"ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆದೀತು" - ದಶರಥ ಕೈಕೇಯಿ ಇವರಿಬ್ಬರಿಗೂ ಈ ಮಾತು ಅನ್ವಯಿಸುತ್ತದೆ.
ಶ್ರವಣನನ್ನು ,ಅವನ ತಂದೆಯನ್ನು ನೆನೆಯುತ್ತಾ ದಶರಥನು ಮಾನಸಿಕವಾಗಿ ದೈಹಿಕವಾಗಿ ತುಂಬಾ ನಿಶ್ಶಕ್ತನಾದನು.ಜೀವನದ ಅಂತಿಮ ಕ್ಷಣಗಳು! ಹಾ ರಾಮಾ ಹಾ ಪುತ್ರಾ ಎಂದು ರಾಮನನ್ನು ಕರೆಯುತ್ತಾ ಕೈಕೇಯಿಯನ್ನು ನಿಂದಿಸುತ್ತಾ ಕೊನೆಯುಸಿರೆಳೆದನು.ಸರಿರಾತ್ರಿಯಲ್ಲಾದ ಕಾರಣ ಯಾರಿಗೂ ಗೊತ್ತಾಗಲಿಲ್ಲ.ಬೆಳಗ್ಗೆ ಸೇವಕರು ಸುಪ್ರಭಾತ ಹಾಡಿ ಎಬ್ಬಿಸಲು ಬಂದಾಗಲೇ ದಶರಥನ ಮರಣದ ವಿಷಯ ಬೆಳಕಿಗೆ ಬಂತು.
ಮೂವರು ರಾಣಿಯರು ಮುನ್ನೂರಕ್ಕೂ ಮಿಕ್ಕಿ ಹೆಂಡತಿಯರು, ನಾಲ್ವರು ಮಗಂದಿರಿದ್ದರೂ ನಾಥ ದಶರಥ ಅನಾಥನಾದನು. ಅಯೋಧ್ಯೆಯಲ್ಲಿ ಅಳುವಿನದ್ದೇ ಆಳ್ವಿಕೆಯಾಯಿತು.
ಮಗಂದಿರು ಬರುವ ತನಕ ಶವವನ್ನು ಕೆಡದಂತೆ ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟರು.
ಇಬ್ಬರು ವನವಾಸದಲ್ಲಿ.
ಇನ್ನಿಬ್ಬರು ಮಾವನಲ್ಲಿ.
ವಸಿಷ್ಠ ಮಹರ್ಷಿಗಳ ಸಲಹೆಯಂತೆ ಭರತ ಶತ್ರುಘ್ನರನ್ನು ಕರೆತರಲು ಐವರು ರಾಜದೂತರು ರಾಜಗೃಹಕ್ಕೆ ತೆರಳಿದರು.
ಇಲ್ಲಿ ಮಾರ್ಕಂಡೇಯ ಮುನಿ ಹೇಳಿದ ರಾಜನಿಲ್ಲದ( ಅರಾಜಕ ಸ್ಥಿತಿ) ರಾಜ್ಯ ಹೇಗಿರುತ್ತದೆ?-
"ಯಥಾ ಹ್ಯನುದಕಾ ನದ್ಯೋ
ಯಥಾ ವಾಪ್ಯತೃಣಂ ವನಮ್|
ಅಗೋಪಾಲಾ ಯಥಾ ಗಾವ:
ತಥಾ ರಾಷ್ಟ್ರಮರಾಜಕಮ್||
ರಾಜನಿಲ್ಲದ ರಾಜ್ಯವು- ನೀರಿಲ್ಲದ ನದಿಗಳಂತೆ,ಹುಲ್ಲಿಲ್ಲದ ಹುಲ್ಲುಗಾವಲಿನಂತೆ,ಗೋಪಾಲನಿಲ್ಲದ ಗೋಕುಲದಂತೆ ಅಸ್ತವ್ಯಸ್ತವಾಗಿರುತ್ತದೆ- ಎಂಬ ಮಾತು ಗಮನಾರ್ಹವಾದುದು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ