ಮೈಸೂರು ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ರಾಮ ಮಂತ್ರ ಬೋಧನೆ

Upayuktha
0

ನಮ್ಮ ಕೆಲಸಗಳಿಂದ ಮತ್ತೊಬ್ಬರ ಕೆಡುಕಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕು: ಪೇಜಾವರ ಶ್ರೀ


ಮೈಸೂರು: ಮಾನವರೆನಿಸಿಕೊಂಡ ನಾವು ಸಂಘ ಜೀವಿಗಳು. ನಾವು ಯಾರೂ ಒಬ್ಬರೇ ಜೀವಿಸಲು ಕಷ್ಟ. ಹೀಗಿರುವಾಗ ಎಲ್ಲರೂ ಸುಖ ಸಂತೋಷಕ್ಕಾಗಿ ಹಂಬಲಿಸುತ್ತೇವೆ. ಆದರೆ ಕೆಲವು ಬಾರಿ ನಮ್ಮ ಸುಖ ಸಂತೋಷಕ್ಕಾಗಿ ಅನ್ಯರಿಗೆ ಕಷ್ಟ ದುಃಖ ಕೊಡುತ್ತೇವೆ. ಇದಕ್ಕಾಗಿ ಕೆಟ್ಟ ಕೆಲಸಗಳಿಗೂ ಮುಂದಾಗುತ್ತೇವೆ. ಅದರಿಂದಾಗಿ ಸಮಾಜದಲ್ಲಿ ಅಶಾಂತಿ ಅಪರಾಧಗಳು, ದುಃಖ ಕಷ್ಟ ನಷ್ಟಗಳು ಉಂಟಾಗುತ್ತವೆ. ಆದ್ದರಿಂದ ಅನ್ಯರಿಗೆ ದುಃಖವಾದರೂ ಪರವಾಗಿಲ್ಲ; ನಮ್ಮ ಸುಖ ಸಂತೋಷ ಮುಖ್ಯ ಎಂಬ ಮನಸ್ಥಿತಿಯಿಂದ ಹೊರಬಂದು ನಮ್ಮಸಂತೋಷ ಅನ್ಯರ ಸಂತೋಷಕ್ಕೂ ಕಾರಣವಾಗುವ ಸತ್ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು. ಒಂದು ವೇಳೆ ಇನ್ನೊಬ್ಬರಿಗೆ ನಮ್ಮಿಂದ ಒಳಿತಾಗದಿದ್ದರೂ  ಕೆಡುಕಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಇಹದಲ್ಲೂ ಪರದಲ್ಲೂ ನಮಗೆಲ್ಲ ಶ್ರೇಯಸ್ಸಿದೆ. ಅದನ್ನೇ ಧರ್ಮ ಎನ್ನುವುದು. ಅಂತಹ ಸನಾತನ ಧರ್ಮವೇ ಶಾಶ್ವತವೂ ಆಗಿದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂದೇಶ ನೀಡಿದರು.


ಮೈಸೂರಿನ ತಮ್ಮ 36ನೇ ಚಾತುರ್ಮಾಸ್ಯ ವ್ರತದ ಕೊನೆಯ ದಿನ ಶುಕ್ರವಾರದಂದು ಮೈಸೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರೋಟರಿ ಇನ್ನರ್ ವೀಲ್ ಕ್ಲಬ್ ಗಳ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿವಿಧ ಸವಲತ್ತು ವಿತರಣೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಖೈದಿಗಳಿಗೆ ರಾಮ ಮಂತ್ರ ಬೋಧಿಸಿ ಸಂದೇಶ ನೀಡಿದರು.


ಬೇಟೆ, ದರೋಡೆ ಮೊದಲಾದ ಕೆಲಸಗಳಲ್ಲಿಯೇ ಬದುಕುತ್ತಿದ್ದ ವಾಲ್ಮೀಕಿ ಒಂದು ತಿರುವಿನಿಂದ ತಿಳಿವಳಿಕೆ ಪಡೆದು ರಾಮಮಂತ್ರವನ್ನು ಜಪಿಸುತ್ತಾ ರಾಮಾಯಣವನ್ನೇ ರಚಿಸಿ ಇವತ್ತು ಲೋಕವೆಲ್ಲ ಪೂಜಿಸುವ ಮಹರ್ಷಿಯಾದ. ಇದು ನಮಗೆ ಮಾದರಿಯಾಗಬೇಕು. ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

 

ತಿಳಿದೋ ತಿಳಿಯದೆಯೋ ಅಪರಾಧಗಳು ನಮ್ಮಿಂದಾಗುತ್ತವೆ. ನಾಗರಿಕ ಸಮಾಜದ ನಿಯಮಾನುಸಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ನಮ್ಮ ಅಂತಃಸಾಕ್ಷಿಯಾಗಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಾಗ ಪರಿಶುದ್ಧರಾಗಲು ಸಾಧ್ಯವಿದೆ. ಮುಂದೆ ಇಂತಹ ಅಪರಾಧಗಳನ್ನು ನಡೆಸದೇ ಒಳ್ಳೆಯ ನಾಗರಿಕರಾಗಿ ಬದುಕುವ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸೋಣ ಎಂದು ಕಿವಿಮಾತು ಹೇಳಿದರು. ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಪಿ ಎಸ್ ರಮೇಶ್, ಲಯನ್ಸ್, ರೋಟರಿ, ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
To Top