ಮಂಗಳೂರು: ಹಿಂದುಗಳು ಧಾರ್ಮಿಕ ಆಚರಣೆಯ ಹಬ್ಬ ಹರಿದಿನಗಳು ಬರುತ್ತಿದ್ದಂತೆ ಕಾಂಗ್ರೆಸ್ ಅಲರ್ಜಿ ಆರಂಭವಾಗಿದೆ. ಪ್ರತಿಯೊಂದಕ್ಕೂ ಅಡ್ಡಗಾಲು ಹಾಕುತ್ತಾ ಓಲೈಕೆಯ ರಾಜಕಾರಣ ಮುಂದುವರಿಸಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಹಿಂದೂ ಹಬ್ಬ ಆಚರಣೆ ಬಂದಾಗ ಮಾತ್ರ ಕಾಂಗ್ರೆಸ್ ಸರಕಾರ ವಿನಾ ಕಾರಣ ಕಿರುಕುಳ ನೀಡಲು ಮುಂದಾಗುತ್ತದೆ. ಇತರ ಸಮುದಾಯದ ಧಾರ್ಮಿಕ ಆಚರಣೆಗೆ ಬಂದಾಗ ಮೌನ ವಹಿಸುತ್ತದೆ. ಮಂಗಳೂರು ವಿ.ವಿ ಆವರಣದಲ್ಲಿ ನಡೆಯುತ್ತಿರುವ ಗಣೇಶೋತ್ಸವ 40 ವರ್ಷದ ಹಿಂದಿನಿಂದಲೂ ಶಾಂತಿಯುತವಾಗಿ ನಡೆದುಕೊಂಡು ಬರುತ್ತಿದೆ. ಸರಕಾರದ ಒತ್ತಡ ಹೇರುವ ಮೂಲಕ ಇದಕ್ಕೂ ಅಡ್ಡಗಾಲು ಹಾಕುವ ಯತ್ನ ನಡೆಸಿ ತನ್ನ ಇಬ್ಬಗೆಯ ನೀತಿಯನ್ನು ತೋರಿಸಿದೆ. ಮಾತ್ರವಲ್ಲ ವಿನಾಕಾರಣ ಕ್ಯಾಂಪಸ್ ನಲ್ಲಿ ಅಶಾಂತಿ ಉಂಟಾಗಲು ಕಾರಣವಾಗಿದೆ ಎಂದು ಅವರು ಹೇಳಿದರು.
ಹಬ್ಬದ ಆಚರಣೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಗ್ರ ಮಾಹಿತಿ, ಸಮಯ ನಿಗದಿ ಮಾಡಿ ಪೊಲೀಸರ ಮೂಲಕ ಒತ್ತಡ ಹೇರಿ ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ. ಹಿಂದೂ ಸಮಾಜ ಈ ಹಿಂದಿನಂತೆಯೇ ತನ್ನ ಎಲ್ಲಾ ಆಚರಣೆಗಳನ್ನು ಯಥಾಸ್ಥಿತಿ ಯಲ್ಲಿ ನಡೆಸಲು ಬದ್ದವಾಗಿದೆ. ಅಡ್ಡಿಪಡಿಸಿದರೆ ಬಿಜೆಪಿ ಶಾಸಕರೆಲ್ಲರೂ ಮುಂದೆ ನಿಂತು ಹಗಲು ರಾತ್ರಿ ನಮ್ಮ ಧಾರ್ಮಿಕ ಹಬ್ಬ ಹರಿದಿನ ಆಚರಣೆಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ