ಮುಂಬಯಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದ ತೋನ್ಸೆ ವಿಜಯಕುಮಾರ್ ಶೆಟ್ಟಿ ನಾಟಕ, ಯಕ್ಷಗಾನ, ಸಾಹಿತ್ಯ, ಸಂಘಟನೆ, ಸಿನಿಮಾ ರಂಗ ಹೀಗೆ ಪೂರ್ಣಾವಧಿ ಕಲೆ ಮತ್ತು ಸಂಸ್ಕೃತಿಯ ಸಂವರ್ಧನೆಗಾಗಿ ಬದುಕು ತೇದ ದೈತ್ಯ ಪ್ರತಿಭೆ.
ಉಡುಪಿ ಬಳಿ ಕೋಡ್ದಬ್ಬು ದೈವ ಹುಟ್ಟಿ ಬೆಳೆದ ಕೋಡಿ ಕಂಡಾಳ ಕ್ಷೇತ್ರದ ಕೊಡಂಗೆ ಬನ್ನಾರ್ರ ವಂಶಸ್ಥರಾದ ವಿಜಯ ಕುಮಾರ್ ಶೆಟ್ಟರು ತಮ್ಮ ಬಾಲ್ಯವನ್ನು ಕಳೆದ್ದು ಕೆಮ್ಮಣ್ಣು ಪರಿಸರದ ತೋನ್ಸೆಯಲ್ಲಿ. ಎಳವೆಯಲ್ಲೇ ರಾಷ್ಟ್ರಪ್ರಶಸ್ತಿ ವಿಜೇತ ಗುರು ಕಾಂತಪ್ಪ ಮಾಸ್ತರ್ ಮತ್ತು ತೋನ್ಸೆ ಜಯಂತ ಕುಮಾರ್ ಇವರಿಂದ ಯಕ್ಷಗಾನ ಹಾಗೂ ಗೋಪಾಲಕೃಷ್ಣ ರಾವ್ ಅವರಿಂದ ನಾಟಕರಂಗದ ಎಲ್ಲಾ ವಿಭಾಗಗಳಲ್ಲಿ ಪರಿಣತರಾದರು. 1975 ರಲ್ಲಿ ಅವರು ಬರೆದ 'ವಸುಂಧರಾ' ನಾಟಕ ನೂರಾರು ಪ್ರಯೋಗಗಳನ್ನು ಕಂಡಿತ್ತು. 1978 ರಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಮುಂಬಯಿ ಸೇರಿದ ಬಳಿಕ ಅವರ ರಂಗಭೂಮಿ ಚಟುವಟಿಕೆ ವಿಶಾಲ ಹರವನ್ನು ಪಡೆಯಿತು.
ಸಮಾನ ಮನಸ್ಕ ರಂಗಾಸಕ್ತರನ್ನು ಒಗ್ಗೂಡಿಸಿ 1979ರಲ್ಲಿ 'ಕಲಾ ಜಗತ್ತು ಮುಂಬಯಿ' ಸಂಸ್ಥೆಯನ್ನು ಹುಟ್ಟುಹಾಕಿದವರು ಆ ಮೂಲಕ ವಿವಿಧ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ವಿಸ್ತರಿಸಿ ನೂರಾರು ಕಲಾವಿದರನ್ನು ಸೃಷ್ಟಿಸಿ ರಂಗ ಮಾಂತ್ರಿಕರೆನಿಸಿಕೊಂಡರು.
ಓರ್ವ ಪ್ರತಿಭಾವಂತ ಸಾಹಿತಿ ಮತ್ತು ನಾಟಕಕಾರರಾಗಿ ಅವರು ಬರೆದ ಎಚ್ಚಮ ನಾಯಕ, ನೀರ್ ಕಡ್ತುಂಡ, ಏರ್ ಅಪರಾಧಿ..?, ಶಬ್ದವೇಧಿ, ಬೂತೊದ ಇಲ್ಲ್, ಈ ನಲಿಕೆದಾಯೆಗ್, ಊರ್ದ ಮಾರಿ, ಶರಶಯ್ಯ, ಗಿಡಪ್ಪುನಕ್ಲುಲಾ ಬಲ್ಪುನಕ್ತುಲಾ, ಪಗರಿದ ಮಂಚಾವು, ಮೋಕ್ಷ, ಪಾಪೊದ ಪುದೆ, ಕೋಡೆ ಅಂಚ ಇನಿ ಇಂಚ, ಗುಬ್ಬಚ್ಚಿ, ಬದಿ, ಮೋಕೆದ ಜೋಕುಲು, ತೆಡಿಲ್, ಬರ್ಸ, ಬೊಲ್ಲ, ಮಾರಿಗೊಂಜಿ ಕುರಿ, ತೂ ತುಡರ್, ಒವುಲಾವು, ಈ ಬಾಲೆ ನಮ್ಮವು, ಪತ್ತಾದ್ ಪದ್ರಾಡ್, ಅಮ್ಮ ಚಾವಡಿಡ್ ಅಪ್ಪೆ ಸೀತೆ, ಬೋಂಬುಯೇ ಬೋಂಬು, ಜೋಕ್ಲು ದೇವರ್, ಕೊರೋನಾ ಒಂಜಿ ಕಣನೀರ್ದ ಕಥೆ ಇತ್ಯಾದಿ ತುಳು-ಕನ್ನಡ ನಾಟಕಗಳು ದೇಶ-ವಿದೇಶಗಳಲ್ಲಿ 3000 ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿವೆ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
'ಕಲಾಜಗತ್ತು ಚಿಣ್ಣರ ಬಿಂಬ' ವಿಜಯಕುಮಾರ್ ಶೆಟ್ಟಿಯವರ ಕಲ್ಪನೆಯ ಕೂಸು. ಮುಂಬಯಿಯಲ್ಲಿ ಹುಟ್ಟಿ ಬೆಳೆದ ತುಳುವರ ಮಕ್ಕಳಿಗಾಗಿ ತುಳುಭಾಷೆ-ಸಂಸ್ಕೃತಿಯನ್ನು ಪರಿಚಯಿಸುವ ನೂರಾರು ಕಾರ್ಯಕ್ರಮಗಳನ್ನು ಸಂಯೋಜಿಸಿ, ಹಾಡುಗಳನ್ನು ಬರೆದು ಮಕ್ಕಳಿಂದಲೇ ಪ್ರಸ್ತುತಗೊಳಿಸಿದ್ದು ಅವರ ಹೆಚ್ಚುಗಾರಿಕೆ. 'ಕಲಾಜಗತ್ತು ಸರಿಗಮಪದನಿ', 'ಕಲಾಜಗತ್ತು ಅಮ್ಮ ಚಾವಡಿ', 'ಕಲಾಜಗತ್ತು ಸಾಹಿತ್ಯ ಸಮಿತಿ' ಮುಂತಾದ ಸಂಘ ಸಂಸ್ಥೆಗಳ ಮೂಲಕ ವಿವಿಧ ಸ್ತರದ ಕಾರ್ಯಕ್ರಮಗಳನ್ನು ನೀಡಿದ್ದು ಅವರ ಸೃಜನಶೀಲತೆಗೆ ದ್ಯೋತಕ. 2008ರಲ್ಲಿ 'ಬೊಂಬಾಯಿಡ್ ತುಳುನಾಡ್' ನಿರ್ಮಿಸಿ ಕಂಬಳ, ಬಯಲು ನಾಟಕ, ಬಯಲಾಟ, ಹೊಲ, ಹಟ್ಟಿ, ಗುತ್ತಿನ ಮನೆಗಳನ್ನು ಸಾಕ್ಷಾತ್ಕರಿಸಿದ್ದಾರೆ. 2019 ರಲ್ಲಿ ಕಾಂದಿವಲಿ ಪೋಯಿಂಸರ್ನ ಕ್ರೀಡಾಂಗಣದಲ್ಲಿ ಮತ್ತೊಮ್ಮೆ 3ದಿನದ 'ಮುಂಬೈಡ್ ತುಳುನಾಡ್' ನಿರ್ಮಿಸಿ ಮರಾಠಿ ನೆಲದಲ್ಲಿ ತುಳುನಾಡನ್ನು ಮರು ಸೃಷ್ಟಿಸಿದ್ದು ಅವರ ಭಗೀರಥ ಪ್ರಯತ್ನಕ್ಕೆ ಸಾಕ್ಷಿ.
ತಮ್ಮ 60ನೇ ಹುಟ್ಟು ಹಬ್ಬದಲ್ಲಿ 60 ಕೃತಿಗಳ, 60 ಭಿನ್ನ ವಯೋಮಿತಿಯ, 60 ಭಿನ್ನ ವೇಷಭೂಷಣಗಳ ಪಾತ್ರಾಭಿನಯಗಳನ್ನು ನಿರಂತರ 14 ಗಂಟೆಗಳ ಕಾಲ ಎಡೆಬಿಡದೆ ನಿರ್ವಹಿಸಿ 'ಲಿಮ್ಯಾ ಬುಕ್ ರಾಷ್ಟ್ರೀಯ ದಾಖಲೆ' ಮಾಡಿದ್ದು ವಿಜಯಣ್ಣನ ಕಲಾಜೀವನದ ಮೈಲಿಗಲ್ಲು, 'ಪತ್ತನಾಜೆ' ತುಳು ಚಲನಚಿತ್ರದ ಮೂಲಕ ಚಿತ್ರ ಜಗತ್ತನ್ನು ಪ್ರವೇಶಿಸಿ ಯಶಸ್ಸುಗಳಿಸಿದ್ದು ಅವರ ಇನ್ನೊಂದು ಸಾಧನೆ; ಪ್ರಶಸ್ತಿ ವಿಜೇತ 'ಪಾಡ್ದನ' ತುಳು ಸಿನಿಮಾಕ್ಕೆ ಕಥೆ ಮತ್ತು ಸಂಭಾಷಣೆಯನ್ನು ಅವರೇ ಬರೆದಿದ್ದಾರೆ.
ಸುಮಾರು ನಾಲ್ಕೂವರೆ ದಶಕಗಳ ತಮ್ಮ ಕಲಾ ಸಾಧನೆಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಹಾರಾಷ್ಟ್ರ ಡೋಂಬಿವಿಲ್ಕರ್ ಪ್ರಶಸ್ತಿ, ಉದಯವಾಣಿ ಪತ್ರಿಕೆಯ ಐಕಾನ್ ಪ್ರಶಸ್ತಿ, ಮುಂಬಯಿ ಕರ್ನಾಟಕ ಸಂಘದ ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳನ್ನು ವಿಜಯಣ್ಣ ಪಡೆದಿದ್ದಾರೆ. 2000 ಇಸವಿಯಲ್ಲಿ ಸಿಂಡಿಕೇಟ್ ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಹೊಂದಿ ಪೂರ್ಣಾವಧಿ ರಂಗಭೂಮಿಯಲ್ಲೇ ತೊಡಗಿಕೊಂಡ ಅವರು ಬ್ಯಾಂಕಿನಿಂದ ಪೆನ್ಶನ್ ಪಡೆದು ಸುಖ ಜೀವನ ನಡೆಸುತ್ತಿರುವ ಅಜಾತಶತ್ರು. ಧರ್ಮ ಪತ್ನಿ ಲಕ್ಷ್ಮೀ, ಮಕ್ಕಳಾದ ದಿವ್ಯಾ ಮತ್ತು ರಮ್ಯಾ, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಹೊಂದಿರುವ ಅವರದು ಒಂದು ಸಮೃದ್ಧ ಕುಟುಂಬ.
ರಂಗ ಮಾಂತ್ರಿಕ ತೋನ್ಸೆ ವಿಜಯಕುಮಾರ್ ಶೆಟ್ಟರಿಗೆ ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗವು ಇದೇ 2023 ಸೆಪ್ಟೆಂಬರ್ 10ರಂದು ಮುಂಬಯಿ ಬಂಟರ ಭವನದಲ್ಲಿ ಏರ್ಪಡಿಸಿದ್ದ ತನ್ನ 22ನೇ ವರ್ಷದ ವಾರ್ಷಿಕೋತ್ಸವ 'ದ್ವಿವಿಂಶತಿ ಕಲಾ ಸಂಭ್ರಮ'ದಲ್ಲಿ ದಿ. ಸಂಪಾ ಎಸ್. ಶೆಟ್ಟಿ ಸ್ಮರಣಾರ್ಥ 'ಮಾತೃ ಶ್ರೀ ಯಕ್ಷರಕ್ಷಾ ಪ್ರಶಸ್ತಿ' ನೀಡಿ ಗೌರವಿಸಿದೆ. ಇದೇ ಸಂದರ್ಭ ಮುಂಬಯಿ ಮಹಾನಗರದ ಸಮಸ್ತ ಕಲಾ ರಸಿಕರ ಪರವಾಗಿ 'ರಂಗ ದಿವಾಕರ' ಎಂಬ ಹೊಚ್ಚ ಹೊಸ ಬಿರುದು ಪ್ರದಾನ ಮಾಡಿ ವಿಜಯಕುಮಾರ್ ಶೆಟ್ಟರ ಸಾಧನೆಯ ಕಿರೀಟಕ್ಕೆ ಮತ್ತೊಂದು ಹೊನ್ನ ಗರಿ ಸೇರಿಸಿದೆ.
-ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ