ಮೈಸೂರು: ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಚರ್ಚೆಯಲ್ಲಿರುವ ಕಮಿಷನ್ ಪಿಡುಗು ದಸರಾ ಮಹೋತ್ಸವಕ್ಕೂ ಕಾಲಿಟ್ಟಿದೆ. ಇದರಿಂದ ಮುಜುಗರಕ್ಕೆ ಒಳಗಾದ ಹಿರಿಯ ಸರೋದ್ ವಾದ ಪಂಡಿತ್ ರಾಜೀವ ತಾರಾನಾಥ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿ ಕಾರ್ಯಕ್ರಮದ ಭಾಗವಾಗಿ ಕಾರ್ಯಕ್ರಮ ನೀಡಲೆಂದು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ. ರಾಜೀವ ತಾರಾನಾಥ ಅವರನ್ನು ಕಾರ್ಯಕ್ರಮ ನೀಡಲು ದಸರಾ ಸಮಿತಿ ಆಹ್ವಾನ ನೀಡಿತ್ತು.
ಈ ಕಾರ್ಯಕ್ರಮಕ್ಕೆ ನೀಡಲಾಗುವ ಸಂಭಾವನೆಯಲ್ಲಿ ಪಾಲು ಪಡೆಯಲು ಹೊರಟ ಅಧಿಕಾರಿಗಳು ಅವರ ಬಳಿ ತಮಗೆ ಇಷ್ಟು ಪರ್ಸೆಂಟ್ ಹಣ ನೀಡಬೇಕು ಎಂದು ಕೇಳಿದ ಕಾರಣ ಮುಜುಗರಗೊಂಡ ಪಂ, ರಾಜೀವ ತಾರನಾಥ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದಾರೆ. ಈಗ ಅವರ ಕಾರ್ಯಕ್ರಮಕ್ಕೆ ದಸರಾ ಸಾಂಸ್ಕೃತಿಕ ವೇದಿಕೆಯಿಂದ ಕತ್ತರಿ ಬಿದ್ದಿದೆ.
ಮೈಸೂರಿನ ದಸರಾ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವಂತೆ ಅಧಿಕಾರಿಗಳೇ ಪಂ. ರಾಜೀವ ತಾರಾನಾಥರ ಮನೆಗೆ ಹೋಗಿ ಆಹ್ವಾನಿಸಿದ್ದರು. ಈಗ ಪರ್ಸಂಟೇಜ್ ವಿಚಾರಕ್ಕಾಗಿ ಕಾರ್ಯಕ್ರಮ ರದ್ದುಗೊಂಡಿರುವುದಾಗಿ ಖುದ್ದು ರಾಜೀವ ತಾರನಾಥರೇ ಸ್ಪಷ್ಟಪಡಿಸಿದ್ದಾರೆಂದು ಮೈಸೂರಿನ ಸ್ಥಳೀಯ ಪತ್ರಿಕೆ “ಆಂದೋಲನ” ವರದಿ ಮಾಡಿದೆ.
“ಕಮಿಷನ್ ಚಟುವಟಿಕೆ ಮೂಲಕ ಕಲಾವಿದರನ್ನು ಶೋಷಣೆ ಮಾಡಲಾಗುತ್ತದೆ. ಕಾರ್ಯಕ್ರಮ ನೀಡದಿದ್ದರೂ ಪರವಾಗಿಲ್ಲ ಎಂದು ನಾನು ಇಂತಹ ಕೃತ್ಯಗಳನ್ನು ಪ್ರೋತ್ಸಾಹಿಸಿಲ್ಲ. ಬೇರೆ ರಾಜ್ಯಗಳಲ್ಲಿ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ವಾಡಿಕೆ ಇದೆ. ನಮ್ಮಲ್ಲಿ ಇದಕ್ಕೆ ವಿರುದ್ಧವಾದ ವಾತಾವರಣವಿದೆ.” ಪಂ. ರಾಜೀವ ತಾರಾನಾಥ ಅವರು ಪ್ರತಿಕ್ರಿಯಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಕಾರ್ಯಕ್ರಮ ನಿಗದಿಗೊಂಡ ಬಳಿಕ ಇಬ್ಬರು ಅಧಿಕಾರಿಗಳು “ನಿಮಗೆ ಗೊತ್ತುಪಡಿಸಿರುವ ಮೊತ್ತಕ್ಕೆ ಮೂರು ಲಕ್ಷ ಹೆಚ್ಚಿಗೆ ಸೇರಿಸಿ ಹಾಕುತ್ತೇವೆ. ನಿಮಗೆ RTGS ಮೂಲಕ ಹಣ ಬರುತ್ತದೆ. ನೀವು ನಂತರ ನಮಗೆ ಮೂರು ಲಕ್ಷವನ್ನು ಮರಳಿಸಿ” ಎಂದಿದ್ದಾರೆ.
ನಂತರ ನಿಷ್ಟುರ ನಡವಳಿಕೆಗೆ ಹೆಸರಾದ ಹಿರಿಯ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ ಇದರಿಂದ ಕೆರಳಿ ಕಮಿಷನ್ ಕೇಳಿದ ಅಧಿಕಾರಿಗಳಿಗೆ ಛೀಮಾರಿ ಹಾಕಿ ಮನೆಯಿಂದ ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಸರ್ಕಾರದ ಕಡೆಯಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ