ಗೋಕರ್ಣ: ಸೇವೆಯಲ್ಲಿ ಸಿಗುವ ಸಂತೃಪ್ತಿ, ಸಮಾಧಾನ ಯಾವುದರಲ್ಲೂ ಸಿಗಲಾರದು. ಇದು ನಮ್ಮ ಜೀವಕ್ಕೆ ಸಮಾಧಾನ ನೀಡುವಂಥದ್ದು. ದೇಶದ ಭವ್ಯ ಸಂಸ್ಕೃತಿ, ಸದಾಚಾರ, ಸಂಪ್ರದಾಯ ಉಳಿಯಬೇಕಾದರೆ ನಾವೆಲ್ಲ ತ್ಯಾಗದ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಶುಕ್ರವಾರ ಬೆಂಗಳೂರಿನ ರಾಜಾ ಮಲ್ಲೇಶ್ವರ, ಮಹಾಲಕ್ಷ್ಮಿ ಮತ್ತು ಸರ್ವಜ್ಞ ವಲಯಗಳಿಂದ ಆಗಮಿಸಿದ ಶಿಷ್ಯಭಕ್ತರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಮಾರ್ಗದರ್ಶನ ನೀಡಿದರು.
ಪ್ರತಿ ವರ್ಷದ ಚಾತುರ್ಮಾಸ್ಯ ಎನ್ನುವುದು ಎಲ್ಲ ಶಿಷ್ಯರಿಗೆ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣಕ್ಕಾಗಿ ಶಕ್ತಿ ತುಂಬುವ ಸುಸಂದರ್ಭ. ಕುಟುಂಬಕ್ಕೆ ಮಾತ್ರವಲ್ಲದೇ ಸಮಾಜಕ್ಕೆ, ದೇಶಕ್ಕೆ ಒಳಿತಾಗುವಂತೆ ಶ್ರೀಮಠದ ಸೇವಾ ಚಟುವಟಿಕೆಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಸ್ವಾರ್ಥಿಯಾಗಿ ಬದುಕದೇ ಸಮಾಜಕ್ಕಾಗಿ ಬದುಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಾಧನೆ, ಸೇವೆ ಮತ್ತು ಸಂಕಟವನ್ನು ಗುರುತಿಸುವ ಮೂರು ಕಣ್ಣುಗಳೊಂದಿಗೆ ಕಾರ್ಯ ನಿರ್ವಹಿಸಿ ಎಂದು ಕರೆ ನೀಡಿದರು.
ಸೇವೆಯ ಹುಮ್ಮಸ್ಸು ಎಲ್ಲ ಕಾರ್ಯಕರ್ತರಿಗೆ ಸಾಂಕ್ರಾಮಿಕ ಯೋಗವಾಗಬೇಕು. ಸೇವಾ ಮನೋಭಾವವನ್ನು ಸಮಾಜದಲ್ಲಿ ಬೆಳೆಸುವುದೇ ನಿಜ ಅರ್ಥದ ಸಾಕ್ಷರತೆ. ಸೇವಾ ಸಾಕ್ಷರರಾಗುವ ಮೂಲಕ ಎಲ್ಲರೂ ಭವ್ಯ ಭಾರತದ ಭವನದಲ್ಲಿ ಇಟ್ಟಿಗೆಗಳಾಗೋಣ ಎಂದು ಸೂಚಿಸಿದರು.
ನಮ್ಮ ಸೇವೆಯನ್ನು ನೋಡಿ ಮತ್ತೊಬ್ಬರೂ ಸೇವೆಗೆ ಪ್ರೇರಣೆ ಪಡೆಯುವಂತಾಗಬೇಕು. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸಿ, ಅವರ ಹೃದಯದ ಭಾರ ಇಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಶ್ರೀಪೀಠ ಮಾಡುವ ಕಾರ್ಯಗಳನ್ನು ಕಾರ್ಯರ್ತರು ಮಾಡುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದರು.
ಅನಗತ್ಯ ವೈಭೋಗಗಳನ್ನು ತೊರೆದು ಸರಳ ಜೀವನ ಅಳವಡಿಸಿಕೊಳ್ಳೋಣ. ಲಕ್ಷ್ಮಿ ನಮಗೆ ಸಂಪತ್ತು, ಸಮೃದ್ಧಿ ನೀಡುವುದು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಲುವಾಗಿ. ಅದು ವಿಲಾಸಕ್ಕೆ ಬಳಕೆಯಾಗಬಾರದು. ಸಹಜ ಸೇವಾ ಪ್ರವೃತ್ತಿಯನ್ನು ಬೆಳೆಸುವ ದೃಷ್ಟಿಯಿಂದ ಪೂರಕ ಸಂಸ್ಕಾರಗಳನ್ನು ಯುವಜನತೆಗೆ ನೀಡಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದರು.
ಈ ಹಿಂದೆ ಭಾರತದ ಮೇಲೆ ಅದೆಷ್ಟೋ ಆಕ್ರಮಣಗಳು ನಡೆದಿವೆ. ಆದರೆ ಅದೆಲ್ಲಕ್ಕಿಂತ ದೊಡ್ಡ ಆಕ್ರಮಣವೆಂದರೆ ನಮ್ಮತನದ ಮೇಲೆ ನಡೆಯುವ ದಾಳಿ. ನಮ್ಮವರು ನಮ್ಮತನವನ್ನು ಬಿಟ್ಟು ಪರಕೀಯವಾಗುವುದನ್ನು ತಡೆಯುವ ಉದ್ದೇಶದಿಂದಲೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯಾಗಿದೆ. ನಮ್ಮತನ ಮತ್ತು ನಮ್ಮ ಪರಂಪರೆ ಉಳಿದರೆ ಮಾತ್ರ ದೇಶಕ್ಕೆ ಭವಿಷ್ಯ. ಮುಂದಿನ ಪೀಳಿಗೆ ನಮ್ಮೊಂದಿಗೆ ಉಳಿಯಬೇಕಾದರೆ ದೇಶೀಯತೆ ತಳಹದಿಯ ಶಿಕ್ಷಣ ಅನಿವಾರ್ಯ ಎಂದು ಪ್ರತಿಪಾದಿಸಿದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಬೆಂಗಳೂರು ಪ್ರಾಂತ ಉಪಾಧ್ಯಕ್ಷ ಜಿ.ಜಿ.ಹೆಗಡೆ ತಲಕೇರಿ, ಮಾತೃಪ್ರಧಾನರಾದ ವೀಣಾ ಜಿ ಪುಳು, ಉತ್ತರ ಬೆಂಗಳೂರು ಮಂಡಲ ಕಾರ್ಯದರ್ಶಿ ರಾಮಮೂರ್ತಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ.ಭಟ್, ವಿವಿವಿ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಉಪಸ್ಥಿತರಿದ್ದರು. ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 16 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ