ಕೆ.ಆರ್. ಪೇಟೆ: ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ವತಿಯಿಂದ ನಾಳೆ (ಸೆ.26) ಬಂದ್ ಕರೆಗೆ ವ್ಯಾಪಕ ಬೆಂಬಲ

Upayuktha
0


ಮಂಡ್ಯ: ಕೆ.ಆರ್. ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂದ್ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳು, ವಕೀಲರ ಸಂಘದ, ಎಳನೀರು ವ್ಯಾಪಾರಿಗಳ ಸಂಘ, ರಾಜಸ್ತಾನ ಸಮಾಜ ಸೇವಾ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಮುಖಂಡರ ಸಭೆಯಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಕೆ.ಆರ್. ಪೇಟೆ ಸ್ವಯಂ ಪ್ರೇರಿತ ಬಂದ್ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.


ಬಂದ್ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಮೈಸೂರು- ಚನ್ನರಾಯಪಟ್ಟಣ ಮುಖ್ಯ ರಸ್ತೆಯನ್ನು ಬಂದ್ ಮಾಡಿ, ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ಸಂಜೆಯವರೆವಿಗೂ ಪ್ರತಿಭಟನೆ ನಡೆಸಲಾಗುವುದು. ಅಲ್ಲದೇ ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ಹಂಚಿಕೆ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು‌ ಕುರಿತು ಮಾತನಾಡಲಿದ್ದಾರೆ.


ಮೆಡಿಕಲ್, ಆಸ್ಪತ್ರೆ, ಆಂಬುಲೆನ್ಸ್, ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಬಾರ್‌ಗಳು, ಸಿನಿಮಾ ಟಾಕೀಸ್ ಗಳು, ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಸ್ವಯಂ ಪ್ರೇರಿತವಾಗಿ ಮುಚ್ಚಿ ಕೆ.ಆರ್.ಪೇಟೆ ಬಂದ್‌ಗೆ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಯಾವುದೇ ಅಂಗಡಿಯನ್ನು ತೆರೆಯಲು ಅವಕಾಶವಿರುವುದಿಲ್ಲ.


ಶಾಲಾ-ಕಾಲೇಜುಗಳಿಗೆ ರಜೆ:

ಕೆ.ಆರ್.ಪೇಟೆ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆಯಾಯ ಶಾಲಾ-ಕಾಲೇಜು ಆಡಳಿತ ಮಂಡಳಿಯವರು ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಮೂಲಕ ಸೆ.26ರ ಬಂದ್‌ಗೆ ತಮ್ಮ ಬೆಂಬಲ ಸೂಚಿಸಬೇಕು. ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ಮಾಡಿ ಕಾವೇರಿ-ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಚಳುವಳಿಯಲ್ಲಿ ಭಾಗವಹಿಸಬೇಕು ಎಂದು ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯು ಮನವಿ‌ ಮಾಡಿದೆ.


ಪೂರ್ವಸಭೆಯಲ್ಲಿ ತಾಲ್ಲೂಕು ರೈತ ಸಂಘದ ಮುಖಂಡ ಮರುವನಹಳ್ಳಿ ಶಂಕರ್, ಚೌಡೇನಹಳ್ಳಿ ಕೃಷ್ಣೇಗೌಡ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಅರ್. ರವಿಶಂಕರ್, ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಎಸ್.ವೇಣು, ಸಿ.ಬಿ.ಚೇತನ್ ಕುಮಾರ್, ಮದನ್, ತಾಲ್ಲೂಕು ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಸಮೀರ್, ಜಿಲ್ಲಾ ಉಪಾಧ್ಯಕ್ಷ ಎ.ಸಿ.ಕಾಂತರಾಜು,  ನ್ಯಾಯವಾದಿ ಆರ್.ಎಂ. ದೇವಾನಂದ್, ಪುರಸಭಾ  ಸದಸ್ಯರಾದ ಬಸ್ ಸಂತೋಷ್ ಕುಮಾರ್, ಡಿ.ಪ್ರೇಮಕುಮಾರ್, ಪ್ರಮೋದ್, ದಿನೇಶ್, ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೆಚ್.ಆರ್.ಸೋಮಶೇಖರ್, ತಾಲ್ಲೂಕು ದಲಿತ ಸಂಘಟನೆಗಳ ಮುಖಂಡರಾದ ಸಿಂಧಘಟ್ಟ ಸೋಮಸುಂದರ್, ಗಣೇಶ್, ಸಾಯಿಕುಮಾರ್, ತಾಲ್ಲೂಕು ಆಟೋ ಮಾಲೀಕರು-ಚಾಲಕರ ಸಂಘದ ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ್, ಆಟೋ ಜಾವಿದ್, ತಾಲ್ಲೂಕು ಆಸರೆ ಸಮಾಜ ಸೇವಾ ಟ್ರಸ್ಟ್  ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತಾಲ್ಲೂಕು  ಜನಜಾಗೃತಿ ಹೋರಾಟ ವೇದಿಕೆಯ ಸಂಚಾಲಕ ಮಾಕವಳ್ಳಿ‌ ಕುಮಾರಸ್ವಾಮಿ, ತಾಲ್ಲೂಕು ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಮೂಡನಹಳ್ಳಿ ಮಧುಶ್ರೀ, ತಾಲ್ಲೂಕು ಎಳೆನೀರು ವ್ಯಾಪಾರಿಗಳ ಸಂಘದ ಪುಟ್ಟಣ್ಣ, ಸಣ್ಣನಿಂಗೇಗೌಡ, ತಾಲ್ಲೂಕು ರಾಜಸ್ತಾನ ಸಮಾಜ ಸೇವಾ ಸಂಘದ ಧರ್ಮೇಂದ್ರ, ಲಕ್ಷ್ಮಣ್, ಸೋಹನ್ ಪಟೇಲ್, ತಾಲ್ಲೂಕು ಕುಂಚ ಕಲಾವಿದರ ಸಂಘದ ಹರೀಶ್, ಮುರುಗೇಶ್, ತಾಲ್ಲೂಕು ಬಟ್ಟೆ ಅಂಗಡಿ‌ಗಳ ಮಾಲೀಕರ ಸಂಘದ ಕುಮಾರ್ ಸ್ಟಿಚ್ ವೇರ್ ಕುಮಾರ್,   ಹಿರಿಯ ಮುಖಂಡರಾದ  ಈರಪ್ಪಗೌಡ, ಚೌಡೇನಹಳ್ಳಿ ಪುಟ್ಟೇಗೌಡ, ಮಾಕವಳ್ಳಿ ವಸಂತಕುಮಾರ್, ಹರಿಹರಪುರ ನರಸಿಂಹ, ದಯಾನಂದ್ ರಾವ್, ಹೊಸಹೊಳಲು ಅಶೋಕ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top