ವಿಶ್ವ ಆಹಾರ ದಿನವು ಉತ್ತಮ ಆಹಾರದ ಸಂತೋಷವನ್ನು ಅನುಭವಿಸುವ ಅದೃಷ್ಟವಿಲ್ಲದವರ ಮೇಲೆ ಗಮನಹರಿಸಲು ಕರೆ ನೀಡುತ್ತದೆ. ಜಾಗತಿಕವಾಗಿ ಅಸಂಖ್ಯಾತ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಹಲವಾರು ದೇಶಗಳಲ್ಲಿ ಹಸಿವು ನಿರ್ಣಾಯಕ ಸಮಸ್ಯೆಯಾಗಿ ಉಳಿದಿರುವುದು ಜಾಗತಿಕ ಬೆಳವಣಿಗೆಗೆ ಒಂದು ಸವಾಲಾದರೆ, ಮಾನವೀಯತೆಯ ಮೇಲೆ ಆಘಾತಕಾರಿ ಕಪ್ಪು ಚುಕ್ಕೆಯಾಗಿದೆ. ಜಗತ್ತಿನಲ್ಲಿ ಅನ್ನಕ್ಕಾಗಿ ಹಪಹಪಿಸುವ ಬಡವರನ್ನು ಕಂಡ ಗಾಂಧೀಜಿವರು "ಜಗತ್ತಿನಲ್ಲಿ ಎಂಥ ಹಸಿವುಳ್ಳ ಜನರಿದ್ದಾರೆಂದರೆ ದೇವರು ಅನ್ನದ ಹೊರತಾಗಿ ಬೇರೆ ಯಾವುದೇ ರೂಪದಲ್ಲಿ ಅವರಿಗೆ ಕಾಣಿಸಿಕೊಳ್ಳಲಾರ" ಎಂದರು.
ಪ್ರತಿ ದಿನ, 10,000 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 25,000 ಜನರು ಹಸಿವು ಮತ್ತು ಸಂಬಂಧಿತ ಕಾರಣಗಳಿಂದ ಸಾಯುತ್ತಾರೆ. ಇಂದು ನಮ್ಮ ಜಗತ್ತಿನಲ್ಲಿ ಪ್ರತಿ ನಾಲ್ಕು ಸೆಕೆಂಡಿಗೆ ಒಬ್ಬ ಹಸಿವು ಮತ್ತು ಬಡತನದ ಕಾರಣದಿಂದಾಗಿ ಸಾಯುತ್ತಿದ್ದಾನೆ ಎಂಬ ಅಂಕಿ ಅಂಶ ನಿಜಕ್ಕೂ ನಮ್ಮ ಅಸಹಾಯಕತೆ ಮತ್ತು ಅನಾದರದತ್ತ ಬೊಟ್ಟು ಮಾಡುತ್ತಿದೆ. ಆದರೆ ಇಂದು ನಮ್ಮ ಸುತ್ತಮುತ್ತ ಮಿಲಿಯಗಟ್ಟಲೆ ಜನ ಹಸಿವಿನಿಂದಾಗಿ ಸಾಯುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಮಿಲಿಯಗಟ್ಟಲೆ ಟನ್ ಅಹಾರ ಸಾಮಾಗ್ರಿಗಳು ಪೆÇೀಲಾಗುತ್ತಿರುವುದು ವಿಪರ್ಯಾಸವೇ ಸರಿ. ಮಾತಿಗೆ ಮಾತ್ರ ನಮ್ಮ ನಾಗರಿಕತೆ ಮುಮ್ಮುಖವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತದೆ, ಆದರೆ ವಾಸ್ತವವಾಗಿ ನಮ್ಮ ಮೌಲ್ಯಗಳು ಹಿಮ್ಮುಕವಾಗಿ ಚಲಿಸಲು ಆರಭಿಸಿರುವುದು ದುರದೃಷ್ಟಕರ.
ನೀರು ಜೀವನ, ನೀರು ಆಹಾರ
ನೀರು ನಮ್ಮ ಆಹಾರದ ಅಡಿಪಾಯವಾಗಿದೆ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಭೂಮಿಯ ಮೇಲಿನ ಜೀವವನ್ನು ಉಳಿಸಿಕೊಳ್ಳುವಲ್ಲಿ ನೀರಿನ ಪ್ರಮುಖ ಪಾತ್ರವನ್ನು ಮತ್ತು ನಮ್ಮ ಆಹಾರ ಮೂಲಗಳೊಂದಿಗೆ ಅದರ ಮೂಲಭೂತ ಸಂಪರ್ಕವನ್ನು ತಿಳಿದುಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗದೆ. ಈ ನಿಟ್ಟಿನಲ್ಲಿ ಈ ವರ್ಷದ ವಿಶ್ವ ಆಹಾರ ದಿನದ ಘೋಷವಾಕ್ಯ 'ನೀರು ಜೀವನ, ನೀರು ಆಹಾರ, ಯಾರನ್ನೂ ಹಿಂದೆ ಬಿಡಬೇಡಿ'.
ಆಹಾರ ಉತ್ಪಾದನೆಯು ಆಹಾರ ಭದ್ರತೆಗೆ ಆಧಾರವಾಗಿದೆ. ಸುಸ್ಥಿರ ಆರ್ಥಿಕ ಮತ್ತು ಪರಿಸರ ಅಭಿವೃದ್ಧಿ ಮತ್ತು ರಕ್ಷಣೆಯಲ್ಲಿ ನೀರು-ಆಹಾರ-ಇಂಧನ ಶಕ್ತಿಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಈ ಮೂರು ಸಂಪನ್ಮೂಲಗಳ ಬೇಡಿಕೆಯು ವಿವಿಧ ಕಾರಣಗಳಿಗಾಗಿ ಬೆಳೆಯುತ್ತಲೇ ಇದೆ. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಆರ್ಥಿಕ ಅಭಿವೃದ್ಧಿ, ಹೆಚ್ಚುತ್ತಿರುವ ಆಹಾರದ ಬೇಡಿಕೆ, ನಗರೀಕರಣ ಮತ್ತು ಹವಾಮಾನ ಬದಲಾವಣೆಯು ನೀರಿನ ಲಭ್ಯತೆಗೆ ಅಪಾಯವನ್ನು ಉಂಟುಮಾಡುವುದರಿಂದ ನೀರನ್ನು ಬುದ್ಧಿವಂತಿಕೆ ಯಿಂದ ನಿರ್ವಹಿಸುವ ಪ್ರಾಮುಖ್ಯತೆಯ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ಇದು ಪ್ರಯತ್ನಿಸುತ್ತದೆ.
ಭಾರತ ಜಾಗತಿಕವಾಗಿ ಬೆಳೆಯುತ್ತಿದೆ, ಆದರೆ...
ಬ್ರೂಕ್ಲಿಂಗ್ಸ್ ಎಂಬ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ ಭಾರತದಲ್ಲಿ 2030ರ ಹೊತ್ತಿಗೆ ಬಡತನ ಸಂಪೂರ್ಣವಾಗಿ ನಿರ್ಮೂಲನವಾಗಲಿದೆ. 2029ರ ಒಳಗೆ ಭಾರತವು ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 2014ನೇ ಸಾಲಿಗೆ ಹೋಲಿಸಿದರೆ ದೇಶಕ್ಕೆ ಏಳನೇ ಸ್ಥಾನಗಳಷ್ಟು ಪದೋನ್ನತಿ ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಆರ್ಥಿಕ ಸಂಶೋಧನ ವಿಭಾಗದ ಅಧ್ಯಯನ ವರದಿ ತಿಳಿಸಿದೆ. ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಭಾರತದ ಆರ್ಥಿಕತೆಗೆ ಇದೊಂದು ಮಹತ್ವದ ಮೈಲಿಗಲ್ಲು. ಭಾರತ ಜಾಗತಿಕವಾಗಿ ಬೆಳೆಯುತ್ತಿದೆ. ಇಡೀ ಜಗತ್ತಿನ ಶಕ್ತಿಶಾಲಿ ದೇಶಗಳಿಗೂ ಭಾರತ ಪೈಪೋಟಿ ನೀಡುತ್ತಿದೆ. ಹೀಗಿದ್ದಾಗಲೇ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕನಿಷ್ಟ ಸ್ಥಾನ ಪಡೆದಿದೆ ಎಂದರೆ ನಂಬಲಿಕ್ಕೆ ಕಷ್ಟ ಆಗುತ್ತಿದೆ.
ಅಂದಹಾಗೆ ಪ್ರಪಂಚದ 125 ದೇಶಗಳಿಗೆ ಸಂಬಂಧಿಸಿದ 2023ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವರದಿ ಇಂದು ರಿಲೀಸ್ ಆಗಿದೆ. ಆದರೆ ಭಾರತ ಈಗ 111ನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಹಸಿವು ಸೂಚ್ಯಂಕ-2023ರಲ್ಲಿ ಭಾರತದ ಅಂಕ ಶೇ 28.7ರಷ್ಟು ಇದ್ದು, ಹಸಿವಿನ ಮಟ್ಟ ಗಂಭೀರವಾಗಿರು ವುದನ್ನು ತೋರಿಸುತ್ತದೆ ಎಂದು ಸೂಚ್ಯಂಕವನ್ನು ಆಧರಿಸಿ ಬಿಡುಗಡೆ ಮಾಡಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಭಾರತದ ನೆರೆಯ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಉತ್ತಮವಾಗಿದೆ ಎನ್ನಲಾಗಿದೆ. ಪಾಕಿಸ್ತಾನ 102ನೇ ಸ್ಥಾನ ಪಡೆದಿದ್ದರೆ, ಇದೇ ವೇಳೆ ಬಾಂಗ್ಲಾದೇಶ 81ನೇ ಸ್ಥಾನ ಹಾಗೂ ನೇಪಾಳ 69ನೇ ಸ್ಥಾನ & ಶ್ರೀಲಂಕಾ 60ನೇ ಸ್ಥಾನವನ್ನು ಪಡೆದುಕೊಂಡಿದೆ. ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲದಿದ್ದರೂ, ಅದು ಅಪೌಷ್ಟಿಕತೆಯ ವ್ಯಾಪ್ತಿಗೆ ಬರುತ್ತದೆ. ಹೀಗೆ ಅಪೌಷ್ಟಿಕತೆಯ ಪ್ರಮಾಣವು ಭಾರತದಲ್ಲಿ ಶೇ 18.7ರಷ್ಟಿದೆ.
ಭಾರತ ಎಲ್ಲಾ ಕ್ಷೇತ್ರದಲ್ಲೂ ಶ್ರೀಮಂತ ದೇಶಗಳನ್ನು ಮೀರಿಸಿ ಬೆಳೆಯುತ್ತಿದೆ. ಈ ಸಮಯದಲ್ಲೇ ಭಾರತದಲ್ಲಿ ಹಸಿವು ಕೂಡ ತಾಂಡವ ಆಡುತ್ತಿದೆ ಎಂಬ ವರದಿ ಭಯವನ್ನೇ ಸೃಷ್ಟಿಮಾಡಿದೆ. ಅದರಲ್ಲೂ ಅಪೌಷ್ಟಿಕತೆ ಕುರಿತು ಆತಂಕ ಹೆಚ್ಚಾಗಿದೆ. ಜಾಗತಿಕ ಹಸಿವು ಸೂಚ್ಯಂಕದ ಹಸಿವಿನ ಮಾನದಂಡವೇ ತಪ್ಪು ಮತ್ತು "ಗಂಭೀರವಾದ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ" ಎಂದು ಸರಕಾರ ಸಹಜವಾಗಿಯೇ ತಿರಸ್ಕರಿಸಿದೆ. ಇದು ಭಾರತದ ನಿಜವಾದ ಸ್ಥಾನವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೇಳಿಕೆ ತಿಳಿಸಿದೆ. ಸೂಚ್ಯಂಕವನ್ನು ಲೆಕ್ಕಹಾಕಿದ ನಾಲ್ಕು ಸೂಚಕಗಳಲ್ಲಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿವೆ. ಆದುದರಿಂದ, ಇದು ಇಡೀ ಜನಸಂಖ್ಯೆಯ ಗೂಣಮಟ್ಟವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ.
2006 ರಿಂದ 2021 ರವರೆಗಿನ ಕೇವಲ 15 ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 415 ಮಿಲಿಯನ್ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ಜುಲೈಯಲ್ಲಿ ಬಿಡುಗಡೆ ಮಾಡಿದ 'ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ (2022) ವರದಿ ಮಾಡಿದೆ. ಆದರೂ ಹಸಿವು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ನಮ್ಮ ಆದ್ಯ ಧ್ಯೇಯವಾಗಬೇಕು.
ಸಮಸ್ಯೆಯ ಮೂಲ ಆಹಾರದ ಪೋಲು
ಗಣನೀಯ ಪ್ರಮಾಣದ ಆಹಾರವನ್ನು ಉತ್ಪಾದಿಸಲಾಗುತ್ತದೆ ಆದರೆ ಮಾನವರು ತಿನ್ನುವುದಿಲ್ಲ ಎಂಬ ಅಂಶವು ಪರಿಸರ, ಸಾಮಾಜಿಕ ಮತ್ತು ಆರ್ಥಿಕವಾಗಿ ಗಣನೀಯ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಶೇ.8-10 ಸೇವಿಸದ ಆಹಾರದೊಂದಿಗೆ ಸಂಬಂಧಿಸಿದೆ ಎಂದು ಅಂದಾಜುಗಳು ಸೂಚಿಸುತ್ತವೆ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ (2021) ಯ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ 68.7 ಮಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತದೆ, ಅಂದರೆ ವಾರ್ಷಿಕವಾಗಿ ಪ್ರತಿ ವ್ಯಕ್ತಿಗೆ 50 ಕೆಜಿ ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ. ದೇಶದಲ್ಲಿ ಹಸಿವು 'ಗಂಭೀರ' ಸ್ಥಿತಿಗೆ ತಲುಪಿದ ಈ ಕಾಲಘಟ್ಟದಲ್ಲಿ ಆಹಾರದ ಪೋಲು ದುಃಖದ ಸಂಗತಿಯಾಗಿದೆ. ಆಹಾರದ ವ್ಯರ್ಥದ ವಿಷಯದಲ್ಲಿ ಇದು ಚೀನಾದ ನಂತರ ವಿಶ್ವಾದ್ಯಂತ 2 ನೇ ಸ್ಥಾನದಲ್ಲಿದೆ.
ಆಹಾರದ ಪೋಲು ನಿರುಪದ್ರವ ವ್ಯರ್ಥದಂತೆ ಅನ್ನಿಸಿದರೂ ಕೃಷಿ ಹಾಗೂ ಆರ್ಥಿಕ ಕ್ಷೇತ್ರದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ವ್ಯರ್ಥವಾಗುತ್ತಿರುವುದು ಕೇವಲ ಆಹಾರವಲ್ಲ; ನೀರು, ಭೂಮಿ, ಇಂಧನದಂತಹ ಎಲ್ಲಾ ಸಂಪನ್ಮೂಲಗಳು ಮತ್ತು ಮುಖ್ಯವಾಗಿ ರೈತರು ಮತ್ತು ಆಹಾರ ಉತ್ಪಾದನೆಯಲ್ಲಿ ತೊಡಗಿರುವ ಎಲ್ಲಾ ಜನರ ಶ್ರಮ ಎಂದು ನಾವು ಗಮನಿಸಬೇಕಾಗಿದೆ. ನಾವು ವ್ಯರ್ಥ ಮಾಡುವ ಆಹಾರದ ಹೇಗೆ ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಜಾಗತಿಕ ಆಹಾರ ಉತ್ಪಾದನೆಯಲ್ಲಿ ಸೇವಿಸುವ ಸಿಹಿನೀರಿನ ನಾಲ್ಕನೇ ಒಂದು ಭಾಗವು ಪರಿಣಾಮಕಾರಿಯಾಗಿ ವ್ಯರ್ಥವಾಗುತ್ತದೆ ಏಕೆಂದರೆ ಈ ನೀರಿನಿಂದ ಉತ್ಪತ್ತಿಯಾಗುವ ಆಹಾರವನ್ನು ಎಂದಿಗೂ ಸೇವಿಸಲಾಗುವುದಿಲ್ಲ. ಆದರೆ ಇಂದು ಬದಲಾದ ಸನ್ನಿವೇಶದಲ್ಲಿ ಹೊಟ್ಟೆ ಸೇರಬೇಕಾದ ಆಹಾರದ ಅಪವ್ಯಯ ನಮ್ಮನ್ನು ಚಿಂತೆಗೀಡು ಮಾಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ನಡವಳಿಕೆಗಳಲ್ಲಿ ಪ್ರಗತಿಪರ ಬದಲಾವಣೆಯನ್ನು ತರುವ ಮೂಲಕ ಹಸಿವುಮುಕ್ತ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕಾದುದು ನಮ್ಮ ಆದ್ಯ ಕರ್ತವ್ಯ.
ಊಟದ ಪಾಠ
ದಾಕ್ಷಿಣ್ಯಕ್ಕೆ ಬಲಿಬಿದ್ದು ಅಗತ್ಯಕ್ಕಿಂತ ಜಾಸ್ತಿ ಹಾಕಿಕೊಳ್ಳುವಾಗ ಅಹಾರವಿಲ್ಲದೇ ಸಾಯುವ ಅದೆಷ್ಟೋ ಬಸವಳಿದ ಜನರ ಚಿತ್ರ ನಮ್ಮ ಸ್ಮೃತಿಪಟಲದಲ್ಲಿ ಮೂಡಿಬರಲಿ. ನಾವು ಪೋಲು ಮಾಡದೆ ಉಳಿತಾಯ ಮಾಡುವ ಪ್ರತಿಯೊಂದು ಅನ್ನದ ಅಗಳು ಕೂಡಾ ಹಸಿದ ಮಗುವಿನ ಹೊಟ್ಟೆಯನ್ನು ಸೇರುತ್ತದೆ ಎಂದು ಭಾವಿಸಿದಾಗ ನಿಜಕ್ಕೂ ಸೇವೆ ಮಾಡಿದ ಸಾರ್ಥಕ್ಯ ಮೂಡುತ್ತದೆ. ರೈತ ಬೆವರಿಳಿಸಿ ಬೆಳೆದ ಆಹಾರ ಹಸಿದ ಜನರನ್ನು ತಲುಪಿ ಹಸಿವುಮುಕ್ತ ಜಗತ್ತನ್ನು ಸಾಧಿಸುವಲ್ಲಿ ನಾವೆಲ್ಲಾ ಚಿಂತನೆ ಮಂಥನೆ ಮಾಡಿ ಕಾರ್ಯೋನ್ಮುಖರಾಗೋಣ. ಇದರಿಂದ ಅರ್ಥಪೂರ್ಣ, ಸಮೃದ್ದ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಅನುಭವಿಸಲು ಸಾಧ್ಯವಾಗಬಹುದು. ಒಂದು ತುತ್ತಾದರೂ ಸರಿ ಚೆಲ್ಲುವ ಮುನ್ನ ಒಂದು ಕ್ಷಣ ಯೋಚಿಸೋಣ.
-ಡಾ.ಎ.ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಶ್ರೀ.ಧ.ಮಂ. ಕಾಲೇಜು (ಸ್ವಾಯತ್ತ), ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ