ಕೈಕೇಯಿಯ ಎರಡನೇ ವರ ಮೊದಲು ಕೈಗೂಡಿತು.ಆ ವರ ಆಕೆಯ ಪಾಲಿಗೆ ಶಾಪಗಳ ಪಾಪಗಳ ಕೆಸರ ಹೊಂಡವೇ ಆಯಿತು!!
ರಾಮನ ಕರ್ತವ್ಯ,ಸೀತೆ ಲಕ್ಷ್ಮಣರ ಇಚ್ಛೆಗಳು ರಥದಲ್ಲಿ ಮುಂದೆ ಮುಂದೆ ಸಾಗುತ್ತಿದ್ದವು.ಕೈಕೇಯಿ ಮಂಥರೆಯರನ್ನುಳಿದು ಅಯೋಧ್ಯಾ ನಗರವಾಸಿಗಳ,ರಾಮಾಭಿಮಾನಿಗಳ ಶೋಕದ ಗುರುತ್ವಾಕರ್ಷಣೆಯನ್ನು ಮೀರಿ ಹೋಗಲು ರಾಮನು ಸುಮಂತ್ರನಲ್ಲಿ ರಥವನ್ನು ವೇಗವಾಗಿ ಮುನ್ನಡೆಸಲು ಹೇಳಿದರೆ ಕೌಸಲ್ಯೆ ದಶರಥಾದಿಗಳು,ಪುರಜನರು ಅವನಲ್ಲಿ ನಿಧಾನವಾಗಿ ರಥ ನಡೆಸಲು ಹೇಳುತ್ತಿದ್ದರು.ಇಕ್ಕಟ್ಟಿನಲ್ಲಿ ಸುಮಂತ್ರ! ಕೊನೆಗೂ ರಾಮಾಜ್ಞೆಯನ್ನು ಪಾಲಿಸಿದ.ಹಿಂಬಾಲಿಸಲಾಗದವರು ನಿಂತಲ್ಲೇ ರಾಮನಿಗೆ ಪ್ರದಕ್ಷಿಣೆ ಬಂದು ಶಾರೀರಕವಾಗಿ ಹಿಂದಿರುಗಿದರೆ, ಬಲಾಢ್ಯರು ಹಿಂಬಾಲಿಸುತ್ತಾ ಸಾಗಿದರು.
ಮರಳಿ ಬರುವವರನ್ನು ಹೆಚ್ಚು ದೂರ ಹಿಂಬಾಲಿಸ ಬಾರದು -ಎನ್ನುವ ಸಚಿವರ ಸಲಹೆಯನ್ನು ದಶರಥ ಕೌಸಲ್ಯೆಯರು ಪಾಲಿಸಿದರು.
ಪೂರ್ಣ ಅಯೋಧ್ಯೆಗೆ ಶೋಕಗ್ರಹಣ ಬಡಿಯಿತು.
ಬಪ್ಪದು ತಪ್ಪ,
ಬಗೆಯದ್ದು ಸಿಕ್ಕ-
ಹಿರಿಮಾತು ನಿಜವಾಯಿತು.
ಲಕ್ಷ್ಮಣನಿಗೆ ತಾಯಿ ಸುಮಿತ್ರೆಯು ಹೇಳಿದ ಎರಡು ಮಾತುಗಳನ್ನು ಉಲ್ಲೇಖಿಸದಿದ್ದರೆ ವಾಲ್ಮೀಕಿ ಮಹರ್ಷಿಗಳು ಸೃಷ್ಟಿಸಿದ ಆ ಪಾತ್ರಕ್ಕೆ ನಾನು ಮಾಡುವ ಅಪಚಾರವಾದೀತು..
•ಸತ್ಪುರುಷರಲ್ಲಿ ವಿಶೇಷವಾಗಿ ಅನುರಕ್ತನಾಗಿರುವ ನೀನು ವನವಾಸಕ್ಕಾಗಿಯೇ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿರುವೆ.
• ಶ್ರೀರಾಮ ಸೀತೆಯರ ರಕ್ಷಣೆಯ ವಿಷಯದಲ್ಲಿ ಅಜಾಗರೂಕನಾಗಿರಬೇಡ
•ಶ್ರೀರಾಮನನ್ನೇ ತಂದೆ ದಶರಥನೆಂದು ಭಾವಿಸು,ಅತ್ತಿಗೆ ಸೀತೆಯನ್ನೇ ನಾನೆಂದು(ತಾಯಿಯೆಂದು) ಭಾವಿಸು.
•ಅರಣ್ಯವನ್ನೇ ಅಯೋಧ್ಯೆಯೆಂದು ಭಾವಿಸು.
ರಾಮನಿಗೆ-
•ಹೋಗಿ ಬಾ ರಾಮ.ನಿನಗೆ ಮಂಗಳವಾಗಲಿ.
ಗಮನಿಸಿ-ಮಗನಲ್ಲಿ ಹೇಳುವಾಗ 'ಶ್ರೀರಾಮ',ರಾಮನಿಗೇ ಹೇಳುವಾಗ 'ರಾಮ'!
ರಾಮನಿಗೆ ಸೀತೆ ಲಕ್ಷ್ಮಣರು
ಸೀತೆಗೆ ರಾಮ ಲಕ್ಷ್ಮಣರು
ಲಕ್ಷ್ಮಣನಿಗೆ ರಾಮ ಸೀತೆಯರು
ವಾಲ್ಮೀಕಿ ಮಹರ್ಷಿಗಳು..
ವಾಲ್ಮೀಕಿ ಮಹರ್ಷಿಗಳು
"ಊರ್ಮಿಳೆ"ಯನ್ನು ನಮಗೆಲ್ಲರಿಗೂ ಬಿಟ್ಟರು ಅಲ್ಲವೇ!?!
"ಊರ್ಮಿಳಾ ದೇವೀ" ನೀನು ರಾಮಾಯಣದಲ್ಲಿ ಹರಿಯುತ್ತಿರುವ ಸುಪ್ತಗಂಗೆ!
ನಿನ್ನನ್ನು ನೆನಸಿದರೆ ಸಾಕು ನಾವು ಪಾವನರು!
ನಮನಗಳು ತಾಯೀ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ