ಹಾಸನ: ಸಾಂಸಾರಿಕ ಕಲಹ ಸಾಮಾಜಿಕ ವಿಘಟನೆ ಗ್ರಾಮ ಪಟ್ಟಣಗಳಲ್ಲಿ ದೊಂಬಿ ಗಲಾಟೆ ಜಾತಿ ವೈಷಮ್ಯ ಕೋಮು ಗಲಭೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾಂಸ್ಕೃತಿಕ ಸಹಬಾಳ್ವೆ, ಭ್ರಾತೃತ್ವದ ವೃದ್ಧಿ, ಸಾಮಾಜಿಕ ಸಾಮರಸ್ಯ ಸದ್ಭಾವನೆಗಳು ಮೂಡಬೇಕಾದ ತುರ್ತು ಇದೆ. ಹೊಸ ತಲೆಮಾರಿನ ಯಾಂತ್ರಿಕ ಬದುಕಿನಲ್ಲಿ ಬೇಸತ್ತ ಮನಸ್ಸುಗಳಿಗೆ ಸಮಾಜಮುಖಿಯಾಗಲು ಜನಪದ ತತ್ವಾಧಾರಿತ ಮೌಲ್ಯಗಳ ಸಿಂಚನವನ್ನು ಪಂಡಿತ ಸ್ವಾಮಿಗೌಡರ ಕೃತಿಗಳು ದಾಖಲಿಸಿವೆ ಎಂದು ಲೇಖಕರು ಕನ್ನಡ ಉಪನ್ಯಾಸಕರು ಡಾ. ಐಚನಹಳ್ಳಿ ಕೃಷ್ಣಪ್ಪ ತಿಳಿಸಿದರು.
ಹಾಸನದ ಮನೆ ಮನೆ ಕವಿಗೋಷ್ಠಿ ವತಿಯಿಂದ ನಿವೃತ್ತ ಶಿಕ್ಷಕರು ಶಂಕರನಾರಾಯಣ ಡಿ.ಎಸ್. ಇವರ ಪ್ರಾಯೋಜನೆಯಲ್ಲಿ ಹಾಸನದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ 309ನೇ ತಿಂಗಳ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲ್ಲಿ ಜನಪದ ಸಾಹಿತ್ಯಕ್ಕೆ ದಿವಂಗತ ಪಂಡಿತ ಸ್ವಾಮಿಗೌಡರ ಕೊಡುಗೆ ವಿಷಯವಾಗಿ ಉಪನ್ಯಾಸ ನೀಡಿದರು.
ಪಂಡಿತ ಸ್ವಾಮಿಗೌಡರ ಇಪ್ಟತ್ತೆಂಟು ಹಳ್ಳಿಗಳ ಕತ್ತರಿಘಟ್ಟ ಮತ್ತು ಹರಿಸೇವೆ ಕೃತಿ ಆಕಾರದಲ್ಲಿ ಚಿಕ್ಕದಾಗಿ ಕಂಡರೂ ಇದೊಂದು ಜಿಯಾಗ್ರಾಫಿಕಲ್ ಮ್ಯಾಪ್ ಆಗಿದೆ. ಗ್ರಾಮಗಳ ಸಾಂಸ್ಕೃತಿಕ ವೈಭವವನ್ನು ಹಂಚಿಕೊಳ್ಳುವ ಒಟ್ಟಾಗುವ ಯುವ ಪೀಳಿಗೆಗೆ ಮುನ್ನುಡಿಯಾಗುವಂತಹ ಮೌಲ್ಯಗಳನ್ನು ಕೃತಿ ಬಿಂಬಿಸಿದೆ ಎಂದು ವಿಶ್ಲೇಷಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ ಕರ್ತೃ ಪಂಡಿತ ಸ್ವಾಮಿಗೌಡರು ಸಂಪಾದಿಸಿದ ಸೋಬಾನೆ ಪದಗಳು ಕೃತಿ 1972ರಲ್ಲಿ ಅಚ್ಚಾಗಿ ಹಾಸನ ಜಿಲ್ಲೆಯ ಮೊದಲ ಪ್ರಕಟಿತ ಸೋಬಾನೆ ಪದ ಕೃತಿ ಇದಾಗಿದೆ. ಇವರ ಜನಪದ ಕಥನ ಗೀತೆಗಳಲ್ಲಿ 12 ಕಥನ ಗೀತೆಗಳಿವೆ. ನಮ್ಮ ಸಂಸ್ಕøತಿ ಪುನರುಜ್ಜೀವನಕ್ಕೆ ನಮ್ಮ ಹಿರಿಯರು ನಡೆಸಿಕೊಂಡು ಬಂದ ಜನಪದ ಹಬ್ಬ ಆಚರಣೆಗಳು ಹಳ್ಳಿ ಬದುಕನ್ನು ಹಸನುಗೊಳಿಸಬಲ್ಲದು. ಪಟ್ಟಣದತ್ತ ಮುಖ ಮಾಡಿರುವ ಯುವ ಮನಸ್ಸನ್ನು ಹಳ್ಳಿಗಳತ್ತ ತಿರುಗಿಸಲು ಜನಪದ ಸಾಹಿತ್ಯ ಓದು ಅಧ್ಯಯನ ಪ್ರೇರಣೆ ಒದಗಿಸಲು ಸಾಧ್ಯ ಎಂದರು.
ಕವಿಗೋಷ್ಠಿಯಲ್ಲಿ ಜಯಂತಿ ಚಂದ್ರಶೇಖರ್, ದ್ರಾಕ್ಷಾಯಿಣಿ ಮುರುಗನ್, ಗಿರಿಜಾ ನಿರ್ವಾಣಿ, ಪ್ರೇಮ ಪ್ರಶಾಂತ್, ಪ್ರತಿಭಾ ಬಿ.ಆರ್. ಲಲಿತ ಎಸ್., ಕುಮಾರ್ ಚಲವಾದಿ, ರೇಖಾ ಪ್ರಕಾಶ್, ಎನ್.ಎಲ್.ಚನ್ನೇಗೌಡ, ಸುಷ್ಮಿತ ಎಂ.ಕೆ. ಡಿಂಪುಕುಮಾರ, ರಾಣಿ ಚರಾಶ್ರೀ, ಪದ್ಮಾವತಿ ವೆಂಕಟೇಶ್. ಗೊರೂರು ಅನಂತರಾಜು ಡಿ.ಎಸ್. ಶಂಕರನಾರಯಣ ಸ್ವರಚಿತ ಕವಿತೆ ವಾಚಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ನಿವೃತ್ತ ತಹಸೀಲ್ದಾರ್ ಎ.ವಿ.ರುದ್ರಪ್ಪಾಜಿರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಲೇಖಕರಾದ ಗೊರೂರು ಶಿವೇಶ್, ಚಂದ್ರೇಗೌಡ ನಾರಮ್ನಳ್ಳಿ ಡಾ. ಎಂ.ಮಂಜುನಾಥ್, ಕಲಾವಿದರಾದ ಅತ್ನಿ ಸುರೇಶ್, ಯಾಕೂಬ್ ಗೊರೂರು, ನಿವೃತ್ತ ಉಪನ್ಯಾಸಕರು ಬಾಲಕೃಷ್ಣ, ಶಿಕ್ಷಕಿ ಶಾರದಮ್ಮ ಗೊರೂರು, ಚಕ್ರಪಾಣಿ, ಕೆ. ಎಲ್., ಪೂರ್ಣಿವ, ಪಾರ್ವತಮ್ಮ ಡಿ. ಎಸ್. ನಂದಿನಿ ಹೆಚ್.ಎಲ್. ಕೆ. ಪ್ರಶಾಂತ್ಕುಮಾರ್ ಮೊದಲಾದವರು ಇದ್ದರು. ಶ್ರೀಮತಿ ಧನಲಕ್ಷ್ಮಿ ಗೊರೂರು ಜಾನಪದ ಗೀತೆ, ಶ್ರೀಮತಿ ರಾಣಿ ಚರಾಶ್ರೀ ತಂಡದವರ ಸೋಬಾನೆ ಹಾಡುಗಳು ರಂಜಿಸಿದವು.
ಪ್ರಣತಿ ಪಿ.ಹರೀತ್ಸಾ ಪ್ರಾರ್ಥಿಸಿದರು. ಪಂಡಿತ ಸ್ವಾಮಿಗೌಡರ ಒಟ್ಟು ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪಂಡಿತ ಸ್ವಾಮಿಗೌಡರ ಮಕ್ಕಳಾದ ಡಿ.ಎಸ್.ಪೂರ್ಣಾನಂದ, ಡಿ.ಎಸ್.ಲೋಕೇಶ್ ಹೊಸನಗರ ಅವರು ತಮ್ಮ ತಂದೆಯ ಆದರ್ಶ ಬದುಕು ಬರಹ ಸ್ಮರಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ