ಅದೊಂದು ಭಾನುವಾರದ ಮುಂಜಾನೆ..... ಎಂದಿನಂತೆ ಬೆಳಗಿನ ಚಹಾ ಸೇವನೆ ಮಾಡಿ ಪೂಜೆಗೆ ಬೇಕಾದ ಹೂಗಳನ್ನು ಹರಿಯಲು ಮನೆಯಿಂದ ಹೊರಬಂದೆ. ನಮ್ಮ ಮನೆಯ ಮುಂದಿರುವ ಬ್ಯಾಂಕಿನ ಕಟ್ಟಡದ ಹಿಂಭಾಗದಲ್ಲಿ ಇರುವ ಕಟ್ಟೆಯ ಮೇಲೆ ಓರ್ವ ಮಹಿಳೆ ಕುಳಿತಿದ್ದಳು. ಯಾರೋ ಬ್ಯಾಂಕಿಗೆ ಬಂದಿರುವ ಗ್ರಾಹಕರಿರಬೇಕು ಎಂದು ನಿರ್ಲಕ್ಷಿಸಿ ಹೂಗಳನ್ನು ಕೊಯ್ದುಕೊಂಡು ಮತ್ತೆ ಮನೆಯೊಳಗೆ ಹೋಗುವಾಗ ಅನಾಯಾಸವಾಗಿ ನನ್ನ ಕಣ್ಣು ಮತ್ತೆ ಆಕೆಯತ್ತ ಹೊರಳಿಸು. ಯಾಕೋ ಆಕೆಯ ಚರ್ಯೆ ಸ್ವಲ್ಪ ವಿಭಿನ್ನವೆನಿಸಿತು. ಕೂಡಲೇ ನನ್ನ ಮಗಳು ಮತ್ತು ಸೊಸೆಯನ್ನು ಕರೆದು ಆಕೆಯನ್ನು ಮತ್ತೊಮ್ಮೆ ಗಮನಿಸಲು ಹೇಳಿದಾಗ ಅವರು ಕೂಡ ನನ್ನ ಮಾತನ್ನು ಅನುಮೋದಿಸಿದರು. ಕೂಡಲೇ ಅಲ್ಲಿಯೇ ಇದ್ದ ನಮ್ಮಇನ್ನೋರ್ವ ಬಾಡಿಗೆದಾರ ವ್ಯಕ್ತಿಗೆ ಕರೆ ಮಾಡಿ ಆಕೆಯನ್ನು ಮಾತನಾಡಿಸಲು ಕೇಳಿದೆ. ಆತನ ಮಾತಿನ ತಾತ್ಪರ್ಯದಿಂದ ಅರಿವಾದದ್ದು ಆಕೆ ತನ್ನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಮತ್ತು ಪದೇ ಪದೇ ತನ್ನ ಕೈಗಳನ್ನು ತಲೆಯತ್ತ ಒಯ್ದು ಒತ್ತಿ ಹಿಡಿಯುತ್ತಿದ್ದುದು ಗಮನಕ್ಕೆ ಬಂದಿತು.
ಕೊಂಚ ಅನುಮಾನದಿಂದಲೇ ಆಕೆಯತ್ತ ಹೋದ ನಾನು ಆಕೆಯ ಪೂರ್ವಾಪರ ವಿಚಾರಿಸಿದಾಗ ತನ್ನ ಮತ್ತು ತನ್ನ ಪತಿಯ ಹೆಸರನ್ನು ಮಾತ್ರ ಸರಿಯಾಗಿ ಹೇಳಿದ ಆಕೆ ನಮ್ಮ ಊರಿನಿಂದ ಸುಮಾರು 70 ಕಿಲೋ ಮೀಟರ್ ದೂರದ ಹೊಸಪೇಟೆಗೆ 5 ಕಿ.ಮೀ ಹತ್ತಿರದ ಊರಿನಿಂದ ಬಂದಿರುವುದಾಗಿ ಹೇಳಿದಳು. ಚಿಕ್ಕ ಮಕ್ಕಳಂತೆ ಮುನಿಸು ತೋರುತ್ತಿದ್ದ ಆಕೆಯ ಮನವೊಲಿಸಿ, ಆಕೆಯನ್ನು ಮನೆಗೆ ಕರೆತಂದ ನಾನು ಆಕೆಯ ಮುಂದೆ ಚಹಾ ಬಿಸ್ಕತ ಇರಿಸಿದಾಗ ಮಾತನಾಡದೆ ತುಂಬಾ ಹಸಿದವಳಂತೆ ಎಲ್ಲವನ್ನು ತಿಂದಳು. ಆಕೆಯನ್ನು ನೋಡಿದರೆ ಆಕೆ ನಿದ್ದೆ ಮಾಡದೆ ಎಷ್ಟೋ ಕಾಲವಾಯಿತು ಎಂಬಂತೆ ತೋರುತ್ತಿದ್ದಳು. ನಾನು ಮಕ್ಕಳೊಂದಿಗಳು, ನಮ್ಮ ಮನೆಯಲ್ಲೂ ನಿನ್ನ ವಯಸ್ಸಿನ ಮಕ್ಕಳಿವೆ ನಿನಗೆ ಯಾವುದೇ ಹಾನಿಯಾಗುವುದಿಲ್ಲ ಎಂಬ ನನ್ನ ಮಾತನ್ನು ನಂಬಿ ಬಂದ ಆಕೆ ನಿಶ್ಚಿಂತಳಾಗಿ ಕುಳಿತಲ್ಲೇ ಮಲಗಿಬಿಟ್ಟಳು..
ಆಕೆಯ ಮಂಪರು ಪರಿಸ್ಥಿತಿಯನ್ನು ವಿವರಿಸಿ ಸ್ನೇಹಿತೆ ತಜ್ಞ ವೈದ್ಯರಿಗೆ ಫೋನ್ ಮಾಡಿದಾಗ ಸ್ನೇಹಿತೆ ಭಯಪಟ್ಟು ಪೊಲೀಸ್ ಕೇಸ್ ಆದರೆ ಏನು ಮಾಡುತ್ತೀರಿ ಮೇಡಂ, ಕಳುಹಿಸಿಬಿಡಿ ಎಂದು ಹೇಳಿದರು. ಕೊಂಚ ಆತಂಕಗೊಂಡ ನಾನು ಕೂಡಲೇ ಪರವೂರಿಗೆ ಹೋಗಿ ವಾಪಸ್ಸು ಬರುತ್ತಿದ್ದ ನನ್ನ ಪತಿಗೆ ಫೋನ್ ಮಾಡಿ ವಿಷಯವನ್ನು ವಿವರಿಸಿ, ಆಕೆಗೆ ಗೊತ್ತಿಲ್ಲದೆ ಆಕೆಯ ಫೋಟೋ ಒಂದನ್ನು ಕ್ಲಿಕ್ಕಿಸಿ ರವಾನಿಸಿದೆ. ಮುಗ್ದೆಯಂತೆ ತೋರುತ್ತಿದ್ದ ಆಕೆಯನ್ನು ಹಾಗೆ ಹೊರಗೆ ಕಳುಹಿಸಲು ನನಗೆ ಮನಸ್ಸೊಪ್ಪಲಿಲ್ಲ.. ನನ್ನ ಪತಿ ನನಗೆ ಧೈರ್ಯ ನೀಡಿ ಆಕೆಯನ್ನು ಎಲ್ಲೂ ಕಳುಹಿಸದಿರುವಂತೆ ಹೇಳಿದರು. ಮುಂದಿನ ಅರ್ಧ ಗಂಟೆಯಲ್ಲಿ ಆಕೆ ಹೇಳಿದ ಊರಿಗೆ ಫೋನ್ ಮಾಡಿ ಆಕೆಯ ಫೋಟೋವನ್ನು ಕಳುಹಿಸಿ ಆಕೆಯ ಮನೆ ವಿಳಾಸವನ್ನು ತನ್ನ ಸ್ನೇಹಿತರ ಸಹಾಯದಿಂದ ಪತ್ತೆ ಹಚ್ಚಿದ ನನ್ನ ಪತಿ ಆಕೆಯ ಸಂಬಂಧಿಕರಿಗೆ ವಿಷಯ ತಲುಪಿಸಿ ನನಗೂ ಕೂಡ ಆಕೆಗೆ ಈ ವಿಷಯವನ್ನು ತಿಳಿಸಿ ಹೇಳಲು ಹೇಳಿದರು. ಆಕೆ ತಿಂಡಿ ತಿಂದ ಮೇಲೆ ಆಕೆಯ ಮನೆಯವರು ಆಕೆಯನ್ನು ಕರೆದೊಯ್ಯಲು ಬರುತ್ತಿರುವ ವಿಷಯವನ್ನು ನಾನು ನಿಧಾನವಾಗಿ ಆಕೆಗೆ ಅರುಹಿದೆ. ಅದಾವುದಕ್ಕೂ ಉತ್ತಮ ಪ್ರತಿಕ್ರಿಯೆ ನೀಡದ, ಕೊಂಚ ಅಸಹನೆ ತೋರಿದ ಆಕೆಗೆ ವಿಶ್ರಾಂತಿ ಪಡೆಯಲು ಕೋಣೆಯಲ್ಲಿ ಅನುವು ಮಾಡಿಕೊಟ್ಟೆವು. ಆದರೆ ಆಕೆ ಸೂಕ್ಷ್ಮಗ್ರಾಹಿ, ಮಂಚದ ಮೇಲೆ ಮಲಗಿಕೊಳ್ಳಲು ಒಪ್ಪದೆ ನೆಲದ ಮೇಲೆ ಚಾಪೆಯ ಮೇಲೆ ಮಲಗಿಕೊಂಡಳು.
ಮುಂದಿನ ಒಂದೆರಡು ಗಂಟೆಗಳಲ್ಲಿ ಆಕೆಯ ಪತಿ, ತಾಯಿ, ಮಾವ ಮತ್ತು ಆಕೆಯ ಸಹೋದರಿ ನಮ್ಮಲ್ಲಿಗೆ ಬಂದರು. ಅವರ ಮಾತಿನಿಂದ ತಿಳಿದು ಬಂದದ್ದು ಇಷ್ಟು... ತನ್ನ ತಂದೆಯ ಮರಣದ ನಂತರ ಖಾಸಗಿ ಕೆಲಸಕ್ಕೆ ಹೋಗಿ ಆಕೆ ಮನೆಯ ಜವಾಬ್ದಾರಿ ನಿರ್ವಹಿಸಿದ್ದಳು. ಮುಂದೆ ಮದುವೆಯಾದ ನಂತರ ಪ್ರಸವದ ಸಮಯದಲ್ಲಿ ಮೊದಲನೇ ಮಗುವನ್ನು ಕಳೆದುಕೊಂಡ ಮೇಲೆ ಆಕೆ ಕೊಂಚಮಟ್ಟಿಗೆ ಮಾನಸಿಕ ಸ್ಮಿಮಿತವನ್ನು ಕಳೆದುಕೊಂಡಳು. ಈಗಲೂ ಕೂಡ ಉತ್ತಮ ಗೃಹಿಣಿಯಾಗಿರುವ, ಮನೆಯ ಎಲ್ಲಾ ಗೃಹ ಕೃತ್ಯಗಳನ್ನು ಮಾಡಿಕೊಂಡು, ಅತ್ತೆಮಾವರನ್ನು ನೋಡಿಕೊಂಡು ಹೋಗುವ ಆಕೆ ಆಗಾಗ ಈ ರೀತಿ ಮಾನಸಿಕವಾಗಿ ಅಸ್ವಸ್ಥಳಾಗಿ ಯಾವುದಾದರೂ ದೇವಸ್ಥಾನಕ್ಕೋ, ಗುಡಿ ಗುಂಡಾರಕ್ಕೋ ಹೋಗಿ ಕುಳಿತುಬಿಡುತ್ತಾಳೆ. ಮನಸ್ಸು ತಿಳಿಯಾದ ನಂತರ ಗಂಡನಿಗೆ ತಾನಿರುವ ಜಾಗದ ಕುರಿತು ಮಾಹಿತಿ ನೀಡಿ ತನ್ನನ್ನು ಮನೆಗೆ ಕರೆದುಕೊಂಡು ಹೋಗಲು ಹೇಳುತ್ತಾಳೆ.
ಹಿಂದಿನ ದಿನ ಪತಿ ತನ್ನನ್ನು ಹೊರಗೆ ಕರೆದುಕೊಂಡು ಹೋಗಲು ಕೆಲಸದ ಒತ್ತಡದಲ್ಲಿ ನಿರಾಕರಿಸಿದ್ದರಿಂದ ಬೇಸರಗೊಂಡು ಮನೆಯಲ್ಲಿ ಅಡುಗೆ ತಯಾರಿಸಿ, ಬಸ್ ಚಾರ್ಜ್ ಗೆ ಬೇಕಾಗುವಷ್ಟು ದುಡ್ಡನ್ನು ಎತ್ತಿಟ್ಟುಕೊಂಡು, ಕೊರಳಲ್ಲಿನ ತಾಳಿ ಚೈನನ್ನು ಮನೆಯಲ್ಲಿಯೇ ಬಿಚ್ಚಿಟ್ಟು ಬಸ್ ಸ್ಟ್ಯಾಂಡ್ ಗೆ ಬಂದು ಸಿಕ್ಕಿದ ಬಸ್ಸನ್ನು ಹತ್ತಿ ಮುಂಡರಗಿಗೆ ಬಂದು ಇಳಿದಿದ್ದಾಳೆ. ಹಿಂದಿನ ದಿನ ಮಧ್ಯಾಹ್ನವೇ ಬಂದ ಆಕೆ ರಾತ್ರಿಯೆಲ್ಲ ನಮ್ಮ ಮನೆಯ ಮುಂದಿನ ಬ್ಯಾಂಕಿನ ಹಿಂಭಾಗದಲ್ಲಿ ಒಬ್ಬಳೇ ಕುಳಿತು ರಾತ್ರಿ ಕಳೆದಿದ್ದಾಳೆ. ಬ್ಯಾಂಕ್ ಗೆ ಎರಡನೇ ಶನಿವಾರದ ರಜೆ ಇದ್ದುದರಿಂದ ಆಕೆಯನ್ನು ಯಾರೂ ಅಷ್ಟಾಗಿ ಗಮನಿಸಿಲ್ಲ.. ಎಷ್ಟೇ ಆಗಲಿ ಹೆಣ್ಣು ಮಗಳಲ್ಲವೇ ರಾತ್ರಿ ಎಲ್ಲಾ ನಿದ್ದೆ ಮಾಡಿಲ್ಲದ ಆಕೆ ಬೆಳಗಿನ ಜಾವದ ಹೊತ್ತಿಗೆ ನನ್ನ ಕಣ್ಣಿಗೆ ಬಿದ್ದಳು. ಮುಂದೆ ಆಕೆ ತನ್ನವರೊಡನೆ ಹೊರಡಲು ಕಿರಿಕಿರಿ ಮಾಡಿ ಕೊನೆಗೆ ಸಮಾಧಾನಿಸಿದ ನಂತರ ಕೈ ಬೀಸಿ ತನ್ನೂರಿಗೆ ಹೊರಟು ಹೋದಳು . ಈಗಲೂ ಆಗಾಗ ಫೋನ್ ಮಾಡಿ ಆಕೆಯ ಸಹೋದರಿ ಮಾತನಾಡುತ್ತಾಳೆ.
ಹಾಗಾದರೆ ಆಕೆಗೆ ಆಗಿದ್ದಾದರೂ ಏನು?
ಸಾಮಾನ್ಯವಾಗಿ ಹೆಣ್ಣು ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರು. ಅದರಲ್ಲೂ ಋತುಚಕ್ರ ಪ್ರಾರಂಭವಾಗುವ ಸಮಯದಲ್ಲಿ ಪ್ರಸವಪೂರ್ವ ಮತ್ತು ಪ್ರಸವ ನಂತರದ ಅವಧಿಯಲ್ಲಿ ಹೆಣ್ಣು ಮಕ್ಕಳ ದೇಹ ಮತ್ತು ಮನಸ್ಥಿತಿಗಳು ಅತ್ಯಂತ ಸೂಕ್ಷ್ಮವಾಗಿರುತ್ತದೆ, ಚಿಕ್ಕಪುಟ್ಟ ಆಘಾತಗಳನ್ನು ಕೂಡ ತಡೆಯಲು ಅವರಿಗೆ ಕಷ್ಟ ಸಾಧ್ಯ. ಹಾಗೆಂದು ಎಲ್ಲರೂ ಹಾಗೆ ಇರುತ್ತಾರೆ ಎಂದಲ್ಲ. ಇದರ ಅರಿವಿದ್ದ ನಮ್ಮ ಪೂರ್ವಜರು ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳನ್ನು 'ಹಸಿ ಮೈ' ಎಂದು ಮನೆಯಲ್ಲಿ ಇರಿಸಿಕೊಳ್ಳುತ್ತಿದ್ದರು ಅವರ ದೈಹಿಕ ಆರೋಗ್ಯದ ಸುಧಾರಣೆಗಾಗಿ ಹೆಚ್ಚಿನ ಕಾಳಜಿ ವಹಿಸಿ ಪುಷ್ಠಿಕರ ಆಹಾರ ಮತ್ತು ಪ್ರೀತಿಯ ಸುರಿಮಳೆಗೆಯುತ್ತಿದ್ದರು. ಇದು ಅವರನ್ನು ಮಾನಸಿಕವಾಗಿ ಬಲಿಷ್ಠರನ್ನಾಗಿಸುತ್ತಿತ್ತು. ಆದರೆ ಎಲ್ಲರೂ ಹಾಗೆ ಇರಬೇಕೆಂದಿಲ್ಲವಲ್ಲ... ನಮ್ಮ ಮನೆಗೆ ಬಂದ ಆ ಪುಟ್ಟ ಯುವತಿ ತನ್ನ ಮಗುವನ್ನು ಕಳೆದುಕೊಂಡ ನಂತರ ಮತ್ತೆ ಮಕ್ಕಳಾಗದೇ ಇರುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಪರಿಣಾಮವೇ ಆಗಾಗ ಮನೆ ಬಿಟ್ಟು ಹೋಗುವುದು. ಇಂತಹವರನ್ನು ಜೋಪಾನ ಮಾಡಲು ಪ್ರೀತಿ ವಾತ್ಸಲ್ಯ ಕಾಳಜಿಯ ಜೊತೆ ಜೊತೆಗೆ ಅಪಾರ ಸಹನೆ ಮತ್ತು ಸಂಯಮದ ಅವಶ್ಯಕತೆ ಇರುತ್ತದೆ. ಕೆಲವೊಮ್ಮೆ ಕೊಂಚವೇ ಅವರನ್ನು ಅಸಡ್ಡೆ ಮಾಡಿದರೂ ವೈಪರೀತ್ಯಕ್ಕೆ ಎಳಸುತ್ತಾರೆ. ಅದೆಷ್ಟೇ ಔಷಧೋಪಚಾರ ಮಾಡಿದರೂ ಕೌನ್ಸಲಿಂಗ್ ಮಾಡಿಸಿದರೂ ಆಕೆಗೆ ಇನ್ನೂ ಗುಣವಾಗಿಲ್ಲ. ಆಕೆಯನ್ನು ನೋಡಿಕೊಳ್ಳುವ ಸಹನ ಶಕ್ತಿ ಆ ಮನೆಯವರಲ್ಲಿ ಇನ್ನೂ ಹೆಚ್ಚಲಿ, ಆಕೆ ಬೇಗ ಗುಣಮುಖವಾಗಲಿ ಎಂದು ಹಾರೈಸುವ
-ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ. ಗದಗ್.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ