ಎಸ್.ಡಿ.ಎಂ ಕಾಲೇಜಿನಲ್ಲಿ ಸ್ಥಳೀಯ ಮಾಧ್ಯಮ ಕುರಿತು ಕಾರ್ಯಾಗಾರ
ಉಜಿರೆ: ಮೌಲಿಕ ಸಂವಹನದ ಮಾದರಿಗಳಿಗೆ ಆದಾಯ ಗಳಿಕೆಯ ವಾಣಿಜ್ಯಿಕ ಸ್ವರೂಪ ಒದಗಿಸಿಕೊಡುವ ಮೂಲಕ ಸಮೂಹ ಮಾಧ್ಯಮ ವೃತ್ತಿಪರತೆಯ ಶಕ್ತಿಯನ್ನು ವಿಸ್ತರಿಸಬಹುದು ಎಂದು ಮಂಗಳೂರಿನ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ (ಮಾಮ್) ಸಂಘಟನೆಯ ಗೌರವಾಧ್ಯಕ್ಷ, ಮೈ ಅಂತರಾತ್ಮ ಸಂಸ್ಥೆಯ ಸ್ಥಾಪಕ, ಸಿಇಒ ಮತ್ತು ನಿರ್ವಹಣಾ ಸಲಹೆಗಾರ ವೇಣು ಶರ್ಮ ಅಭಿಪ್ರಾಯಪಟ್ಟರು.
ಎಸ್. ಡಿ ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ಪದವಿ ಅಧ್ಯಯನ ವಿಭಾಗಗಳು ಮಾಮ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 'ಸ್ಥಳೀಯ ಮಾಧ್ಯಮ: ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ' ಕುರಿತ ಕಾರ್ಯಾಗಾರದ ಮೊದಲ ಗೋಷ್ಠಿಯಲ್ಲಿ 'ಸ್ಥಳೀಯ ಮಾಧ್ಯಮಗಳಿಗೆ ವಾಣಿಜ್ಯಿಕ ಆಯಾಮ: ಆದಾಯ ಹೆಚ್ಚಳದ ಮಾರುಕಟ್ಟೆ ತಂತ್ರಗಾರಿಕೆ' ಬಗ್ಗೆ ವಿಚಾರಗಳನ್ನು ಪ್ರಸ್ತುತಪಡಿಸಿದರು.
ಜನರ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅದಕ್ಕನುಗುಣವಾದ ವಿವರಗಳನ್ನು ಒದಗಿಸಿಕೊಡುವ ಮತ್ತು ಆ ಮೂಲಕ ವಾಣಿಜ್ಯಿಕ ಲಾಭ ಗಳಿಸುವ ಹೆಜ್ಜೆಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚಿನ ಆದ್ಯತೆ ಲಭಿಸುತ್ತಿದೆ. ಪರ್ಸೆಪ್ಷನ್ ಮ್ಯಾನೇಜ್ಮೆಂಟ್ ಪರಿಕಲ್ಪನೆಯ ಆಧಾರದಲ್ಲಿ ಸೋಷಿಯಲ್ ಮೀಡಿಯಾಗಳು ಮತ್ತಿತರ ಸಂವಹನ ವೇದಿಕೆಗಳ ಮೂಲಕ ವ್ಯಕ್ತಿಗತ ಯಶಸ್ಸು ಪಡೆಯುವ ಅವಕಾಶಗಳು ಸೃಷ್ಟಿಯಾಗಿವೆ ಎಂದರು.
ಸ್ಥಳೀಯ ಮಾಧ್ಯಮಗಳು ಹಲವಾರು ಸಾಮಾಜಿಕ ವಿಚಾರಗಳನ್ನು ತಮ್ಮ ಮಾಧ್ಯಮಗಳಲ್ಲಿ ಪ್ರಕಟಿಸಿದರೂ ಉದ್ದೇಶಿತ ಸಮೂಹವನ್ನು ತಲುಪುವ ವಾಣಿಜ್ಯಿಕ ತಂತ್ರಗಾರಿಕೆಗಳನ್ನು ರೂಪಿಸುವಲ್ಲಿ ವಿಫಲವಾಗುತ್ತವೆ. ಉದ್ದೇಶಿತ ಸಮೂಹವನ್ನು ತಲುಪಿಕೊಳ್ಳುವ ವಿಶಿಷ್ಠವಾದ ವಾಣಿಜ್ಯಿಕ ಮಾದರಿಯ ಅನುಷ್ಠಾನವಿಲ್ಲದೇ ಮೌಲಿಕ ಕಂಟೆಂಟ್ನ್ನು ಜನಜನಿತವಾಗಿಸುವ ಪ್ರಯತ್ನ ಸಫಲವಾಗದು ಎಂದು ಹೇಳಿದರು.
ಸ್ಥಳೀಯ ಮಾಧ್ಯಮಗಳು ಕಂಟೆಂಟ್ನ್ನು ಜನಜನಿತಗೊಳಿಸುವ ಮೂಲಕ ಆದಾಯಗಳನ್ನು ಗಳಿಸುವ ತಂತ್ರವನ್ನು ಕಂಡುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಯೂಟ್ಯೂಬ್ ಚಾನೆಲ್ಗಳೂ ವಿಭಿನ್ನ ರೀತಿಯ ಬ್ಲಾಗಿಂಗ್ನ ಮೂಲಕ ಆದಾಯಗನ್ನು ಗಳಿಸುತ್ತವೆ. ಇವುಗಳ ಪರ್ಸೆಪ್ಷöನ್ ಮ್ಯಾನೇಜ್ಮೆಂಟ್ ತಂತ್ರಗಾರಿಕೆಯ ಸಾಧ್ಯತೆಗಳನ್ನು ಸ್ಥಳೀಯ ಮಾಧ್ಯಮಗಳು ಗಮನಿಸಬೇಕು ಎಂದರು. ಗೋಷ್ಠಿಯಲ್ಲಿ ದ್ವೀತಿಯ ವರ್ಷದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಶಾಮ್ ಪ್ರಸಾದ್ ನಿರೂಪಿಸಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ