ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 'ಅಮೃತಕಾಲ' ಸರಣಿ ಉಪನ್ಯಾಸ ಕಾರ್ಯಕ್ರಮ

Upayuktha
0



ಬೆಂಗಳೂರು: ಇದೀಗ ಪದವಿಶಿಕ್ಷಣ ಪಡೆಯುತ್ತಿರುವವರಿಗೆ ಅಗತ್ಯ ಕೌಶಲ್ಯದ ಬೆನ್ನೆಲುಬು ಕಲ್ಪಿಸಲು 2015ನೇ ಇಸವಿ ಜುಲೈ 15ರಂದು ಕೌಶಲ್ಯ ತರಬೇತಿಗೆ ನಿರ್ದಿಷ್ಟ ನೀತಿ ನಿರೂಪಿಸಲಾಯಿತು. ಇದಕ್ಕೆ ಕಾರಣ ಈ ಯುವಜನತೆ ಬಹುತೇಕ ಜನ್ಮತಾಳಿರುವುದು ಇಪ್ಪತ್ತೊಂದನೇ ಶತಮಾನದಲ್ಲಿ. ಈಗ ಅವರು ಬದುಕುತ್ತಿರುವ ಕಾಲಘಟ್ಟವನ್ನು ‘ಅಮೃತಕಾಲ’ ಎಂದು ಭಾರತ ಸರ್ಕಾರ ಗುರುತಿಸಿದೆ, ಏಕೆಂದರೆ 2047ರಲ್ಲಿ ನಮ್ಮ ಭಾರತ ದೇಶ ಸ್ವಾತಂತ್ರ್ಯದ ನೂರನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲರೂ ನಲ್ವತ್ತು ವರ್ಷ ದಾಟಿದ ಜವಾಬ್ದಾರಿಯುತ ನಾಗರೀಕರಾಗಿರುತ್ತಾರೆ. ಇವರು ತಮ್ಮ ಶಿಕ್ಷಣ ಹಾಗೂ ಕೌಶಲ್ಯದ ಪ್ರತಿಭೆಯಿಂದ ನಮ್ಮ ದೇಶವನ್ನು ವಿಶ್ವಗುರು ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆ. ತದನಂತರ ಇವರೇ ಹೊಸ ಯುವ ಸಮೂಹವನ್ನು ಆ ಸಂದರ್ಭಕ್ಕೆ ಅನುಗುಣವಾದ ನವನವೀನ ಕೌಶಲ್ಯಗಳಿಂದ ಸಬಲಗೊಳಿಸಲಿದ್ದಾರೆ’, ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಗೋಪಕುಮಾರ್ ನುಡಿದರು. 





ಅವರು ‘ಇಪ್ಪತ್ತೊಂದನೇ ಶತಮಾನ ಕೇಂದ್ರಿತ ಕೌಶಲ್ಯ ತರಬೇತಿ’, ಕುರಿತ ‘ಅಮೃತ ಕಾಲ’ ಸರಣಿಮಾಲೆಯ ಉಪನ್ಯಾಸವನ್ನು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮುನಿಕೇಶನ್ ಇಂಜಿನಿಯರಿಂಗ್ ವಿಭಾಗ, ಇಂಡಿಯನ್ ಕೌನ್ಸಿಲ್  ಆಫ್ ಸೋಶಿಯಲ್ ರಿಸರ್ಚ್ ಹಾಗೂ ಐ.ಕ್ಯು.ಎ.ಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸಾದರಪಡಿಸುತ್ತಿದ್ದರು. 





ಮುಂದುವರಿದು ಶ್ರೀಯುತರು, ‘ಕೌಶಲ್ಯ ಕುರಿತ ನಿರ್ದಿಷ್ಟ ನೀತಿ ಅನುಷ್ಠಾನವಾದ ನಂತರ ಇಂದು ದೇಶದಾದ್ಯಂತ ಸಾವಿರಕ್ಕೂ ಅಧಿಕ ಕೌಶಲ್ಯ ತರಬೇತಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಇವುಗಳ ಪ್ರಮಾಣ ಇನ್ನಷ್ಟು ಅಧಿಕಗೊಳ್ಳಲಿದೆ. ಇದೀಗ ಪಾರಂಪಾರಿಕ ಪಠ್ಯದ ಜತೆ ಪ್ರಾತ್ಯಕ್ಷಿಕೆಗಳನ್ನೂ ಕಲಿಯಲು ಸೂಕ್ತ ವೇದಿಕೆಯನ್ನು ಭಾರತ ಸರ್ಕಾರ ನಿರ್ಮಾಣ ಮಾಡಿದೆ’, ಎಂದರು.




‘ಇಂಡಿಯನ್ ಕೌನ್ಸಿಲ್  ಆಫ್  ಸೋಶಿಯಲ್ ರಿಸರ್ಚ್’ನ ದಕ್ಷಿಣ ಪ್ರಾದೇಶಿಕ ಮುಖ್ಯಸ್ಥ ಡಾ. ಜಾಕೊಬ್ ಕಲ್ಲೆ ಪ್ರಾರಂಭದಲ್ಲಿ ‘ಅಮೃತ್ ಕಾಲ್’ ಸರಣಿ ಉಪನ್ಯಾಸಗಳನ್ನು ಆಯೋಜಿಸಿರುವ ಹಿಂದಣ ಉದ್ದೇಶವನ್ನು ತಿಳಿಸಿದರು. ಸಭೆಯಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಅಕೆಡೆಮಿಕ್ ಡೀನ್ ಡಾ. ಸಂದೀಪ್ ಶಾಸ್ತ್ರಿ, ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎ.ಸಿ. ರಾಮಚಂದ್ರ, ವಿದೇಶ ವ್ಯವಹಾರಗಳ ಡೀನ್ ಡಾ. ಜೆ. ಸುಧೀರ್ ರೆಡ್ಡಿ, ಕಾರ್ಯಕ್ರಮದ ಸಂಯೋಜಕರಾದ ಸುಗನ್ಯ ಹಾಗೂ ಸ್ಮಿತಾ ಶರತ್ ಉಪಸ್ಥಿತರಿದ್ದರು. ಮುನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ತದನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top