ಗೋಕರ್ಣ: ಪ್ರೀತಿಯ ಮೂಲಕ ಸಮಾಜವನ್ನು ಗೆಲ್ಲುವುದು ರಾಮನ ದಾರಿ; ಇದಕ್ಕೆ ವಿರುದ್ಧವಾಗಿ ಭೀತಿ ಹುಟ್ಟಿಸುವ ಮೂಲಕ ಗೆಲ್ಲುವ ಪ್ರಯತ್ನ ರಾವಣನದ್ದು. ಮೊದಲ ದಾರಿಯನ್ನು ಆರಿಸಿಕೊಂಡು ಸೇವೆ- ಪ್ರೀತಿಯ ಮೂಲಕ ಸಮಾಜದ ವಿಶ್ವಾಸ ಗಳಿಸೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಗುರುವಾರ ಕಡ್ಲೆ, ಕರ್ಕಿ ಮತ್ತು ಹೊಸಾಕುಳಿ ವಲಯಗಳ ಶಿಷ್ಯರಿಂದ ಗುರುಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸಿ ಸದ್ಭಾವನೆ ಮೂಡಿಸುವುದು ಸೇವಾ ಕಾರ್ಯಕರ್ತರ ಕರ್ತವ್ಯ. ರಾಮನ ಮೇಲೆ ಅಚಲ ಭಕ್ತಿ, ಪೀಠದ ಮೇಲಿನ ಭದ್ರ ನಿಷ್ಠೆ ಮತ್ತು ನಿಷ್ಕಳಂಕವಾದ ಪ್ರೀತಿ ಮತ್ತು ಕಾಳಜಿಯಿಂದ ಕೆಲಸ ಮಾಡಿ ಎಂದರು.
ಗುರುಭಾವ ನಮ್ಮಲ್ಲಿ ಜಾಗೃತಬೇಕು. ಸೇವಾ ಕಾರ್ಯವನ್ನು ಗುರು ಕಾರ್ಯ, ರಾಮಕಾರ್ಯ ಎಂಬ ಭಾವನೆಯಿಂದ ಮಾಡಬೇಕು. ಇದು ನಮ್ಮ ಸೇವೆಗೆ ಧನ್ಯತೆಯ ಭಾವವನ್ನು ಮತ್ತು ಸಮಾಧಾಣವನ್ನು ತಂದುಕೊಡುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದ ಇಂಥ ಸೇವೆ ಎಲ್ಲಕ್ಕಿಂತ ಶ್ರೇಷ್ಠ ಎಂದು ವಿಶ್ಲೇಷಿಸಿದರು.
ಗುರುಪೀಠ ಇಡೀ ಸಮಾಜವನ್ನು ನೋಡುವ ದೃಷ್ಟಿಯಿಂದಲೇ ಶ್ರೀಮಠದ ಶಿಷ್ಯರು ಕೂಡಾ ಸಮಾಜದಲ್ಲಿ ವ್ಯವಹರಿಸಬೇಕು. ನೊಂದವರ ಕಣ್ಣೀರು ಒರೆಸುವ ಮಾತೃಹೃದಯ ನಿಮ್ಮದಾಗಬೇಕು. ಇಡೀ ಸಮಾಜವನ್ನು ಪ್ರೀತಿಯಿಂದ ಕಾಣಬೇಕು ಎಂದು ಕರೆ ನೀಡಿದರು.
ಇಡೀ ನಮ್ಮ ಸಮಾಜದದಲ್ಲಿ ಸಂಸ್ಕøತಿ, ಪರಂಪರೆ ಬಗ್ಗೆ ಜ್ಞಾನ ಪಸರಿಸಬೇಕು, ಸಂಸ್ಕಾರ- ಪರಂಪರೆ ಉಳಿಯಬೇಕು ಎಂಬ ಉದ್ದೇಶದಿಂದ ಸ್ಥಾಪನೆಗಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಗುರುಪೀಠದ ಕಣ್ಣುಗಳಿದ್ದಂತೆ. ನಮ್ಮ ಯುವಪೀಳಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಇದು ಸಾಧನ. ಸಂಸ್ಕಾರ ರಹಿತ ಶಿಕ್ಷಣ ಅನಾಹುತಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಮುಂದಿನ ಪೀಳಿಗೆ ಗುರುಕುಲಗಳಲ್ಲೇ ಕಲಿಯುವಂತಾದಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಉದ್ದೇಶವನ್ನು ಸಮಾಜಕ್ಕೆ ಪ್ರಚುರಪಡಿಸುವ ಸಲುವಾಗಿ ಸ್ವರ್ಣಪಾದುಕೆಗಳು ಪ್ರವಾಸ ಕೈಗೊಳ್ಳಲಿವೆ. ಮುಂದಿನ ಒಂದು ವರ್ಷದಲ್ಲಿ 1800 ಸಭೆಗಳ ಮೂಲಕ ಇಡೀ ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಬೃಹತ್ ಆಂದೋಲನ ನಡೆಯಲಿದೆ ಎಂದರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಭಟ್ ಹೊಸಾಕುಳಿ, ಹೊಸಾಕುಳಿ ವಲಯದ ಅಧ್ಯಕ್ಷ ಗೋವಿಂದ ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಸಾಧಕರನ್ನು ಸನ್ಮಾನಿಸಲಾಯಿತು. ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ