು ಬಹು ಆಕರ್ಷಕ ಪ್ರದರ್ಶನ ಕಲೆ. ಅದನ್ನು ಸಿದ್ಧಿ ಮಾಡಿಕೊಳ್ಳಲು ಸತತ ಪರಿಶ್ರಮ ಮತ್ತು ಸಮಯದ ತ್ಯಾಗವೂ ಬೇಕು. ಅದಕ್ಕೆ ಬದ್ಧವಾಗಿ ದೇಹ ಮತ್ತು ಮನಸ್ಸುಗಳನ್ನು ನರ್ತನಕ್ಕೆ ಅಣಿಗೊಳಿಸಿಕೊಂಡ ದಿಯಾಗೆ ಗುರುವಿನ ಕರುಣಾ, ಕೃಪಾ ಕಟಾಕ್ಷವೂ ವರವಾಗಿ ಪ್ರಾಪ್ತವಾಯಿತು. ಅದರ ಫಲವಾಗಿ ನೃತ್ಯಾರಾಧನೆಗೆ ಹಲವು ಸಂಘ- ಸಂಸ್ಥೆಗಳು ಗೌರವ, ಮಾನ್ಯತೆ, ಬಿರುದು ಮತ್ತು ಸನ್ಮಾನಗಳನ್ನು ವಿಶೇಷ ಸಂದರ್ಭದಲ್ಲಿ ಪ್ರದಾನ ಮಾಡಿದವು ಎಂಬುದಿಲ್ಲಿ  ಉಲ್ಲೇಖನೀಯ.


2012ರಲ್ಲಿ ಬಿಬಿಎಂಪಿ ಕೊಡಮಾಡುವ ಕೆಂಪೇಗೌಡ ಪ್ರಶಸ್ತಿ, 2014ರಲ್ಲಿ ಮುಗ್ಧ ಪ್ರತಿಭೆ ಪ್ರಶಸ್ತಿ, ಕಸ್ತೂರಿ ಟಿವಿಯ ವಂಡರ್ ಕಿಡ್ ಪ್ರಶಸ್ತಿ, 2018ರಲ್ಲಿ ನಾಟ್ಯರತ್ನ, ಕೆಂಪೇಗೌಡ ರತ್ನ ಬಿರುದು, ಮಂತ್ರಾಲಯದಲ್ಲಿ ವಿಶ್ವ ಕನ್ನಡ ಕಣ್ಮಣಿ ಗೌರವಾದರ ಸೇರಿದಂತೆ ಸಾಲು -ಸಾಲು ಪ್ರಶಸ್ತಿ- ಪುರಸ್ಕಾರಗಳು ಯುವ ಪ್ರತಿಭೆ ದಿಯಾಗೆ ಹಿರಿಮೆ- ಗರಿಮೆ ಮೂಡಿಸಿದೆ.


ಕಥಕ್‌ನಲ್ಲೂ ವಿಶೇಷ ಆಸಕ್ತಿ:

ಭರತನಾಟ್ಯದೊಂದಿಗೆ ಕಥಕ್ ನೃತ್ಯವನ್ನೂ ದಿಯಾ ಕಲಿಯುತ್ತಿರುವುದು ಗಮನಾರ್ಹ ಸಂಗತಿ. ಮೊದಲಿಗೆ ಗುರು ಮೈಸೂರು ನಾಗರಾಜರಲ್ಲಿ ಕಥಕ್ ಪಾಠ ಹೇಳಿಸಿಕೊಂಡ ಈಕೆ ಈಗ ಶ್ವೇತಾ ವೆಂಕಟೇಶ್ ಬಳಿ ಕಥಕ್ ಅಭ್ಯಾಸ ಮುಂದುವರಿಸಿದ್ದಾರೆ. ಕಲೆಯ ಒಂದು ಲಹರಿಯನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಒಗ್ಗಿಕೊಂಡರೆ, ಬದುಕನ್ನು ಸಮರ್ಪಿಸಿಕೊಂಡರೆ  ಪೂರಕ ಕಲಾ ಪ್ರಕಾರಗಳೂ ಸಿದ್ಧಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಯುವ ಚೇತನ ದಿಯಾ ಒಂದು ದಿಟ್ಟ ಉದಾಹರಣೆಯಾಗಿ ಕಲಾ ಲೋಕದಲ್ಲಿ ಪ್ರತಿಭಾಶಾಲಿಯಾಗಿ ಮಿಂಚುತ್ತಿದ್ದಾಳೆ.




ಭರತನಾಟ್ಯ ನನ್ನ ಉಸಿರು. ಶಾಲಾ- ಕಾಲೇಜು ಪಠ್ಯ ಕಲಿಕೆಯ ಜತೆ ನರ್ತನವನ್ನು ನನ್ನ ಬದುಕಿನ ಅವಿಭಾಜ್ಯ ಅಂಗವಾಗಿ ಸ್ವೀಕಾರ ಮಾಡಿದ್ದೇನೆ. ನನ್ನ ಪರಮ ಗುರು ಡಾ. ಸುಪರ್ಣಾ ಅವರಂತೆ ವೃತ್ತಿ ಮತ್ತು ಪ್ರವೃತ್ತಿಯಾಗಿ ನೃತ್ಯವನ್ನು ಸ್ವೀಕಾರ ಮಾಡಬೇಕು ಎಂಬ ಗುರಿ ಇದೆ. ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಬೇಕು. ಉನ್ನತ ಅಧ್ಯಯನ ಮಾಡಿ ನಾನೂ ನೃತ್ಯ ಶಿಕ್ಷಕಿಯಾಗಿ ಮುಂದಿನ ಪೀಳಿಗೆಗೆ ಮಾರ್ಗದರ್ಶಿ ಆಗಬೇಕು ಎಂಬ ಕನಸು ಇದೆ. ಅದಕ್ಕೆ ಸದಾ ಗುರು ಅನುಗ್ರಹವನ್ನು ಬೇಡುತ್ತೇನೆ.

 - ದಿಯಾ ಉದಯ್, ಯುವ ಕಲಾವಿದೆ


ಉದಯರ ಉತ್ಸಾಹವೇ ದಿವ್ಯ ಬೆಳಕು

ಮಕ್ಕಳು ಪ್ರತಿಭಾಶಾಲಿಗಳಾಗಬೇಕು ಎಂದರೆ ಪಾಲಕರು ನೂರಕ್ಕೆ ನೂರು ಉತ್ಸಾಹಶೀಲರಾಗಿರಬೇಕು. ಇದಕ್ಕೆ ಉದಯ್ ಅನ್ವರ್ಥ. ಶೃಂಗೇರಿ ಸಮೀಪದ ಕಿಗ್ಗಾದಿಂದ ಆರಂಭವಾದ ಅವರ ಕ್ರಿಯಾಶೀಲತೆ ರಾಜಧಾನಿಯಲ್ಲೂ ಪ್ರಕಾಶಮಾನವಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಭಾಷಣ, ಗಾಯನ, ಜಾನಪದ ನೃತ್ಯದ ಪ್ರತಿಭೆಯಾಗಿದ್ದ ಉದಯ್, ಯುವಜನ ಮೇಳ, ಶಾಲಾ- ಕಾಲೇಜು ವಾರ್ಷಿಕೋತ್ಸವ ಇತ್ಯಾದಿಗಳಲ್ಲಿ ಪಾರಮ್ಯ ಮೆರೆದವರು. ಶೃಂಗೇರಿ ಬಿಸಿಎಂ ಕಾಲೇಜಿನಲ್ಲಿ ಹೆಮ್ಮೆಯ ವಿದ್ಯಾರ್ಥಿಯಾಗಿ ಗುರುತಿಸಿಕೊಂಡವರು. ಮಲೆನಾಡಿನ ಹತ್ತಾರು ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡವರು.

ಬೆಂಗಳೂರಿಗೆ ಬಂದು ನೆಲಸಿದ ನಂತರವೂ ಅವರ ಉತ್ಸಾಹ ಕುಗ್ಗಲಿಲ್ಲ. ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲ ಮಿತ್ರರ ತಂಡವನ್ನೇ ಅವರು ಹೊಂದಿದ್ದಾರೆ. ಅವರ ಈ ಉತ್ಸಾಹ- ಹುಮ್ಮಸ್ಸು ಮತ್ತು ಚೇತೋಹಾರಿತನವೇ ಮಗಳು ದಿಯಾಗೆ ಮಾದರಿ. ಮಗಳ ಪ್ರತಿಯೊಂದು ಸಾಧನಾ ಹೆಜ್ಜೆಯಲ್ಲೂ ಅಪ್ಪನಾದ ಉದಯ ಅವರು ಭರವಸೆಯ ಬೆಳಕಾಗಿದ್ದಾರೆ. ಮಗಳು ಬೆಳಗಲಿ ಎಂದು ಬೆವರು ಹರಿಸಿದ್ದಾರೆ. ಬದುಕಿನ ಸ್ವಂತ- ಸುಖ ಘಳಿಗೆಗಳನ್ನು ತ್ಯಾಗ ಮಾಡಿದ್ದಾರೆ. ಕಲಾ ಗುರು ಪರಂಪರೆಗೆ ವಿಧೇಯರಾಗಿದ್ದಾರೆ. ಕುಟುಂಬದಲ್ಲಿ ಪತ್ನಿಯ ಸಮಗ್ರ ಸಹಕಾರ ಪಡೆದು ಇಬ್ಬರು ಪುತ್ರಿಯರನ್ನು ಕಲಾ ಲೋಕದ ಸಾಧಕಿಯರನ್ನಾಗಿ ಮಾಡುವಲ್ಲಿ, ವಿದ್ವಜ್ಜನರ ಮೆಚ್ಚುಗೆಗೆ ಪಾತ್ರರನ್ನಾಗಿಸುವಲ್ಲಿ ‘ ಪಥಿ ಪಥಿ ಗುಣಸಾಂದ್ರ’ ರಂತೆ ಇದ್ದಾರೆ. ಇಂಥ ತಂದೆಯನ್ನು ಪಡೆಯುವ ಭಾಗ್ಯ ದಿಯಾಗೆ ದೊರೆತಿರುವುದೂ ಒಂದು ಯೋಗವೇ ಆಗಿದೆ ಎನ್ನಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top