ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ, ಭಾರತೀಯರು ನೆಲೆಸಿರುವ ಹೊರದೇಶಗಳಲ್ಲಿ ಕೂಡ ಸನಾತನವಾದ ದುರ್ಗಾಪೂಜೆಗೆ ವಿಶೇಷ ಮಹತ್ವವಿದೆ. ಭಾದ್ರಪದ ಮಾಸದ ಕೃಷ್ಣಪಕ್ಷದ ಹದಿನೈದು ದಿನಗಳ ಪರ್ಯಂತ ಪಿತೃಗಳನ್ನು ನೆನೆಸಿಕೊಳ್ಳುವ ವಿಧಿವಿಧಾನಗಳು ಜರುಗಿದರೆ , ಸರ್ವಪಿತೃ ಅಮಾವಾಸ್ಯೆಯ ಮರುದಿನದಿಂದ ತೊಡಗಿ ಮುಂದಿನ ಹದಿನೈದು ದಿನಗಳು ಮಾತೃಭಕ್ತಿಯ ಅನುಸಂಧಾನಕ್ಕೆ ಮೀಸಲಾಗಿದೆ.
ಆಶ್ವೀಜ ಮಾಸದ ರಾತ್ರಿಗಳನ್ನು ಮಾತೃಭಕ್ತಿ ಪುರಸ್ಸರ ನಂದಾದೀಪ ಬೆಳಗಿ , ಭಜನೆ ಪೂಜೆಯಂತಹ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಗೀತ - ನೃತ್ಯ- ರೂಪಕ -ನಾಟಕ ಇತ್ಯಾದಿ ಕಲಾ ಕಲಾಪಗಳ ಮೂಲಕ ವೈಯಕ್ತಿಕ ಹಾಗೂ ಸಾಮಾಜಿಕ ವ್ಯಕ್ತಿತ್ವವನ್ನು ಬೆಳಗಿಸಿಕೊಳ್ಳುವ ; ಎಲ್ಲಕಿಂತ ಮುಖ್ಯವಾಗಿ ಪ್ರಕೃತಿಯ ಸೃಷ್ಟಿ-ಸ್ಥಿತಿ-ಲಯಗಳ ಹಿಂದಿನ ಪ್ರಧಾನ ಚಾಲನ ಶಕ್ತಿಯನ್ನು ಕೃತಜ್ಞತೆಯಿಂದ ಸ್ಮರಿಸಿ ಧನ್ಯರಾಗುವ ಮಂಗಳಮಯ ನವನವೋತ್ಸಾಹ ಪರ್ವ ಇದು .
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ನವರಾತ್ರಿಗಳು ಜಗತೆಲ್ಲವೂ ದುರ್ಗಾಮಯವಾಗಿರುತ್ತದೆ. ಮಾತೃಸ್ವರೂಪಿಣಿ ದುರ್ಗೆಯು ಪ್ರಸನ್ನಚಿತ್ತಲಾಗಿರುವ ಈ ಒಂಭತ್ತು ದಿನಗಳು ನಿಜವಾಗಿಯೂ ಮಾತೆಯರ ದಿನಗಳು ! ಇಂಗ್ಲೀಷ್ ಸಂಸ್ಕೃತಿಯಲ್ಲಿರುವ ‘ಮದರ್ಸ್ ಡೇ’ಗಿಂತ ಇದು ಹೆಚ್ಚು ಆರ್ಥಪೂರ್ಣವಾದುದು.
ಅಮ್ಮನೆಂದರೆ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಚೈತನ್ಯ ಶಕ್ತಿ . ಹಸುಗೂಸು ಗಳಾಗಿರುವಾಗ ಅಮ್ಮನ ಎದೆ ಹಾಲು ಕುಡಿದೇ ಎಲ್ಲರ ದೇಹವು ತೃಪ್ತಿಯಿಂದ ಬೆಳೆದಿದೆ. ಹಾಗಾಗಿಯೇ , ಮಹಿಳೆಯರನ್ನು ಮಾತೃಸ್ವರೂಪಿಣಿಯನ್ನಾಗಿ ಕಾಣಬೇಕೆಂಬುದು ಸಂಪ್ರದಾಯ . ಬೆಳಿಗ್ಗೆ ಏಳುವಾಗ ಭೂಮಿಯನೊಮ್ಮೆ ಮುಟ್ಟಿ ನಮಸ್ಕರಿಸುವುದು ಹೊತ್ತ ಭೂಮಿ ನಮ್ಮ ತಾಯಿ ಎಂಬ ಕಾರಣಕ್ಕಾಗಿ , ಪವಿತ್ರವೆಂದು ಭಾವಿಸಿದ ಮರಕ್ಕೆ ಪ್ರದಕ್ಷಿಣೆ ಹಾಕುವುದು ಮರದೊಳಗೆ ಶಕ್ತಿಸ್ವರೂಪಿಣಿದ್ದಾಳೆಂಬ ಕಾರಣಕ್ಕೆ . ಹರಿಯುವ ಗಂಗೆಯೂ ಪಾಪವಿನಾಶಿನಿಯಾಗಲು ಕಾರಣ ಅವಳ ಹೃದಯದಲ್ಲಿ ಪೊರೆಯುವ ಭಾವ ಇರುವ ಕಾರಣದಿಂದ . ಪುಟ್ಟ ಬಾಲೆಯರನ್ನು ‘ಏನಮ್ಮಾ’ ಎಂದು ಸಂಭೋಧಿಸುವುದರಲ್ಲಿ ಪ್ರೀತಿಯೂ ಗೌರವಭಾವವೂ ಜೊತೆಯಾಗಿ ಬೆಸೆದುಕೊಂಡಿರುತ್ತದೆ.
ವೇದಾಂತದ ಪ್ರಕಾರ ಮಾಯೆ ಎಂಬುದು ನಿರ್ಗುಣ, ನಿರಾಕಾರದ ಒಂದು ಸ್ಥಿತಿ. ಆದರೆ ಅದನ್ನು ಆಕಾರದೊಂದಿಗೆ, ಸಗುಣಾತ್ಮಕವಾಗಿ ಪರಿಭಾವಿಸಬೇಕಾದ ಮಾಯೆಯನ್ನೇ ‘ಮಾತೆ’ ಯೆಂದು ಪರಿಭಾವಿಸಲಾಯಿತು. ತಲೆತಲಾಂತರದಿಂದ ಶೋಷಣೆಗಳೊಗಾಗಿರುವ ಹೆಣ್ಣಮಕ್ಕಳಿಗೂ ಇದು ಸ್ವಾಭಿಮಾನದ ಸಂಕೇತವಾಗಿ ಸ್ತ್ರೀಯರನ್ನು ಗೌರವಿಸುವ ಪರಿಪಾಠ ಆರಂಭವಾಯಿತು. ಈ ರೀತಿಯಲ್ಲಿ ಸ್ತ್ರೀಯರಿಗೆ ಸ್ವಾಭಿಮಾನವನ್ನು ಆತ್ಮವಿಶ್ವಾಸವನ್ನು ಕೊಡುವ ಧಾರ್ಮಿಕ ನಂಬಿಕೆ ಜಗತ್ತಿನ ಬೇರಾವ ಸಂಸ್ಕೃತಿಯಲ್ಲೂ ಇಲ್ಲ ಎಂಬುದು ಕೂಡ ಗಮನಾರ್ಹ .
ದುರ್ಗಾ, ಲಕ್ಷ್ಮೀ ಮತ್ತು ಸರಸ್ವತಿ ದೈವೀ ಶಕ್ತಿಯ ಮೂರು ಲೀಲಾಕ್ಷೇತ್ರಗಳು . ಈ ದೇವಿಯರು ಅಸ್ತಿತ್ವದ ಮೂರು ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ವಗಳನ್ನು ಸಂಕೇತಿಸುವ ಶಕ್ತಿ ಸ್ವರೂಪಗಳು .ತಮಸ್ಸು ಎಂದರೆ ಜಡತ್ವ , ರಜಸ್ಸಿನ ಸ್ವಭಾವವು ಕ್ರಿಯಾತ್ಮಕ ಭಾವೋತ್ಕರ್ಷದ್ದು.. ಸತ್ವವು ನಮ್ಮಲ್ಲಿಯ ಪರಿಮಿತಿಗಳ ಕರಗುವಿಕೆ – ಏಕೋಭಾವದ ಸ್ಥಿತಿ. ಆಕಾಶದಲ್ಲಿ ಸುತ್ತುತ್ತಿರುವ ಭೂಮಿ, ಸೂರ್ಯ ಚಂದ್ರ ಇವು ಮೂರು ನಮ್ಮ ದೇಹ ರಚನೆಗೆ , ಕ್ರಿಯೆಗಳಿಗೆ ನೇರ ಸಂಬಂಧ ಹೊಂದಿದೆ. ಭೂಮಿತಾಯಿ ತಮಸ್ಸನ್ನು ಸಂಕೇತಿಸುತ್ತಿದ್ದರೆ, ಸೂರ್ಯನು ರಜಸ್ಸಿನ ದ್ಯೋತಕ, ಚಂದ್ರನು ಸತ್ವದ ಪ್ರತೀಕ.
ಬಲವರ್ಧನೆಗಾಗಿ, ಅಧಿಕಾರಕ್ಕಾಗಿ ಮೃತ್ಯುವನ್ನು ಗೆಲ್ಲಲು ಆಶಿಸುವವರು ದೇವಿಯ ತಾಮಸಿಕ ಆವಿರ್ಭಾವಗಳಾದ ಕಾಳಿ ಅಥವಾ ಭೂಮಿಯನ್ನು ಪೂಜಿಸುವರು. ಐಶ್ವರ್ಯ , ದೀರ್ಘಾಯುಷ್ಯ ಇನ್ನಾವುದೇ ಐಹಿಕ ಭೋಗ ಗಳು ಅಥವಾ ಭಾವೋತ್ಕರ್ಷ- ಭಕ್ತಿ ಬೇಕಾದವರು ದೇವಿಯ ರಾಜಸಿಕ ರೂಪವಾದ ಲಕ್ಷ್ಮೀಯ ಕಡೆಗೆ ಆಕರ್ಷಿತರಾಗಿ ಅವಳನ್ನು ಆಥವಾ ಸೂರ್ಯನನ್ನು ಆರಾಧಿಸುವರು. ಜ್ಞಾನಕ್ಕೆ ಮಹತ್ವ ಕೊಟ್ಟು ಅರಿವಿನಿಂದ ನಶ್ವರ ದೇಹದ ಪರಿಮಿತಿಗಳನ್ನು ದಾಟಿ ಮುಂದುವರಿಯಲು ಇಚ್ಛಿಸುವರು ಸತ್ವ ದ ಅಧಿಷ್ಠಾತ್ರಿ ಸರಸ್ವತಿಯನ್ನು ಅಥವಾ ಚಂದ್ರನನ್ನು ಆರಾಧಿಸುತ್ತಾರೆ.
ನವರಾತ್ರಿಯ ಮೊದಲು ಮೂರು ದಿನ ದುರ್ಗಾ ಅಥವಾ ಕಾಳಿ ಪೂಜೆ, ನಂತರ ಲಕ್ಷ್ಮೀ ಗೆ ಕೊನೆಯಲ್ಲಿ ಸರಸ್ವತಿಯ ಆರಾಧನೆ. ಈ ಪೂಜಾಕ್ರಮ ಅನುಸರಿಸುವುದಕ್ಕೆ ಕಾರಣವಿದೆ , ಮೊದಲು ಭೂಮಿಯಿಂದ ಹುಟ್ಟಿ ಬಂದ ನಂತರ ತಾನೆ ನಾವು ಜೀವನ ಕ್ರಿಯೆಗೆ ತೊಡಗುವುದು, ಈ ಕ್ರಿಯಾಶೀಲತೆ ಲಕ್ಷ್ಮೀ ದೇವಿಯ ಸ್ವಭಾವವಾದ ರಜಸ್ಸು , ದೇವಿಯ ಮೂರನೇ ಗುಣ ಸಾತ್ವಿಕತೆ ನಿಮಗೆ ಬರಬಹುದು , ಬರದಿರಲೂ ಸಾಧ್ಯ. ಜ್ಞಾನರೂಪಿಣಿ ಸರಸ್ವತಿಯನ್ನು ಒಲಸಿಕೊಳ್ಳಲು ರ್ಶರಮಿಸಬೇಕು . ಅವಳ ಬಳಿಗೆ ಹೋಗುವ ಸಾಹಸವಿರಬೇಕು . ಕಾಳಿಯು ಭೂಮಿಯಲ್ಲಿ ನಿಂತವಳು , ಲಕ್ಷ್ಮೀ ಹೂವಿನ ಮೇಲೆ ಕುಳಿತವಳು,ಸರಸ್ವತಿಯಾದರೋ ನವಿಲನ್ನು ಏರಿದವಳು , ಇವರು ಮೂವರು ದೇವಿಯ ಲೀಲೆಗೆ ಮೂರು ಆಯಾಮಗಳು.
ತಮಸ್ಸಿನ ಅಧಿದೇವಿಯಾಗಿ ನಮಗೆ ಜನ್ಮ ನೀಡುವವಳು ಭೂಮಿ . ನಾವು ಬಸುರಿನಲ್ಲಿ ಕಳೆಯುವ ನವಮಾಸಗಳು ತಮಸ್ಸಿನವು. ಈ ಸ್ಥಿತಿಯಲ್ಲಿ ಕಳೆಯುವ ಸಮಯ ನಿಷ್ಕøಯತೆಯ ರೂಪವೆನಿಸಿದರೂ ಬೆಳವಣಿಗೆ ಆಗುತ್ತಿರುವುದು. ಆದ್ದರಿಂದ ತಮಸ್ಸು ಭೂಮಿಯಗುಣ ಮತ್ತು ನಿಮ್ಮ ಜನನದ ನೈಸರ್ಗಿಕ ಗುಣ. ನೀವು ಹುಟ್ಟಿ ಬಂದ ಕೂಡಲೆ ಕ್ರಿಯಾಶೀಲರಾಗುವಿರಿ , ರಾಜಸಿಕ ಗುಣ ತೋರಿಸುವಿರಿ. ತನಗೆ ಬೇಕೆನಿಸಿದಾಗ ಭೂಮಿ ಹೊರಗೆ ತರುವಳು ನಿಮ್ಮನು ಅಂತೆಯೇ ತನಗೆ ಸಾಕೆನಿಸಿದಾಗ ತನ್ನೊಳಗೆ ಸೆಳೆದುಕೊಳ್ಳುವಳು. ಪೂರ್ಣ ಜಡವಾಗಿ ಭೂಮಿಯಲ್ಲಿ ಮಲಗಿದ್ದು ಹೊರಬಂದು ರಾಜಸ ಶಕ್ತಿ ಪಡೆದು ಮಾನವ ಪ್ರಾಣಿಯಾಗಿ ಕ್ರಿಯೆಗೆ ತೊಡಗುವುದು ಆ ಮಾನವ ಮುಂದೆ ಸತ್ವಕ್ಕೆ ಏರಬಹುದು ಇಲ್ಲವೇ ಪುನಃ ಅದೇ ಜಡಕ್ಕೆ ಜಾರಬಹುದು .
ಬದುಕಿ ಬಾಳಲು ಈ ಮೂರು ಶಕ್ತಿಗಳು ಬೇಕು. ಮೊದಲೆರಡು ಶಕ್ತಿಗಳು ನಿಮ್ಮ ಉಳಿವಿಗೆ , ಸ್ವಾಸ್ಥ್ಯಕ್ಕೆ ಬೇಕಾದವು .ಇವರೆಡು ಅವಶ್ಯಕತೆಗಳನ್ನು ದಾಟಿ ಮುಂದುವರೆಯುವ ಪ್ರಯತ್ನಕ್ಕೆ ಮೂರನೇಯ ಆಯಾಮವು ಸ್ಪೂರ್ತಿ ನೀಡುವುದು. ನವರಾತ್ರಿಯು ದೇವಿಯ ಪ್ರತೀಕವಷ್ಟೇ ಅಲ್ಲದೆ ನೈಸರ್ಗಿಕ ದೃಷ್ಟಿಯಿಂದಲೂ ಮಹತ್ವವುಳ್ಳದು. ವರ್ಷದ ಪ್ರತಿತಿಂಗಳಿನ ಆಮಾವಾಸ್ಯೆಯ ನಂತರದ ಮೊದಲ ಮೂರು ದಿನಗಳು ಚೈತನ್ಯ ಶಕ್ತಿ ನೀಡುವ ಗುಣವುಳ್ಳವು . ಐದು ತತ್ವಗಳು ತಮ್ಮತಮ್ಮೊಳಗೆ ಹೊಂದಿಕೊಂಡು ಸಮಾಹಿತರಾಗುವ ಜಟತ್ವದ ಸ್ಥಿತಿಯೇ ಅಮಾವಾಸ್ಯೆ . ಮರುದಿನ ಒಂದು ರೀತಿಯ ಪ್ರಶಾಂತತೆಯ ಸ್ಥಿತಿ, ಎರಡನೆಯ ದಿನ ಶಕ್ತಿಪೂರ್ಣವಾಗಿ ಕ್ರಿಯಾಶೀಲವಾಗುವ ಸ್ಥಿತಿ , ಮೂರನೆಯ ದಿನ ಆಧ್ಯಾತ್ಮಿಕವಾಗಿ ಮುಂದುವರೆಯುವ ದಿನ . ನವರಾತ್ರಿಯ ಈ ದಿನಗಳು ಉತ್ಕøಷ್ಟತೆಯ ಕಡೆಗೆ ; ಪರಿಮಿತಿಗಳನ್ನು ದಾಟುವ ಸಾಧ್ಯತೆಗೆ , ಜಡತೆಯ ಕತ್ತಲೆಯಿಂದ ಸಾಕ್ಷತ್ಕಾರದ ಬೆಳಕಿನ ಕಡೆಗೆ ಒಯ್ಯುವ ದಿನಗಳು.
ಆಯುಧಪೂಜೆಯ ದಿನ ಕೇವಲ ಯುದ್ಧಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರಗಳೆ ಅಲ್ಲದೆ ಸುಖಜೀವನಕ್ಕೆ ಬೇಕಾದ ಎಲ್ಲ ಸಲಕರಣೆಗಳಿಗೂ ಪೂಜೆ ನಡೆಯುತ್ತದೆ. ರೈತನ ನೇಗಿಲು, ಕುಂಬಾರನ ತಿಗರಿ, ಕಮ್ಮಾರನ ಸುತ್ತಿಗೆ , ಸಿಂಪಿಗನ ಕತ್ತರಿ , ಹೊಲಿಗೆ ಯಂತ್ರ , ನವಯುಗದ ಎಲ್ಲ ಯಂತ್ರೋಪಕರಣಗಳು ಎಲ್ಲವೂ ಪೂಜೆಗೊಳ್ಳಲು ಅಲಂಕಾರದೊಂದಿಗೆ ಅಣಿಯಾಗುತ್ತದೆ. ಜೀವನಕ್ಕೆ ಬೇಕಾದ ಎಲ್ಲ ಸಲಕರಣೆ ಸಾಧನಗಳನ್ನು ಪೂಜಿಸುವುದರ ಹಿಂದಿನ ಭಾವವೆಂದರೆ ಈ ಸಾಧನಗಳ ಮೂಲಕ ಹರಿಯುವ ಶಕ್ತಿಗೆ , ಬೌದ್ದಿಕ ಬಲಕ್ಕೆ ,ಎಲ್ಲದರಲ್ಲೂ ಕಾರ್ಯ ನಡೆಸುವ ಜೀವಚೈತನ್ಯಕ್ಕೆ ನಮಿಸುವುದು. ದುರ್ಗಾಷ್ಟಮಿಯಂದು ದುರ್ಗೆಯನ್ನು ಆವಾಹಿಸಿ ಸ್ಥಿರತೆಯನ್ನು ಪಡೆದ ನಂತರ ಲಕ್ಷ್ಮೀಯನ್ನು ,ಅವಳು ಕೊಡುವ ಸಾಧನ ಸಲಕರಣೆಗಳನ್ನು ಪೂಜಿಸುವುದು.ಪೂಜೆಯ ಪರಿಣಾಮವೆಂದರೆ ನಮಗೂ ಮತ್ತು ನಾವು ಪೂಜಿಸುವುದಕ್ಕೂ ನಡುವೆ ಗೌರವದ ಅಂತರವೇರ್ಪಡುವುದು. . ಹಾಗೆಯೇ ನಮ್ಮ ದೇಹ , ಮನಸ್ಸು ಮತ್ತು ಬುದ್ದಿಗಳು ಸರಸ್ವತಿಯನ್ನು ಒಲಿಸಿಕೊಳ್ಳುವ ಸಾಧನಗಳೆಂದು ಗೌರವಿಸಿದರೆ ಅವಕ್ಕೂ ನಮಗೂ ಸ್ವಷ್ಟವಾದ ಅಂತವೇರ್ಪಡುವುದು. ಹೀಗೆ ಸರಸ್ವತಿಯ ಕೃಪೆಗಾಗಿ ಅರಿವು ಮೂಡಿಸುವ ದಿನವೇ ವಿಜಯ ದಶಮಿ.
ದೇವಿ ಮೂರ್ತಿಯಲ್ಲಿ ಥಟ್ಟನೆ ಕಣ್ಸೆಳೆಯುವುದು ಅವಳು ವಾತ್ಸಲ್ಯ ಭರಿತ ಕಂಗಳು . ಆಧ್ಯಾತ್ಮಿಕವಾಗಿ ಎಡಗಣ್ಣು ಚಂದ್ರ , ಅಂದರೆ ಆಕಾಂಕ್ಷೆಯನ್ನೂ , ಬಲಗಣ್ಣು ಸೂರ್ಯ ಅಂದರೆ ಕ್ರಿಯಾಶೀಲತೆಯನ್ನು ಮತ್ತು ಮೂರನೇಯ ಕಣ್ಣು ಅಗ್ನಿ, ಅಂದರೆ ಜ್ಞಾನವನ್ನು ಪ್ರತಿನಿಧಿಸುತ್ತದೆ.ಹೀಗೆ ದುರ್ಗೆ ಆಕಾಂಕ್ಷೆ , ಕ್ರಿಯಾಶೀಲತೆ ಹಾಗೂ ಜ್ಞಾನದ ‘ತ್ರಯಂಬಿಕೆ’ . ಮನೋವೈಜ್ಞಾನಿಕವಾಗಿ ವಿಶ್ಲೇಷಿಸುವುವಾದರೆ. ‘ಹೆಣ್ಣು ಗುಣ’ ವಾದ ಆಕಾಂಕ್ಷೆ, ‘ಗಂಡು ಗುಣ’ವಾದ ಪ್ರಾಯೋಗಿಕತೆ , ಲಿಂಗಾತೀತವಾದ ಜ್ಞಾನ ಈ ಮೂರನ್ನು ಹೊಂದಿರುವಂಥದ್ದು ‘ದುರ್ಗೆ’ ಪರಿಕಲ್ಪನೆ.
ಬೊಂಬೆ ಗಳನ್ನು ಜೋಡಿಸಿ ಮಕ್ಕಳೊಡನೆ ಮಕ್ಕಳಾಗಿ ಬೊಂಬೆ ಆರತಿ ಮಾಡಿ ಸಂಭ್ರಮಿಸುವ ಹಿರಿಯರ ಮುಗ್ದತೆ ದಸರಾ ಹಬ್ಬದ ಒಂದು ಭಾಗವಾದರೆ , ಇಂತಹಾ ಮುಗ್ದತೆಯ ಮೇಲೆ ಅತ್ಯಾಚಾರವಾಗಲು ಬಿಡದಂತೆ ಕಾಪಾಡಲು ಪ್ರಾರ್ಥಿಸುವ ಶಕ್ತಿದೇವತೆ ದುರ್ಗಾರಾಧನೆ ಇನ್ನೊಂದು ಭಾಗ. ಆದಿಶಕ್ತಿಯನ್ನು ಬಗೆಬಗೆಯಾಗಿ ಪೂಜಿಸುವ ಕಾವ್ಯಮಯ ಸನ್ನಿವೇಶದಲ್ಲಿ ಒದಗುವ ದರ್ಶನವೆಂದರೆ ‘ಸ್ತ್ರೀ ಸಬಲೆ, ಅವಳ ಶೀಲದ ಮೇಲೆ ದೌರ್ಜನ್ಯವೆಸೆಗದಿರಿ’ ಎಂಬ ಜಾಗತಿಕ ಸಂದೇಶ. ಮಹಿಳೆಯ ದೈಹಿಕ ವಾದ ನೈಸರ್ಗಿಕ ಗುಣ , ಸಹೋದರಿ ಗುಣ , ಮಾತೃ ಗುಣ, ಪ್ರೇಮ ಗುಣ ಎಲ್ಲವೂ ಔಚಿತ್ಯಪೂರ್ಣವಾಗಿ ಸಾಮಾಜಿಕ ನೆಲೆಯಲ್ಲಿ ಮಿಳಿತಗೊಂಡಾಗ ಮಾತ್ರ ಸಮಾಜ ವಿಕಾಸವಾಗುತ್ತದೆ. ಪ್ರಕೃತಿ ಪುರುಷರ ಸಮಾಗಮದಿಂದ ಸುಖಶಾಂತಿ ಲಭಿಸುತ್ತದೆ ಎಂಬ ಒಳಿತಿನ ಅನುಕ್ರಮದ ಶುಭ ಹಾರೈಕೆಯೆ ನವರಾತ್ರಿ ಆಶಯ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ