ಗಣಪತಿ ಹಬ್ಬದ ದಿನ ಸಂಜೆ ಅಕ್ಕ ಪಕ್ಕದ ಮನೆಯವರಿಗೆ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಬಾಗಿನ ಕೊಡುವ ಸಂಭ್ರಮ ಹಾಗೂ ಗಣಪತಿ ಬಿಡುವ ಕಾರ್ಯಕ್ರಮ ಎಲ್ಲರ ಮನೆಗಳಲ್ಲಿ. ನಾವು ಅವರ ಮನೆಗೆ, ಅವರು ನಮ್ಮನೆಗೆ ಹೀಗೆ ಹೋಗುವಾಗ ಯಾವುದೋ ಗುಂಗಿನಲ್ಲಿ ಅಚಾನಕ್ ಆಗಿ ಮೋಡಗಳ ಮರೆಯಲ್ಲಿ, ಕರೆಂಟ್ ಕಂಬದ ಆಚೆ ಕಡೆ, ಮನೆಯ ಮಾಳಿಗೆ ಸಂದಿಯಲ್ಲಿ, ತೆಂಗಿನ ಮರದ ಗರಿಗಳ ಸಂಧಿಯಿಂದ "ಚೌತಿ ಚಂದ್ರ" ಕಣ್ಣಿಗೆ ಬೀಳ್ತಾನೆ!! ಉಳಿದ ದಿನಗಳಲ್ಲಿ ಸಾಮಾನ್ಯವಾಗಿ ಸಂಜೆ ಮನೆಯ ಹೊರಗೆ ಬಂದು ನಾವು ಚಂದ್ರನನ್ನು ಗಮನಿಸುವುದಿಲ್ಲ! ಆದ್ರೆ ಚೌತಿ ದಿನ ತಪ್ಪದೇ ಚಂದ್ರ ದರ್ಶನವಾಗುತ್ತದೆ. ಚಂದ್ರ ದರ್ಶನ ಮಾಡಿದ ಕಾರಣ.....
ಅಂದು ಶಾಪ ಗ್ಯಾರಂಟಿ!! ಏನಿದು ಶಾಪ?
"ಭಾದ್ರಪದ ಶುಕ್ಲದ ಚೌತಿಯಂದು
ಚಂದಿರನ ನೋಡಿದರೆ ಅಪವಾದ ತಪ್ಪದು.." ಕಳ್ಳತನ / ಅಪಖ್ಯಾತಿಯ ಅಪವಾದ ಬರಲಿ !!..... ಎಂಬುದು....
ಗಣೇಶ ಚತುರ್ಥಿಯ ಹಬ್ಬದಂದು ಪೂಜೆ ಸ್ವೀಕರಿಸಿ ಭಕ್ತರು ಕೊಟ್ಟ ಕಡುಬು, ಚಕ್ಕಲಿ, ಪಾಯಸಾದಿ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕ!! ಹೊಟ್ಟೆಯ ಭಾರದಿಂದ ಗಣಪ ಆಯ ತಪ್ಪಿ ಬಿದ್ದ. ಹೊಟ್ಟೆ ಒಡೆದು ಹೋಯ್ತು!! ಅಲ್ಲೇ ಹೋಗುತ್ತಿದ್ದ ಒಂದು ಸರ್ಪವನ್ನು ಹೊಟ್ಟೆಗೆ ಬಿಗಿದು ಗಂಟು ಹಾಕಿ ಸರಿ ಮಾಡಿಕೊಂಡ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ!! ಅದರಿಂದ ಅವಮಾನಿತನಾದ ಗಣಪನಿಗೆ ಸಿಟ್ಟು ಬಂತು.! ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಅಂತ ಶಪಿಸಿದನಂತೆ!!
ಕಡುಬು, ಚಕ್ಕಲಿ, ಮೋದಕ ಎಲ್ಲ ತಿಂದಿವನು ಗಣಪ, ನಕ್ಕವನು ಚಂದ್ರ, ಆದರೆ, ಶಾಪ ಮಾತ್ರ ಚಂದ್ರನನ್ನು ನೋಡಿದವರಿಗೆ....!!!..
ಒಮ್ಮೆ ಕೃಷ್ಣ ಅದೇ ಭಾದ್ರಪದ ಶುಕ್ಲದ ಚೌತಿಯ ದಿನ ಈ ಚಂದ್ರನನ್ನು ನೋಡಿ ಬಿಟ್ಟನಂತೆ. ಬಾಲ್ಯದಲ್ಲಿ ಬೆಣ್ಣೆ ಕದ್ದು ಮಕ್ಕಳಾಟ ಮಾಡುತ್ತಿದ್ದ ಕೃಷ್ಣನಿಗೆ ದೊಡ್ಡವನಾದ ಮೇಲೆ ಒಂದು ಕಳ್ಳತನದ ಅಪಾದನೆ ಬಂತು!!
ಚೌತಿಯ ಚಂದ್ರನ ದರುಶನದಿಂದ ಕಾಡಿತು ಕೃಷ್ಣಗೆ ಅಪವಾದ, ಈ ಕತೆ ಕೇಳಲು ದೊರೆವುದು ಜನರಿಗೆ ದೋಷದ ಪರಿಹಾರ.....ಈ ಹಾಡನ್ನು ನಾವೆಲ್ಲಾ ಕೇಳಿಯೇ ಇದ್ದೇವೆ ಅಲ್ಲವೇ....
ಏನು ಅಪವಾದದ ಆ ಕತೆ !? ಅಪವಾದ ಪರಿಹಾರ ಹೇಗಾಯ್ತು? ನಿರಪರಾಧಿ ಅಂತ ತೀರ್ಮಾನ ಆಗಿದ್ದು ಹೇಗೆ ? ..... ಬನ್ನಿ ಆ ಕಥೆಯ ಅಲಿಸೋಣ.....
"ಜಾಂಬವತಿ ಕಲ್ಯಾಣ"ಅಥವಾ "ಸ್ಯಮಂತಕೋಪಾಖ್ಯಾನ"
ಶ್ರೀ ಕೃಷ್ಣನ ಸಂಬಂಧಿಯಾಗಿದ್ದ ಸತ್ರಾಜಿತನು ಸೂರ್ಯದೇವನನ್ನು ಕುರಿತು ತಪಸ್ಸು ಮಾಡಿ ಅತೀಂದ್ರಿಯ ಶಕ್ತಿಗಳನ್ನು ಹೊಂದಿದ್ದ ಸ್ಯಮಂತಕ ಮಣಿಯನ್ನು ವರವಾಗಿ ಪಡೆದಿದ್ದನು. ಈ ಮಣಿಯಿಂದ ಪ್ರತೀ ದಿನವೂ ಹತ್ತು ತೊಲ ಬಂಗಾರವನ್ನು ಪಡೆಯುತ್ತಿದ್ದ ಸತ್ರಾಜಿತ ನೋಡ ನೋಡುತ್ತಿದ್ದಂತೆಯೇ ಶ್ರೀಮಂತನಾಗಿ ದಾನ ಧರ್ಮಗಳಲ್ಲಿ ತೊಡಗಿದ್ದದ್ದನ್ನು ಕಂಡ ಶ್ರೀ ಕೃಷ್ಣ ಇಂತಹ ಅಮೂಲ್ಯ ಮಣಿ ಇಲ್ಲಿದ್ದರೆ ವೃಥಾ ಕಳ್ಳ ಕಾಕರಿಂದ ನಿನಗೆ ತೊಂದರೆ ಆಗಬಹುದು. ಹಾಗಾಗಿ ಇದು ನಿನ್ನ ಬಳಿ ಇರುವುದು ಕ್ಷೇಮವಲ್ಲವಾದ್ದರಿಂದ ಇದು ತನ್ನ ಬಳಿ ಇರಲೆಂದು ಶ್ರೀ ಕೃಷ್ಣ ಒಮ್ಮೆ ಹೇಳಿದಾಗ ಸತ್ರಾಜಿತನು ಅದಕ್ಕೆ ಒಪ್ಪದೇ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ.
ಅದೊಂದು ದಿನ ಶ್ರೀ ಕೃಷ್ಣನು ಕಾಡಿನಲ್ಲಿ ಭೇಟೆಗಾಗಿ ಹೊರಟಾಗ ಸತ್ರಾಜಿತನ ತಮ್ಮನಾದ ಪ್ರಸೇನನೂ ಈ ಅಮೂಲ್ಯವಾದ ಸ್ಯಮಂತಕ ಮಣಿಯನ್ನು ಧರಿಸಿ ಕೃಷ್ಣನೊಂದಿಗೆ ಬೇಟೆಯಾಡಲು ಕಾಡಿಗೆ ಹೋದಾಗ, ಆ ಸ್ಯಮಂತಕ ಮಣಿಯಿಂದ ಆಕರ್ಷಿತವಾದ ಸಿಂಹವೊಂದು ಪ್ರಸೇನನನ್ನು ಕೊಂದು ಮಣಿಯನ್ನು ತೆಗೆದುಕೊಂಡು ಹೋಗುವಾಗ ಆ ಸಿಂಹವನ್ನು ಕೊಂದ ಜಾಂಭವಂತ ಆ ಸ್ಯಮಂತಕ ಮಣಿಯನ್ನು ತೆಗೆದುಕೊಂದು ತನ್ನ ಮಗಳಾದ ಜಾಂಭವತಿಯ ಕೈಗೆ ಕೊಟ್ಟಿರುತ್ತಾನೆ.
ಶ್ರೀಕೃಷ್ಣನೊಂದಿಗೆ ಭೇಟೆಯಾಡಲು ಕಾಡಿಗೆ ಹೋಗಿದ್ದ ತನ್ನ ಸಹೋದರ ಬಹಳ ದಿನಗಳವರೆಗೂ ಹಿಂದಿರುಗದಿದ್ದಾಗ ಮಣಿಯ ಆಸೆಗಾಗಿ ಶ್ರೀ ಕೃಷ್ಣನೇ ತಮ್ಮನನ್ನು ಕೊಂದನೆಂದು ಸತ್ರಾಜಿತನು ಆರೋಪಿಸಿದಾಗ ಮನನೊಂದ ಶ್ರೀಕೃಷ್ಣನು ನಿಜವಾದ ಕೊಲೆಗಾರನನ್ನು ಹುಡುಕುತ್ತಾ ಆದೇ ಕಾಡಿಗೆ ಹೋದಾಗ ಇದೇ ಗುಹೆಯಲ್ಲಿಯೇ ಸ್ಯಮಂತಕ ಮಣಿಯನ್ನು ಕಂಡು ಅದನ್ನು ಹಿಂದಿರುಗಿಸಲು ಕೋರಿಕೊಂಡಾಗ ಅದಕ್ಕೊಪ್ಪದ ಜಾಂಭವಂತ ಶ್ರೀಕೃಷ್ಣನೊಂದಿಗೆ ಯುದ್ಧಕ್ಕೆ ಇಳಿಯುತ್ತಾನೆ. ಆ ಇಬ್ಬರು ಘಟಾನುಘಟಿಗಳ ನಡುವಿನ ಭಯಂಕರ ಹೋರಾಟ 28 ದಿನಗಳ ಕಾಲದವರೆಗೂ ಹೋದಾಗ ತನ್ನೊಡನೆ ಈ ಪ್ರಮಾಣದಲ್ಲಿ ಹೋರಾಟ ಮಾಡಲು ಪ್ರಭು ಶ್ರೀರಾಮಚಂದ್ರನಿಗೆ ಮಾತ್ರ ಸಾಧ್ಯ ಎಂದು ಅರಿತು, ರಾಮನ ಮುಂದಿನ ಅವತಾರವೇ ಶ್ರೀಕೃಷ್ಣ ಎಂಬುದನ್ನು ತಿಳಿದು ಅವನಲ್ಲಿ ಕ್ಷಮೆ ಕೋರಿ ಸ್ಯಮಂತಕ ಮಣಿಯನ್ನು ಕೊಡುವುದರ ಜೊತೆಗೆ ತನ್ನ ಮಗಳಾದ ಜಾಂಭವತಿಯನ್ನೂ ಶ್ರೀಕೃಷ್ಣನಿಗೆ ಮದುವೆ ಮಾಡಿಕೊಡುತ್ತಾನೆ.
ತಿಳಿದೋ ತಿಳಿಯದೆಯೋ ಗಣೇಶನ ಹಬ್ಬದ ದಿನ ಚಂದ್ರನನ್ನು ನೋಡಬೇಡಿ. ಪುರಾಣದ ಪ್ರಕಾರ ಅಂದು ಚಂದಿರನ ದರ್ಶನದಿಂದ ಚಂದ್ರ ದೋಷ ಬಾಧಿಸುತ್ತದೆ. ಒಂದು ವೇಳೆ ನೋಡಿಬಿಟ್ಟರೆ ದೋಷ ಪರಿಹಾರಾರ್ಥವಾಗಿ
ಚಂದ್ರ ದರ್ಶನ ಮಾಡಿದ ಆರೋಪದಿಂದ ಮುಕ್ತಿ ಹೊಂದಲು "ಸ್ಯಮಂತಕೋಪಾಖ್ಯಾನ" ಕಥೆ ಕೇಳಿ, ಪರಿಹಾರಾರ್ಥವಾಗಿ ಜನರು ಈ ಕೆಳಗಿನ ಶ್ಲೋಕವನ್ನು ಹೇಳಿಕೊಳ್ಳುವುದು ವಾಡಿಕೆ :
|| ಸಿಂಹ: ಪ್ರಸೇನಮಮಧೇ: ಸಿಂಹೋ ಜಾಂಬವತಾಹತ: ||
|| ಸುಕುಮಾರ ಕ ಮಾರೋಧಿ ತವಹ್ಯೇಷ: ಶ್ಯಮಂತಕ: ||
ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು
- ಸೌಮ್ಯ ಸನತ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ