ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಉದಾತ್ತ ದೃಷ್ಟಿಕೋನವನ್ನು ಇಟ್ಟುಕೊಂಡು ಶೈಕ್ಷಣಿಕವಾಗಿ ಗಟ್ಟಿತನ ಹಾಗೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ರೋಮಾಂಚಕ ಕಲಿಕಾ ಅನುಭವಗಳನ್ನು ನೀಡುತ್ತಾ ಬಂದಿದೆ. 1891ರಂದು ಶ್ರೇಷ್ಠ ಮಾನವತವಾದಿ ಹಾಗೂ ಸಂಸ್ಥೆಯ ಪ್ರವರ್ತಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಇವರ ದೂರದೃಷ್ಟಿಯಿಂದ ಕೆನರಾ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಮಾತೃಭೂಮಿ ಮತ್ತು ಮಾತೃಭಾಷೆ ಮಾತ್ರ ಹೃದಯಕ್ಕೆ ಹತ್ತಿರವಾಗಿರುತ್ತದೆ. ಹುಟ್ಟಿದ ಊರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ಸಂತೋಷವಾಗಿದೆ. ಕೆನರಾ ಬ್ಯಾಂಕ್ ಮತ್ತು ಕೆನರಾ ವಿದ್ಯಾ ಸಂಸ್ಥೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಮ್ಮೆಂಬಳ್ ಸುಬ್ಬರಾವ್ ಪೈ ತನ್ನ ಸಣ್ಣ ವಯಸ್ಸಿನಲ್ಲಿ ಹೆಣ್ಮಕ್ಕಳ ವಿದ್ಯಾಭ್ಯಾಸದ ಬಗೆಗೆ ಆಸಕ್ತಿ ವಹಿಸಿದವರು. ಇಂದು ಹಣಕಾಸು ಸಂಸ್ಥೆಗಳು ಕೇವಲ ಲಾಭದ ಉದ್ದೇಶವನ್ನು ಇಟ್ಟು ಕೊಳ್ಳದೆ ವಿದ್ಯಾರ್ಥಿಗಳ ಶಿಕ್ಷಣದ ಕಡೆಗೆ ಆಸಕ್ತಿಯನ್ನು ವಹಿಸಿಕೊಳ್ಳಬೇಕು. ಸಮಾಜದ ಉದ್ದಾರಕ್ಕೆ, ಸೇವೆಗಾಗಿ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಸುಧಾಕರ್ ಕೊಠಾರಿ ಹೇಳಿದರು.
ಕೆನರಾ ಪ್ರೌಢಶಾಲೆ ಮೈನ್ ಕೋಡಿಯಾಲ್ ಬೈಲ್ ಇಲ್ಲಿಯ ಮೈದಾನದಲ್ಲಿ ನಡೆದ ಅಮ್ಮೆಂಬಳ್ ಸುಬ್ಬರಾವ್ ಪೈಗಳ 171ನೇ ಜನ್ಮದಿನವನ್ನು ಸ್ಥಾಪಕರ ದಿನವನ್ನಾಗಿ ಆಚರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಂದು ಕೆನರಾ ಬ್ಯಾಂಕ್ 9700 ಶಾಖೆಗಳೊಂದಿಗೆ ದೇಶದ ಅಗ್ರಮಾನ್ಯ ಬ್ಯಾಂಕುಗಳಲ್ಲಿ ಒಂದಾಗಿದೆ. ಮಧ್ಯಮ ವರ್ಗ ಮತ್ತು ರೈತರಿಗೆ ನೆರವಾಗುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಹಣಕಾಸಿನ ಕೊರತೆಯಿಂದ ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ತ್ವರಿತ ಗತಿಯ ಸಾಲ ಸೌಲಭ್ಯವನ್ನು ಬ್ಯಾಂಕ್ ನೀಡುತ್ತಾ ಇದೆ. ಇದೆಲ್ಲ ಸಾಧ್ಯವಾದುದು ಬ್ಯಾಂಕಿನ ಸ್ಥಾಪಕರು ಹೊಂದಿದ ದೂರದೃಷ್ಟಿ. ಅದರ ಫಲಶ್ರುತಿ ಎಂಬಂತೆ ಕೆನರಾ ಬ್ಯಾಂಕು ಮತ್ತು ಕೆನರಾ ವಿದ್ಯಾಸಂಸ್ಥೆಗಳು ಹಲವು ಜನರಿಗೆ ಉದ್ಯೋಗ ನೀಡಿ ಸ್ವಾಭಿಮಾನದ ಬದುಕು ಕಾಣಲು ಅವಕಾಶ ಮಾಡಿಕೊಟ್ಟಿದೆ. ಎಂದು ಹೇಳಿದರು.
ಕೆನರಾ ಸಿಬಿಎಸ್ಇ ವಿದ್ಯಾರ್ಥಿ ನವನೀತ್ ಪೈ ಸ್ಥಾಪಕರ ಬಗ್ಗೆ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಿ. ವಾಸುದೇವ ಕಾಮತ್, ಕಾರ್ಯದರ್ಶಿ ಎಂ. ರಂಗನಾಥ್ ಭಟ್, ಅಮ್ಮೆಂಬಳ್ ಸುಬ್ಬರಾವ್ ಪೈ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ.ಆರ್. ಎನ್. ಸುಜೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಕೆ.ಸುರೇಶ್ ಕಾಮತ್, ಖಜಾಂಚಿ CA ಎಂ. ವಾಮನ್ ಕಾಮತ್, ಕೆನರಾ ವಿಕಾಸ ಪದವಿಪೂರ್ವ ಕಾಲೇಜಿನ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಪದವಿಪೂರ್ವ ಕಾಲೇಜಿನ ಸಂಚಾಲಕ ಟಿ ಗೋಪಾಲ್ ಕೃಷ್ಣ ಶೆಣೈ, ಮಂಡಳಿಯ ಸದಸ್ಯರಾದ ಎಂ. ನರೇಶ್ ಶೆಣೈ, ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರು, ಶಿಕ್ಷಕ ಶಿಕ್ಷಕಿಯರು, ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಸಹೋದರಿ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕ, ಶಿಕ್ಷಕ ಶಿಕ್ಷಕೇತರ ಬಂಧುಗಳು, ಸಂಸ್ಥೆಯ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆನರಾ ಪ್ರೌಢಶಾಲೆ ಕೊಡಿಯಾಲ್ ಬೈಲ್ ಇಲ್ಲಿಯ ಶಿಕ್ಷಕಿ ಶ್ರೀಮತಿ ವಿದ್ಯಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು. ಕೆನರಾ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಸ್ವಾಗತಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ