ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಜಿರೆ: ಮಠ-ಮಂದಿರಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಭಜನೆ ಹಾಡುವುದರಿಂದ ಆರೋಗ್ಯ ವರ್ಧನೆ ಮತ್ತು ಪುಣ್ಯ ಸಂಚಯದೊಂದಿಗೆ ಸಮಾಜದ ಸಂಘಟನೆಯೂ ಆಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ರಾತ್ರಿ ವೇಣೂರಿನಲ್ಲಿ ಭರತೇಶ ಸಮುದಾಯಭವನದಲ್ಲಿ ಭಾರತೀಯ ಜೈನ್ಮಿಲನ್ ಮಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಠ-ಮಂದಿರಗಳಲ್ಲಿ ಭಜನೆ ಹಾಡಿದರೆ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತೇವೆ.. ವಾರಕ್ಕೊಂದು ದಿನವಾದರೂ ಸ್ಥಳೀಯ ಮಠ-ಮಂದಿರಗಳಿಗೆ ಹೋಗಿ ಭಜನೆ ಮಾಡಬೇಕು. ಪ್ರತಿದಿನ ಮನೆಯಲ್ಲಿಯೂ ಭಜನೆ ಹಾಡಬೇಕು. ಹಿಂದೆ ಸಂಧ್ಯಾಕಾಲದಲ್ಲಿ ಎಲ್ಲಾ ಮನೆಗಳಲ್ಲಿ ಭಜನೆ ಹಾಡುವ ಸಂಪ್ರದಾಯವಿತ್ತು. ಜೈನ ಮಹಿಳೆ ನೆಲ್ಲಿಕಾರು (ರಾಧಮ್ಮ), ಮಾರ್ನಾಡು ವರ್ಧಮಾನ ಹೆಗ್ಡೆ, ನೆಲ್ಲಿಕಾರು ಧರ್ಮರಾಜ ಯಾದವ ಮೊದಲಾದವರು ಮನೆಗಳಿಗೆ ಹೋಗಿ ಭಜನೆ ಬಗ್ಯೆ ಅರಿವು, ಜಾಗೃತಿ ಮೂಡಿಸುತ್ತಿದ್ದರು. ಧರ್ಮಸ್ಥಳದ ವತಿಯಿಂದಲೂ ಭಜನೆಗೆ ವಿಶೇಷ ತರಬೇತಿ, ಪ್ರೋತ್ಸಾಹ ನೀಡಲಾಗುತ್ತದೆ. ಭಾರತೀಯ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಜಿನಭಜನಾ ಸ್ಪರ್ಧೆ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಭಜನೆಯನ್ನು ಸುಶ್ರಾವ್ಯವಾಗಿ ಹಾಡುವ ಬಗ್ಯೆ, ರಾಗ, ತಾಳ ಮತ್ತು ಶ್ರುತಿಯ ಬಗ್ಯೆಯೂ ಸ್ಪರ್ಧಾಳುಗಳಿಗೆ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ನವರಾತ್ರಿ, ದೀಪಾವಳಿ, ದಶಲಕ್ಷಣಪರ್ವ ಮೊದಲಾದ ಸಂದರ್ಭಗಳಲ್ಲಿಯೂ ಮಠ-ಮಂದಿರಗಳಿಗೆ ಹೋಗಿ ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡಬೇಕು. ಜೈನ್ಮಿಲನ್ ಆಶ್ರಯದಲ್ಲಿ ಜಿನಭಜನೆ ಸ್ಪರ್ಧೆ ಮತ್ತು ಬಸದಿ ಸ್ವಚ್ಛತಾ ಕಾರ್ಯದ ಬಗ್ಯೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ ಜಿನಭಜನಾಭಿಷೇಕದೊಂದಿಗೆ ಮಹಾಮಸ್ತಕಾಭಿಷೇಕಕ್ಕೆ ಉತ್ತಮ ಚಾಲನೆ ದೊರಕಿದೆ. ಅಳದಂಗಡಿ ಬಸದಿಯಲ್ಲಿ 50 ವರ್ಷಗಳ ಹಿಂದೆ ಪ್ರಾರಂಭವಾದ ಭಜನಾ ಸಂಘದ ವತಿಯಿಂದ ಈಗಲೂ ಪ್ರತಿ ಶುಕ್ರವಾರ ಶ್ರಾವಕರು - ಶ್ರಾವಕಿಯರು ಬಸದಿಗೆ ಬಂದು ಭಜನೆ ಹಾಡುತ್ತಾರೆ. ಇತರ ಧರ್ಮೀಯರು ಕೂಡಾ ಪ್ರತಿ ಭಾನುವಾರ ನೃತ್ಯ ಭಜನೆ ಮಾಡುತ್ತಾರೆ.
ಮಹಾಮಸ್ತಕಾಭಿಷೇಕಕ್ಕೆ ಸರ್ವರೂ ತನು-ಮನ-ಧನದಿಂದ ಸಹಕಾರ ನೀಡಬೇಕು ಎಂದು ಅರಸರು ಕೋರಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಯುವರಾಜ ಭಂಡಾರಿ, ಮಂಗಳೂರಿನ ಪುಷ್ಪರಾಜ ಜೈನ್ ಮತ್ತು ಸೋನಿಯಾವರ್ಮ ಶುಭಾಶಂಸನೆ ಮಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ ಜೈನ್, ಮೂಡಬಿದ್ರೆಯ ನೋಟರಿ ಶ್ವೇತಾ ಜೈನ್, ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಅವರನ್ನು ಗೌರವಿಸಲಾಯಿತು. ಸುದರ್ಶನ ಜೈನ್ ಸಮಾರೋಪ ಭಾಷಣ ಮಾಡಿದರು.
ಭಾರತೀಯ ಜೈನ್ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದರು. ಜೈನ್ಮಿಲನ್ ಮಂಗಳೂರು ವಿಭಾಗದ ನಿರ್ದೇಶಕ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಮಹಾವೀರ ಜೈನ್ ಮೂಡುಕೋಡಿ ಗುತ್ತು ಕೊನೆಯಲ್ಲಿ ಧನ್ಯವಾದವಿತ್ತರು.
ಜಿನ ಭಜನೆ ಸ್ಪರ್ಧಾ ಫಲಿತಾಂಶ
ಹಿರಿಯರ ವಿಭಾಗ:
ಅನಂತಶ್ರೀ ತಂಡ, ಬಜಗೋಳಿ (ಪ್ರಥಮ) ರೂ.10,000 ಮತ್ತು ಫಲಕ, ವಿದುಷ, ಉಜಿರೆ (ದ್ವಿತೀಯ) ರೂ. 7,000/- ಮತ್ತು ಫಲಕ, ಬಾಹುಬಲಿ ಸೇವಾ ಸಮಿತಿ, ಧರ್ಮಸ್ಥಳ (ತೃತೀಯ) ರೂ. 5000/- ಮತ್ತು ಫಲಕ
ರಾಜ್ಯಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆಯಾದವರು:
• ಶ್ರುತವಾಣಿ, ವೇಣೂರು
• ಬ್ರಾಹ್ಮಿ, ಮೂಡಬಿದ್ರೆ
• ಶುಕ್ಲ, ಉಜಿರೆ
• ಶ್ರದ್ಧಶ್ರೀ, ಕಾರ್ಕಳ
• ಪುರುಷಶ್ರೀ, ದರೆಗುಡ್ಡೆ
• ಪದ್ಮಾವತಿ, ಮೂಡಬಿದ್ರೆ
ಕಿರಿಯರ ವಿಭಾಗ:
ಬ್ರಾಹ್ಮರಿ, ಉಜಿರೆ (ಪ್ರಥಮ) ರೂ. 7000/- ನಗದು ಪುರಸ್ಕಾರ, ಕೇವಲೀಶಾ, ವೇಣೂರು (ದ್ವಿತೀಯ) ರೂ. 5000/- ನಗದು ಪುರಸ್ಕಾರ, ಆದಿನಾಥ, ಅಳದಂಗಡಿ (ತೃತೀಯ) ರೂ. 3000/- ನಗದು ಪುರಸ್ಕಾರ,
ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದವರು:
• ಜಾವ್ನಿಕಾ, ಉಜಿರೆ
• ಪ್ರವಕ್ತಾ ಇಚಿಲಂಪಾಡಿ
• ಚಾರುಶ್ರೀ, ಮೂಡಬಿದ್ರೆ
ಹಿರಿಯರ ವಿಭಾಗದಲ್ಲಿ 59 ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ 32 ತಂಡಗಳು ಸೇರಿದಂತೆ ಒಟ್ಟು 91 ತಂಡಗಳು ಜಿನಭಜನೆ ಸ್ಪರ್ಧೆಯಲ್ಲಿ ಭಾಗವಹಿಸಿದವು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ