ಮೈಸೂರು: ನಗರದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪೂಜ್ಯ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸ್ವಾಮೀಜಿಯವರ ಆಶ್ರಯದಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯದ ಅಂಗವಾಗಿ ಸೆ 10 ಭಾನುವಾರದಂದು ಸಂತ ಸಮಾವೇಶ ಮತ್ತು ಬೃಹತ್ ಧರ್ಮಸಭೆಯನ್ನು ಆಯೋಜಿಸಲಾಗಿದೆ.
ಪೇಜಾವರ ಶ್ರೀಗಳ ಚಾತುರ್ಮಾಸ್ಯ ವ್ರತ ಸಮಿತಿ ಮತ್ತು ವಿಶ್ವ ಹಿಂದು ಪರಿಷತ್ ಮೈಸೂರು ಜಿಲ್ಲಾ ಘಟಕಗಳ ಜಂಟಿ ಸಂಯೋಜನೆಯಲ್ಲಿ ಈ ಸಮಾವೇಶ ನಡೆಯಲಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು, ಸಾಧು ಸಂತರು ಭಾಗವಹಿಸಲಿರುವರು. ಬೆಳಿಗ್ಗೆ 10 ರಿಂದ 11.30 ರ ವರೆಗಿನ ಅವಧಿಯಲ್ಲಿನ ಸಂತ ಸಮಾವೇಶದಲ್ಲಿ ಹಿಂದು ಸಮಾಜದ ಪ್ರಚಲಿತ ವಿದ್ಯಮಾನಗಳ ಕುರಿತು ಮಠಾಧೀಶರು ಮಂಥನ ನಡೆಸುವರು. ಇದರಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶ ಇರುವುದಿಲ್ಲ.
ಕೆಲವು ಧರ್ಮಶ್ರದ್ಧೆಯಿಲ್ಲದ ರಾಜಕಾರಣಿಗಳಿಂದ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳು, ಗೋಹತ್ಯಾನಿಷೇಧ ಆಂದೋಲನ, ಜಾತಿಯ ಹೋರಾಟಗಳಷ್ಟೇ ಧರ್ಮದ ಪರವಾಗಿಯೂ ಮಠಾಧೀಶರು ಸಂದರ್ಭಾನುಸಾರ ಧ್ವನಿ ಎತ್ತಬೇಕಾದ ಅವಶ್ಯಕತೆ, ಹಿಂದು ದೇವಳಗಳ ಸುರಕ್ಷತೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಜಾತ್ರಾ ಜಿಹಾದ್ ಮೊದಲಾದವುಗಳು ಹಾಗೂ ಹಿಂದು ಭಾವನೆಗಳ ಮೇಲಾಗುತ್ತಿರುವ ಅನೇಕ ರೀತಿಯ ಹಾನಿಗಳ ತಡೆ ಮೊದಲಾದ ಅನೇಕ ವಿಷಯಗಳನ್ನು ಚರ್ಚಿಸುವ ಸಾಧ್ಯತೆ ಇದೆ.
ಈ ಸಮಾವೇಶದ ನಂತರ ಬೃಹತ್ ಹಿಂದು ಧರ್ಮಸಭೆ ನಡೆಯಲಿದ್ದು ಇದರಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ವೇದಿಕೆಯಲ್ಲಿ ಪೇಜಾವರ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದು ಮಂಗಳೂರು ಗುರುಪುರ ಶ್ರೀ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಹಿತ ಕೆಲವು ಮಠಾಧೀಶರು ಮಾರ್ಗದರ್ಶನ ನೀಡಲಿರುವರು. ಕಾರ್ಯಕ್ರಮವು ಗಣಪತಿ ಸಚ್ಚಿದಾನಂದಾಶ್ರಮದ ಸಭಾಂಗಣದಲ್ಲಿ ನಡೆಯಲಿದೆ.
ವಿಶ್ವಹಿಂದು ಪರಿಷತ್ತಿನ ಕೇಂದ್ರೀಯ ಮಂಡಳಿಯ ಸದಸ್ಯರೂ, ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಿಂದು ಸಮಾಜದ ಪ್ರಮುಖ ಮುಖಂಡರಾಗಿ ಗುರುತಿಸಲ್ಪಟ್ಟಿದ್ದು ದೇಶಾದ್ಯಂತ ಧರ್ಮಜಾಗೃತಿಯ ಕಾರ್ಯಗಳನ್ನು ಮಾಡುತ್ತಿದ್ದು ಇತ್ತೀಚೆಗಷ್ಟೆ ದಶಕೋಟಿ ರಾಮಜಪಯಜ್ಞ ವನ್ನು ಅತ್ಯಂತ ಯಶಸ್ವಿಯಾಗಿ ಸಂಯೋಜಿಸಿದ್ದು ಇದರಲ್ಲಿ ರಾಜ್ಯದ 30 ಜಿಲ್ಲೆಗಳ ಸುಮಾರು ಒಂದು ಸಾವಿರಕ್ಕೂ ಅಧಿಕ ಖಾಸಗಿ ಶಾಲೆಗಳ 7 ಲಕ್ಷಕ್ಕೂ ವಿದ್ಯಾರ್ಥಿಗಳು ನೂರಾರು ಸಂಘ ಸಂಸ್ಥೆಗಳ ಸಾವಿರಾರು ಮಂದಿ ಭಾಗವಹಿಸಿ ನಿರೀಕ್ಷೆಗೂ ಮೀರಿ ಶತಕೋಟಿಯಷ್ಟು ರಾಮಮಂತ್ರ ಸಾಮೂಹಿಕ ಜಪ ನಡೆದಿರುವುದು ಉಲ್ಲೇಖನೀಯ.
ಮೈಸೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳು, ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯ, ವೃದ್ಧಾಶ್ರಮ, ಅನಾಥಾಶ್ರಮ, ಆಸ್ಪತ್ರೆ, ಗುರುಕುಲ ಇತ್ಯಾದಿಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಗೋರಕ್ಷಣೆಯ ಕಾರ್ಯದಲ್ಲಿ ಉಲ್ಲೇಖನೀಯ ಪಾತ್ರ ನಿರ್ಚಹಿಸುತ್ತಿರುವ ಶ್ರೀಗಳು ಉಡುಪಿ ಜಿಲ್ಲೆಯಲ್ಲಿ 5 ಗೋಶಾಲೆಗಳನ್ನು ನಡೆಸುತ್ತಿದ್ದು ಇದರಲ್ಲಿ ಮೂರು ಸಾವಿರಕ್ಕೂ ಅಧಿಕ ಗೋವುಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೇ ಪೋಷಣೆ ನೀಡುತ್ತಿದ್ದಾರೆ.
ರಾಮಮಂದಿರ ನಿರ್ಮಾಣ ಕಾರ್ಯದಲ್ಲೂ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಮಂದಿರದ ನಿಧಿ ಸಂಗ್ರಹ ಅಭಿಯಾನದ ಸಂದರ್ಭದಲ್ಲಿ ದಕ್ಷಿಣ ಭಾರತಾದ್ಯಂತ ಸಂಚರಿಸಿ ತೀರಾ ಸಾಮಾನ್ಯರಿಂದ ಅತೀ ಗಣ್ಯರುಗಳನ್ನೂ ಸಂಪರ್ಕಿಸಿ ನಿಧಿ ಸಂಗ್ರಹಿಸಿದ್ದಾರೆ. ಯೋಗ ಈಜು, ಶಾಸ್ತ್ರಾಧ್ಯಾಪನ, ಭಜನೆ ಸಂಗೀತ, ಪರಿಸರ ಪ್ರೀತಿ ಯೇ ಮೊದಲಾದ ಅನೇಕ ಪ್ರವೃತ್ತಿಗಳನ್ನು ಹೊಂದಿರುವ ಶ್ರೀಗಳು ಸುಮಾರು 30 ವರ್ಷಗಳ ಕಾಲ ಪಾದಯಾತ್ರೆಯ ಮೂಲಕ 30 ಸಾವಿರಕ್ಕೂ ಅಧಿಕ ಕಿ ಮೀ ದೂರ ಕ್ರಮಿಸಿ ಬದರಿಯಿಂದ ರಾಮೇಶ್ವರದ ವರೆಗಿನ ನೂರಾರು ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ.
ಸೆ 10 ರ ಧರ್ಮಸಭೆಯಲ್ಲಿ ಮೈಸೂರಿನ ಹಿಂದು ಬಾಂಧವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿಶ್ವಹಿಂದು ಪರಿಷತ್ತು ಮತ್ತು ಚಾತುರ್ಮಾಸ್ಯ ಸಮಿತಿ ಕರೆ ನೀಡಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ