ನವದೆಹಲಿ: ನವದೆಹಲಿಯ ವಸಂತ್ ಕುಂಜ್ ನಲ್ಲಿರುವ ಪೇಜಾವರ ಶಾಖಾ ಮಠದ ಆವರಣದಲ್ಲಿ ಮಂಗಳವಾರ ಸಂಜೆ ಐವತ್ತಕ್ಕೂ ಅಧಿಕ ಸಾಧು ಸಂತರ ಉಪಸ್ಥಿತಿಯಲ್ಲಿ ಸಂತ ಮಂಥನ ನಡೆಯಿತು.
ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯರೂ ಆಗಿರುವ ಪೇಜಾವರ ಶ್ರೀಗಳ ಷಷ್ಠ್ಯಬ್ದಿಯ ಸಂದರ್ಭದಲ್ಲಿ ಹಮ್ಮಿಕೊಂಡ ಈ ಸಂತ ಸಮಾವೇಶದಲ್ಲಿ ವರ್ತಮಾನದಲ್ಲಿ ಸನಾತನ ಧರ್ಮದ ಸವಾಲುಗಳ ಕುರಿತಾಗಿ ಮಂಥನ ನಡೆಯಿತು.
ಲವ್ ಜಿಹಾದ್, ಮತಾಂತರ, ಲ್ಯಾಂಡ್ ಜಿಹಾದ್, ಗೋಹತ್ಯೆ, ಅತ್ಯಾಚಾರ ಮಠ ಮಂದಿರಗಳ ಮೇಲಾಗುತ್ತಿರುವ ವೈಚಾರಿಕ ದಾಳಿಗಳ ವಿಚಾರವಾಗಿಯೂ ಮಂಥನ ನಡೆಸಿದ ಸಾಧು ಸಂತರು ಈ ಎಲ್ಲ ಸವಾಲುಗಳ ವಿರುದ್ಧ ಸಂತರೆಲ್ಲ ಒಗ್ಗಟ್ಟಿನಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಬಗ್ಗೆ ಒಮ್ಮತ ವ್ಯಕ್ತವಾಯಿತು. ಸದ್ಯದಲ್ಲೇ ನಡೆಯುವ ಚುನಾವಣೆಗಳ ಹೊತ್ತಲ್ಲೂ ಹಿಂದು ಸಮಾಜ ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹಿಂದು ವಿಚಾರಗಳಿಗೆ ಬದ್ಧರಾದವರನ್ನೇ ಅಧಿಕಾರಕ್ಕೆ ತರುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಕೆಲವು ಸಂತರು ಸೂಚಿಸಿದರು.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಗೃಹಮಂತ್ರಿ ಅಮಿತ್ ಶಾ ಮಂಗಳವಾರ ಬೆಳಿಗ್ಗೆ ನವದೆಹಲಿಯ ಸ್ವಗೃಹಕ್ಕೆ ಬರಮಾಡಿಕೊಂಡು ಭಕ್ತಿ ಗೌರವ ಸಮರ್ಪಿಸಿದರು .
ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಅಲೋಕ್ ಕುಮಾರ್ ಉಪಸ್ಥಿತರಿದ್ದು ಸಂತರ ಮಾರ್ಗದರ್ಶನದಲ್ಲೇ ನಡೆದು ಬಂದ ಸನಾತನ ಧರ್ಮಕ್ಕೆ ಭವಿಷ್ಯದಲ್ಲೂ ನೇತೃತ್ವವೇ ಪ್ರೇರಕಶಕ್ತಿಯಾಗಿದೆ. ಶ್ರೀಗಳ ಷಷ್ಠ್ಯಬ್ದಿಯ ಸದವಸರದಲ್ಲಿ ದೇಶದ ರಾಜಧಾನಿಯಲ್ಲಿ ಎಲ್ಲ ಸಂತರನ್ನು ಒಗ್ಗೂಡಿಸಿ ದಿವ್ಯ ಸಂದೇಶವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಈ ಸತ್ಸಂಗವನ್ನು ಏರ್ಪಡಿಸಿರುವುದು ಸನಾತನ ಧರ್ಮದ ಮೇಲೆ ಶ್ರೀಗಳಿಗೆ ಇರುವ ಶ್ರದ್ಧೆ ಮತ್ತು ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
ವಿ ಹಿಂ ಪ ಪ್ರಾಂತ ಕಾರ್ಯದರ್ಶಿ ದೀಪಕ್ ಗುಪ್ತಾ, ಸುರೇಂದ್ರ ಗುಪ್ತಾ, ಉದ್ಯಮಿ ರಮೇಶ್ ವಿಗ್, ವಿದ್ವಾಂಸರಾದ ಡಾ ವರಖೇಡಿ ಶ್ರೀನಿವಾಸ ಆಚಾರ್ಯ, ರಾಮವಿಠಲಾಚಾರ್ಯ, ವೀರನಾರಾಯಣ ಪಾಂಡುರಂಗಿ, ಗುರುರಾಜ ಕಲ್ಕೂರ ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣಮೂರ್ತಿ ಭಟ್ ಶ್ರೀವತ್ಸ ತಂತ್ರಿ, ಶ್ರೀನಿವಾಸ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಶಶಾಂಕ್ ಭಟ್ ಪ್ರಸ್ತಾವನೆಗೈದು ಸ್ವಾಗತಿಸಿದರು. ವಿದ್ವಾನ್ ನಚಿಕೇತ್ ಶರ್ಮಾ ವೇದಘೋಷಗೈದರು. ವಿಶ್ವ ಹಿಂದು ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೆಹಲಿಯ ಅನೇಕ ಮುಖಂಡರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ